Advertisement

Uv Fusion: ಶಿಕ್ಷಣದಲ್ಲಿ ಖಾಸಗೀಕರಣ

03:13 PM Oct 13, 2023 | Team Udayavani |

ಜಗತ್ತಿನಲ್ಲಿ ವ್ಯಾವಹಾರಿಕವಾಗಿ ಹಾಗೂ ಆರ್ಥಿಕವಾಗಿ ನಾಮುಂದು ತಾಮುಂದು ಎಂದು ಓಡುವವರ ಸಂಖ್ಯೆ ಬೆಳೆಯು ತ್ತಲೇ ಇದೆ.  ಖಾಸಗೀಕರಣ ಎನ್ನುವ ಸ್ಪರ್ಧೆಯಿಂದ ಅಂಥವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಬಂಡವಾಳಶಾಹಿಗಳು ಸಾಮಾನ್ಯ ಜನರು ಹಾಗೂ ವಿದ್ಯಾರ್ಥಿಗಳ ಜೀವನವನ್ನು ನೋಡದೇ ತಮ್ಮತಮ್ಮ ಹಿತಾಸಕ್ತಿಗಳನ್ನು ಗಮನಿಸಿಕೊಂಡು  ಶ್ರೀಮಂತರಾಗಲು ಸ್ಪರ್ಧೆಗೆ ಇಳಿಯುತ್ತಿದ್ದಾರೆ.

Advertisement

ಈ ಖಾಸಗೀಕರಣ ಎನ್ನುವುದು ಸರ್ವಾಧಿಕಾರಿಗಳನ್ನು ಹುಟ್ಟು ಹಾಕಿ ದೊಡ್ಡ ದೊಡ್ಡ ಯುದ್ಧಗಳಿಗೆ ಕಾರಣವಾಗಿ ಮಾನವ ಸಂಕುಲವನ್ನೇ ಸರ್ವನಾಶದತ್ತ ತೆಗೆದುಕೊಂಡು ಹೋಗಲು ಸುಗಮವಾದ ದಾರಿ ಮಾಡಿಕೊಡುತ್ತದೆ.

ಖಾಸಗೀಕರಣದ ಇಂತಹ ಸ್ಪರ್ಧೆಗಳು ಶಿಕ್ಷಣದಲ್ಲಿ ಏರ್ಪಟ್ಟರಂತೂ ತುಂಬಾ ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾವುದೇ ಒಂದು ದೇಶ ಸಂಪೂರ್ಣವಾಗಿ ನೆಮ್ಮದಿಯಿಂದ ಬದುಕಬೇಕಾದರೆ ಅದಕ್ಕೆ ಒಳ್ಳೆಯ ಶಿಕ್ಷಣ ಮುಖ್ಯ ಕಾರಣವಾಗುತ್ತದೆ. ಹಾಗಾಗಿ ಶಿಕ್ಷಣದಲ್ಲಿ ಖಾಸಗಿಯವರು ಲಗ್ಗೆ ಇಟ್ಟರೆ ಅವರು ತಮ್ಮ ಲಾಭ ಬಯಸುತ್ತಾರೆ ಹೊರತು ಮಕ್ಕಳ ಶಿಕ್ಷಣ ಅವರಿಗೆ ಮುಖ್ಯವಾಗಿರುವುದಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಬಂದರೆ ಕೆಟ್ಟ ಪರಿಣಾಮವೇ ಹೆಚ್ಚಾಗಲಿದೆ.

ಭಾರತದಂಥ ದೇಶದಲ್ಲಿ ಕೂಲಿ ಕಾರ್ಮಿಕರು, ಬಡವರು ಅವರ ಕುಟುಂಬವನ್ನು ನಡೆಸುವುದೇ  ಸವಾಲಾಗಿದೆ.  ತಮ್ಮ ಮಕ್ಕಳನ್ನು ಓದಿಸುವುದು ಇನ್ನೊಂದು ದೊಡ್ಡ ಸವಾಲು. ಅವರ ಮಕ್ಕಳು  ಶಿಕ್ಷಣ ಪಡೆಯಬೇಕೆಂದರೆ ಅವರಿಗೆ ಸರಕಾರಿ ಶಾಲಾ ಕಾಲೇಜುಗಳೇ ಆಧಾರ. ಶ್ರೀಮಂತಿಕೆಯಿಂದ ಕೂಡಿರುವ ಬಡವರ ಭಾರತದಲ್ಲಿ ಶಿಕ್ಷಣದಲ್ಲೂ  ಖಾಸಗಿಯವರು ಭಾಗಿಯಾಗಿ ಸರಕಾರ ಕೊಡುವಂಥ ಉಚಿತ ಶಿಕ್ಷಣಕ್ಕೇ ಕತ್ತರಿ ಹಾಕಿ ನಾವು ಸರಕಾರಕ್ಕಿಂತ ಒಳ್ಳೆಯ ಶಿಕ್ಷಣ ಕೊಡುತ್ತೇವೆ ಎಂದು ಹೇಳಿ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರವೂ ಬೆಂಬಲ ಸೂಚಿಸುತ್ತದೆ!

ಇತ್ತೀಚಿನ ಮಾಹಿತಿ ಪ್ರಕಾರ, ಕಳೆದ 5 ವರ್ಷಗಳಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಂದೇ ಒಂದು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅನುಮತಿ ನೀಡಿಲ್ಲ. ಆದರೆ 2,139 ಖಾಸಗಿ ಸಂಸ್ಥೆಗಳ ಪ್ರಾಥಮಿಕ ಶಾಲೆಗಳಿಗೆ ಅನುಮತಿ ನೀಡಿದೆ! ಇತ್ತೀಚೆಗೆ 120 ಸರಕಾರಿ ಪ್ರೌಢ ಶಾಲೆಗಳಿಗೆ ಅನುಮತಿ ದೊರೆತರೆ 282 ಖಾಸಗಿ ಸಂಸ್ಥೆಗಳ ಪ್ರೌಢ ಶಾಲೆಗಳಿಗೆ ಅನುಮತಿ ನೀಡಲಾಗಿದೆ!  ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2,139 ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆರಂಭವಾಗಿದ್ದು, ಅವೆಲ್ಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ ಎನ್ನುವುದು ದುರಂತ.

Advertisement

ಈಗ ದೇಶದಲ್ಲಿ ಸರಕಾರಿ ಶಾಲಾ ಕಾಲೇಜುಗಳಕ್ಕಿಂತ  ಖಾಸಗಿ ಶಾಲಾ ಕಾಲೇಜುಗಳೇ ಹೆಚ್ಚಿವೆ. ಖಾಸಗಿ ಶಾಲಾ ಕಾಲೇಜುಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ ಅದೆಷ್ಟೋ ಸರಕಾರಿ ಶಾಲಾ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಿವೆ.  ದುಡ್ಡಿದ್ದವರು ಓದುತ್ತಿದ್ದಾರೆ, ಇಲ್ಲದವರನ್ನು ಶಿಕ್ಷಣದಿಂದಲೇ ದೂರ ಮಾಡುತ್ತಿದೆ ಈ ಖಾಸಗೀಕರಣ ಎಂಬ ವ್ಯವಸ್ಥೆ. ಇತ್ತೀಚೆಗೆ ಕೇಂದ್ರ ಸರಕಾರ ನ್ಯಾಷನಲ್‌ ಎಜುಕೇಶನ್‌ ಪಾಲಿಸಿ ಎನ್ನುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಖಾಸಗೀಕರಣಕ್ಕೆ ಪೂರಕವಾದುದು ಎಂಬ ಆರೋಪ, ಆತಂಕ ಇದೆ.  ಆದ್ದರಿಂದಲೇ ಇದಕ್ಕೆ  ವಿರೋಧ ವ್ಯಕ್ತವಾಗಿದೆ. ಆದರೂ  ಅದನ್ನು ಕೆಲವು ರಾಜ್ಯ ಸರಕಾರಗಳು ಜಾರಿ ಮಾಡಿವೆ.

ಖಾಸಗಿಯವರು ಮಾಡುವುದು ತಮ್ಮ ಲಾಭಕ್ಕೋಸ್ಕರ. ಸರಕಾರ ಮಾಡುವುದು ಜನರ ಉದ್ಧಾರಕ್ಕೋಸ್ಕರ. ಹಾಗಾದರೆ ಜನರಿಗೆ ಖಾಸಗಿಯವರಕ್ಕಿಂತ ಸರಕಾರವೇ ಮಾಡುವ ಕೆಲಸಗಳು ಹೆಚ್ಚು ಸೂಕ್ತವೆನಿಸುತ್ತವೆ ಅಲ್ಲವೇ? ಒಂದು ವೇಳೆ ಸರಕಾರಕ್ಕಿಂತ ಖಾಸಗಿಯವರೇ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ಸರಕಾರಕ್ಕೆ ಯಾಕೆ ಆಗುತ್ತಿಲ್ಲ?

ಸರಕಾರವು ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿದರೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವುದರ ಜತೆಗೆ ಸಮಾನತೆಯ ದೇಶ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಬಹುದು.

-ಚಿತ್ರಶೇನ್‌,

ಗುಲ್ಬರ್ಗಾ ವಿಶ್ವವಿದ್ಯಾನಿಲಯ 

Advertisement

Udayavani is now on Telegram. Click here to join our channel and stay updated with the latest news.

Next