Advertisement

ಖಾಸಗೀಕರಣ -ಶುಲ ಇಳಿಕೆ; ನಲುಗಿದ ಎಪಿಎಂಸಿ

06:26 PM Feb 24, 2021 | Team Udayavani |

ರಾಯಚೂರು: ರಾಜ್ಯದಲ್ಲೇ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿದ್ದ ರಾಯಚೂರಿನ ರಾಜೇಂದ್ರ ಗಂಜ್‌ಗೆ ಈಗ ಆರ್ಥಿಕ ಗ್ರಹಣ ಹಿಡಿದಿದೆ. ಖಾಸಗೀಕರಣ ಹಾಗೂ ಶುಲ್ಕ ಇಳಿಕೆಯಿಂದಾಗಿ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ನಿರ್ವಹಣೆ ಸವಾಲು ಆಡಳಿತ ಮಂಡಳಿ ಕಂಗೆಡಿಸಿದೆ. ಕಳೆದ ವರ್ಷ ಮೇನಲ್ಲಿ ಸರ್ಕಾರ ಎಪಿಎಂಸಿ ಖಾಸಗೀಕರಣ ಮಸೂದೆ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆ ಮಾಡಿತು. ಈ ಎರಡು ಕಾರಣಗಳಿಂದ ಎಪಿಎಂಸಿ ದೊಡ್ಡ ಪೆಟ್ಟು ಬಿದ್ದಂತಾಗಿದೆ.

Advertisement

ಕಳೆದ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 18.18 ಕೋಟಿ ರೂ. ಆದಾಯ ಕಂಡಿದ್ದ ಎಪಿಂಎಸಿಗೆ ಈ ಸಾಲಿನಲ್ಲಿ ಈವರೆಗೆ 5 ಕೋಟಿ ಕೂಡ ಸಂಗ್ರಹಗೊಂಡಿಲ್ಲ. 2020ರ ಏಪ್ರಿಲ್‌, ಮೇ ತಿಂಗಳಲ್ಲಿ ಇನ್ನೂ ಮಾರುಕಟ್ಟೆ ಶುಲ್ಕ 1.50 ರೂ. ಇದ್ದ ಕಾರಣ ಎರಡು ಕೋಟಿಗೂ ಅಧಿಕ ಶುಲ್ಕ ಗ್ರಹಗೊಂಡಿತ್ತು.ಅದಾದ ಮೇಲೆ ಶುಲ್ಕ 35 ಪೈಸೆಗೆ ಇಳಿಕೆಯಾಯಿತು.ವರ್ತಕರ ಒತ್ತಡದಿಂದ 60 ಪೈಸೆಗೆ ಹೆಚ್ಚಿಸಲಾಯಿತು.

ಇದರಿಂದ ಕೇವಲ ಎರಡು ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇನ್ನೊಂದು ತಿಂಗಳಲ್ಲಿ 40ರಿಂದ 50 ಲಕ್ಷ ರೂ. ಸಂಗ್ರಹವಾದರೆ ಹೆಚ್ಚು ಎನ್ನುವುದು ಅಧಿ
ಕಾರಿಗಳ ವಿವರಣೆ. ಈ ಕಾರಣಕ್ಕೆ ಎಪಿಎಂಸಿಗೆ ಆದಾಯ ಕುಗ್ಗಿದ್ದು, ನಿರ್ವಹಣೆ ಸವಾಲು ಎದುರಾಗಿದೆ.

ಶೇ.65 ಆದಾಯಕ್ಕೆ ಕೊಕ್ಕೆ: ಅಧಿಕಾರಿಗಳ ಮಾಹಿತಿ  ಪ್ರಕಾರ ಈ ವರ್ಷ ಶೇ.65-70ರಷ್ಟು ಆದಾಯಕ್ಕೆ ಕೊಕ್ಕೆ ಬಿದ್ದಿದೆ. ರೈತರ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿಸಿ ಅದರಿಂದ ಬರುತ್ತಿದ್ದ ಆದಾಯದಲ್ಲೇ ಎಪಿಎಂಸಿ ನಿರ್ವಹಿಸಲಾಗುತ್ತಿತ್ತು. ಖಾಸಗೀಕರಣದಿಂದ ರೈತರು ಬೇರೆ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಬಹುದಾಗಿದ್ದು, ವರ್ತಕರು ಎಪಿಎಂಸಿಗೆ ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಜಿಲ್ಲೆಯಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಯಿಂದಲೇ 10 ಕೋಟಿಗೂ
ಹೆಚ್ಚು ಆದಾಯ ಬರುತ್ತಿತ್ತು.

ಈ ಮೂರು ಉತ್ಪನ್ನಗಳು ಎಪಿಎಂಸಿ ಹೊರಗೆ ಖರೀದಿಯಾಗುತ್ತಿವೆ. ನೇರವಾಗಿ ಮಿಲ್ಲರ್ಗಳೇ ರೈತರಿಂದ ಖರೀದಿಸುತ್ತಿರುವ ಕಾರಣಕ್ಕೆ ಎಪಿಎಂಸಿಗೆ ಹಣವೇ ಇಲ್ಲದಾಗಿದೆ. ದೇವದುರ್ಗ ಎಪಿಎಂಸಿಯಿಂದ ಮೆಣಸಿನಕಾಯಿ ಬೆಳೆಯಿಂದ ಒಂದು ಕೋಟಿಗೂ ಅಧಿಕ ಶುಲ್ಕ ಸಂಗ್ರಹವಾಗುತ್ತಿತ್ತು.ಈ ವರ್ಷ ನಯಾಪೈಸೆ ಬಂದಿಲ್ಲ.

Advertisement

ಖರ್ಚಿಗೂ ಕತ್ತರಿ ಪ್ರಯೋಗ: ರಾಯಚೂರು ಎಪಿಎಂಸಿಯಲ್ಲಿ 16 ಪ್ಲಾಟ್‌ ಫಾರ್ಮ್ಗಳಿದ್ದು, 225 ವ್ಯಾಪಾರ ಮಳಿಗೆಗಳಿವೆ. ಎಪಿಎಂಸಿ ಹೊರಗೆ ವಹಿವಾಟು
ನಡೆಸಿದರೆ ಶುಲ್ಕ ಕಟ್ಟುವಂತಿಲ್ಲ ಎನ್ನುವ ಕಾರಣಕ್ಕೆ ವರ್ತಕರು ಎಪಿಎಂಸಿಯತ್ತ ಸುಳಿಯುತ್ತಿಲ್ಲ. ಇದರಿಂದ ನಿರ್ವಹಣೆ ಸವಾಲು ಎದುರಾಗಿದೆ. ಈಗ ಬಂದಿರುವ
ಆದಾಯದಲ್ಲಿ ನಿರ್ವಹಣೆಗಾಗಿ ಈಗಾಗಲೇ ಎರಡು ಕೋಟಿ ರೂ. ಖರ್ಚಾಗಿದೆ. ಎಲ್ಲ ಮಳಿಗೆಗಳಿಂದ ತಿಂಗಳಿಗೆ 1.20 ಲಕ್ಷ ರೂ. ಆದಾಯವಿದೆ. ಹೀಗಾಗಿ ಇರುವ
ಖರ್ಚುಗಳಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡಲು ಆಡಳಿತ ಮಂಡಳಿ ಮುಂದಾಗಿದೆ.

ಅನಗತ್ಯ ವಿದ್ಯುತ್‌ ಬಳಕೆಗೆ ಕಡಿವಾಣ ಹಾಕಲಾಗಿದೆ. 3 ಲಕ್ಷ ರೂ. ಬರುತ್ತಿದ್ದ ವಿದ್ಯುತ್‌ ಬಿಲ್‌ ಈಗ 1.80 ಲಕ್ಷ ರೂ. ಬರುತ್ತಿದೆ. ಕಂಪ್ಯೂಟರ್‌ ಆಪರೇಟರ್‌,
ಸಹಾಯಕರು, ಚಾಲಕರು, ಸೆಕ್ಯುರಿಟಿ ಗಾರ್ಡ್‌ ಸೇರಿದಂತೆ 96 ಸಿಬ್ಬಂದಿಗಳಲ್ಲಿ 60 ಜನರನ್ನು ತೆಗೆಯಲಾಗಿದೆ.

ಎಪಿಎಂಸಿ ಖಾಸಗೀಕರಣ, ಶುಲ್ಕ ಇಳಿಕೆಯಿಂದ ಎಪಿಎಂಸಿ ಆದಾಯದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಸರ್ಕಾರಕ್ಕೆ ಪಾವತಿಸಿದ ಶುಲ್ಕದ ಹಣ ಹೊರತಾಗಿಸಿ ಆವರ್ತ ನಿಧಿಯಲ್ಲೇ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈಗ ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಿಲ್ಲ. ಮಾರ್ಚ್‌ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು.
ಬಿ.ಎಂ. ಶ್ರೀನಿವಾಸ,
ಎಪಿಎಂಸಿ ಕಾರ್ಯದರ್ಶಿ

*ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next