Advertisement

ಪ್ರಧಾನಿ ಮೋದಿಯವರ ಹಾದಿನೋಡುತ್ತಿದೆ ಜೋಡಿ ಮಾರ್ಗ

11:33 AM Feb 06, 2018 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಮಾರ್ಗದ ಜೋಡಿ ಹಳಿ ಮತ್ತು ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡು ಒಂದೂವರೆ ತಿಂಗಳಾದರೂ ಜನರಿಗೆ ಸೇವೆ ಭಾಗ್ಯ ಲಭ್ಯವಾಗಿಲ್ಲ. ಇದರಿಂದ ನೈರುತ್ಯ ರೈಲ್ವೆಗೆ ನಿತ್ಯ ಸುಮಾರು ಹತ್ತು ಲಕ್ಷ ರೂ. ಅನಗತ್ಯ ಹೆಚ್ಚುವರಿ ಹೊರೆಯಾಗುತ್ತಿದೆ!

Advertisement

ಸೇವೆಗೆ ಸಿದ್ಧಗೊಂಡಿದ್ದರೂ ಪ್ರಧಾನಿ ಮೋದಿಯವರೇ ಉದ್ಘಾಟಿಸಬೇಕೆಂಬ ಕಾರಣಕ್ಕೆ ಅನಿವಾರ್ಯವಾಗಿ ಈ ಮಾರ್ಗದಲ್ಲಿ ಡೀಸೆಲ್‌ ಆಧಾರಿತ “ಡೆಮು’ ಸೇವೆ ಮುಂದುವರಿದಿದೆ. ಇದು ನೈರುತ್ಯ ರೈಲ್ವೆಗೂ ನುಂಗಲಾರದ ತುತ್ತಾಗಿದೆ.

ಒಂದು ಡೆಮು ರೈಲು ಬೆಂಗಳೂರಿನಿಂದ ಮೈಸೂರು ತಲುಪಲು 650 ಲೀ. ಡೀಸೆಲ್‌ ಖರ್ಚಾಗಲಿದ್ದು, ಒಟ್ಟಾರೆ 45 ಸಾವಿರ ರೂ. ವ್ಯಯವಾಗುತ್ತದೆ. ಇದೇ ಮಾರ್ಗವನ್ನು ರೈಲು ವಿದ್ಯುದ್ದೀಕರಣಗೊಂಡ ಮಾರ್ಗದಲ್ಲಿ ಕ್ರಮಿಸಿದರೆ, ಕೇವಲ 17,500 ರೂ. ವ್ಯಯ ಆಗುತ್ತದೆ. ಪ್ರತಿ ದಿನ ಈ ಮಾರ್ಗದಲ್ಲಿ ಸುಮಾರು 34 ರೈಲುಗಳು ಕಾರ್ಯಾಚರಣೆ ಮಾಡುತ್ತವೆ ಎಂದು ಸ್ವತಃ ರೈಲ್ವೆ ಇಲಾಖೆ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಈಗಾಗಲೇ ವಿದ್ಯುದ್ದೀಕರಣ ಮಾರ್ಗ ಸಿದ್ಧಗೊಂಡಿದ್ದರೂ ಬಳಕೆ ಆಗುತ್ತಿಲ್ಲ. ಇದನ್ನು ಲೆಕ್ಕಹಾಕಿದರೆ ಸಹಜವಾಗಿಯೇ ಅನಗತ್ಯವಾಗಿ ಲಕ್ಷಾಂತರ ರೂ. ಹೊರೆ ಆಗಲಿದೆ. ಈ ಹೊರೆ ಅಂತಿಮವಾಗಿ ಸಾರ್ವಜನಿಕರ ಮೇಲೇ ಬೀಳಲಿದೆ ಎಂದು ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಟಿ.ಪಿ. ಲೋಕೇಶ್‌ ತಿಳಿಸುತ್ತಾರೆ.

“ಈ ಹಿಂದೆ ಡಿಸೆಂಬರ್‌ 26ಕ್ಕೆ ಜೋಡಿ ಮಾರ್ಗ ಸೇವೆಗೆ ಮುಕ್ತಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ನಂತರ ಡಿ. 31ರಂದು ಸಂಸದ ಪ್ರತಾಪ್‌ ಸಿಂಹ ಅವರು “ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜೋಡಿ ಹಳಿ ಮತ್ತು ವಿದ್ಯುದ್ದೀಕರಣ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ’ ಎಂದು ಟ್ವಿಟ್‌ ಮಾಡಿದ್ದರು. ಇದಾಗಿ ಒಂದು ತಿಂಗಳು ಕಳೆಯಿ ತು. ಪ್ರಧಾನಿ ಕೂಡ ಬಂದು ಹೋದರು. ಆದರೆ, ಸೇವೆಗೆ ಸಿದ್ಧಗೊಂಡಿರುವ ಮಾರ್ಗಕ್ಕೆ ಉದ್ಘಾಟನೆ ಭಾಗ್ಯ ಮಾತ್ರ ಸಿಗಲಿಲ್ಲ,’ ಎಂದು ಲೋಕೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಸಚಿವಾಲಯದ ಸೂಚನೆ ಬರಬೇಕು: ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಯೂ ಸಿಕ್ಕಿದೆ. ಉದ್ದೇಶಿತ ಮಾರ್ಗವು ಸೇವೆಗೆ ಸಿದ್ಧಗೊಂಡಿದೆ ಎಂದು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಸೂಚನೆ ಬರುತ್ತಿದ್ದಂತೆ ಚಾಲನೆ ನೀಡಲಾಗುವುದು ಎಂದು ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಮತ್ತು ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ “ಉದಯವಾಣಿ’ಗೆ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಈ ಮಾರ್ಗದಲ್ಲಿ ಚೆನ್ನೈ-ಮೈಸೂರು ಶತಾಬ್ದಿ ಕಾರ್ಯಾಚರಣೆ
ಮಾಡಲಿದೆ. ನಂತರ ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ ತದನಂತರ ಪ್ಯಾಸೆಂಜರ್‌ ರೈಲು ಓಡಿಸಲು ಯೋಜನೆ ರೂಪಿಸಲಾಗಿದೆ ಎಂದೂ ಅವರು ಹೇಳಿದರು.

ಸಮಯ ಉಳಿತಾಯ: ಚೆನ್ನೈ-ಮೈಸೂರು ಶತಾಬ್ದಿ, ಚೆನ್ನೈ-ಮೈಸೂರು ಕಾವೇರಿ ಎಕ್ಸ್‌ಪ್ರೆಸ್‌, ತಿರುಪತಿ-ಮೈಸೂರು ಪ್ಯಾಸೆಂಜರ್‌ ಸೇರಿದಂತೆ ನಿತ್ಯ ವೈಟ್‌ಫಿಲ್ಡ್‌ ಮಾರ್ಗವಾಗಿ ನಾಲ್ಕೈದು ರೈಲುಗಳು ನಗರಕ್ಕೆ ಬರುತ್ತವೆ. ಎಲೆಕ್ಟ್ರಿಕ್‌ ಎಂಜಿನ್‌ ಹೊಂದಿರುವ ಈ ರೈಲುಗಳು ಮೈಸೂರಿಗೆ ತೆರಳುವಾಗ ಬೆಂಗಳೂರಿನಲ್ಲಿ ಡೀಸೆಲ್‌ ಎಂಜಿನ್‌ಗೆ ಪರಿವರ್ತನೆ ಆಗಬೇಕು. ಇದಕ್ಕಾಗಿ ಕನಿಷ್ಠ ಒಂದೊಂದು ರೈಲು ಅರ್ಧಗಂಟೆ ಕಾಯಬೇಕಾಗಿತ್ತು. ಈಗ ಮೈಸೂರು ಮಾರ್ಗ ವಿದ್ಯುದ್ದೀಕರಣಗೊಂಡಿದ್ದರಿಂದ, ಈ ಕಿರಿಕಿರಿ ಇರುವುದಿಲ್ಲ.
ಇದರಿಂದ ಸಮಯ ಉಳಿತಾಯದ ಜತೆಗೆ ಪ್ಲಾಟ್‌ಫಾರಂ ಕೂಡ ಲಭ್ಯವಾಗಲಿದೆ. ಇದಕ್ಕೆ ಪೂರಕವಾಗಿ ಮೆಮು ಬೋಗಿಗಳು ಕೂಡ ಬಂದಿವೆ. ಇದರಿಂದ ತಕ್ಷಣದಲ್ಲೇ ಸಬ್‌ ಅರ್ಬನ್‌ ಸೇವೆ ವಿಸ್ತರಣೆಗೆ ಅವಕಾಶ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸೇವೆಗೆ ಮುಕ್ತಗೊಳಿಸಬೇಕು ಎಂದು ಪ್ರಜಾ ರಾಗ್‌ ಸದಸ್ಯ ಸಂಜೀವ ದ್ಯಾಮಣ್ಣವರ ಒತ್ತಾಯಿಸುತ್ತಾರೆ. 

ಜೋಡಿಹಳಿ ಯೋಜನೆ ದಶಕದ ಕನಸು ಜೋಡಿ ಹಳಿ ಮತ್ತು ವಿದ್ಯುದ್ದೀಕರಣ ಯೋಜನೆ ದಶಕದ ಕನಸು. 2008ರಲ್ಲಿ ರಾಮನಗರದಿಂದ ಮೈಸೂರಿಗೆ 482 ಕೋಟಿ ರೂ. ವೆಚ್ಚದಲ್ಲಿ ಜೋಡಿ ಹಳಿ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ನಿರ್ಧರಿಸಿತ್ತು. ಆದರೆ, ಶ್ರೀರಂಗಪಟ್ಟಣ ಬಳಿಯ ಟಿಪ್ಪು ಮದ್ದಿನಮನೆ ಅಡ್ಡ ಬಂದಿದ್ದರಿಂದ ಕಾಮಗಾರಿ ಎರಡು ವರ್ಷ ವಿಳಂಬವಾಯಿತು. ನಂತರ ಮದ್ದಿನಮನೆ
ಸ್ಥಳಾಂತರದ ಬೆನ್ನಲ್ಲೇ ಕಾಮಗಾರಿ ಚುರುಕುಗೊಂಡಿತು. 2017ರ ನವೆಂಬರ್‌-ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತು.

ಅಂದಹಾಗೆ, 2007ರ ಫೆಬ್ರವರಿಯಲ್ಲಿ ಬೆಂಗಳೂರು ಕೆಂಗೇರಿ ನಡುವೆ, 2007ರ ಡಿಸೆಂಬರ್‌ನಲ್ಲಿ ಕೆಂಗೇರಿ-ಬಿಡದಿ ಮಧ್ಯೆ ಹಾಗೂ 2008ರ ಅಕ್ಟೊಬರ್‌ನಲ್ಲಿ ಬಿಡದಿ-ರಾಮನಗರ ನಡುವೆ ಜೊಡಿ ರೈಲು ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು. ಬೆಂಗಳೂರು-ಮೆಸೂರು ನಡುವೆ ಜೊಡಿ ಹಳಿ ಹಾಗೂ ವಿದ್ಯುದ್ದೀಕರಣದಿಂದ ಎರಡೂ ನಗರಗಳ ನಡುವಿನ ಪ್ರಯಾಣ ಅವಧಿ 10-15 ನಿಮಿಷ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next