Advertisement

ಕಾಶ್ಮೀರದಲ್ಲಿ ಇನ್ನು ವಿಕಾಸ ಪರ್ವ

09:45 AM Aug 09, 2019 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿನ್ನು ಅಭಿವೃದ್ಧಿಯ ಶಕೆ ಆರಂಭಗೊಳ್ಳಲಿದೆ. ಕಾಶ್ಮೀರ ಭಾರತದ ಮುಕುಟಮಣಿಯಾಗಿದ್ದು, ಮುಂದಿನ ದಿನಗಳು ಉಜ್ವಲವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆಯ ಮಾತುಗಳನ್ನಾಡಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ಮತ್ತು 35ಎ ವಿಧಿಯನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಅವರು ಗುರುವಾರ ರಾತ್ರಿ 8ರ ಹೊತ್ತಿಗೆ ಟಿ.ವಿ. ಮಾಧ್ಯಮದ ಮೂಲಕ ಮಾತನಾಡಿದರು. ಸುಮಾರು 40 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಅವರು 370ನೇ ಮತ್ತು 35ಎ ವಿಧಿ ರದ್ದುಗೊಳಿಸಿದ್ದರ ಕುರಿತ ಕಾರಣಗಳನ್ನು ಮತ್ತು ಭವಿಷ್ಯದ ದೃಷ್ಟಿಯನ್ನು ದೇಶದ ಮುಂದೆ ತೆರೆದಿಟ್ಟರು. ಅಲ್ಲದೇ ಸಾಕಷ್ಟು ಆಲೋಚಿಸಿಯೇ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಹಿತದೃಷ್ಟಿಯಿಂದ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಂದು ಸರ್ದಾರ್‌ ವಲ್ಲಭಭಾಯಿ ಪಟೇಲರು ಕಂಡಿದ್ದ ಕನಸು ಈಗ ಸಾಕಾರಗೊಂಡಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಯುಗ ಆರಂಭಗೊಂಡಿದೆ, ಇನ್ನು ದೇಶದ ಎಲ್ಲ ನಾಗರಿಕರಿಗೆ ಇರುವಂತೆ ಹಕ್ಕು ಮತ್ತು ಭಾದ್ಯತೆಗಳು ಸಮಾನವಾಗಿರುತ್ತವೆ ಎಂದು ಹೇಳಿದರು.

370 ವಿಧಿಯಿಂದ ವಂಚನೆ
370ನೇ ವಿಧಿ ಜಾರಿಯಲ್ಲಿದ್ದರಿಂದ ಜಮ್ಮು ಮತ್ತು ಕಾಶ್ಮೀರ ವಂಚನೆಗೊಳಗಾಗಿತ್ತು. ಅದರಿಂದಾಗುವ ಲಾಭದ ಬಗ್ಗೆ ಯಾರೂ ಚರ್ಚೆ ಮಾಡುತ್ತಿರಲಿಲ್ಲ. ಬದಲಿಗೆ ಅದು ಭ್ರಷ್ಟಾಚಾರದ, ಭಯೋತ್ಪದನೆಗೆ ನೀರೆಯುವ ವಸ್ತುವಾಗಿತ್ತು. ಅಶಾಂತಿಯಿಂದಾಗಿ ಈವರೆಗೆ 42 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ಸಿಗಲಿಲ್ಲ. ದೇಶದ ಅನ್ಯ ರಾಜ್ಯದ ಮಕ್ಕಳಿಗೆ ಹೆಣ್ಮಕ್ಕಳಿಗೆ, ಕಾರ್ಮಿಕರಿಗೆ ಸರಕಾರದ ಯೋಜನೆಗಳಿಂದ ಪ್ರಯೋಜನ ಸಿಕ್ಕಿದರೆ, ಕಾಶ್ಮೀರದವರಿಗೆ ಯಾವುದೇ ಲಾಭ ಸಿಗಲಿಲ್ಲ. ಮೀಸಲಾತಿಗಳೂ ಸಿಗಲಿಲ್ಲ. ದಲಿತರಿಗೂ ಯಾವುದೇ ಪ್ರಯೋಜನವಾಗಲಿಲ್ಲ. ಸರಕಾರಿ ನೌಕರರಿಗೂ ವೇತನ ಸೌಲಭ್ಯಗಳು ಲಭ್ಯವಾಗಲಿಲ್ಲ. ಪಾಕಿಸ್ಥಾನವೂ 370ನೇ ವಿಧಿಯನ್ನು ತನ್ನ ಅಸ್ತ್ರವನ್ನಾಗಿ ಬಳಸಿತು. ಇದರಿಂದಾಗಿ ಕಾಶ್ಮೀರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿತು. ಪ್ರತ್ಯೇಕತೆ ಇದ್ದರಿಂದ ಕಾಶ್ಮೀರಕ್ಕೆ ನೆರವು ನೀಡುವಲ್ಲಿ ಸರಕಾರಗಳೂ ವಿಫ‌ಲವಾದವು. ಆದ್ದರಿಂದ ಅಲ್ಲಿನ ವ್ಯವಸ್ಥೆ, ಜನರ ಜೀವನ ಸರಿಪಡಿಸಲು ಮತ್ತು ದೇಶದ ಸುರಕ್ಷತೆಗೆ ಮಹತ್ತರವಾದ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.

ಅಭಿವೃದ್ಧಿಯ ಹೊಸ ಶಕೆ
ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಅಭಿವೃದ್ಧಿಗೆ ಇದ್ದ ಅಡೆತಡೆಗಳು ಈ ಮುಕ್ತಗೊಂಡಿದೆ. ಅಲ್ಲಿನ ಎಲ್ಲ ಸರಕಾರಿ ಹುದ್ದೆಗಳನ್ನು ತುಂಬಲಾಗುವುದು. ಇದೇ ವೇಳೆ ಅಲ್ಲಿನ ಯುವಕರಿಗೆ ಉದ್ಯೋಗ ನೀಡಲು ಕ್ರಮಕೈಗೊಳ್ಳಲಾಗುವುದು. ಕಾಶ್ಮೀರದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್‌ ಸಿಗಲಿದೆ. ಕಾರ್ಮಿಕರ ಸಮಸ್ಯೆಗಳು ಪರಿಹಾರ ಕಾಣಲಿದೆ. ಕೇಂದ್ರಾಡಳಿತದ ಸ್ಥಾನಮಾನ ಏನಿದ್ದರೂ ತಾತ್ಕಾಲಿಕವಾಗಿದ್ದು ಉತ್ತಮ ಆಡಳಿತ ಕಾಣಲಿದೆ ಎಂದು ಹೇಳಿದರು.

Advertisement

ಭಯೋತ್ಪಾದನೆಯಿಂದ ಮುಕ್ತ
ಮೂಲಸೌಕರ್ಯ, ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಹೊಸ ಯೋಜನೆಗಳು, ಹಳೆಯ ಯೋಜನೆಗಳು ವೇಗ ಪಡೆಯಲಿವೆ. ಕಾಶ್ಮೀರದಲ್ಲಿ ಐಐಟಿ, ಐಐಎಂಗಳು ಸ್ಥಾಪನೆಯಾಗಲಿವೆ. ಉತ್ತಮ ಜೀವನ ಕಲ್ಪಿಸಲು ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದ್ದು, ಉತ್ತಮ ನಾಯಕರ ಆಯ್ಕೆ ಆಗಲಿದೆ. ಯುವ ನೇತಾರರು ಅಲ್ಲಿಂದ ಬರಲಿದ್ದಾರೆ. ಕಾಶ್ಮೀರ ಭಯೋತ್ಪಾದನೆ, ಪ್ರತ್ಯೇಕತೆಗಳಿಂದ ಮುಕ್ತವಾಗಲಿದೆ. ವಿಶ್ವದ ಅತ್ಯುದ್ಭುತವಾದ ಪ್ರವಾಸಿ ಕೇಂದ್ರವಾಗಲಿದೆ. ಅಂತಹ ಸಾಮರ್ಥ್ಯವೂ ಅದಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮೂಲಸೌಕರ್ಯ ವೃದ್ಧಿ
ಮೂಲಸೌಕರ್ಯ ವೃದ್ಧಿಯ ಮಾತುಗಳನ್ನೂ ಈ ವೇಳೆ ಮೋದಿ ಹೇಳಿದರು. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ಗಳಲ್ಲಿ ಅವಕಾಶಗಳು ಸಾಕಷ್ಟು ಸೃಷ್ಟಿಯಾಗಲಿವೆ. ಚಲನಚಿತ್ರೋದ್ಯಮ, ಕ್ರೀಡಾ ಕ್ಷೇತ್ರ ಚಿಗುರಲಿದೆ. ಪ್ರವಾಸೋದ್ಯಮಕ್ಕೆ ಉಜ್ವಲ ಅವಕಾಶ ಕಾಶ್ಮೀರಕ್ಕಿದೆ. ಲಡಾಖ್‌ನಲ್ಲಿ ಸೋಲಾರ್‌ ಪ್ಲಾಂಟ್‌ಗಳು ರೂಪುತಳೆಯಲಿವೆ. ಕಾಶ್ಮೀರ ಕೇಸರಿಯ ಪರಿಮಳ, ಅಮೂಲ್ಯ ಉತ್ಪನ್ನಗಳು, ಲಡಾಖ್‌ನ ಔಷಧ ಸಸ್ಯಗಳ ಪ್ರಯೋಜನ ವಿಶ್ವಕ್ಕೆ ಸಿಗಲಿದೆ. ಇಲ್ಲಿನವರು ತಂತ್ರಜ್ಞಾನ, ಕ್ರೀಡೆಯಲ್ಲಿ ಮುಂದಿದ್ದು, ಇವೆಲ್ಲವನ್ನು ವಿಶ್ವದೆದುರು ತೆರೆದಿಡಲು ನಾವು ಬೆಂಬಲಿಸಲಿದ್ದೇವೆ ಎಂದು ಆಶಾವಾದವನ್ನು ಬಿತ್ತಿದರು. ಆಸ್ಪತ್ರೆ, ಮೂಲಸೌಕರ್ಯ ವ್ಯಾಪಕವಾಗಿ ಅಭಿವೃದ್ಧಿಯಾಗಲಿವೆ ಎಂದು ಹೇಳಿದರು. ಜತೆಗೆ ರಾಷ್ಟ್ರೀಯ ಹಿತಾಸಕ್ತಿ ಮೊದಲಿದ್ದು, ಇಡೀ ದೇಶದ ಜನತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನವರ ಒಳಿತಿನ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಹೇಳಿದರು.

ಭಯೋತ್ಪಾದನೆಗೆ ಉತ್ತರ
ಇದೇ ವೇಳೆ ಭಯೋತ್ಪಾದನೆಯನ್ನೂ ಪ್ರಸ್ತಾವಿಸಿದ ಪ್ರಧಾನಿಯವರು, ಇದಕ್ಕೆಲ್ಲ ಕಾಶ್ಮೀರಿಗಳೇ ಉತ್ತರ ಹೇಳಲಿದ್ದಾರೆ. ಸೈನಿಕರು ಪ್ರಾಣಾರ್ಪಣೆ ಮಾಡಿದ್ದು ಅವರನ್ನೂ ನೆನಪಿಸಿಕೊಳ್ಳಬೇಕಿದೆ. ದೇಶದ 130 ಕೋಟಿ ಜನ ಇಲ್ಲಿನವರ ಅಭಿವೃದ್ಧಿಗೆ ಒಂದಾಗಬೇಕಿದೆ ಎಂದು ಹೇಳಿದರು. ಭಾಷಣದ ಕೊನೆಯಲ್ಲಿ ಈದ್‌ ಶುಭಾಶಯವನ್ನೂ ಪ್ರಧಾನಿ ಮೋದಿಯವರು ಕೋರಿದರು.

ಹೈಲೈಟ್ಸ್‌
370 ಮತ್ತು 35ಎ ವಿಧಿಯಿಂದ ಕಾಶ್ಮೀರಕ್ಕೆ ವಂಚನೆ
ಇನ್ನು ಕಾಶ್ಮೀರದಲ್ಲಿ ಹೊಸ ಯುಗ ಆರಂಭ
ದೇಶದ ನಾಗರಿಕರ ಎಲ್ಲ ಹಕ್ಕು ಭಾದ್ಯತೆಗಳು ಅನ್ವಯ
ಐಐಟಿ, ಐಐಎಂ ಸ್ಥಾಪನೆಗೆ ಕ್ರಮದ ಭರವಸೆ
ಮೂಲಸೌಕರ್ಯಕ್ಕೆ ಉತ್ತೇಜನ, ಉದ್ಯೋಗ ದೊರಕಿಸಲು ಯತ್ನ
ಭಯೋತ್ಪಾದನೆಯಿಂದ ಮುಕ್ತ; ಕಾಶ್ಮೀರಿಗಳಿಂದಲೇ ಉತ್ತರ
ಪ್ರವಾಸೋದ್ಯಮ, ತಂತ್ರಜ್ಞಾನ ವಲಯದಲ್ಲಿ ಮಿಂಚುವ ಆಶಾವಾದ

Advertisement

Udayavani is now on Telegram. Click here to join our channel and stay updated with the latest news.

Next