Advertisement

ನವಭಾರತ ನಿರ್ಮಾಣಕ್ಕೆ 20 ಲಕ್ಷ ಕೋ.ರೂ. ಪ್ಯಾಕೇಜ್‌: ಪ್ರಧಾನಿ ಘೋಷಣೆ

02:30 AM May 13, 2020 | Hari Prasad |

ಹೊಸದಿಲ್ಲಿ: ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ.

Advertisement

ಮಂಗಳವಾರ ರಾತ್ರಿ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಭಾರತವನ್ನು ಸದೃಢ ರಾಷ್ಟ್ರವನ್ನಾಗಿಸಲು ಈ ಪ್ಯಾಕೇಜ್‌ ಸಹಾಯಕವಾಗಲಿದೆ ಎಂದರು.

ಜತೆಗೆ ದೇಶದ ಶ್ರಮಿಕ ವರ್ಗಕ್ಕೆ ಉತ್ತೇಜನ ನೀಡುವ ಸಲುವಾಗಿ ಗೃಹೋದ್ಯಮಗಳ ಅಭಿವೃದ್ಧಿಗಳಿಗಾಗಿ, ಚಿಕ್ಕ ಮತ್ತು ದೊಡ್ಡ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ, ರೈತರಿಗಾಗಿ, ನಿಯತ್ತಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗ ಸಹಿತ ದೇಶದ ಅಭಿವೃದ್ಧಿಗೆ ಆಧಾರ ಸ್ತಂಭವಾಗಿರುವ ಎಲ್ಲ ಕ್ಷೇತ್ರಗಳ ಪುನರುತ್ಥಾನಕ್ಕಾಗಿ ಈ ಪ್ಯಾಕೇಜನ್ನು ಘೋಷಿಸಲಾಗುತ್ತದೆ.

ಕೇಂದ್ರ ವಿತ್ತ ಸಚಿವರು ಬುಧವಾರದಿಂದ ಹಂತಹಂತವಾಗಿ ಪ್ಯಾಕೇಜಿನ ವಿವರ ಪ್ರಕಟಿಸಲಿದ್ದಾರೆ. 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ನಿಂದ ದೇಶದ ಎಲ್ಲ ಕೈಗಾರಿಕಾ ಕ್ಷೇತ್ರಗಳಿಗೂ ಹೊಸ ಉತ್ತೇಜನ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ಯಾಕೇಜ್‌ನಿಂದ ಲ್ಯಾಂಡ್‌, ಲೇಬರ್‌, ಲಿಕ್ವಿಡಿಟಿ… ಹೀಗೆ ಎಲ್ಲ ವಿಭಾಗಗಳಿಗೂ ಅನುಕೂಲವಾಗುತ್ತದೆ ಎಂದಿದ್ದಾರೆ.

ಸುಧಾರಣೆಗಳಿಂದ ಪ್ರಗತಿ ಸಾಧ್ಯ
ನಾವು ಅಧಿಕಾರಕ್ಕೆ ಬಂದ ಬಳಿಕ ಮಾಡಿದ ಸಣ್ಣದೊಂದು ಸುಧಾರಣೆಯಿಂದಾಗಿ ಇಂದು ಸರಕಾರದ ಅನುದಾನಗಳು, ಸಹಾಯಧನಗಳು ನೇರವಾಗಿ ಜನರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗುತ್ತಿವೆ. ಜನಧನ್‌, ಆಧಾರ್‌, ಮೊಬೈಲ್‌… ‘ಜೆ.ಎ.ಎಂ.’ ಎಂಬ 3 ಅಕ್ಷರಗಳ ಸುಧಾರಣೆಯಿಂದ ನಾವು ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

Advertisement

ಸುಧಾರಣೆಗಳು ಉತ್ತಮ ಮೂಲಸೌಕರ್ಯ ಕಲ್ಪಿಸಿ, ಮಾನವ ಸಂಪನ್ಮೂಲ ಹೆಚ್ಚಿಸಿ, ಬಲಿಷ್ಠ ಆರ್ಥಿಕತೆ ಸೃಷ್ಟಿಸುವ, ಉದ್ಯಮಶೀಲತೆಯನ್ನು ಹೆಚ್ಚಿಸುವ, ಮೇಕ್‌ ಇನ್‌ ಇಂಡಿಯಾ ಸಂಕಲ್ಪವನ್ನು ಉತ್ತುಂಗಕ್ಕೇರಿಸುವ ಮೂಲಕ ಈ ದೇಶವನ್ನು ಮುನ್ನಡೆಸಲಿವೆ. ಜನತೆಯಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆತ್ಮಬಲ ಜಾಗೃತಗೊಳಿಸಿ ಜಾಗತಿಕ ಬೇಡಿಕೆಗೆ ಅನುಗುಣವಾದ ಪೂರೈಕೆ  ನೀಡು ವಂತೆ ಹುರಿದುಂಬಿಸಲಿವೆ ಎಂದರು.

ಸ್ವಾವಲಂಬಿ ಭಾರತಕ್ಕೆ ಪಂಚ ಸ್ತಂಭ
ಈ ಮನುಕುಲದ ಕ್ಷೇಮಾಭಿವೃದ್ಧಿಗೆ ಭಾರತವು ಗಣನೀಯ ಕೊಡುಗೆ ನೀಡಲಿದೆ ಎಂದು ಇಡೀ ಜಗತ್ತೇ ನಂಬಿದೆ. ಭಾರತವನ್ನು ಸ್ವಾವಲಂಬಿಯಾಗಿಸಲು 130 ಕೋಟಿ ಭಾರತೀಯರು ಪಣ ತೊಡುವ ಮೂಲಕ ಇದನ್ನು ಸಾಧಿಸಲು ಸಾಧ್ಯ.

ನಮ್ಮಲ್ಲಿ ಸಂಪನ್ಮೂಲಗಳಿವೆ, ಸಾಮರ್ಥ್ಯವಿದೆ, ಜಗತ್ತಿನ ಅತ್ಯುತ್ಕೃಷ್ಟ ಪ್ರತಿಭೆಗಳಿವೆ. ನಾವೇ ಸ್ವತಃ ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸೋಣ, ಪೂರೈಕೆಯ ಸರಪಳಿಯನ್ನು ಸುಧಾರಿಸೋಣ, ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡೋಣ. ನಮ್ಮಿಂದ ಇದು ಖಂಡಿತ ಸಾಧ್ಯ ಮತ್ತು ನಾವು ಇದನ್ನು ಮಾಡಿಯೇ ಮಾಡುತ್ತೇವೆ.

ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಐದು ಆಧಾರಸ್ತಂಭಗಳು ಅತ್ಯಗತ್ಯ.

1. ಆರ್ಥಿಕತೆ: ನಮಗೆ ನಿಧಾನಗತಿಯ ಬದಲಾವಣೆಯಲ್ಲ, ವೇಗದ ಜಿಗಿತ ಕಾಣುವ ಆರ್ಥಿಕತೆ ಬೇಕಿದೆ.

2. ಮೂಲ ಸೌಕರ್ಯ: ಆಧುನಿಕ ಭಾರತದ ಅಸ್ಮಿತೆಯಾಗಬಲ್ಲಂಥ ಮೂಲ ಸೌಕರ್ಯ ನಮಗೆ ಬೇಕಿದೆ.

3. ವ್ಯವಸ್ಥೆ: ಹಿಂದಿನ ಶತಮಾನದ ನಿಯಮಗಳನ್ನು ಪಾಲಿಸುವಂಥ ವ್ಯವಸ್ಥೆ ನಮಗೆ ಬೇಡ. ಹೊಸ ವ್ಯವಸ್ಥೆ 21ನೆಯ ಶತಮಾನದ ಕನಸುಗಳನ್ನು ಸಾಕಾರಗೊಳಿಸುವಂತಿರಬೇಕು. ಅದು ತಂತ್ರಜ್ಞಾನ ಆಧಾರಿತವಾಗಿರಬೇಕು

4. ಪ್ರಜಾಪ್ರಭುತ್ವ: ಅಭೂತಪೂರ್ವ ಪ್ರಜಾಪ್ರಭುತ್ವವೇ ನಮ್ಮ ಶಕ್ತಿ. ಭಾರತವನ್ನು ಸ್ವಾವಲಂಬಿಯಾಗಿಸುವ ನಮ್ಮ ಕನಸನ್ನು ಸಾಕಾರಗೊಳಿಸುವ ಶಕ್ತಿಯ ಮೂಲವಿದು.

5. ಬೇಡಿಕೆ: ಬೇಡಿಕೆ ಮತ್ತು ಪೂರೈಕೆಯ ಸರಪಳಿ ಕೂಡ ನಮ್ಮ ಶಕ್ತಿಯಾಗಿದೆ. ಅದನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು.

ದೇಸೀ ಮಂತ್ರ ಪಠಣ
ಪ್ಯಾಕೇಜ್‌ ಘೋಷಣೆಯ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ದೇಶೀಯ ಉತ್ಪನ್ನಗಳ ಬಳಕೆಗೆ ಮೊದಲ ಆದ್ಯತೆ ನೀಡ ಬೇಕೆಂದು ದೇಶಬಾಂಧವರಿಗೆ ಕರೆ ನೀಡಿದರು. ನಮ್ಮ ದಿನನಿತ್ಯದ ಬೇಡಿಕೆಗಳೆಲ್ಲವನ್ನೂ ವಿದೇಶಿ ಬ್ರ್ಯಾಂಡ್‌ಗಳೇ ಪೂರೈಸುತ್ತಿಲ್ಲ.

ಬಹುತೇಕ ಅಗತ್ಯಗಳನ್ನು ಸ್ಥಳೀಯ ಉತ್ಪಾದನೆಗಳೇ ಪೂರೈಸುತ್ತವೆ. ಆದರೆ ‘ಲೋಕಲ್‌’ ಎಂದು ಕರೆಯಲ್ಪಡುವ ಅಂಥ ಉತ್ಪಾದನೆಗಳನ್ನು ನಾವಿಂದು ‘ಗ್ಲೋಬಲ್‌’ ಆಗಿ ಪರಿವರ್ತಿಸಬೇಕಿದೆ ಎಂದು ಪ್ರಧಾನಿ ಕರೆ ನೀಡಿದರು.

ಜಗತ್ತಿನ ಯಾವುದೇ ಬ್ರ್ಯಾಂಡ್‌ ಉತ್ಪಾದನೆಗಳನ್ನು ತೆಗೆದುಕೊಳ್ಳಿ. ಅವೆಲ್ಲ ಹಿಂದೊಂದು ದಿನ ‘ಲೋಕಲ್‌’ ಎನಿಸಿದ್ದವೇ. ಅಲ್ಲಿನ ಜನರು ಅವುಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಿದರು, ಮೆಚ್ಚಿಕೊಂಡರು, ಅವುಗಳ ಬಗ್ಗೆ ಅಭಿಮಾನದಿಂದ ಮತ್ತೂಬ್ಬರ ಬಳಿ ಹೇಳಿಕೊಂಡರು.

ಇಂಥ ಹಲವಾರು ಮಾರ್ಗಗಳಿಂದ ಅವು ಈಗ ಜಗತ್ತಿನ ಬ್ರ್ಯಾಂಡ್‌ಗಳಾಗಿ ಮಾರ್ಪಟ್ಟಿವೆ. ಹಾಗೆಯೇ ನಾವು ನಮ್ಮ ‘ಲೋಕಲ್‌’ ಉತ್ಪಾದನೆಗಳ ಬಗ್ಗೆ “ವೋಕಲ್‌’ ಆಗಬೇಕಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ಥಳೀಯ ಉತ್ಪಾದನೆಗಳನ್ನು ನಮ್ಮ ಜರೂರತ್ತುಗಳನ್ನು ಪೂರೈಸಿಕೊಂಡಲ್ಲಿಗೆ ಕೈಬಿಡದೆ ಬಳಸಿ, ಬೆಳೆಸಬೇಕು. ಅವುಗಳ ಬಗ್ಗೆ ಪ್ರಚಾರ ಮಾಡಬೇಕು. ಅದು ನಮ್ಮ ಜವಾಬ್ದಾರಿ ಎಂದು ನಾವು ತಿಳಿದುಕೊಳ್ಳಬೇಕು ಎಂದರು.

ಇದಕ್ಕೊಂದು ಉದಾಹರಣೆ ನೀಡಿದ ಮೋದಿ, ಹಿಂದೆ ನಾನೊಮ್ಮೆ ಖಾದಿಗೆ ಉತ್ತೇಜನ ನೀಡುವಂತೆ ಕರೆ ನೀಡಿದ್ದೆ. ನೀವು ಅತ್ಯುತ್ತಮವಾಗಿ ಸ್ಪಂದಿಸಿದಿರಿ. ಇಂದು ಖಾದಿ ಒಂದು ಬ್ರ್ಯಾಂಡ್‌ ಆಗಿದೆ. ಅದೇ ರೀತಿ ನಮ್ಮ ಸ್ಥಳೀಯ ಉತ್ಪನ್ನಗಳನ್ನು ಬ್ರಾಂಡ್‌ ಆಗಿ ಬೆಳೆಸಬೇಕಿದೆ ಎಂದು ಹೇಳಿದರು.

ಹೊಸ ಸ್ವರೂಪದಲ್ಲಿ 4ನೇ ಲಾಕ್‌ಡೌನ್‌!
ಕೋವಿಡ್ ವೈರಸ್ ನಮ್ಮ ಜತೆಯಲ್ಲಿ ಅನೇಕ ವರ್ಷಗಳ ಕಾಲ ಇರುವಂಥದ್ದು ಎಂದು ಹಲವಾರು ತಜ್ಞರು ಹೇಳಿದ್ದಾರೆ ಎಂದ ಪ್ರಧಾನಿ, ನಾವು ಯಾವಾಗಲೂ ಮಾಸ್ಕ್ ಗಳನ್ನು ಧರಿಸೋಣ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೋಣ. ಅವೆಲ್ಲದರ ಜತೆಗೆ ದೇಶದ ಆರ್ಥಿಕತೆಗೂ ಶ್ರಮಿಸೋಣ ಎಂದು ಪ್ರಧಾನಿ ಹೇಳಿದರು.

‘ಸರ್ವಂ ಆತ್ಮವಶಂ ಸುಖಂ’ ಎಂಬಂತೆ ನಮ್ಮ ವಶದಲ್ಲಿರುವ ವಿಷಯಗಳಿಂದಲೇ ಸುಖ ಪಡುವುದನ್ನು ಕಲಿಯೋಣ. ಕೋವಿಡ್ ಜತೆಗೆ ಹೋರಾಡುತ್ತಲೇ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು ಪ್ರಧಾನಿ.

ಮುಂದಕ್ಕೆ ಬರುವ 4ನೇ ಹಂತದ ಲಾಕ್‌ಡೌನ್‌ ಹೊಸ ವಿಚಾರಗಳೊಂದಿಗೆ, ಹೊಸ ನಿಯಮಗಳೊಂದಿಗೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದ ಪ್ರಧಾನಿ, ಎಲ್ಲರೂ ಆರೋಗ್ಯವಾಗಿರಿ, ಸುರಕ್ಷಿತವಾಗಿರಿ ಎಂಬ ಸಲಹೆಯೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಸರ್ವರಿಗೂ ಸುರಕ್ಷಾ ಕವಚ
ಭವಿಷ್ಯದಲ್ಲಿ ಕೋವಿಡ್ ನಂತಹ ಯಾವುದೇ ಸಂಕಷ್ಟ ಎದುರಾದಾಗಲೂ ರೈತರು, ನೌಕರರು, ಮಧ್ಯಮ ವರ್ಗ, ಉದ್ಯಮಗಳು ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸದಂತೆ, ಅವರನ್ನು ಸುರಕ್ಷಿತ ಕವಚದೊಳಗೆ ಇರಿಸುವಂಥ ಸುಧಾರಣೆಗಳನ್ನು ಸದ್ಯದಲ್ಲೇ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಪ್ರಧಾನಿ ನೀಡಿದರು.

ಸ್ವಾವಲಂಬನೆ ಕಲಿಸಿಕೊಟ್ಟ ಬಿಕ್ಕಟ್ಟಿದು
ಭಾರತವು ಈಗ ಅತ್ಯಂತ ಪ್ರಮುಖ ಘಟ್ಟದಲ್ಲಿದೆ. ಕೊವಿಡ್ ವೈರಸ್ ನಂತಹ ದೊಡ್ಡ ವಿಪತ್ತು ಈಗ ನಮಗೆ ಒಂದು ಸೂಚನೆ, ಸಂದೇಶ ಮಾತ್ರವಲ್ಲದೆ ದೊಡ್ಡ ಅವಕಾಶವನ್ನೂ ನೀಡಿದೆ. ಕೊರೊನಾ ಆರಂಭವಾದ ಸಂದರ್ಭದಲ್ಲಿ ನಮ್ಮಲ್ಲಿ ಪಿಪಿಇ ಉತ್ಪಾದನೆ ಆರಂಭವೇ ಆಗಿರಲಿಲ್ಲ. ಎನ್‌-95 ಮಾಸ್ಕ್ ಗಳ ತಯಾರಿಕೆ ಅಲ್ಪ ಪ್ರಮಾಣದಲ್ಲಿತ್ತು. ಈಗ ನಾವು  ನಿತ್ಯ 2 ಲಕ್ಷ ಪಿಪಿಇ ಕಿಟ್‌, 2 ಲಕ್ಷ ಮಾಸ್ಕ್ ಗಳನ್ನು ತಯಾರಿಸು ತ್ತಿದ್ದೇವೆ. ಈ ಬಿಕ್ಕಟ್ಟೇ ನಮಗೆ ಸ್ವಾವಲಂಬಿ ಭಾರತದ ಪ್ರಾಮುಖ್ಯವನ್ನು ತೋರಿಸಿಕೊಟ್ಟಿದೆ. ಇದುವೇ ನಮ್ಮ ಮುಂದಿರುವ ದಾರಿ ಎಂದಿದ್ದಾರೆ ಪ್ರಧಾನಿ.

ಯುದ್ಧದಲ್ಲಿ ಗೆದ್ದು ತೋರಿಸೋಣ
ಈ ವೈರಸ್‌ ಜಗತ್ತನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಇಡೀ ವಿಶ್ವವೇ ಜೀವಗಳನ್ನು ಉಳಿಸುವ ಹೋರಾಟದಲ್ಲಿ ನಿರತವಾಗಿದೆ. ಇಂಥ ಸಂಕಷ್ಟವನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಇಂಥ ಪ್ರತಿಕೂಲ ಸನ್ನಿವೇಶದಲ್ಲಿ ಮನುಷ್ಯ ಬಳಲುವುದು, ಸೋಲುವುದು ಅಥವಾ ಕುಸಿಯಬಾರದು. ನಾವು ನಮ್ಮನ್ನು ಉಳಿಸಿಕೊಳ್ಳಬೇಕು ಮತ್ತು ಈ ಯುದ್ಧದ ಎಲ್ಲ ನಿಯಮಗಳನ್ನು ಅನುಸರಿಸುತ್ತಾ ಮುಂದೆ ಮುಂದೆ ಸಾಗಬೇಕು. ಈ ಸಮರದಲ್ಲಿ ಗೆಲ್ಲಲೇಬೇಕು ಎಂದು ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next