Advertisement

‘ಪಕ್ಕೆಲುಬು’ ವೈರಲ್ ವಿಡಿಯೋ : ವಿಡಿಯೋಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಶಿಕ್ಷಣ ಸಚಿವರ ಆದೇಶ

10:19 AM Jan 10, 2020 | Hari Prasad |

ಬೆಂಗಳೂರು: ಸರಕಾರಿ ಶಾಲಾ ವಿದ್ಯಾರ್ಥಿಯೊಬ್ಬ ‘ಪಕ್ಕೆಲುಬು’ ಪದವನ್ನು ಹೇಳಲು ತಡಬಡಾಯಿಸುತ್ತಿರುವ ವಿಡಿಯೋ ಒಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ವಿದ್ಯಾರ್ಥಿಯ ಮುಗ್ಧತನವನ್ನು ಮತ್ತು ಕಲಿಕಾ ದೌರ್ಬಲ್ಯವನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವವರ ವಿರುದ್ಧ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳಲ್ಲಿನ ಕಲಿಕಾ ದೌರ್ಬಲ್ಯವನ್ನು ಈ ರೀತಿಯಾಗಿ ಗೇಲಿ ಮಾಡುವುದು ಮತ್ತು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವದಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು ಮತ್ತು ಇತರರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದರು.

ಈ ವಿಷಯ ಇದೀಗ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರ ಗಮನಕ್ಕೂ ಬಂದಿದ್ದು ಅವರು ಈ ವಿಚಾರದ ಕುರಿತಾಗಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಶಿಕ್ಷಣ ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆಯೊಂದನ್ನು ನೀಡಿದ್ದು ಸದರಿ ವಿಡಿಯೋವನ್ನು ಮಾಡಿರುವ ಶಿಕ್ಷಕರು ಮತ್ತು ಶಾಲೆಯ ವಿಳಾಸವನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಯುಕ್ತರಿಗೆ ಆದೇಶ ನೀಡಿದ್ದಾರೆ.


‘ಮಕ್ಕಳು ತಪ್ಪು ಉಚ್ಛಾರ ಮಾಡುವುದು ಕಲಿಕಾ ಪ್ರಕ್ರಿಯೆಯಲ್ಲಿ ಸಹಜವೇ, ನಿರಂತರ ಕಲಿಕೆಯ ನಂತರ ಆ ಮಗುವಿಗೆ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಛಾರ ಸಾಧ್ಯವಾಗುತ್ತದೆ. ಆದರೆ ಈ ರೀತಿಯಾಗಿ ತಪ್ಪು ಪದ ಉಚ್ಛಾರ ಮಾಡುವುದನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಾಗ ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟುಮಾಡಿ ಆ ಮಗು ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗಬಹುದು. ಶಿಕ್ಷಕರು ಮಕ್ಕಳಿಗೆ ಸರಿಯಾದ ಉಚ್ಛಾರ ವಿಧಾನವನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಂತಹ ಕೆಲಸ ನಿಜಕ್ಕೂ ಅಪರಾಧವೇ ಹೌದು.’ ಎಂದು ಸಚಿವರು ತಮ್ಮ ಆದೇಶ ಪ್ರತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಕೃತ್ಯ ಯಾವ ಶಾಲೆಯಲ್ಲಿ ನಡೆದಿದೆ ಹಾಗೂ ಈ ರೀತಿಯಾಗಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವ್ಯಕ್ತಿಗಳ ಮೇಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡುವಂತೆ ಸಚಿವ ಸುರೇಶ್ ಕುಮಾರ್ ಅವರು ಆದೇಶ ನೀಡಿದ್ದಾರೆ. ಮತ್ತು ಮುಂಬರುವ ದಿನಗಳಲ್ಲಿ ಮಕ್ಕಳ ಕಲಿಕಾ ದೌರ್ಬಲ್ಯವನ್ನು ಈ ರೀತಿಯಾಗಿ ಸಾರ್ವಜನಿಕವಾಗಿ ಗೇಲಿ ಮಾಡುವ ಶಿಕ್ಷಕರು ಮತ್ತು ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದೂ ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಈ ಕುರಿತಾಗಿ ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next