Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ 

06:02 PM Nov 17, 2017 | |

2010-11ರ ಸುಮಾರಿಗೆ ಜಾರಿಗೆ ಬಂದ ವೈದ್ಯನಾಥನ್‌ ವರದಿಯಂತೆ ಪತ್ತಿನ ಸಹಕಾರಿ ಸಂಘಗಳಲ್ಲಿ ಏಕರೂಪದ ಲೆಕ್ಕಪತ್ರ ನಿರ್ವಹಣಾ ಪದ್ಧತಿ ಜಾರಿಯಾಯಿತು. ಆಡಳಿತ ವ್ಯವಸ್ಥೆಯ ಲ್ಲಿಯೂ ಕೆಲವೊಂದು ಬದಲಾವಣೆ ತರಲಾಯಿತು. ಸಿ.ಎ. ಬ್ಯಾಂಕ್‌ಗಳು ಮತ್ತೆ ಕೃಷಿ ಪತ್ತಿನ ಸಹಕಾರ ಸಂಘಗಳಾಗಿ ಮುಂದು ವರಿಯುವಂತಾಯಿತು. ಈಗ  ಸಂಘಗಳು ಹಿಂದಿನ ಪದ್ಧತಿಯಂತೆ ರೈತ ಒಡನಾಡಿಯಾಗಿ ಗ್ರಾಮೀಣ ಬದುಕಿನ ಕಡೆಗೆ ಒಲವು ತೋರುತ್ತಿರುವುದು ಕಂಡು ಬರುತ್ತಿದೆ.

Advertisement

ಕರಾವಳಿ ಜಿಲ್ಲೆಗಳಲ್ಲಿ 1970ರ ದಶಕದಲ್ಲಿ ಸಹಕಾರ ಕ್ಷೇತ್ರ ಕೃಷಿ ಇಲಾಖೆ ಮತ್ತು ಸರಕಾರದ ಜಂಟಿ ಸಹಯೋಗದೊಂದಿಗೆ ಒಂದು ಆಂದೋಲನವೇ ನಡೆದಿತ್ತು. ಅಂದಿನ ಕೇಂದ್ರ ಸಚಿವರಾದ ಟಿ.ಎ. ಪೈ ಮತ್ತು ಬ್ಯಾಂಕಿಂಗ್‌ ತಜ್ಞ ಕೆ.ಕೆ. ಪೈ ಮತ್ತು ಹಲವು ಕೃಷಿ ತಜ್ಞರ ಮುತುವರ್ಜಿಯಿಂದ ಕೆನರಾ ಮಿಲ್ಕ್ ಯೂನಿಯನ್‌ ಆರಂಭಗೊಂಡಿತ್ತು. ಅದೇ ಸಂಸ್ಥೆ ಈಗ ಸಹಕಾರ ಕ್ಷೇತ್ರದ ಸ್ವಾಮ್ಯದಲ್ಲಿ ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಎನ್ನುವ ಬಹುದೊಡ್ಡ ಸಂಸ್ಥೆಯಾಗಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಅದೇ ಕಾಲ ಘಟ್ಟದಲ್ಲಿ ಅಸ್ತಿತ್ವಕ್ಕೆ ಬಂದ ಎಂ.ಎಫ್.ಎ.ಎಲ್‌. ಪ್ರಾಜೆಕ್ಟ್ (ಮಾರ್ಜಿನಲ್‌ ಫಾರ್ಮಸ್‌ ಎಗ್ರಿಕಲ್ಚರ್‌ ಲೇಬರ್) ಎನ್ನುವ ಯೋಜನೆಯನ್ವಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರು ಕೃಷಿಕರಿಗೆ ಭತ್ತ ಸಹಿತ ಧಾನ್ಯ ಇನ್ನಿತರ ಆಹಾರ ಬೆಳೆ, ವಾಣಿಜ್ಯ ಬೆಳೆ ಸಹಿತ ಹೈನುಗಾರಿಕೆಗೆ ಉತ್ತೇಜನ ನೀಡುವ ಹತ್ತು ಹಲವು ಕ್ರಮಗಳನ್ನು ಜಾರಿಗೆ ತರಲಾಯಿತು.

ಅಲ್ಪಾವಧಿ-ಮಧ್ಯಮಾವಧಿ ಕೃಷಿ ಸಾಲ
ಮುಖ್ಯವಾಗಿ ರೈತರು ಹೊಂದಿದ ಕೃಷಿ ಭೂಮಿ ಮತ್ತು ಬೆಳೆಸುವ ಬೆಳೆಗೆ ಅನುಗುಣವಾಗಿ ನಬಾರ್ಡ್‌, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೀಗೆ ತ್ರಿಸ್ತರ ವ್ಯವಸ್ಥೆಯಲ್ಲಿ ರೈತರಿಗೆ ಅಲ್ಪಾವಧಿ ಹಾಗೂ ಮಧ್ಯಮಾವಧಿ ಬೆಳೆ ಸಾಲ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು, ಈಗಲೂ ಇದೆ. ಪ್ರಸಕ್ತದಲ್ಲಿ ಇಂತಹ ಸಾಲವನ್ನು ರೈತರಿಗೆ ಶೂನ್ಯ ಬಡ್ಡಿಯಲ್ಲಿ ನೀಡಲಾಗುತ್ತದೆ. ರೈತರು ತಾವು ಹೊಂದಿದ ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಬೆಳೆಯುವ ಬೆಳೆಗಳ ಆಧಾರದಲ್ಲಿ ಪಡೆಯ ಬಹುದಾದ ಬೆಳೆ ಸಾಲದ ಮಿತಿಯನ್ನು ನಿಗದಿಗೊಳಿಸುವ ನಾರ್ಮಲ್‌ ಕ್ರೆಡಿಟ್‌ ಸ್ಟೇಟ್‌ಮೆಂಟ್‌ (ಎನ್‌.ಸಿ.ಎಸ್‌.) ಅಂದರೆ ಕ್ರಮಿಕ ಪತ್ತಿಯ ದಾಸ್ತಾನು ತಯಾರಿಸಿಕೊಂಡು ಅದರಂತೆ ಬೆಳೆ ಸಾಲ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಕನಿಷ್ಠ 25 ಸೆಂಟ್ಸ್‌ ಕೃಷಿ ಭೂಮಿ ಹೊಂದಿದವರು ಬೆಳೆ ಸಾಲ ಪಡೆಯಲು ಅರ್ಹರಾಗುತ್ತಾರೆ. ಮಾತ್ರವಲ್ಲ ಕೃಷಿ ಇಲಾಖೆಯಿಂದ ವಿಶೇಷವಾಗಿ ಮಧ್ಯಮ, ಸಣ್ಣ ಮತ್ತು ಅತೀಸಣ್ಣ ರೈತರಿಗೆ ಕೃಷಿ ಇಲಾಖೆಯಿಂದ ಸಹಾಯಧನದೊಂದಿಗೆ ಕೃಷಿ ಪರಿಕರಗಳು ಮತ್ತು ಗೊಬ್ಬರ ಕ್ರಿಮಿನಾಶಕಗಳನ್ನು ವಿತರಿಸುವ ಕ್ರಮ ಚಾಲ್ತಿಯಲ್ಲಿತ್ತು. ಒಂದು ಕಂದಾಯ ಗ್ರಾಮಕ್ಕೊಬ್ಬರಂತೆ ಗ್ರಾಮ ಸೇವಕರು ರೈತರ ಆಪ್ತಮಿತ್ರರಂತೆ ಕೆಲಸ ಮಾಡುತ್ತಿದ್ದಂತಹ ವ್ಯವಸ್ಥೆ ಜಾರಿಯಲ್ಲಿತ್ತು. ಅದೇ ಹೊತ್ತಿಗೆ ಸಹಕಾರ ಇಲಾಖೆಯ ಮಹತ್ತರ ತೀರ್ಮಾನದಂತೆ ಗ್ರಾಮಕ್ಕೊಂದರಂತಿದ್ದ ಪತ್ತಿನ ಸಹಕಾರ ಸಂಘ ಗಳನ್ನು 3 ರಿಂದ 4 ಗ್ರಾಮಗಳಿಗೆ ಒಂದರಂತೆ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘ ಎಂದು ಹೊಸ ಹೆಸರಿನೊಂದಿಗೆ ವಿಲೀನಗೊಳಿಸಲಾಯಿತು.

ಕೃಷಿ ಭೂಮಿ ತುಂಡು ಭೂಮಿಯಾಯಿತು
ಈ ವ್ಯವಸ್ಥೆ ಜಾರಿಗೆ ಬಂದ ಒಂದೆರಡು ವರ್ಷ ಕಳೆಯುತ್ತಿದ್ದಂತೆ ರಾಜ್ಯದಲ್ಲಿ ಭೂಮಸೂದೆ ಜಾರಿಗೆ ಬಂದು ಕರಾವಳಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡಿತು. ಉಳುವವನೇ ಹೊಲ ದೊಡೆಯನಾದರೂ ಕುಟುಂಬ ಪದ್ಧತಿಯಲ್ಲಿ ಒಟ್ಟಾಗಿ ನಿರ್ವಹಿ ಸಿಕೊಂಡು ಬಂದ ಬೇಸಾಯ ಪದ್ಧತಿ, ಕುಟುಂಬದ ಸದಸ್ಯರೊಳಗೆ ಭೂಮಿ ಹಂಚಿಹೋದ ಕಾರಣದಿಂದ ಬಹುತೇಕ ಕೃಷಿ ಭೂಮಿ ತುಂಡು ಭೂಮಿಗಳಾದವು. ರೈತರು ಅತೀ ಸಣ್ಣ ಹಿಡುವಳಿ ದಾರರಾದರು. ಈ ಕಾರಣದಿಂದಾಗಿ ಒಂದು ಅಂದಾಜಿನ ಪ್ರಕಾರ ಶೇ.60ರಷ್ಟು ಕೃಷಿ ಕುಟುಂಬಗಳು ಈಗ ಕೃಷಿಕರಾಗಿ ಉಳಿದಿಲ್ಲ. ಇದು ವಾಸ್ತವ.

ಬದಲಾದ ಪರಿಸ್ಥಿತಿ, ಹೊಸ ಕಾರ್ಯಶೈಲಿ
ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯವಿಧಾನಗಳು ಕ್ರಮೇಣ ಬದಲಾವಣೆ ಕಾಣುತ್ತಾ ಸಿ.ಎ. ಬ್ಯಾಂಕ್‌ಗಳಾಗಿ ಹೆಸರು ಬದಲಾಯಿಸಿ ಬಹುಪಾಲು ಬ್ಯಾಂಕಿಂಗ್‌ ವ್ಯವಹಾರ ಮತ್ತು ಪಡಿತರ ವಿತರಣೆಗೆ ಸೀಮಿತವಾಯಿತು. ಬಹುತೇಕ ಸಂಘಗಳಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆಯೂ ನಿಂತು ಹೋಯಿತು.

Advertisement

2010-11ರ ಸುಮಾರಿಗೆ ಜಾರಿಗೆ ಬಂದ ವೈದ್ಯನಾಥನ್‌ ವರದಿಯಂತೆ ಪತ್ತಿನ ಸಹಕಾರಿ ಸಂಘಗಳಲ್ಲಿ ಏಕರೂಪದ ಲೆಕ್ಕಪತ್ರ ನಿರ್ವಹಣಾ ಪದ್ಧತಿ ಜಾರಿಯಾಯಿತು. ಆಡಳಿತ ವ್ಯವಸ್ಥೆಯ ಲ್ಲಿಯೂ ಕೆಲವೊಂದು ಬದಲಾವಣೆ ತರಲಾಯಿತು. ಸಿ.ಎ. ಬ್ಯಾಂಕ್‌ಗಳು ಮತ್ತೆ ಕೃಷಿ ಪತ್ತಿನ ಸಹಕಾರ ಸಂಘಗಳಾಗಿ ಮುಂದು ವರಿಯುವಂತಾಯಿತು. ಈಗ  ಸಂಘಗಳು ಹಿಂದಿನ ಪದ್ಧತಿಯಂತೆ ರೈತ ಒಡನಾಡಿಯಾಗಿ ಗ್ರಾಮೀಣ ಬದುಕಿನ ಕಡೆಗೆ ಒಲವು ತೋರುತ್ತಿರುವುದು ಕಂಡು ಬರುತ್ತಿದೆ.

ರೈತರು, ಕೃಷಿಕರಿಗೆ ಶಕ್ತಿ ತುಂಬಬೇಕಿದೆ
ರೈತರು, ಕೃಷಿಕರಿಗೆ ಸಹಾಯ, ಸಾಲ-ಸವಲತ್ತುಗಳ ಬಗ್ಗೆ ಎಷ್ಟೇ ಚರ್ಚೆಗಳು ನಡೆದರೂ ಕೂಲಿ ಆಳುಗಳ ಕೊರತೆ, ಪ್ರಕೃತಿ ವಿಕೋಪ, ಉತ್ಪನ್ನಗಳೀಗೆ ಸರಿಯಾದ ಬೆಲೆ ಸಿಗದಿರುವುದು ಇವೇ ಮುಂತಾದ ಕಾರಣಗಳಿಂದ ರೈತರು ಮುಖ್ಯವಾಗಿ ಭತ್ತದ ಬೆಳೆ ಹಾಗೂ ಆಹಾರ ಬೆಳೆಯಿಂದ ವಿಮುಖರಾಗುತ್ತಾರೆ. ಕರಾವಳಿ ಜಿಲ್ಲೆಗಳ ಪ್ರಮುಖ ಬೆಳೆಯಾದ ಭತ್ತದ ಬೆಳೆ ಕಡಿಮೆ ಆಗುತ್ತಿದೆ. ಕಳೆದ ಎರಡು ದಶಕದಲ್ಲಿ ಭತ್ತದ ಇಳುವರಿ ಶೇ.80ರಿಂದ ಶೇ.5ಕ್ಕೆ ಕುಸಿದಿದೆ. ಈ ಬಗ್ಗೆ ಚಿಂತನೆ ಅಗತ್ಯ. ಈತನ್ಮಧ್ಯೆ ರಾಜ್ಯ ಸಹಕಾರಿ ಮಹಾ ಮಂಡಲದ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ಕರಾವಳಿ ಜಿಲ್ಲೆಗಳ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ವ್ಯವಸ್ಥೆಯ ಕುರಿತಾಗಿ ಚಿಂತನೆ ನಡೆಸುತ್ತೇವೆ ಎಂದಿರುವುದು ರೈತಾಪಿ ವರ್ಗದಲ್ಲಿ ಆಶಾವಾದ ಮೂಡಿಸಿದೆ.

ರಸಗೊಬ್ಬರ – ಕ್ರಿಮಿನಾಶಕ ಸಂಘದಿಂದಲೇ ಸಿಗಲಿ
ಹಿಂದೆ ರೈತರಿಗೆ ರಸಗೊಬ್ಬರ ಕ್ರಿಮಿನಾಶಕ, ಬಿತ್ತನೆ ಬೀಜ ಇತ್ಯಾದಿಗಳು ನ್ಯಾಯಬೆಲೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಗಳಿಂದಲೇ ಸಿಗುತಿತ್ತು. ಅದಕ್ಕಾಗಿಯೇ ಸರಕಾರವೇ ಸಂಘಗಳಿಗೆ ಗೋದಾಮುಗಳನ್ನು ನಿರ್ಮಿಸಿಕೊಟ್ಟಿತ್ತು. ಸುಮಾರು 1975ರಿಂದ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖ ರಾಗುತ್ತಿದ್ದಂತೆ ಸಹಜ ವಾಗಿ ಸಂಘಗಳ ವ್ಯವಹಾರ ನೀತಿಯೂ ಬ್ಯಾಂಕಿಂಗ್‌ ವ್ಯವಸ್ಥೆಯತ್ತ ಸಾಗಿತ್ತು. ಬಹುತೇಕ ಸಹಕಾರ ಸಂಘಗಳು ರಸಗೊಬ್ಬರ ವಿತರಣೆಯನ್ನು ಸ್ಥಗಿತಗೊಳಿಸಿದವು. ಇದೀಗ ಪರಿಸ್ಥಿತಿ ಬದಲಾಗಿದೆ. ಬಹುತೇಕ ರೈತರು ಬತ್ತದ ಕೃಷಿ ಸಹಿತ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಹಕಾರ ಸಂಘಗಳಿಂದಲೇ ರೈತರಿಗೆ ರಸಗೊಬ್ಬರ ಕ್ರಿಮಿನಾಶಕ ಮತ್ತು ಇತರ ಪರಿಕರಗಳು ಸಿಗುವಂತಾಗಬೇಕು. ಸಹಕಾರ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳು ಸಹಕರಿಸಬೇಕು.

ಕೇರಳ ಮಾದರಿಯ ಕುಟುಂಬಶ್ರೀ ಪದ್ಧತಿ
ಕೇರಳದಲ್ಲಿ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಲ್ಲಿನ ಸರಕಾರ “ಕುಟುಂಬಶ್ರೀ’ ಎನ್ನುವ ಹೆಸರಿನಲ್ಲಿ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ. ಆರಂಭಿಕ ಹಂತದಲ್ಲಿ 10 ಜನರ ಗುಂಪಿಗೆ ತಲಾ 10 ಸಾವಿರ ರೂ.ಗಳಂತೆ 1 ಲಕ್ಷ ರೂ. ಮೂಲಧನವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. ಉಳಿದಂತೆ ಅಗತ್ಯಕ್ಕೆ ಸಾಲ ಪಡೆಯ ಬೇಕಾದಲ್ಲಿ ಸರಕಾರ ಕನಿಷ್ಠ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಈ ಸಾಲಕ್ಕೆ ಸ್ಥಳೀಯ ಪಂಚಾಯತು ಭದ್ರತೆ ನೀಡುತ್ತದೆ. ಮಾತ್ರವಲ್ಲ, ಭತ್ತದ ಕೃಷಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ನೇಜಿ, ಉಳುಮೆಯಂತ್ರ ಸಹಿತ ಇಳುವರಿಗೆ ವೈಜ್ಞಾನಿಕ ಬೆಲೆ ಸಿಗುವವರೆಗೆ ಪಂಚಾಯತ್‌ ಮತ್ತು ಇಲಾಖೆಗಳು ಪೂರ್ಣ ಜವಾಬ್ದಾರಿ ನಿರ್ವಹಿಸುತ್ತವೆ. ಅಲ್ಲಿನ ಕುಟುಂಬಶ್ರೀ ಪದ್ಧತಿ ದೇಶಕ್ಕೆ ಮಾದರಿ ಯಾಗಿದೆ. ಕರ್ನಾಟಕ ಸರಕಾರವೂ ಈ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದ ಮೂಲಕ ಜಾರಿಗೆ ಎನ್ನುವುದು ಎಲ್ಲರ ಆಗ್ರಹವಾಗಿದೆ. ರೈತರ ಸಂಕಷ್ಟಗಳ ಪರಿಹಾರದ ಬಗ್ಗೆ ಪ್ರಾಮಾಣಿಕ ಪ್ರಯತ್ನಗಳು ನಡೆದಲ್ಲಿ ಅನ್ನದಾತನ ಬದುಕು ಹಸನಾಗಬಲ್ಲುದು.

ಕಟಪಾಡಿ ಶಂಕರ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next