Advertisement

ಅಡಕತ್ತರಿಯಲ್ಲಿ ಹಿಂದಿನ ಸರ್ಕಾರದ ಯೋಜನೆಗಳು

09:17 AM Mar 05, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಬಜೆಟ್‌ನಲ್ಲಿ ಆರ್ಥಿಕ ಸಂಕಷ್ಟದ ಹೆಸರಿನಲ್ಲಿ ಈ ಹಿಂದಿನ ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರದ ಕೆಲವು ಯೋಜನೆಗಳಿಗೆ ಕತ್ತರಿ ಹಾಕಿ, ಹೊಸ ಜನಪ್ರಿಯ ಯೋಜನೆ ಅಥವಾ ಇರುವ ಯೋಜನೆಗಳ ಹೆಸರು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ವರ್ಷದ ರಾಜ್ಯ ಬಜೆಟ್‌, ಗಾತ್ರದಲ್ಲಿ ಕಳೆದ ವರ್ಷಕ್ಕಿಂತ ಏರಿಕೆಯಾಗುವ ಸಾಧ್ಯತೆಯಿದ್ದರೂ ಹಿಂದಿನ ಸರ್ಕಾರಗಳಲ್ಲಿ ಜನಪ್ರಿಯತೆ ಗಳಿಸಿದ್ದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌, ಬಡವರ ಬಂಧು, ಇಸ್ರೇಲ್‌ ಮಾದರಿ ಕೃಷಿ, ಸಿರಿ ಯೋಜನೆಗಳತ್ತ ಅವರು ಯಾವ ಯೋಚನೆ ಹೊಂದಿದ್ದಾರೆ ಎನ್ನುವುದು ಗುರುವಾರ ಸ್ಪಷ್ಟವಾಗಲಿದೆ.

Advertisement

ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಲಕ್ಷಾಂತರ ಕೋಟಿ ರೂ.ನಷ್ಟವಾಗಿದ್ದು, ರಾಜ್ಯ ಸರ್ಕಾರ ಅಧಿಕೃತವಾಗಿ 35 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಹ ಪರಿಹಾರ ನೀಡಿಲ್ಲ. ಇದರಿಂದ ನಷ್ಟವನ್ನು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ತನ್ನ ಬೊಕ್ಕಸದಿಂದಲೇ ನೀಡಬೇಕಿದೆ. ಹೀಗಾಗಿ, ಪ್ರವಾಹ ಪರಿಹಾರಕ್ಕಾಗಿ ಹಣ ಹೊಂದಿಸಲು ಹಿಂದಿನ ಸರ್ಕಾರದ ಪ್ರಮುಖ ಜನಪ್ರಿಯ ಯೋಜನೆಗಳಿಗೆ ನೀಡುವ ಅನುದಾನದ ಪ್ರಮಾಣವನ್ನು ಕಡಿತ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅನ್ನಭಾಗ್ಯ: ಪ್ರಮುಖವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಅನ್ನಭಾಗ್ಯ ಯೋಜನೆ ಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಬದಲು ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲು ಆಲೋಚನೆ ಮಾಡಿದ್ದು, ಪ್ರತಿ ಯೂನಿಟ್‌ಗೆ 7 ಕೆ.ಜಿ. ಬದಲು 5 ಕೆ.ಜಿ ಅಕ್ಕಿ ನೀಡಲು ಸರ್ಕಾರ ಯೋಚಿಸಿದೆ ಎನ್ನಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಕನಿಷ್ಠ 600 ಕೋಟಿ ರೂ.ಉಳಿತಾಯವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಂದಾಜಿಸಿದೆ ಎಂದು ತಿಳಿದು ಬಂದಿದೆ.

ಕ್ಷೀರಧಾರೆಗೆ ಸಿಗದ ಪ್ರೋತ್ಸಾಹಧನ: ಈ ಯೋಜನೆಯಡಿಯಲ್ಲಿ ರೈತರಿಗೆ ಪ್ರೋತ್ಸಾಹಧನವಾಗಿ ಪ್ರತಿ ಲೀಟರ್‌ಗೆ ಒಂದು ರೂ.ಹೆಚ್ಚಿಸಲು ಹಿಂದಿನ ಸರಕಾರ ದಲ್ಲಿ ಘೋಷಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಒಂದು ರೂ.ಹೆಚ್ಚಳ ಮಾಡಿ 6 ರೂ.ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸ ಲಾಗಿತ್ತು. ಆದರೆ, ಇದುವರೆಗೂ ರೈತರಿಗೆ ಹೆಚ್ಚುವರಿ ಯಾಗಿ ಘೋಷಿಸಿರುವ ಒಂದು ರೂ. ಪ್ರೋತ್ಸಾಹಧನ ನೀಡಿಲ್ಲ. ಈ ಬಜೆಟ್‌ನಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡುವುದು ಅನುಮಾನ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿದಿನ 70 ರಿಂದ 75 ಲಕ್ಷ ರೂ.ಉಳಿತಾಯವಾಗಲಿದೆ ಎಂಬ ಅಂದಾಜಿದೆ.

ಬಡವರ ಬಂಧು ಯೋಜನೆ ಸ್ಥಗಿತ..?: ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಸ್ತೆ ಬದಿ ವ್ಯಾಪಾರಸ್ಥರಿಗೆ ಮೀಟರ್‌ ಬಡ್ಡಿ ದಂಧೆಕೋರರಿಂದ ತಪ್ಪಿಸಲು ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆ ಮೂಲಕ ವ್ಯಾಪಾರಸ್ಥರಿಗೆ ಪ್ರತಿ ದಿನ 10 ಸಾವಿ ರವರೆಗೂ ಬಡ್ಡಿ ರಹಿತ ಸಾಲ ನೀಡಲು ಅನುಕೂಲ ಕಲ್ಪಿಸಿದ್ದರು. ಮೈತ್ರಿ ಸರ್ಕಾರ ಪತನಗೊಂಡ ನಂತರ ವ್ಯಾಪಾರಸ್ಥರಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ ಎಂಬ ಆರೋಪ ಇದೆ. ಈ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ನೀಡುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಇಸ್ರೇಲ್‌ ಮಾದರಿ ಕೃಷಿ: ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಇಸ್ರೇಲ್‌ ಮಾದರಿ ಕೃಷಿ ನೀತಿಯನ್ನು ಸಮರ್ಥವಾಗಿ ಅನುಷ್ಠಾನ ಮಾಡದೇ ನಿರ್ಲಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮೈತ್ರಿ ಸರ್ಕಾರದಲ್ಲಿ ಯೋಜನೆಗೆ ಕುಮಾರ ಸ್ವಾಮಿಯವರು ಹೆಚ್ಚಿನ ಆಸಕ್ತಿ ವಹಿಸಿ ಸ್ವತ: ಇಸ್ರೇಲ್‌ಗೆ ತೆರಳಿ ಅಧ್ಯಯನ ನಡೆಸಿಕೊಂಡು ಬಂದು ಯೋಜನೆ ಘೋಷಣೆ ಮಾಡಿದ್ದರು. ಅಲ್ಲದೇ, ಮೈತ್ರಿ ಸರ್ಕಾರ ದಲ್ಲಿ ಈ ಯೋಜನೆಗೆ 150 ಕೋಟಿ ರೂ.ಮೀಸಲಿಡ ಲಾಗಿತ್ತು. ಕುಮಾರ ಸ್ವಾಮಿಯವರು ಅಧಿಕಾರದಿಂದ ಇಳಿಯುತ್ತಿದ್ದಂತೆ ಯೋಜನೆ ಕೂಡ ಹಳ್ಳ ಹಿಡಿದಿದೆ.

ಸಿರಿ ಯೋಜನೆ: 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲು ಗುರಿ ಇಟ್ಟುಕೊಂಡು ಪ್ರತಿ ಹೆಕ್ಟೇರ್‌ ಸಿರಿಧಾನ್ಯ ಬೆಳೆದ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿತ್ತು. ಈ ಯೋಜನೆಗೆ ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ 10 ಕೋಟಿ ಮೀಸಲಿ ಟ್ಟಿತ್ತು. ಈಗ ಈ ಯೋಜನೆಯೂ ನನೆಗುದಿಗೆ ಬಿದ್ದಿದೆ. ರೈತರು ಬೆಳೆಯುವ ಪ್ರಮುಖ 12 ಅಧಿಸೂಚಿತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ 510 ಕೋಟಿ ರೂ.ಮೀಸಲಿಡಲಾಗಿತ್ತು. ಯೋಜನೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸದೇ ಇರುವುದ ರಿಂದ ನನೆಗು ದಿಗೆ ಬಿದ್ದಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡದಿದ್ದರೆ, ಯೋಜನೆ ಕೈ ಬಿಟ್ಟಂತಾಗುತ್ತದೆ.

ಸಂಯುಕ್ತ ವಿದ್ಯಾರ್ಥಿ ನಿಲಯ ಯೋಜನೆ: ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಬಾರದು ಎನ್ನುವ ಉದ್ದೇಶಕ್ಕೆ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲೆಗೆ ಒಂದರಂತೆ 30 ಸಂಯುಕ್ತ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಹಿಂದಿನ ಸರ್ಕಾರ ಯೋಜನೆ ರೂಪಿಸಿ, ಬಜೆಟ್‌ನಲ್ಲಿ 100 ಕೋಟಿ ರೂ.ಮೀಸಲಿಟ್ಟಿತ್ತು. ಈ ಯೋಜನೆ ಬಿಜೆಪಿ ಸರ್ಕಾರ ಬಂದ ಮೇಲೆ ನೆನೆಗುದಿಗೆ ಬಿದ್ದಿದ್ದು, ಯೋಜನೆಯನ್ನು ಮುಂದುವರಿಸುವುದು ಅನುಮಾನ ಎನ್ನಲಾಗಿದೆ.

ಇದರಂತೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದ ಉಡುಪು ಕಾರ್ಮಿಕರಿಗೆ, ಬೆಂಗಳೂರಿನ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾರಥಿಯ ಸೂರು ಎಂಬ ಬಾಡಿಗೆ ಆಧಾರದ ವಸತಿ ಕಾರ್ಯಕ್ರಮವನ್ನು ಘೋಷಿಸಿ, 50 ಕೋಟಿ ಮೀಸಲಿಡಲಾಗಿತ್ತು. ಈ ಯೋಜ ನೆಯೂ ಯಾವುದೇ ಬೆಳವಣಿಗೆ ಕಾಣದಿರು ವುದರಿಂದ ತೆರೆಗೆ ಸರಿಸುವ ಸಾಧ್ಯತೆ ಹೆಚ್ಚಿದೆ. ದೀರ್ಘ‌ಕಾಲದ ಯೋಜನೆಗಳಿಗೆ ನಿರೀಕ್ಷಿತ ಹಣ ಹೊಂದಾಣಿಕೆ ಮಾಡಲು ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹೆಸರು ಬದಲಾವಣೆ?: ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕಡಿತ ಮಾಡುವುದು ಅಥವಾ ಹೆಸರು ಬದಲಾಯಿಸಿ ತಮ್ಮದೇ ಹೊಸ ಯೋಜನೆ ಎಂದು ಘೋಷಿಸುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಆಸ್ಪತ್ರೆಗಳಲ್ಲಿ ಹೊಸ ಹೆಸರಿನಲ್ಲಿ ಕ್ಯಾಂಟೀನ್‌ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next