Advertisement

ಅಕ್ರಮ ಮರಳುಗಾರಿಕೆಗೆ ತಡೆ

01:02 PM Jun 09, 2019 | Suhan S |

ಜೋಯಿಡಾ: ತಾಲೂಕಿನ ರಾಮನಗರ ಪಾಂಡ್ರಿ ನದಿ ಭಾಗದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಮೂರು ಮಶಿನ್‌ಗಳನ್ನು ಸೀಜ್‌ ಮಾಡಿದ್ದ ತಹಶೀಲ್ದಾರ್‌ ಕ್ರಮಕ್ಕೆ ಸ್ವಾಗತಿಸಿದ ರೈತರು, ಅಸು, ಚಾಂದೇವಾಡಿ, ಕಾಂಬ್ರಾ ಭಾಗದಲ್ಲೂ ಮರಳು ಮಾಫಿಯಾಗೆ ಕೂಡಲೇ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.

Advertisement

ಜೋಯಿಡಾ ತಾಲೂಕಿನ ರಾಮನಗರ ಭಾಗದ ಪಾಂಡ್ರಿ, ದುಸ್ಗಿ ನದಿ ಪಾತ್ರಗಳಲ್ಲಿ ಅಕ್ರಮ ಮರಳು ಮಾಫಿಯಾ ದಂಧೆಕೋರರು ಮರಳು ಜಗ್ಗುವ ಯಂತ್ರಗಳನ್ನು ಬಳಸಿ ಅಕ್ರಮವಾಗಿ ಮರಳು ಸಂಗ್ರಹಿಸಿ ದಿನನಿತ್ಯ ನೂರಾರು ಟ್ರಿಪ್‌ ಮರಳನ್ನು ಮಾರಾಟ ಮಾಡುತಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿಗಳು ಜೋಯಿಡಾ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡು ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಹಾಕುವಂತೆ ಸೂಚಿಸಿತ್ತು.

ಎಚ್ಚೆತ್ತ ತಹಶೀಲ್ದಾರ್‌ ಸಂಜಯ ಕಾಂಬ್ಳೆ ಪಾಂಡ್ರಿ ನದಿ ದಂಡೆಗೆ ಭೇಟಿ ನೀಡಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಮೂರು ಮಶೀನ್‌ಗಳನ್ನು ಸೀಜ್‌ ಮಾಡಿ ಕ್ರಮಕೈಗೊಂಡರು. ಇದೇ ರೀತಿ ತಹಶೀಲ್ದಾರರು ಅಸು, ಚಾಂದೇವಾಡಿ, ಕಾಮ್ರಾ ಭಾಗದ ದುಸ್ಗಿ ಹಾಗೂ ಪಾಂಡ್ರಿ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನೂ ತಡೆಯಬೇಕೆಂದು ಈ ಭಾಗದ ರೈತರು ಆಗ್ರಹಸಿದ್ದಾರೆ.

ಮರಳು ಮಾಫಿಯಾದಿಂದ ದಿನನಿತ್ಯ ರೈತರು ಕಲುಷಿತ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಬೆಳೆ ಬೆಳೆಯಲೂ ನೀರಿನ ಕೊರತೆ ಉಂಟಾಗುತ್ತಿದೆ. ಪ್ರತಿನಿತ್ಯ ನದಿ ಪಾತ್ರದ ನೂರಾರು ಟನ್‌ ಮರಳನ್ನು ತೆಗೆಯುತ್ತಿದ್ದರಿಂದ ನದಿಗಳು ಬರಡಾಗಿ ಇಲ್ಲಿನ ಜೀವಜಲಗಳು ಬತ್ತಿಹೋಗಿವೆ. ಈ ಅಕ್ರಮ ದಂಧೆ ರೈತರಿಗೆ ನೀರಿನ ಸಮಸ್ಯೆ, ಕೃಷಿ ಕಾಯಕಕ್ಕೆ ಅಡ್ಡಿ, ಕುಡಿಯುವ ನೀರಿನ ಸಂಕ್ಷಟ ಎದುರಿಸುವಂತೆ ಮಾಡುತ್ತಿದ್ದವು. ಕಳೆದ ಅನೇಕ ವರ್ಷಗಳಿಂದ ಎಚ್ಚೆತ್ತು ಕೊಳ್ಳಬೇಕಾಗಿದ್ದ ತಾಲೂಕು ಆಡಳಿತ ಈಗಲಾದರೂ ಎಚ್ಚೆತ್ತುಕೊಂಡಿತಲ್ಲ ಎಂದು ರೈತರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಕಡಿವಾಣ ಎಷ್ಟು ದಿನದ ಮಟ್ಟಿಗೆ ಎನ್ನುವುದನ್ನು ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next