Advertisement

ಅಧ್ಯಕ್ಷಗಿರಿ ಬೆಂಬಲಕ್ಕೆಕಾರು, ನಿವೇಶನ ಬೇಡಿಕೆ!

02:17 PM Jan 14, 2021 | Team Udayavani |

ರಾಯಚೂರು: ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಾನಾ ಕಸರತ್ತು ನಡೆಸಿದ ಸದಸ್ಯರು ಈಗ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗಾಗಿ ಪ್ರಹಸನ ನಡೆಸಿದ್ದಾರೆ. ಆದರೆ, ಬೆಂಬಲ ನೀಡಲು ಸದಸ್ಯರು ವಿಚಿತ್ರ ಬೇಡಿಕೆ ಇಡುತ್ತಿರುವುದು ಉಭಯ ಸಂಕಟ ತಂದೊಡ್ಡಿದೆ. ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇನ್ನೂ ಮೀಸಲಾತಿ ಪ್ರಕಟಗೊಂಡಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಜಾತಿಗೆ ಮೀಸಲಾತಿ ಸಿಗಬಹುದು ಎಂಬ ಲೆಕ್ಕಾಚಾರ ಚುನಾಯಿತರದ್ದು. ಇದೇ ಕಾರಣಕ್ಕೆ ಬಹುಮತಕ್ಕೆ ಬೇಕಾದಷ್ಟು ಸದಸ್ಯರ ಬೆಂಬಲ ಪಡೆಯಲು ಮುಂದಾಗಿದ್ದಾರೆ.

Advertisement

ಕೆಲವೆಡೆ ಪಕ್ಷಾಧಾರಿತ ಸದಸ್ಯ ಬಲವಿದ್ದರೆ ಕೆಲವೆಡೆ ಸಂಖ್ಯಾಬಲಕ್ಕೆ ಕೊರತೆ ಕಂಡು ಬರುತ್ತಿದೆ. ಹೀಗಾಗಿ ಕೊರತೆ ಇರುವಷ್ಟು ಸದಸ್ಯರನ್ನು ಸೆಳೆಯಲು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಾಕಾಂಕ್ಷಿಗಳು ಆಮಿಷ ಒಡ್ಡುತ್ತಿದ್ದಾರೆ. ಈ ವೇಳೆ ಸದಸ್ಯರು ಮುಂದಿಡುತ್ತಿರುವ ಡಿಮ್ಯಾಂಡ್‌ ಕೇಳಿದರೆ ಹುಬ್ಬೇರಿಸುವಂತಾಗಿದೆ.

ಕಾರು, ನಿವೇಶನ ಕೇಳಿದ ಸದಸ್ಯರು: ಸದಸ್ಯರು ಈ ಬಾರಿ ಹಣ ಮಾತ್ರವಲ್ಲದೇ ಬೇರೆ ರೀತಿಯ ಉಡುಗೊರೆ ಕೇಳುತ್ತಿದ್ದಾರೆ. ಕೆಲವರು ದುಬಾರಿ ಕಾರುಗಳನ್ನು ಕೇಳಿದರೆ, ಕೆಲವರು ಟ್ರ್ಯಾಕ್ಟರ್‌ ಕೊಡಿಸುವಂತೆ ಕೇಳುತ್ತಿದ್ದಾರೆ. ಕೆಲವರು ಸಮೀಪದ ಪಟ್ಟಣ, ನಗರಗಳಲ್ಲಿ ನಿವೇಶನ ಕೊಡಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಇಲ್ಲವಾದಲ್ಲಿ 10-15 ಲಕ್ಷದವರೆಗೆ ನೀಡಿದರೆ ನಿಮಗೆ ಬೆಂಬಲ ಖಚಿತ ಎನ್ನುವುದು ಸದಸ್ಯರ ನಿಲುವು. ಆದರೆ, ಅಧ್ಯಕ್ಷ ಸ್ಥಾನಾಕಾಂಕ್ಷಿಗಳು ತಮ್ಮಿಂದ ಎಷ್ಟು ಹಣ ನೀಡಲು ಸಾಧ್ಯವೋ ಅಷ್ಟನ್ನು ಹೇಳಿ ಕೈ ತೊಳೆದುಕೊಂಡರೆ ಕೆಲವರು ಅವರಿಗಿಂತ ತುಸು ಹೆಚ್ಚು ಹಣ ನೀಡುವ ಭರವಸೆ ನೀಡುತ್ತಿದ್ದಾರೆ.

ಇಲ್ಲೂ ರೆಸಾರ್ಟ್‌ ರಾಜಕಾರಣ: ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ರೆಸಾರ್ಟ್‌ ರಾಜಕಾರಣ ಹಳ್ಳಿಗಳಿಗೂ ವಿಸ್ತರಿಸಿದೆ. ಬಹುತೇಕ ಚುನಾಯಿತ ಸದಸ್ಯರು ಪ್ರವಾಸದಲ್ಲಿದ್ದು, ದೊಡ್ಡ ದೊಡ್ಡ ಹೋಟೆಲ್‌ ರೆಸಾರ್ಟ್‌ಗಳಲ್ಲಿ ಮಜಾ ಮಾಡುತ್ತಿದ್ದಾರೆ. ಕಲಬುರಗಿ, ಬಳ್ಳಾರಿ, ಸಮೀಪದ ಹೈದರಾಬಾದ್‌, ಕರ್ನೂಲ್‌ ಸೇರಿದಂತೆ ವಿವಿಧೆಡೆ ಪ್ರವಾಸ ತೆರಳಿದ್ದು, ಅಲ್ಲೆಲ್ಲ ದೊಡ್ಡ ಹೋಟೆಲ್‌ಗ‌ಳಲ್ಲೇ ಉಳಿಯುತ್ತಿದ್ದಾರೆ. ಇತ್ತ ಗ್ರಾಮಗಳಲ್ಲೂ ಕುಟುಂಬಸ್ಥರಿಗೆ, ಸಂಬಂಧಿ ಕರಿಗೂನಿತ್ಯ ಊಟೋಪಚಾರದ ವ್ಯವಸ್ಥೆ ಮಾಡಿಸುತ್ತಿದ್ದು, ಸಾವಿರಾರು ರೂ. ಬಿಲ್‌ ಕಟ್ಟುವಂತಾಗಿದೆ ಎನ್ನುತ್ತಾರೆ ಆಕಾಂಕ್ಷಿಗಳು.

ಅಪ್ಲಿಕೇಶನ್‌ ಮೂಲಕ ಆಯ್ಕೆ: ಇಷ್ಟು ವರ್ಷಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಸಿಬ್ಬಂದಿಯೇ ಸಿದ್ಧಪಡಿಸುತ್ತಿದ್ದರು. ಈ ಬಾರಿ ಎನ್‌ಐಸಿ ಅಪ್ಲಿಕೇಶನ್‌ ಮೂಲಕವೇ ಮೀಸಲಾತಿ ಸಿದ್ಧಪಡಿಸುವಂತೆ ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಇದೇ ರೀತಿ ಸಿದ್ಧಪಡಿಸಿದ್ದು, ಜಿಲ್ಲೆಯಲ್ಲೂ ಅದೇ ಮಾದರಿ ಅನುಸರಿಸಲು ಸೂಚಿಸಲಾಗಿದೆ.

Advertisement

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ತರಬೇತಿ, ಬೂತ್‌ಗಳ ಹಂಚಿಕೆ ಸೇರಿದಂತೆ ಇತರ ಮಾಹಿತಿ ರವಾನಿಸಲು ಈ ಎನ್‌ಐಸಿ ಅಪ್ಲಿಕೇಶನ್‌ ಬಳಸಲಾಗುತ್ತಿತ್ತು. ಈಗ ಅದನ್ನು ಮೀಸಲಾತಿ ಸಿದ್ಧಪಡಿಸಲು ಬಳಸುತ್ತಿರುವುದು ಗಮನಾರ್ಹ. ಈ ನಿಟ್ಟಿನಲ್ಲಿ ತಾಲೂಕುವಾರು ಮೀಸಲಾತಿ ಪ್ರಕಟಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಈವರೆಗೂ ಯಾವ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಯಾವ ಜಾತಿಗೆ ಮೀಸಲಾಗಿದೆ ಎಂಬ ಮಾಹಿತಿ ಇಲ್ಲ. ಹೆಚ್ಚು ಜನಸಂಖ್ಯೆ ಹಾಗೂ ಸದಸ್ಯರನ್ನು ಆಧರಿಸಿ ಮೀಸಲಾತಿ ಸಿಗಬಹುದು ಎಂಬ ಲೆಕ್ಕಾಚಾರ ಮಾತ್ರ ಇದೆ. ಇದೇ ಕಾರಣಕ್ಕೆ ನಮಗೆ ಸಿಗಬಹುದು ಎನ್ನುವ ವಿಶ್ವಾಸದಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಗೆಲ್ಲಲು ಐದಾರು ಲಕ್ಷ ಖರ್ಚು ಮಾಡಿಕೊಂಡಿರುವ ಸದಸ್ಯರು ಅಧ್ಯಕ್ಷ ಸ್ಥಾನಕ್ಕಾಗಿ ಹಣ ಸುರಿಯುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ:ಪತ್ರಿಕೆ ಹಂಚುವ ಹುಡುಗರನ್ನು ಗೌರವಿಸಿ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಹಳೇ ಪದ್ಧತಿ ಬಿಟ್ಟು ಅಪ್ಲಿಕೇಶನ್‌ ಮೂಲಕ ಸಿದ್ಧಪಡಿಸಲು ಚುನಾವಣೆ ಆಯೋಗ ಸೂಚಿಸಿದೆ. ಅದೇ ಮಾದರಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಿನಾಂಕ ಇನ್ನೂ ಖಚಿತಗೊಂಡಿಲ್ಲ.

ದುರಗೇಶ, ಅಪರ ಜಿಲ್ಲಾಧಿಕಾರಿ, ರಾಯಚೂರು

ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next