Advertisement

ಹೊಸ ರಂಗ ಪರಿಕಲ್ಪನೆ ಆತ್ಮಾನಂ ಮಾನುಷಂ ಮನ್ಯೇ 

06:00 AM Jul 20, 2018 | |

ತೆಂಕುತಿಟ್ಟು  ಯಕ್ಷಗಾನ ಪ್ರದರ್ಶನಗಳಲ್ಲಿ ಅನಿವಾರ್ಯವೆಂದು ಭಾವಿಸಲ್ಪಟ್ಟ ಚೆಂಡೆಯ ಬಳಕೆಯನ್ನು ಸೀಮಿತವಾಗಿ ಮಾಡಿ ಮದ್ದಳೆಯೇ ಪ್ರಧಾನವಾದ ಹಿನ್ನೆಲೆ ವಾದ್ಯವಾಗಿ ಬಳಸಲ್ಪಟ್ಟ ಕಥಾ ಸಂವಿಧಾನದ ಆಯ್ಕೆ. ಇಂತಹ ನಡೆಯ ಪ್ರಸಂಗದ ಆಯ್ಕೆಗೂ ಧೈರ್ಯ ಬೇಕು. 

Advertisement

ಪ್ರಚಲಿತ ಯಕ್ಷಗಾನ ಪ್ರದರ್ಶನದ “ಟ್ರೆಂಡ್‌’ಗೆ ವಿಮುಖವಾಗಿ ಉಡುಪಿಯ ಯಕ್ಷಕಲಾರಂಗ ಏರ್ಪಡಿಸಿದ ಆಖ್ಯಾನ “ಆತ್ಮಾನಂ ಮಾನುಷಂ ಮನ್ಯೇ’. ಶಾಂತ, ಕರುಣ ರಸವೇ ಪ್ರಧಾನವಾಗಿ ವ್ಯಂಜಿಸಲ್ಪಡಬೇಕಾದ ಕಥಾ ಹಂದರವುಳ್ಳ ಶ್ರೀರಾಮನ ಬದುಕಿನ ಉತ್ತರಾರ್ಧದ ಅನಾವರಣ ತೆಂಕಣ ಮಟ್ಟು ಯಕ್ಷಗಾನ ರೂಪದಲ್ಲಿ ಪ್ರದರ್ಶನಗೊಂಡಿತು. ಗಮನಿಸಬೇಕಾದ ಅಂಶಗಳಲ್ಲೊಂದೆಂದರೆ – ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳಲ್ಲಿ ಅನಿವಾರ್ಯವೆಂದು ಭಾವಿಸಲ್ಪಟ್ಟ ಚೆಂಡೆಯ ಬಳಕೆಯನ್ನು ಸೀಮಿತವಾಗಿ ಮಾಡಿ ಮದ್ದಳೆಯೇ ಪ್ರಧಾನವಾದ ಹಿನ್ನೆಲೆ ವಾದ್ಯವಾಗಿ ಬಳಸಲ್ಪಟ್ಟ ಕಥಾ ಸಂವಿಧಾನದ ಆಯ್ಕೆ. ಇಂತಹ ನಡೆಯ ಪ್ರಸಂಗದ ಆಯ್ಕೆಗೂ ಧೈರ್ಯ ಬೇಕು. ಉಡುಪಿಯ ಸಹೃದಯಿ ಪ್ರೇಕ್ಷಕರ ಮುಂದೆ ಆತ್ಮಾನಂ ಮಾನುಷಂ ಮನ್ಯೆ ಗೆದ್ದಿದೆ. 

ಶ್ರೀರಾಮ ಭಾರತೀಯ ಮೌಲ್ಯಗಳ ಪ್ರತೀಕ. ಶೀಲ, ವಿಧೇಯತೆ, ಪಿತೃ ವಾಕ್ಯಪರಿಪಾಲನೆ, ಸತ್ಯ, ನ್ಯಾಯ, ಋತ ಇತ್ಯಾದಿಗಳ ಮಾನವ ರೂಪ ಶ್ರೀರಾಮ. ಅನೇಕ ಆಖ್ಯಾನಗಳು ಭಾರತೀಯ ಕಲಾ ಪರಂಪರೆಯಲ್ಲಿ ಬಂದಿವೆ. ಪಾರ್ತಿಸುಬ್ಬನ ರಚನೆಗಳೇ ಸಾಕಷ್ಟಿವೆ. ಇದರ ಹೊರತಾಗಿ ಹೊಸ ರಂಗ ಪರಿಕಲ್ಪನೆಯಲ್ಲಿ ಪ್ರದರ್ಶಿಸಲ್ಪಟ್ಟದ್ದು ಆತ್ಮಾನಂ ಮಾನುಷಂ ಮನ್ಯೇ. 

ವ್ಯವಸ್ತಿತವಾದ ಕಥಾ-ಪರಿಕಲ್ಪನೆ ಮತ್ತು ಕಥಾಸಂವಿಧಾನ ಪೃಥ್ವೀರಾಜ ಕವತ್ತಾರು ಅವರದ್ದಾದರೆ; ಗಣೇಶ ಕೊಲೆಕಾಡಿಯವರ ಪದ್ಯ ರಚನೆ ಈ ಪ್ರಸಂಗಕ್ಕಿದೆ. ಹೊಸ ಆಲೋಚನೆಯ ಮತ್ತು ನಿರೂಪಣಾ ಶೈಲಿಯ ಪ್ರಸಂಗ ನಡೆಯಾದರೂ ಎಲ್ಲಾ ಕಲಾವಿದರೂ ತಂಡವಾಗಿ ಏಕಸೂತ್ರದಲ್ಲಿ ಕಲಾಭಿವ್ಯಕ್ತಿಯನ್ನು ಮಾಡಿದ್ದಾರೆ. ರಾವಣವಧೆಯ ಅನಂತರದ ಶ್ರೀರಾಮನ ಬದುಕಾದ ಅಯೋಧ್ಯಾಗಮನ ಪಾದುಕಾ ಗ್ರಹಣ , ಶ್ರೀರಾಮ ಪಟ್ಟಾಭಿಷೇಕ, ಸೀತಾಪರಿತ್ಯಾಗ, ಕುಶ-ಲವರಿಂದ ಶ್ರೀರಾಮಾಯಣ ಕಥಾನಿರೂಪಣ ಮತ್ತು ರಾಮನಿರ್ಯಾಣ ಇವಿಷ್ಟರ ಪ್ರಸ್ತುತಿ. 

ಕುಶ-ಲವರಿಂದ ರಾಮಕಥೆಯ ನಿರೂಪಣೆಗೆ ತೆರೆಯ ಔಚಿತ್ಯಪೂರ್ಣ ಬಳಕೆ, ರಥಕ್ಕೆ ಹತ್ತಿ ಶ್ರೀರಾಮ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಬರುವಾಗ ತಾನು ಬಂದ ದಾರಿಯನ್ನು ಪುನರವಲೋಕಿಸುವ ದೃಶ್ಯ, ಶ್ರೀರಾಮ ನಿರ್ಯಾಣದ ಸಂದರ್ಭದಲ್ಲಿ ಭಾಗವತರ ಗಾಯನಕ್ಕೆ ನಿಧಾನವಾಗಿ ತೆರೆ ಎತ್ತರಿಸುವ ಮೂಲಕ ರಾಮನ ದೇಹತ್ಯಾಗದ ರಂಗನಿರ್ಮಾಣ ಇತ್ಯಾದಿ ಪ್ರೇಕ್ಷಕರ ಹೃದಯ ತಟ್ಟಿದ್ದು ಹೌದು. ಪಾತ್ರಧಾರಿಗಳ ಧ್ವನಿಪೂರಿತ ಸಂಭಾಷಣೆಗಳಿಗೆ ಎಚ್ಚರದ ಪ್ರೇಕ್ಷಕರ ಸಹೃದಯಿ ಕರತಾಡನ ಇವೆಲ್ಲ ಉಡುಪಿಯಲ್ಲಿ ಅನಾವರಣಗೊಂಡಿತು. ಕಥೆ ತಟ್ಟಿದ್ದಕ್ಕೆ ಸಭಾಸದರು ಹನಿಗಣ್ಣಾದುದು ಸಾಕ್ಷಿ ನುಡಿಯುತ್ತಿತ್ತು. 

Advertisement

ಕೇವಲ ರಾಮಕೇಂದ್ರಿತ ಕತೆಯಾದರೂ ಪೋಷಕ ಪಾತ್ರಗಳಾದ ಲಕ್ಷ್ಮಣ, ಭರತ, ಹನುಮಂತ , ಸೀತೆ, ಊರ್ಮಿಳೆ, ಕುಶ-ಲವ ಇತ್ಯಾದಿಗಳಿಗೂ ಪಾತ್ರ ಪ್ರಭಾವ ಇದ್ದು ರಾಮನ ಮಾನನಿಧಿತ್ವ ಅಥವಾ ಔನ್ನತ್ಯವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದವು. ಅನಗತ್ಯ ವಾಕ್ಯಗಳು ಸಂಭಾಷಣೆಯಲ್ಲಿ ಇರದೆ ಆಖ್ಯಾನ ಅರ್ಥಗರ್ಭಿತವೂ ಆಗಿತ್ತು. ಇಲ್ಲಿ ಎತ್ತಿಕೊಂಡ ಸನ್ನಿವೇಶಗಳು ಸ್ವಯಂ ಪ್ರತ್ಯೇಕವಾದ ಆಖ್ಯಾನವಾಗಿಯೂ ಮಂಡಿಸಬಹುದಾಗಿರುವಂತದ್ದು. ತಾಳಮದ್ದಳೆಗೂ ಅತ್ಯಂತ ಹೊಂದುವಂತಹದ್ದು. 

ಕಥಾ ಸಂವಿಧಾನ ಕೇವಲ ಮುಮ್ಮೇಳಕ್ಕೆ ಮಾತ್ರ ಸೀಮಿತವಾಗದೆ ಹಿಮ್ಮೇಳಕ್ಕೂ ಅನ್ವಯಿಸಿತ್ತು. ಪ್ರಸಂಗ ಪಠ್ಯದಲ್ಲಿ ಪ್ರತಿಪದ್ಯಕ್ಕೂ ಇದೇ ರೀತಿಯಲ್ಲಿ ಪದ ಹೇಳಬೇಕು. ದೃಶ್ಯ ಇಷ್ಟೇ ಸಮಯದಲ್ಲಿ ಮುಗಿಯತಕ್ಕದ್ದು ,ಅಷ್ಟು ಮಾತ್ರವಲ್ಲದೆ ಪದ್ಯದಲ್ಲಿ ಅತಿ ಆಲಾಪನೆ ಬೇಡ ಎಂಬುದೂ ಸೂಚಿತವಾಗಿತ್ತು. ಇದನ್ನು ಭಾಗವತರೆಲ್ಲರೂ ಒಪ್ಪಿ ಮನ್ನಿಸಿ ಅದೇ ರೀತ್ಯಾ ಹಾಡಿ¨ªಾರೆಂಬುದು ಗಮನಿಸಬೇಕಾದದ್ದು. ಸುರಿಕುಮೇರಿ ಗೋವಿಂದ ಭಟ್‌, ಪದ್ಯಾಣ ಶಂಕರನಾರಾಯಣ ಭಟ್‌, ಸುಣ್ಣಂಬಳ ವಿಶ್ವೇಶ್ವರ ಭಟ್‌, ಕೈರಂಗಳ ಕೃಷ್ಣ ನಾಯ್ಕ, ಉಬರಡ್ಕ ಉಮೇಶ ಶೆಟ್ಟಿ, ರಾಮಕೃಷ್ಣ ಮಯ್ಯ ಸಿರಿಬಾಗಿಲು,ಅಂಬಾ ಪ್ರಸಾದ್‌ ಪಾತಾಳ, ದಿನಕರ ಗೋಖಲೆ, ರವಿಚಂದ್ರ ಕನ್ನಡಿಕಟ್ಟೆ, ಬಳ್ಳಮಂಜ ಶ್ರೀನಿವಾಸ, ಮುರಾರಿ ಕಡಂಬಳಿತ್ತಾಯ ಇತ್ಯಾದಿ ಕಲಾವಿದರಿದ್ದ ತಂಡ ತಮ್ಮ ವೈಯಕ್ತಿಕವಾದ ಪ್ರಭಾವಳಿಯನ್ನು ಪ್ರದರ್ಶಿಸದೆ ಪ್ರಸಂಗ ಕೃತಿಯ ಪ್ರಧಾನ ಭಾವವನ್ನು ವ್ಯಂಜಿಸುವಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಉಡುಪಿಯ ಕಲಾರಂಗದ ಅಭಿರುಚಿ ಮಾದರಿಯಾಗುವಂತಹದ್ದು. 

ಕೃಷ್ಣಪ್ರಕಾಶ ಉಳಿತ್ತಾಯ 

Advertisement

Udayavani is now on Telegram. Click here to join our channel and stay updated with the latest news.

Next