Advertisement

ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ

11:12 AM May 22, 2019 | Suhan S |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಮೇ 23ರಂದು ನಗರದಲ್ಲಿರುವ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಮತಗಳನ್ನು ಎಣಿಕೆ ಮಾಡಲು ಮೂರು ಕೋಣೆಗಳಲ್ಲಿ ವಿಧಾನಸಭೆ ವಾರು ತಲಾ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆಯ ವಿಜಯಪುರ ಕ್ಷೇತ್ರ ಮತ ಎಣಿಕೆಯ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, ಮೊದಲು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಚಲಾಯಿಸಿದ ಹಾಗೂ ಸೇವಾ ನಿರತ ಸಿಬ್ಬಂದಿ ಚಲಾಯಿಸಿ ಮತಪತ್ರಗಳ ಎಣಿಕೆ ನಡೆಯಲಿದೆ. ಈ ಮತಗಳ ಎಣಿಕೆಗೆ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಇದರ ಹೊರತಾಗಿ 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮುದ್ದೇಬಿಹಾಳ ಕ್ಷೇತ್ರ ವ್ಯಾಪ್ತಿಯಲ್ಲಿ 17 ಸುತ್ತು, ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ 18 ಸುತ್ತು, ಬಸವನಬಾಗೇವಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ 17, ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 18 ಸುತ್ತು, ವಿಜಯಪುರ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 19 ಸುತ್ತು, ನಾಗಠಾಣ ಕ್ಷೇತ್ರ ವ್ಯಾಪ್ತಿಯಲ್ಲಿ 22 ಸುತ್ತು, ಇಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ 20 ಸುತ್ತು, ಸಿಂದಗಿ ಕ್ಷೇತ್ರ ವ್ಯಾಪ್ತಿಯಲ್ಲಿ 19 ಸುತ್ತುಗಳಲ್ಲಿ ಇವಿಎಂಗಳ ಮತ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.

ಮೇ 23ರಂದು ಬೆಳಗ್ಗೆ 7ಕ್ಕೆ ಭದ್ರತಾ ಕೋಣೆಗಳಿಂದ ಮತಯಂತ್ರಗಳನ್ನು ತೆರೆಯಲಿದ್ದು, ಬೆಳಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಏಜೆಂಟರ ಎದುರು 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳ ಚೀಟಿ ಎಣಿಕೆ ಮಾಡಿ ಮತದಾನ ಮಾಡಿರುವ ಮತಯಂತ್ರದ ಸಂಖ್ಯೆಗೆ ತಾಳೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು 18 ಜನ ಮತ ಎಣಿಕೆ ಮೇಲ್ವಿಚಾರಕ, 18 ಜನ ಮತ ಎಣಿಕೆ ಸಹಾಯಕ ಹಾಗೂ 18 ಜನ ಮೈಕ್ರೋ ಆಬ್ಸ್ರ್ವರ್‌ ನೇಮಕ ಮಾಡಲಾಗಿದ್ದು, ಒಟ್ಟಾರೆಯಾಗಿ 144 ಮತಎಣಿಕೆ ಮೇಲ್ವಿಚಾರಕ, 144 ಮತ ಎಣಿಕೆ ಸಹಾಯಕ ಹಾಗೂ 144 ಮೈಕ್ರೋ ಆಬ್ಸ್ರ್ವರ್‌ ನಿಯೋಜಿಸಲಾಗಿದೆ ಎಂದರು.

Advertisement

32 ಜನ ಟ್ಯಾಬುಲೇಷನ್‌ ಸಿಬ್ಬಂದಿ, 40 ಜನ ಸೀಲಿಂಗ್‌ ಸಿಬ್ಬಂದಿ, ಇವಿಎಂಗಳನ್ನು ಟೇಬಲ್ಗಳಿಗೆ ಸಾಗಿಸಲು 128 ಸಿಬ್ಬಂದಿ ಹಾಗೂ 24 ಜನ ಹಾಜರಾತಿ ಪಡೆಯುವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಪೋಸ್ಟಲ್ ಬ್ಯಾಲೆಟ್ ಎಣಿಕೆಗಾಗಿ ಪ್ರತ್ಯೇಕವಾಗಿ 20 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

ಮತಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸೇರಿದಂತೆ ಚುನಾವಣಾ ಏಜೆಂಟರಾದಿಯಾಗಿ ಯಾರೊಬ್ಬರು ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆಗೆ ನೇಮಕಗೊಂಡಿರುವ ಪಾಸ್‌ ಹೊಂದಿದ ಏಜೆಂಟರಿಗೆ ಸೈನಿಕ ಶಾಲೆಯ ಎರಡನೇ ಗೇಟ್ನಿಂದ ಪ್ರವೇಶ ಕಲ್ಪಿಸಲಾಗುತ್ತದೆ. ಮೊದಲನೇ ಗೇಟ್ ಮೂಲಕ ಅಭ್ಯರ್ಥಿಗಳು, ಚುನಾವಣಾ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ, ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಅಧಿಕೃತ ಪತ್ರ ಹೊಂದಿರುವ ಪತ್ರಕರ್ತರನ್ನು ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿದೆ.

ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಮೇ 22ರಂದು ಮಧ್ಯರಾತ್ರಿಯಿಂದ 23ರ ಮಧ್ಯರಾತ್ರಿ ವರೆಗೆ ವಿಜಯಪುರ ಜಿಲ್ಲೆಯಲ್ಲಿ ಪಾನ ನಿರೋಧ ದಿನ ಎಂದು ಘೋಷಿಸಲಾಗಿದೆ ಎಂದರು.

ಸ್ವೀಪ್‌ ಸಮಿತಿ ಅಧ್ಯಕ್ಷ ಜಿಪಂ ಸಿಇಒ ವಿಕಾಸ ಸುರಳಕರ, ಎಸ್ಪಿ ಪ್ರಕಾಶ ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next