Advertisement

ಲೇಖ ಲೋಕ ಏಳನೇ ಮಾಲಿಕೆ ಅನಾವರಣಕ್ಕೆ ಸಿದ್ಧತೆ

11:50 AM Nov 21, 2018 | |

ಬೆಂಗಳೂರು: ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಿಂದ ಅವರ ಆತ್ಮಕಥೆ ಬರೆಸಿ ಪ್ರಕಟಿಸುವ ಲೇಖ ಲೋಕ ಏಳನೇ ಮಾಲಿಕೆ ಹೊರತರಲು ಕರ್ನಾಟಕ ಲೇಖಕಿಯರ ಸಂಘ ಸಿದ್ಧತೆ ನಡೆಸಿದೆ.

Advertisement

ಲೇಖಕಿಯರ ಜೀವನಾನುಭವದ ಮತ್ತು ಬರವಣಿಗೆಯ ಅನುಭವವನ್ನು ಆಧರಿಸಿ ಸಂಘ ಈಗಾಗಲೇ 6 ಲೇಖ ಲೋಕ ಆತ್ಮಕಥನ ಮಾಲಿಕೆ ಪ್ರಕಟಿಸಿದೆ. ಅದನ್ನು ಮುಂದುವರಿಸಿ ಲೇಖ ಲೋಕ 7 ಅನ್ನು ಪ್ರಕಟಿಸಲು ಕೇಂದ್ರ ಕಲೇಸಂ ಶಿವಮೊಗ್ಗದ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಮುಂದಾಗಿದೆ.

ಲೇಖ ಲೋಕದ ಏಳನೇ ಮಾಲಿಕೆಗೆ ಕಲೇಸಂನ ಕಾರ್ಯಕಾರಿ ಸಮಿತಿ ನಾಡಿನ ಬೇರೆ ಬೇರೆ ಭಾಗಗಳಿಂದ ಪ್ರಮುಖ 17 ಬರಹಗಾರ್ತಿಯರನ್ನು ಆಯ್ಕೆ ಮಾಡಿದೆ. ಲೇಖಕಿಯರ ಬಾಲ್ಯ, ಹಿನ್ನೆಲೆ, ಶಿಕ್ಷಣ, ವೃತ್ತಿ, ಕುಟುಂಬ, ಸಂಸಾರ, ಬರಹ ಆರಂಭಿಸಿದ ಸಂದರ್ಭ, ಬರಹಕ್ಕೆ ಪ್ರೋತ್ಸಾಹಗಳು ಅಡೆತಡೆಗಳು, ಸಾಹಿತ್ಯ ಕೃಷಿ ಮಾಡಿದ ಪ್ರಕಾರಗಳು, ಆತಂಕಗಳು, ಸಂತಸಗಳು, ಲೇಖಕಿಯರ ಬರವಣಿಗೆ ಪ್ರೋತ್ಸಾಹ ಹಾಗೂ ಸಾಹಿತ್ಯದ ಸಮಗ್ರ ಮಾಹಿತಿ ಲೇಖ ಲೋಕದಲ್ಲಿರಲಿದೆ.

ಇದಕ್ಕಾಗಿ ಕಲೇಸಂ ನ.29 ಮತ್ತು 30ರಂದು ಕೇಂದ್ರ ಕರ್ನಾಟಕ ಲೇಖಕಿಯರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಕುಪ್ಪಳಿಯಲ್ಲಿ ಲೇಖ ಲೋಕ 7, ಲೇಖಕಿಯರ ಆತ್ಮಕಥೆಗಳ ನಿರೂಪಣೆ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ 17 ಲೇಖಕಿಯರು ತಮ್ಮ ಬದುಕಿನ ಪ್ರಮುಖ ಘಟ್ಟಗಳನ್ನು ನಿರೂಪಿಸಲಿದ್ದಾರೆ. ಅವರು ನಿರೂಪಿಸಿದ ಆತ್ಮಕಥನ ಮೂರು ನಾಲ್ಕು ತಿಂಗಳ ನಂತರ ಕೃತಿಗಳ ರೂಪದಲ್ಲಿ ಹೊರಬರಲಿದೆ.

ಏಳನೇ ಮಾಲಿಕೆಯಲ್ಲಿ ಯಾರೆಲ್ಲಾ ಇದ್ದಾರೆ?: ಏಳನೇ ಮಾಲಿಕೆಯಲ್ಲಿ ತರಂಗದ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್‌ ಪೈ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್‌ ಹಾಗೂ ಸಾಹಿತಿಗಳಾದ ಸವಿತಾ ನಾಗಭೂಷಣ, ಉಷಾ ನರಸಿಂಹನ್‌, ಬಾ.ಹ.ರಮಾಕುಮಾರಿ, ಸುಮಾ ದ್ವಾರಕಾನಾಥ್‌, ದಾಕ್ಷಾಯಿಣಿ ಯಡಹಳ್ಳಿ, ಕಲಾಶ್ರೀ, ಡಾ.ಕಮಲಾ ಹೆಮ್ಮಿಗೆ, ಗಿರಿಜಾ ಶಾಸ್ತ್ರೀ, ಮಮತಾ ರಾವ್‌, ಡಿ.ಬಿ.ರಜಿಯಾ, ವಿಜಯಶ್ರೀ, ಜಿ.ವಿ.ನಿರ್ಮಲ, ಡಾ.ವೀಣಾಭಟ್‌, ಬಿ.ಸಿ.ಶೈಲಾ ನಾಗರಾಜ್‌, ಗಿರಿಜಾ ರಾಜ್‌ ಅವರು ಆತ್ಮಕಥನ ನಿರೂಪಿಸಿ ನಂತರ ಬರೆದುಕೊಡಲಿದ್ದಾರೆ.

Advertisement

ಕುಪ್ಪಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಆತ್ಮಕಥೆ ನಿರೂಪಣೆ ಮಾಡುವವರೊಂದಿಗೆ ಡಾ.ಜ್ಯೋತಿ ಶಶಿಕುಮಾರ್‌, ಬನಶಂಕರಿ ಮೂರ್ತಿ, ಕಮಲಾ ಬಾಲು, ಸುಗುಣಾದೇವಿ, ಮಲ್ಲಿಕಾ ಬಸವರಾಜ್‌, ಸುನಂದ.ಎಸ್‌, ಪ್ರಮೀಳಾ ಪಾಲನೇತ್ರ, ಸಂಪದ ಕೆರಿಮನಿ, ಸುನೀತಾ ರಾವ್‌, ಸತ್ಯಭಾನು ನಾಗರಾಜ್‌, ಎಚ್‌.ವಿಶಾಲಾಕ್ಷಿ, ಪ್ರೊ.ಆಶಾಲತ, ಜಿ.ಎಸ್‌.ಸರೋಜ, ಮಾನಸ ಶಿವರಾಮಕೃಷ್ಣ, ದೀಪಾ ಕುಬ್ಸದ್‌, ಶ್ರೀರಂಜಿನಿ ದತ್ತಾತ್ರಿ, ಅಶ್ವಿ‌ನಿ ಕಿರಣ್‌ ಹಾಗೂ ಶ್ರೀಲತಾ ಜಯಣ್ಣ  ಸಂವಾದ ನಡೆಸಲಿದ್ದಾರೆ.

ಲೇಖ ಲೋಕದ ಆರಂಭ: 1998ರಲ್ಲಿ ನಾಗಮಣಿ ಎಸ್‌ ರಾವ್‌ ಕಲೇಸಂನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೇಖ ಲೋಕ ಯೋಜನೆಗೆ ನಾಂದಿ ಹಾಡಿದರು. ಮಹಿಳಾ ಸಾಹಿತ್ಯ ರಚನೆಗೆ ಪೂರಕವಾಗಿ ಲೇಖಕಿಯರ ಆತ್ಮ ಕಥೆಗಳು ದಾಖಲೆಯಾಗುವುದು ಅತ್ಯವಶ್ಯಕವೆಂಬ ಆಶಯದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಹೆಸರಾಂತ ಲೇಖಕಿ ಡಾ.ನಳಿನಿ ಮೂರ್ತಿ ಅವರ ಹೆಸರಿನಲ್ಲಿ ಅವರ ಪತಿ ಎಸ್‌.ನರಸಿಂಹಮೂರ್ತಿ ಅವರು ಕರ್ನಾಟಕ ಲೇಖಕಿಯರ ಸಂಘಕ್ಕೆ ನೀಡಿರುವ ದೇಣಿಗೆಯಿಂದ ಡಾ.ನಳಿನಿ ಮೂರ್ತಿ ಸ್ಮಾರಕ ಪುಸ್ತಕ ಮಾಲೆ ಅಡಿಯಲ್ಲಿ ಲೇಖ ಲೋಕ ಸಂಪುಟಗಳನ್ನು ಪ್ರಕಟಿಸಲಾಯಿತು.

ನಾಡಿನ ಹೆಸರಾಂತ ಲೇಖಕರು, ಸಾಹಿತಿಗಳ ಆತ್ಮಕಥೆಗಳು ಪ್ರಕಟವಾಗುತ್ತಲೇ ಇರುತ್ತದೆ. ಆದರೆ, ಮಹಿಳಾ ಸಾಹಿತಿಗಳ ಆತ್ಮಕಥೆಗಳು ಪ್ರಕಟವಾಗುವುದು ಅಪರೂಪ. ಈ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಿಂದ ಅವರ ಆತ್ಮಕಥೆ ಬರೆಸಿ ಪ್ರಕಟಿಸಲು ಕರ್ನಾಟಕ ಲೇಖಕಿಯರ ಸಂಘ (ಕಲೇಸಂ) ಮುಂದಾಗಿದೆ.
-ವನಮಾಲಾ ಸಂಪನ್ನಕುಮಾರ್‌, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next