Advertisement

75ನೇ ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ

01:41 PM Aug 14, 2021 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆ ಈ ಬಾರಿಯೂ ಸರಳ ಮತ್ತು ಸುರಕ್ಷಿತವಾಗಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದ್ದು,
ಭಾನುವಾರ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ನಗರದ ಕಬ್ಬನ್‌ ರಸ್ತೆಯ “ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌’
ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ.

Advertisement

ಕೋವಿಡ್‌ ಮೂರನೇ ಅಲೆ ಭೀತಿಯಿಂದ ಕಳೆದ ಬಾರಿಯಂತೆಯೇ ಸಮಾರಂಭಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸೀಮಿತ ಸಂಖ್ಯೆಯಲ್ಲಿ ಗಣ್ಯರು, ಅಧಿಕಾರಿಗಳು ಹಾಗೂ ಮಿಲಿಟಿರಿ ಸಿಬ್ಬಂದಿ ಮಾತ್ರ ಭಾಗವಹಿಸಲಿದ್ದಾರೆ. ಪಥಸಂಚಲನ ಮಾತ್ರ ಇರಲಿದ್ದು, ಸಾಂಸ್ಕೃತಿಕ
ಕಾರ್ಯ ಕ್ರಮಗಳನ್ನು ಕೈಬಿಡಲಾಗಿದೆ. ವಿಶೇಷ ವಾಗಿ 100 ಕೋವಿಡ್‌ ಸೇನಾನಿಗಳು ಹಾಗೂ ಕೋವಿಡ್‌ ಸೋಂಕಿನಿಂದ ಗುಣಮುಖ ರಾಗಿರುವ 25 ಮಂದಿಯನ್ನು ಆಹ್ವಾನಿಸಿ ಸನ್ಮಾನಿಸಲಾಗುತ್ತಿದೆ.

ಈಗಾಗಲೇ ಮೈದಾನದಲ್ಲಿ ಬೃಹತ್‌ ಪೆಂಡಾಲ್‌ ಹಾಕಿ ವೇದಿಕೆ ನಿರ್ಮಾಣ ಹಾಗೂ ಆಸನ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ
ಸೀಮಿತ ತುಕಡಿಗಳಿಂದ ಪಥಸಂಚಲನ, ನಾಡಗೀತೆ, ರಾಷ್ಟ್ರಗೀತೆಯಅಂತಿಮ ತಾಲೀಮು ನಡೆಯಿತು. ಈ ವೇಳೆ ಬಿಬಿಎಂಪಿ ಆಯುಕ್ತರು,
ನಗರ ಪೊಲೀಸ್‌ ಆಯುಕ್ತರು ಹಾಗೂ ನಗರ ಜಿಲ್ಲಾಧಿಕಾರಿಗಳನ್ನು ಸೇರಿಂದತೆ ಸೇನಾ ಪಡೆಯ ಅಧಿಕಾರಿಗಳು ಆಗಮಿಸಿ ವೇದಿಕೆ ಸಿದ್ಧತೆ ಪರಿಶೀಲಿಸಿ, ತುಕಡಿಗಳ ಪಥಸಂಚಲನ ಅಭ್ಯಾಸವನ್ನು ವೀಕ್ಷಿಸಿದರು.

ಇದನ್ನೂ ಓದಿ:ಬೇಂದ್ರೆ ಬಸ್‌ಗಳಿಗೆ ಪರ್ಯಾಯ ಮಾರ್ಗ ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ

ಮುಖ್ಯಮಂತ್ರಿಗಳಿಂದ ಧ್ವಜಾರೋ ಹಣ:ಶುಕ್ರವಾರ ಸಿದ್ಧತೆ ಪರಿಶೀಲನೆ ನಂತರ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚನೆಯಂತೆಯೇ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ಹೆಚ್ಚಿನ ಸುರಕ್ಷತೆ ಮತ್ತು ಸರಳತೆ ಆದ್ಯತೆ ನೀಡಲಾಗಿದೆ. ಭಾನುವಾರ ಬೆಳಗ್ಗೆ 8.55ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈದಾನಕ್ಕೆ ಆಗಮಿಸಲಿದ್ದಾರೆ. ಮೊದಲು ಅವರಿಗೆ ಭಾರತೀಯ ರಕ್ಷಣಾ ಸೇನೆಗಳ ಮೂವರು ಅಧಿಕಾರಿಗಳನ್ನು ಪರಿಚಯಿಸಲಾಗುವುದು.ಬಳಿಕ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆನಂತರ ಪರೇಡ್‌ ವೀಕ್ಷಿಸಿ, ತೆರೆದ ಜೀಪಿನಲ್ಲಿ ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಗೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಸರಳ ಕಾರ್ಯಕ್ರಮ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಬಿಡಲಾಗಿದೆ. 20 ತುಕಡಿಗಳಿಂದ ಪಥಸಂಚಲನ ನಡೆಯಲಿದ್ದು ದೂರದರ್ಶನದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ. ಅತಿಗಣ್ಯರು, ಗಣ್ಯರು, ವಿಶೇಷ ಆಹ್ವಾನಿತರಿಗಾಗಿ 1,000 ಆಸನ, ವೇದಿಕೆ
ಸಿದ್ಧಪಡಿಸಲಾಗಿದೆ. ಪ್ರತಿ ಬಾರಿ 30ಕ್ಕೂ ಹೆಚ್ಚು ತುಕಡಿಗಳಿಂದ ಪಥ ಸಂಚಲನ ನಡೆಯುತ್ತಿತ್ತು. ಈ ಬಾರಿ 20 ತುಕಡಿಗಳಿಂದ 450 ಮಂದಿ ಮಾತ್ರ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಮಾತನಾಡಿ, 100 ಮಂದಿ ಕೋವಿಡ್‌ ಸೇನಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್‌ದಿಂದ ಗುಣಮುಖರಾದ ಆಯ್ದ 25 ಮಂದಿಯನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. ಬಿಬಿಎಂಪಿ, ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.

ವಾಹನಗಳ ಸಂಚಾರ ನಿಷೇಧ: ಭಾನುವಾರಬೆಳಗ್ಗೆ ಮೈದಾನ ಸುತ್ತಮುತ್ತ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ, ಬೆಳಗ್ಗೆ 8.30 ರಿಂದ 10.30 ಗಂಟೆವರೆಗೂ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂನಕ್ಷನ್‌ನಿಂದ ಕಾಮರಾಜ ರಸ್ತೆಯ ಜಂಕ್ಷನ್‌ ವರೆಗೂ ಎರಡೂ ದಿಕ್ಕಿನಲ್ಲಿ ವಾಹನ ಸಂಚಾರ ನಿಷೇಧವಿರುತ್ತದೆ ಬದಲಿ ಮಾರ್ಗಗಳನ್ನು ಅನುಸರಿಸಬೇಕು. ಜತೆಗೆ ಕಬ್ಬನ್‌ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧವಿರುತ್ತದೆ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸ್‌ ಆಯುಕ್ತರು ಮನವಿ ಮಾಡಿದರು.

ಬಿಗಿಭದ್ರತೆ: ಕಮಲ್‌ ಪಂತ್‌
ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತನಾಡಿ, ಸ್ವಾತಂತ್ರ್ಯೋತ್ಸವ ನಿಮಿತ್ತ ಮಾಣೆಕ್‌ ಷಾ ಪರೇಡ್‌ ಮೈದಾನಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪಆಯುಕ್ತರ ನೇತೃತ್ವದಲ್ಲಿ 10 ಜನ ಡಿಸಿಪಿಗಳನ್ನು ಹಾಗೂ ಕೆಎಸ್‌ಆರ್‌ಪಿ, ಸಿಎಆಆರ್‌, ಸಿಆರ್‌ಟಿ, ಕೆಎಸ್‌ಎಫ್, ಕೆಐಎಸ್‌ಎಫ್ ಹಾಗೂ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭಾಗವಹಿಸುವ ಎಲ್ಲರಿಗೂ ಮಾಸ್ಕ್ಕಡ್ಡಾಯ. ಪಾಸ್‌ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 70 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎರಡು ಬ್ಯಾಗೇಜ್‌ ಸ್ಕ್ಯಾನರ್‌ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್‌, ಕ್ಷಿಪ್ರ ಕಾರ್ಯಾಚರಣೆ ಪಡೆ , ಡಿ-ಸ್ವಾಟ್‌ ಮತ್ತು ಆರ್‌.ಐ.ವಿ.ಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಗರುಡ ಪಡೆ ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದರು.

ನಗರಾದ್ಯಂತ ಹೈ ಅಲರ್ಟ್‌
ಬೆಂಗಳೂರು: ಸ್ವಾತಂತ್ರ್ಯೋತ್ಸವಆಚರಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು, ಇದರಬೆನ್ನಲ್ಲೇ ನಗರ ಪೊಲೀಸರು, ಈಗಾಗಲೇ ನಗರಾದ್ಯಂತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸರು, ತಪಾಸಣಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಗರದ ಎಲ್ಲವಿಭಾಗಗಳಲ್ಲೂ ಬಾಂಬ್‌ ಪತ್ತೆದಳ, ಶ್ವಾನ ದಳಗಳನ್ನು ಬಳಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಗುಪ್ತದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಜತೆಗೆ, ನಗರ ವ್ಯಾಪ್ತಿಯ ಸುತ್ತಮುತ್ತ ಅನುಮಾನಸ್ಪದ ವಸ್ತುಗಳು ಹಾಗೂವ್ಯಕ್ತಿಗಳು ಕಂಡುಬಂದರೆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ನಾಗರಿಕರಿಗೆ ಮನವಿಮಾಡಿದ್ದಾರೆ. ನಗರದ ಮಾಲ್‌ಗ‌ಳು, ಬಸ್‌ ನಿಲ್ದಾಣಗಳು, ಪಾರ್ಕ್‌, ಉದ್ಯಾನವನ, ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಹಾಗೂ ಸೂಕ್ಷ್ಮ ಹಾಗೂಅತಿಸೂಕ್ಷ ¾ ಪ್ರದೇಶಗಳಲ್ಲಿ ತಪಾಸಣಾ ಕಾರ್ಯಗಳು ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next