Advertisement

ಹಬ್ಬ ಆಚರಣೆಗೆ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸಿದ್ಧತೆ

07:08 PM Oct 25, 2019 | mahesh |

ನಗರದ ಅಪಾರ್ಟ್‌ಮೆಂಟ್‌ ಎಂಬ ಪರಿಕಲ್ಪನೆಯಲ್ಲಿ ಒಟ್ಟಾಗಿ ಬದುಕುವುದೇ ಸೊಗಸು. ಪ್ರಮುಖ ಹಬ್ಬಗಳನ್ನು ಎಲ್ಲರೂ ಸೇರಿಕೊಂಡು ಆಚರಿಸಿ ಸಂಭ್ರಮಿಸುವುದು ಮತ್ತೂ ಸೊಗಸು. ದೀಪಗಳಂತೆ ಮನೆಮನಗಳನ್ನು ಬೆಳಗುವ ದೀಪಾವಳಿ ಹಬ್ಬ ಮನಸ್ಸುಗಳನ್ನು ಹತ್ತಿರವಾಗಿಸುವ ಹಬ್ಬವೂ ಹೌದು. ಇದೇ ಕಾರಣಕ್ಕೆ ಉದಯವಾಣಿಯು ಈ ಬಾರಿ ದೀಪಾವಳಿಗೆ ಆರಂಭಿಸಿರುವ “ಸಹ ವಾಸ-ಸಮ್ಮಿಲನ’ ದೀಪಾವಳಿ ಅಂಕಣಕ್ಕೆ ಈಗಾಗಲೇ ಸಾಕಷ್ಟು ಅಪಾರ್ಟ್‌ಮೆಂಟ್‌ಗಳ ಸಹವಾಸಿಗಳು ಸ್ಪಂದಿಸಿ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.

Advertisement

ಮಹಾನಗರ: ದೀಪಾವಳಿ ಎಂದರೆ ಕೇವಲ ಹಬ್ಬವಲ್ಲ. ಅದು ಸಂಬಂಧಗಳನ್ನು ಬೆಸೆಯಲು, ಸಂಸ್ಕೃತಿ, ಪದ್ಧತಿಗಳನ್ನು ಜೋಡಿಸಲು, ಸಹವಾಸದ ಸಮ್ಮಿಲನಕ್ಕೆ ಸಾಕ್ಷಿಯಾಗಲು ಇರುವ ವೇದಿಕೆ.

ದಶಕಗಳ ಹಿಂದಿನ ದೀಪಾವಳಿಯನ್ನೊಮ್ಮೆ ನೆನಪಿಸಿಕೊಳ್ಳಿ. ಮನೆ ಮಂದಿಯೆಲ್ಲ ಸೇರಿ ಆಚರಿಸುವ ಆ ದೀಪಾವಳಿಯ ಸೊಗಡೇ ಸುಂದರ. ಬಲೀಂದ್ರ ಮರ ನೆಡುವುದರಿಂದ ಆರಂಭವಾಗುವ ಹಬ್ಬ ಪೂಜೆ, ಪಾಕ ವೈವಿಧ್ಯ, ಪಟಾಕಿ ಸುಡುವುದು, ಮಕ್ಕಳ ಹುರುಪಿನ ಓಡಾಟ, ಹೊಸ ಬಟ್ಟೆ ಹಾಕಿ ಖುಷಿ ಪಡುವಂಥದ್ದು… ವರ್ಷದ ಮೂರು ದಿನ ಕೌಟುಂಬಿಕ ಜೀವನಕ್ಕೆ ಹೊಸ ಕಳೆ.

ಅಪಾರ್ಟ್‌ಮೆಂಟ್‌ ನಿವಾಸಿಗಳೆಲ್ಲ ಸೇರಿಕೊಂಡು ಹಬ್ಬ ಆಚರಿಸುವುದು ಹೊಸದಲ್ಲ. ಒಂದಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಹಲವಾರು ವರ್ಷಗಳಿಂದ ಎಲ್ಲರೂ ಒಡಗೂಡಿ ಹಬ್ಬ ಆಚರಿಸುತ್ತಾ ಬಂದಿದ್ದರೆ, ಇನ್ನು ಕೆಲವೆಡೆ ಹೊಸತಾಗಿ ಹಬ್ಬ ಆಚರಣೆಗೆ ತಯಾರಿಗಳಾಗುತ್ತಿವೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಸ್ಮರಣೀಯವಾಗಿಸಲು ಉದಯವಾಣಿಯು ಅಪಾರ್ಟ್‌ಮೆಂಟ್‌ಗಳ ಸಹ ವಾಸಿಗಳ ಜತೆಯಾಗಿದ್ದು, ಹಲವು ಮಂದಿ ಹೊಸ ಪರಿಕಲ್ಪನೆಗೆ ಸ್ಪಂದಿಸುವುದಾಗಿ ಹೇಳಿದ್ದಾರೆ.

Advertisement

ಗ್ರೀನ್‌ಪಾರ್ಕ್‌ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸುವುದಾಗಿ ಹೇಳಿದ್ದರೆ, ಇನ್ನು ಕೆಲವು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ತಮ್ಮ ಸಂಘದ ಪ್ರಮುಖರೊಂದಿಗೆ ಜತೆಯಾಗಿ ದೀಪಾವಳಿ ಆಚರಣೆ ಕುರಿತು ಪ್ರಸ್ತಾವಿ ಸುವುದಾಗಿ ತಿಳಿಸಿದ್ದಾರೆ.

ಪರಿಸರಸ್ನೇಹಿ ದೀಪಾವಳಿ
ನಗರದ ವಿ.ಟಿ. ರಸ್ತೆಯಲ್ಲಿರುವ ವಜ್ರೆಶ್ವರಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. “ಪ್ಲಾಸ್ಟಿಕ್‌ ತ್ಯಜಿಸಿ, ಬಟ್ಟೆ ಚೀಲ ಬಳಸಿ’ ಎಂಬುದು ಈ ಅಪಾರ್ಟ್‌ಮೆಂಟ್‌ ಮಾಲಕರ ಸಂಘದ ಈ ವರ್ಷದ ಪರಿಕಲ್ಪನೆ. ಅಪಾರ್ಟ್‌ ಮೆಂಟ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಎಲ್ಲರಿಗೂ ಶುಕ್ರವಾರದೊಳಗೆ ಬಟ್ಟೆ ಚೀಲಗಳನ್ನು ವಿತರಿಸುತ್ತಾರೆ. ಇದು ದೀಪಾವಳಿ ಸಂಭ್ರಮದ ಆರಂಭ. ಪತ್ರಿಕೆಯ ಆಲೋಚನೆ ಚೆನ್ನಾಗಿದೆ ಎನ್ನುತ್ತಾರೆ ಅಪಾರ್ಟ್‌ಮೆಂಟ್‌ ಮಾಲಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್‌ ಶೆಣೈ ಕೆ. ನಿವಾಸಿಗಳೆಲ್ಲ ಸೇರಿ ಸಂಭ್ರಮಿ ಸುವುದು, ಬೆಳಕಿನ ಹಬ್ಬಕ್ಕೆ ಹಣತೆ ಹಚ್ಚಿ ಸಂಭ್ರಮಿಸುವುದು ಎಲ್ಲವೂ ಇರಲಿದೆ ಎನ್ನುತ್ತಾರೆ ಅವರು.

“ಅಭಿಮಾನ’ದ ದೀಪಾವಳಿ
ಮಣ್ಣಗುಡ್ಡೆ ಅಭಿಮಾನ್‌ ಪ್ಯಾಲೇಸ್‌ನಲ್ಲಿ ಹಲವು ವರ್ಷಗಳಿಂದ ಎಲ್ಲರೂ ಸೇರಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ವರ್ಷವೂ ಸಿದ್ಧತೆ ನಡೆದಿದೆ. ಅ.27ರಂದು ರಂಗೋಲಿ ಹಚ್ಚಿ, ದೇವರ ಸ್ತೋತ್ರಗಳನ್ನು ಪಠಿಸಿ ಸಾಂಪ್ರದಾಯಿಕವಾಗಿಯೇ ದೀಪಾವಳಿಯನ್ನು ಬರಮಾಡಿಕೊಳ್ಳಲು ತಯಾರಾಗಿದ್ದಾರೆ. ಹಣತೆ ಹಚ್ಚಿ, ದೀಪ ಬೆಳಗಿ ಸಂಭ್ರಮಿಸುತ್ತೇವೆ. ನಿವಾಸಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ. 61 ಫ್ಲ್ಯಾಟ್‌ಗಳಿದ್ದು, ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಈ ಸಹ ವಾಸ-ಸಮ್ಮಿಲನ ಪರಿಕಲ್ಪನೆ ನಮ್ಮ ಸಂಭ್ರಮವನ್ನು ಹೆಚ್ಚಿಸಿದೆ ಎನ್ನುತ್ತಾರೆ ಅಪಾರ್ಟ್‌ಮೆಂಟ್‌ ನ ಮಾಲಕರ ಸಂಘದ ಅಧ್ಯಕ್ಷ ಅನಂತೇಶ್‌.

ಮೌರಿಷ್ಕಾದಲ್ಲಿ ಸ್ಪರ್ಧೆಯೊಂದಿಗೆ ಹಬ್ಬ
ಕದ್ರಿ ಕಂಬಳ ರಸ್ತೆಯಲ್ಲಿರುವ ಮೌರಿಷ್ಕಾ ಪ್ಯಾಲೇಸ್‌ನಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿ ಆಚರಣೆ ನಡೆಯುತ್ತಿದೆ. ಶನಿವಾರ ರಂಗೋಲಿ ಸ್ಪರ್ಧೆ, ಗೂಡುದೀಪ ಸ್ಪರ್ಧೆ, ಸಿಹಿತಿಂಡಿ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನೂ ನೀಡುವುದಿದೆ. ರವಿವಾರ ಹಣತೆ ಹಚ್ಚಿ, ಮಕ್ಕಳು-ಹಿರಿಯರೆಲ್ಲ ಸೇರಿ ಪಟಾಕಿ ಸಿಡಿಸಿ ದೀಪಗಳ ಹಬ್ಬವನ್ನು ಸಂಭ್ರಮಿಸಲಿದ್ದಾರೆ.

“ವಸತಿ ಸಮುಚ್ಚಯದಲ್ಲಿ 333 ಫ್ಲ್ಯಾಟ್‌ಗಳಿದ್ದು, ಸುಮಾರು 250 ಕುಟುಂಬಗಳು ವಾಸಿಸುತ್ತಿವೆ. ಸರ್ವಧರ್ಮದವರೂ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದು, ಹಬ್ಬಗಳನ್ನು ಜತೆ ಸೇರಿ ಆಚರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದೇವೆ. ನಿಮ್ಮ ಹೊಸ ಆಲೋಚನೆಗೂ ಸ್ಪಂದಿಸು ತ್ತೇವೆ’ ಎನ್ನುತ್ತಾರೆ ಅಪಾರ್ಟ್‌ ಮೆಂಟ್‌ ಮಾಲಕರ ಸಂಘದ ಅಧ್ಯಕ್ಷ ಸುಬೋಧ್‌ ಶೆಟ್ಟಿ.ಹೀಗೆ ಹಲವು ಅಪಾರ್ಟ್‌ಮೆಂಟ್‌ಗಳ ಸಹ ವಾಸಿಗಳು ಸಿದ್ಧತೆ ಆರಂಭಿಸಿದ್ದಾರೆ.

ನೀವೂ ಭಾಗವಹಿಸಿ
ನೀವೂ ಭಾಗವಹಿಸುವುದಾದರೆ ಮಾಡಬೇಕಾದದ್ದು ಇಷ್ಟು. ಒಟ್ಟಾಗಿ ಹಬ್ಬ ಆಚರಿಸಬೇಕು. ಆಚರಣೆ ಯಾವುದೇ ಬಗೆಯಲ್ಲಿರಬಹುದು (ಸಹ ಭೋಜನ, ಸಾಮೂಹಿಕ ವಾಹನ ಪೂಜೆ, ಹಣತೆ ಬೆಳಗುವುದು ಇತ್ಯಾದಿ). ನೀವು ತೆಗೆದ ಒಳ್ಳೆಯ ವಿವಿಧ ಫೋಟೋಗಳನ್ನು ಹೆಸರು, ಅಪಾರ್ಟ್‌ಮೆಂಟ್‌ನ ಹೆಸರು, ಪ್ರದೇಶ (ಊರು)ದ ವಿವರದೊಂದಿಗೆ 8095192817 ಗೆ ವಾಟ್ಸಪ್‌ ಮಾಡಬೇಕು. ಮೂರು ನಿಮಿಷದ ವೀಡಿಯೋಗಳನ್ನೂ ಇದೇ ನಂಬರ್‌ಗೆ ಕಳಿಸಬಹುದು. ವೈಯಕ್ತಿಕ ಆಚರಣೆಯ ಫೋಟೋಗಳನ್ನು ಪರಿಗಣಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next