Advertisement

ವಿರೋಧದ ಮಧ್ಯೆ ಹಂಪಿ ಉತ್ಸವಕ್ಕೆ ಸಿದ್ಧತೆ

08:32 PM Nov 09, 2020 | Suhan S |

ಬಳ್ಳಾರಿ: ಕಲಾವಿದರ ವಿರೋಧದ ನಡುವೆಯೂ ಈಗಾಗಲೇ ನಿಗದಿಯಂತೆ ಒಂದು ದಿನದ ಮಟ್ಟಿಗೆ ಹಂಪಿ ಉತ್ಸವ ಆಚರಣೆಗೆ ಮುಂದಾಗಿರುವ ಜಿಲ್ಲಾಡಳಿತ ಉತ್ಸವದ ನಿರ್ವಹಣೆಗೆ ಅಗತ್ಯಸಮಿತಿಗಳನ್ನು ರಚಿಸಿ, ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಂಪಿ ಉತ್ಸವ ಆಚರಣೆಗೆ ಬರ ಪರಿಸ್ಥಿತಿ, ಪ್ರವಾಹ ಹೀಗೆ ಪ್ರತಿವರ್ಷ ಒಂದಲ್ಲಾ ಒಂದುವಿಘ್ನಗಳು ಎದುರಾಗುತ್ತಿದ್ದು, ಪ್ರಸಕ್ತ 2020ರಲ್ಲಿ ಕೋವಿಡ್‌ ಸೋಂಕು ವಿಘ್ನ ಎದುರಾಗಿದೆ.

ಇವುಗಳನ್ನೇ ನೆಪವೊಡ್ಡುತ್ತಿದ್ದ ಜಿಲ್ಲಾಡಳಿತ, ಸರ್ಕಾರ ಹಂಪಿ ಉತ್ಸವವನ್ನು ಮುಂದೂಡುವುದು ಅಥವಾ ನಿರ್ಲಕ್ಷéವಹಿಸಲಾಗುತ್ತಿದೆ. ಪರಿಣಾಮ ಕಲಾವಿದರ ಪ್ರತಿಭಟನೆ, ಒತ್ತಡಕ್ಕೆ ಮಣಿಯುವಜಿಲ್ಲಾಡಳಿತ, ಸರ್ಕಾರ ಕೊನೆಗೆ ಎರಡು ದಿನದ ಮಟ್ಟಿಗೆ ಸರಳವಾಗಿ ಆಚರಿಸುತ್ತಿದೆ. ಆದರೆ, ಕೋವಿಡ್‌ ಸೋಂಕಿನ ನೆಪವೊಡ್ಡಿ ಪ್ರಸಕ್ತ ವರ್ಷ ಮೂರು ದಿನಗಳ ಹಂಪಿಉತ್ಸವವನ್ನು ಕೇವಲ 1 ದಿನಕ್ಕೆ ಕಡಿತಗೊಳಿಸಿದ್ದು, ವೇದಿಕೆ ಕಾರ್ಯಕ್ರಮಗಳು ಇಲ್ಲದೇ ಉತ್ಸವ ಆಚರಿಸುತ್ತಿರುವುದು ಕಲಾವಿದರ ಅಸಮಾಧಾನಕ್ಕೆಕಾರಣವಾಗಿದೆ.

ಹಂಪಿ ಉತ್ಸವವನ್ನು ಮೂರು ದಿನಗಳ ಕಾಲ ಆಚರಿಸಬೇಕು. ಇಲ್ಲದಿದ್ದಲ್ಲಿ ರದ್ದುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ, ಕಲಾವಿದರ ವಿರೋಧದ ನಡುವೆಯೂ ಸಹ ಈಗಾಗಲೇ ನಿಗದಿಯಂತೆ ನ. 13ರಂದು ಒಂದು ದಿನದ ಮಟ್ಟಿಗೆ ಹಂಪಿ ಉತ್ಸವ ಆಚರಿಸಲು ಸಿದ್ಧತೆ ನಡೆಸಿರುವ ಜಿಲ್ಲಾಡಳಿತ, ಅದರ ನಿರ್ವಹಣೆಗೆ ಹಲವು ಸಮಿತಿಗಳನ್ನು ರಚನೆ ಮಾಡಿದ್ದು,ನಿರ್ವಹಿಸಬೇಕಾದ ಜವಾಬ್ದಾರಿಯನ್ನೂ ವಹಿಸಿಕೊಟ್ಟಿದೆ.

ಆಮಂತ್ರಣ ಮುದ್ರಣ, ವಿತರಣೆ ಸಮಿತಿ: ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿ ಕೇಂದ್ರದ ಗೃಹಸಚಿವಾಲಯದ ಮಾರ್ಗಸೂಚಿಗಳನ್ವಯ ಸರಳವಾಗಿ, ಸಾಂಕೇತಿಕವಾಗಿ ನ. 13ರಂದು ಆಚರಿಸಲಾಗುವ ಹಂಪಿ ಉತ್ಸವ ನಿರ್ವಹಣೆಗೆ ಆಹ್ವಾನ ಪತ್ರಿಕೆ ಮುದ್ರಿಸುವ ಹಾಗೂ ವಿತರಿಸುವ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಶೋಭಾಯಾತ್ರೆ ಹಾಗೂ ಪೂಜಾ ಸಮಿತಿ, ತುಂಗಾ ಆರತಿ ಮಹೋತ್ಸವ ಸಮಿತಿ, ಮಾಧ್ಯಮ ಸಮಿತಿಗಳನ್ನು ರಚನೆ ಮಾಡಿ, ಸಮಿತಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಜವಾಬ್ದಾರಿ ವಹಿಸಿಕೊಡಲಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸಿ ವಿತರಿಸುವ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಹೊಸಪೇಟೆ ಸಹಾಯಕ ಆಯುಕ್ತ, ಬಳ್ಳಾರಿ ತಹಶೀಲ್ದಾರ್‌ರು ಸದಸ್ಯರಾಗಿದ್ದು, ಇವರು ಅಪರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಲಿದ್ದಾರೆ.

Advertisement

ಕಾನೂನು ಸುವ್ಯವಸ್ಥೆ ಸಮಿತಿ: ಕಾನೂನು-ಸುವ್ಯವಸ್ಥೆ ಸಮಿತಿಯಲ್ಲಿ ಹೊಸಪೇಟೆ ಮತ್ತು ಕಮಲಾಪುರ ಡಿವೈಎಸ್‌ಪಿ ಅಧ್ಯಕ್ಷರಾಗಿದ್ದು, ಹೊಸಪೇಟೆ ತಹಶೀಲ್ದಾರ್‌ರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಬಳ್ಳಾರಿ ಗೃಹರಕ್ಷಕದಳ ಸಮಾದೇಷ್ಟರು ಸದಸ್ಯರಾಗಿದ್ದು ಇವರು ಉತ್ಸವದ ವೇಳೆ ಗಣ್ಯರು ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದು, ಹಂಪಿಗೆ ಬರುವ ಎಲ್ಲ ರಸ್ತೆಗಳಲ್ಲಿ ಸೂಕ್ತ ಸಂಚಾರ ನಿಯಂತ್ರಣ, ಆನೆಗಳ ಸ್ವಾಗತ, ಶೋಭಾಯಾತ್ರೆ ಕಾರ್ಯಕ್ರಮದ ವೇಳೆ ಸೂಕ್ತ ಬಂದೋಬಸ್ತ್ ಏರ್ಪಡಿಸುವುದು, ಉತ್ಸವಕ್ಕೆ ಆಗಮಿಸುವ ಗಣ್ಯರು, ಕಲಾವಿದರಿಗೆ ಸೂಕ್ತ ಬಂದೋಬಸ್ತ್ ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಶೋಭಾಯಾತ್ರೆ ಸಮಿತಿ : ಶೋಭಾಯಾತ್ರೆ, ಪೂಜಾ ಸಮಿತಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಇನ್ನುಳಿದ ವಿವಿಧ ಇಲಾಖೆಗಳ ಏಳು ಜನ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಇವರು ಆನೆಗಳ ಸ್ವಾಗತಕ್ಕೆ ಪೂಜೆ ವ್ಯವಸ್ಥೆ, ಹೂವಿನ ಹಾರಗಳ ವ್ಯವಸ್ಥೆ, ಶೋಭಾಯಾತ್ರೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳನ್ನು ಸಕ್ರಮವಾಗಿ ಹಾಗೂ ಶಿಸ್ತುಬದ್ಧಾಗಿ ನಿಲ್ಲಿಸುವುದು

ಸೇರಿ ಇನ್ನಿತರೆ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಇನ್ನು ತುಂಗಾ ಆರತಿ ಸಮಿತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಇಒ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದು, ಇವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಗಣ್ಯರು ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಅಂದು ಸಂಜೆ 6 ಗಂಟೆಗೆ ವಿಶೇಷ ಪೂಜಾ ಕಾರ್ಯಕ್ರಮ ಕೈಗೊಳ್ಳಲು ಕ್ರಮಕೈಗೊಳ್ಳಬೇಕು. ಪಕ್ಕದ ತುಂಗಭದ್ರಾ ನದಿ ದಡದಲ್ಲಿ ನಡೆಯಲಿರುವ ತುಂಗಾ ಆರತಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಯಾವುದೇ ಲೋಪವಿಲ್ಲದೇ ನಿರ್ವಹಿಸಬೇಕಾಗಿದೆ. ಜಿಲ್ಲೆಯ ಕಲಾವಿದರ ಅಸಮಾಧಾನ, ವಿರೋಧದ ನಡುವೆಯೂ ಹಂಪಿ ಉತ್ಸವವನ್ನು ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ ಉತ್ಸವವನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸಲಿದೆಯೇ ಕಾದು ನೋಡಬೇಕಾಗಿದೆ.

 

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next