Advertisement

ಜಿಲ್ಲಾದ್ಯಂತ ಗಣೇಶ ಚತುರ್ಥಿಗೆ ಭರದ ಸಿದ್ಧತೆ

02:40 PM Aug 24, 2017 | Team Udayavani |

ಸಂತೇಮರಹಳ್ಳಿ: ಈ ಗ್ರಾಮದಲ್ಲಿ ಗೌರಿ ಹಬ್ಬ ಬಂತೆಂದರೆ ಪ್ರತಿಯೊಬ್ಬರಿಗೂ ಭಕ್ತಿ ಭಾವ ತುಂಬಿ ಹರಿಯುತ್ತದೆ. ಗೌರಿ-ಗಣೇಶ ಹಬ್ಬದಲ್ಲಿ ಎಲ್ಲೆಡೆ ಗಣೇಶನಿಗೆ ಅಗ್ರ ಮನ್ನಣೆ ಸಿಗುವುದು ಸಹಜ. ಆದರೆ, ಕುದೇರು ಗ್ರಾಮದಲ್ಲಿ ಗೌರಮ್ಮನಿಗೇ ಮೊದಲ ಪ್ರಾಶಸ್ತ್ಯ. ಗೌರಿ ಹಬ್ಬದಲ್ಲಾದರೂ ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡಬೇಕೆಂಬ ಸಲುವಾಗಿ 1913ರಲ್ಲಿ ಇಲ್ಲಿ ಗೌರಿ ದೇಗುಲ ನಿರ್ಮಿಸಲಾಯಿತು. ಇದರಿಂದ ಗಣೇಶನಿಗೆ ಇಲ್ಲಿ ವಿಶೇಷ ಸ್ಥಾನವಿಲ್ಲ. ಹೆಂಚಿನ ಗುಡಿಯೊಳಗಿದ್ದ ಗೌರಿಗೆ 20 ವರ್ಷಗಳ ಹಿಂದೆಯಷ್ಟೇ ಸುಂದರ ದೇವಾಲಯ ನಿರ್ಮಿಸಲಾಗಿದೆ. ಈ ಊರಿನ ಗೌರಿ ಹಬ್ಬವನ್ನು ಗ್ರಾಮದೇವತೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತಿವೆ ಎಂದು ನಂಬಿದ ಜನತೆ ಇದನ್ನು ವರಗೌರಿ ಎಂದೂ ಕರೆಯುತ್ತಾರೆ. ಜಿಲ್ಲೆಯಲ್ಲೇ ವಿಶಿಷ್ಟ, ವಿಭಿನ್ನವಾಗಿ ಗೌರಿ ಹಬ್ಬವನ್ನು ಆಚರಿಸುವ ಕುದೇರು ಗ್ರಾಮದಲ್ಲಿ ಗೌರಿ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಗುರುವಾರ ಗೌರಿ ಹಬ್ಬ ಇರುವ ಕಾರಣ ವ್ರತಾಚರಣೆಗೆ ಗ್ರಾಮದ ಸುಮಂಗಲಿಯರು ಸಜಾಗಿದ್ದಾರೆ. ಮುಂದಿನ 12 ದಿನಗಳವರೆಗೂ ಗೌರಿ ವ್ರತ ಇಲ್ಲಿ ನಡೆಯಲಿದ್ದು, ಹಸಿರು ಚಪ್ಪರ ಹಾಕಿ ದೇಗುಲವನ್ನು ಸಿದ್ಧ ಮಾಡಲಾಗಿದೆ. ಹಬ್ಬದ
ದಿನವೇ ಗೌರಿ ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

Advertisement

ಮರಳಿನಿಂದ ಮೂರ್ತಿ ತಯಾರಿ: ಗ್ರಾಮದ ಹೃದಯಭಾಗದಲ್ಲಿರುವ ದೊಡ್ಡಕೆರೆಯ ಯುಮುನಾ ತಡಿಯಲ್ಲಿ ಮರಳಿನಿಂದ ಗೌರಿಯ ಮೂರ್ತಿಯನ್ನು ನಿರ್ಮಿಸಿ, ಹೂವಿನ ಪಲ್ಲಕ್ಕಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಸ್ವರ್ಣಗೌರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 5ದಿನಕ್ಕೆ ಬದಲಾವಣೆ: ದೇವಾಲಯ ದಲ್ಲಿ ಪ್ರತಿಷ್ಠಾಪಿಸಲಾಗುವ ಮರಳಿನ ಗೌರಿಯ ಮೂರ್ತಿಯನ್ನು ಐದನೇ ದಿನಕ್ಕೆ ಬದಲಿಸಿ ಕಡಲೆ ಹಿಟ್ಟಿನ ಗೌರಿ ಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆ ದೇವತಾ ಮೂರ್ತಿಗೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ 12ನೇ ದಿನದವರೆಗೂ ದೇವರ ವಿಗ್ರಹವನ್ನು ಸ್ವರ್ಣಗೌರಿ ಎಂದು ನಾಮಕರಣ ಮಾಡಿ ಪೂಜಿಸಲಾಗುತ್ತದೆ. ಸಾಮರಸ್ಯದ ಸಂಕೇತ: ಗ್ರಾಮದಲ್ಲಿರುವ ಎಲ್ಲಾ ವರ್ಗದ ಜನ ಸೇರಿ ಗೌರಿ ಹಬ್ಬ ಆಚರಿಸುವುದು ಮತ್ತೂಂದು ವಿಶೇಷ. ಇದು ಸಾಮರಸ್ಯದ ಸಂಕೇತ ಎಂದೂ ಬಿಂಬಿತವಾಗಿದೆ. ಇಡೀ ಗ್ರಾಮದಲ್ಲಿ ಗೌರಿ ಗಣೇಶ ವಿಗ್ರಹವನ್ನು ಒಂದೇ ಕಡೆ ಮಾತ್ರ ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷ. ಗ್ರಾಮದಲ್ಲಿ ಇನ್ನೆಲ್ಲೂ ಸಹ ಗೌರಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸುವಂತಿಲ್ಲ. ಈ ಅಂಶವೂ ಗ್ರಾಮದಲ್ಲಿರುವ ಒಗ್ಗಟ್ಟಿಗೆ ಪೂರಕವಾಗಿದೆ. ಈ ಹಬ್ಬಕ್ಕೆ 12 ದಿನಗಳವೆರೆಗೂ ನಿತ್ಯಪೂಜೆ ನಡೆಯು ತ್ತದೆ. ನವದಂಪತಿಗಳು ಬಾಗಿನ ಅರ್ಪಿಸುತ್ತಾರೆ. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಪೂರೈಸುತ್ತಾರೆ. ಇಲ್ಲಿಯ ಗೌರಿ ಸಾಕಷ್ಟು
ಪ್ರಸಿದ್ಧಿ ಹೊಂದಿದೆ. ಸ್ವರ್ಣಗೌರಿಯ ದರ್ಶನಕ್ಕಾಗಿ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಒಂದೆಡೆ ಎಲ್ಲರೂ ಸೇರಿ ಅದ್ಧೂರಿಯಾಗಿ ಗ್ರಾಮ ದೇವತೆಯನ್ನು ಆರಾಧಿಸಿ 12ನೇ ದಿನಕ್ಕೆ ಅಷ್ಟೇ ವಿಜೃಂಭಣೆಯಿಂದ ಮೂರ್ತಿ ವಿಸರ್ಜಿಸಲಾಗುತ್ತದೆ.

ಮಾರುಕಟ್ಟೆಯಲ್ಲಿ ಪೂಜೆಗೆ ಸಿದ್ಧವಾಗಿವೆ ಗಣೇಶ ಮೂರ್ತಿ
ಗುಂಡ್ಲುಪೇಟೆ: ಹಿಂದುಗಳ ಪವಿತ್ರ ಹಬ್ಬ ಗಣೇಶ ಚತುರ್ಥಿಗೆ ಒಂದು ಬಾಕಿದ್ದು, ಪಟ್ಟಣದಲ್ಲಿ ಈಗ ಗಣಪನ ಮೂರ್ತಿಗಳ ಮಾರಾಟ ಜೋರಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಹೆಚ್ಚಾಗಿ ಇಲ್ಲಿ ಕಾಣಸಿಗದಿದ್ದರೂ ಬಣ್ಣ ಬಣ್ಣದ, ವಿವಿಧ ರೂಪಗಳ ಮೂರ್ತಿಗಳು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಪಟ್ಟಣ ಕುಂಬಾರ ಬೀದಿಯಲ್ಲಿ ಕಳೆದ 6 ತಿಂಗಳಿನಿಂದ ಕಲಾವಿದರ ಕೈ ಚಳಕದಲ್ಲಿ
ಅರಳಿರುವ ಗಣಪನ ಮೂರ್ತಿಗಳು ಈಗಾಗಲೇ ತಾಲೂಕಾದ್ಯಂತ ಮಾರಾಟವಾಗಲು ರೆಡಿಯಾಗಿವೆ. ಕಳೆದ 42 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಂಬಾರ ಬೀದಿಯ ವಾಸಿ ಶ್ರೀನಿವಾಸ್‌ ಕುಟುಂಬ ಇದೀಗ ಬಿಡುವಿಲ್ಲದೆ ಗಣೇಶ ಮೂರ್ತಿಯಲ್ಲಿ ತೊಡಗಿಕೊಂಡಿದೆ. ಜೇಡಿಮಣ್ಣಿನಿಂದ ತಯಾರಿಸಿದ್ದ ಗಣಪತಿ ಮೂರ್ತಿಗೆ ಬಣ್ಣ ಹಚ್ಚುವ ಕಾಯಕದಲ್ಲಿ
ನಿರತರಾಗಿದ್ದಾರೆ. ಗಣೇಶ ಚತುರ್ಥಿಗೆ ಮೂರ್ತಿಗಳ ತಯಾರಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ತಯಾರಿಕೆಯನ್ನು ತಮ್ಮ ತಂದೆಯವರ ಕಾಲದಿಂದಲೂ ಕುಲಕಸು ಬನ್ನಾಗಿ ಮಾಡಿಕೊಂಡು ಬರುತ್ತಿದ್ದೇವೆ. ತಾಲೂಕಿನ ಎಲ್ಲಾ ಹಳ್ಳಿಗೂ ಗಣೇಶನ ಮೂರ್ತಿ ತಯಾರಿಸಿ ಕೊಡಲಾಗುತ್ತದೆ. ಒಂದು ಅಡಿ ಮೂರ್ತಿಯಿಂದ 5 ಅಡಿವರೆಗೆ ತಮ್ಮ ಮನೆಯಲ್ಲೇ ಗಣೇಶನ ಮೂರ್ತಿ ತಯಾರು ಮಾಡುತ್ತೇವೆ ಎಂದು ಹೇಳಿದರು. ಗಣೇಶನ ಹಬ್ಬಕ್ಕಾಗಿಯೇ 6 ತಿಂಗಳುಕಾಲ ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗುವ ಇವರು, ಗಣೇಶ ಹಾಗೂ ಗೌರಿ ವಿಗ್ರಹಗಳ ತಯಾರಿಕೆಯಲ್ಲಿ ಅನುಭವಿ. ವಿವಿಧ ಆಕಾರಗಳ ಮುದ್ದು ಗಣಪಗಳು ಇವರ ಕೈಯಲ್ಲಿ ಆಕಾರಗೊಂಡು ಮಿಂಚುತ್ತವೆ. ಇತ್ತೀಚಿಗೆ ಸರ್ಕಾರ ಪರಿಸರ ಸ್ನೇಹಿ ಗಣಪನನ್ನು ತಯಾರಿಸಲು ಹಾಗೂ ಹಾನಿಕಾರಕ ಬಣ್ಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರು ಮಾಡುತ್ತಿದ್ದಾರೆ. ಮಕ್ಕಳ ಉತ್ಸಾಹ: ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಕೂರಿಸಲು ಕಂಬನೆಟ್ಟು ಗಣೇಶನ ಫೋಟೋ ಹಾಕಿ ಜಾಗ ಗುರುತಿಟ್ಟು ಕೊಳ್ಳುತ್ತಿರುವ ಹಾಗೂ ಮನೆ ಮನೆಗೆ ತೆರಳಿ ಗೋಲಕ ಹಿಡಿದು ಗಣಪತಿ ವಸೂಲಿ ಎಂದು ಕೂಗುತ್ತಾ ಕಾಸು ಸಂಗ್ರಹಿಸುತ್ತಿರುವ ಮಕ್ಕಳ ಉತ್ಸಾಹ ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತಿರುವುದರಲ್ಲಿ ಎರಡು ಮಾತಿಲ್ಲ. ಏನೇ ಆಗಲಿ ವೃದ್ಧರಿಂದಿಡಿದು ಮಕ್ಕಳವರೆಗೂ ಇಷ್ಟವಾಗುವ ಪ್ರಿಯ ದೈವ ಗಣೇಶನನ್ನು ಬರಮಾಡಿಕೊಳ್ಳಲು ಜನರು ಕಾತುರರಾಗಿದ್ದಾರೆ. ಗೌರಿ ಮತ್ತು ಗಣೇಶ ಹಬ್ಬಕ್ಕೆ ಪಟ್ಟಣದಲ್ಲಿ
ಸಂಭ್ರಮ ಹೆಚ್ಚುತ್ತಿದ್ದು, ಹಬ್ಬಕ್ಕಾಗಿ ಜನತೆ ಸಂಪೂರ್ಣವಾಗಿ ಸಜ್ಜಾಗಿದ್ದಾರೆ. 

ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next