Advertisement

ಅರಮನೆಯಲ್ಲಿ ಗರಿಗೆದರಿದ ದಸರಾ ಸಿದ್ಧತೆ

01:37 PM Sep 01, 2020 | Suhan S |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅವರಣದಲ್ಲಿ ಸಿದ್ಧತೆಗಳು ಗರಿಗೆದರಿದ್ದು, ಅರಮನೆಗೆ ಸುಣ್ಣ-ಬಣ್ಣ ಭರದಿಂದ ಸಾಗಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವ 45 ದಿನಗಳು ಬಾಕಿ ಇದ್ದು, ಇದಕ್ಕೆ ಪೂರಕವಾಗಿ ಅರಮನೆ ಆವರಣದಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ.

Advertisement

ಪ್ರತಿವರ್ಷದಂತೆ ಈ ವರ್ಷವೂ ದಸರಾ ಅಂಗವಾಗಿ ಅರಮನೆಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. 13 ಲಕ್ಷ ವೆಚ್ಚದಲ್ಲಿ ಈಗಾಗಲೇ ಸುಣ್ಣ ಬಳಿಯುವ ಕೆಲಸ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ. ಜೊತೆಗೆ ಅರಮನೆಗೆ ಮತ್ತಷ್ಟು ಮೆರುಗು ನೀಡಲು ತರಹೇವಾರಿ ಹೂ ಗಿಡಗಳನ್ನು ಬೆಳೆಯಲಾಗಿದೆ. ಇದಕ್ಕಾಗಿ 5 ಸಾವಿರ ಹೂ ಕುಂಡಗಳನ್ನು ಸಿದ್ಧಪಡಿಸಲಾಗಿದ್ದು, ಮುಖ್ಯದ್ವಾರ ಸೇರಿದಂತೆ ನಾನಾ ಭಾಗಗಳಲ್ಲಿ ಹೂಕುಂಡಗಳನ್ನು ಜೊಡಿಸುವ ಕೆಲಸ ನಡೆಯುತ್ತಿದೆ.

ದಸರಾ ಆಚರಣೆಗೆ ಭಿನ್ನರಾಗ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ನೂರಾರು ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವುದು ವಾಡಿಕೆ. ಆದರೆ, ಈ ಬಾರಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್ ಹಾಗೂ ರಾಜ್ಯದಲ್ಲಾದ ನೆರೆ ಹಾವಳಿಯಿಂದ ಜನ ಸಾಮಾ ನ್ಯರು ಹಾಗೂ ಸರ್ಕಾರ ತತ್ತರಿಸಿದೆ. ಜೊತೆಗೆ ದಸರಾ ಉತ್ಸವದಿಂದ ಸೋಂಕು ಮತ್ತಷ್ಟು ಜನರಿಗೆ ಹಬ್ಬುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಆದರೆ, ಮೊತ್ತೂಂದೆಡೆ ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದು, ಮೈಸೂರು ಪ್ರವಾಸೋದ್ಯಮ ಕುಸಿದಿದೆ. ಈ ಹಿನ್ನೆಲೆ ಸರ್ಕಾರ ಅದ್ದೂರಿ ದಸರಾ ಆಚರಣೆಗೆ ಒತ್ತು ನೀಡುವ ಮೂಲಕ ಕುಸಿದಿರುವ ಆರ್ಥಿಕತೆಗೆ ಟಾನಿಕ್‌ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.

ದಸರಾ ನಡೆಯದ ವರ್ಷಗಳಿವು :  ನಾಡ ಹಬ್ಬ ಮೈಸೂರು ದಸರಾ 410 ವರ್ಷಗಳ ಹಿನ್ನೆಲೆ ಹೊಂದಿರುವ ಸಾಂಸ್ಕೃತಿಕ ಹಬ್ಬ. ಹಲವು ಕಾರಣಗಳಿಂದಾಗಿ 1970ರಿಂದ ಈವರೆಗೆ 12 ಬಾರಿ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. 1970ರಲ್ಲಿ ರಾಜ ವಂಶಸ್ಥರ ಸ್ವಂತ ವೆಚ್ಚಕ್ಕೆ ನೀಡುತ್ತಿದ್ದ ಹಣ ಸ್ಥಗಿತಗೊಳಿಸಿದ ಕಾರಣಕ್ಕೆ ದಸರಾ ಬಂದ್‌ ಮಾಡಲಾಗಿತ್ತು. ಆದರೂ ಎಫೆR ಇರಾನಿ, ಜಯದೇವರಾಜೆ ಅರಸ್‌ ಹಾಗೂ ಮುಂತಾದವರಿಂದ ಹಣ ಸಂಗ್ರಹಿಸಿ, ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಬಳಿಕ 1972, 73 ಎರಡು ವರ್ಷಗಳ ಕಾಲ ಬರ ಇದ್ದ ಕಾರಣ ದಸರಾ ಜಂಬೂ ಸವಾರಿ ರದ್ದಾಗಿತ್ತು. 1974ರಲ್ಲಿ ಜಯಚಾಮರಾಜ ಒಡೆಯರ್‌ ನಿಧನದಿಂದ ದಸರಾ ಆಚರಣೆ ಮಾಡಿರಲಿಲ್ಲ.1977ರಲ್ಲಿ ಮೈಸೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾರಣಕ್ಕೆ ಈ ವರ್ಷವೂ ದಸರಾ ನಡೆಸಿರಲಿಲ್ಲ. 1983, 1992, 1997ರಲ್ಲಿ ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ದಸರಾ ನಡೆದಿರಲಿಲ್ಲ. ಬಳಿಕ 2000ರಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ ಮಾಡಿದ್ದರಿಂದ ಆ ವರ್ಷವೂ ಸರಳವಾಗಿ ದಸರಾ ಆಚರಿಸಲಾಗಿತ್ತು. 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಕಾರಣಕ್ಕೆ, 2002ರಲ್ಲಿ ಬರ ಎದುರಾದ ಹಿನ್ನೆಲೆ, 2015 ಬರದಿಂದ ಕಂಗೆಟ್ಟು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಕೋವಿಡ್‌-19 ಭೀತಿ ಸಂಭ್ರಮದ ದಸರಾ ಆಚರಣೆಗೆ ಅಡ್ಡಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಉನ್ನತ ಸಮಿತಿ ಸಭೆಯತ್ತ ಎಲ್ಲರ ಚಿತ್ತ  : ನಾಡಹಬ್ಬ ದಸರಾ ಎಂದರೆ ಅದೊಂದು ವೈಭವ, ನಾಡಿನ ಸಂಸ್ಕೃತಿಯ ಪ್ರತೀಕವಾದರೆ, ಜಂಬೂ ಸವಾರಿ ವಿಜಯದ ಸಂಕೇತ. ಈ ಬಾರಿಯ ದಸರಾ ಮಹೋತ್ಸವ ಆಚರಣೆ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಇದನ್ನು ದಸರಾ ಉನ್ನತ ಸಮಿತಿ ಸಭೆ ತೀರ್ಮಾನಿಸಲಿದ್ದು, ಕೆಲವೆ ದಿನಗಳಲ್ಲಿ ಸಭೆ ನಡೆಯಲಿದೆ. ಪ್ರತಿವರ್ಷ ದಸರಾ ಮೂರು ತಿಂಗಳು ಬಾಕಿ ಇರುವಾಗಲೇ ಈ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಾಗೂ ನೆರೆ ಹಾವಳಿಯಿಂದ ಈವರೆಗೂ ಉನ್ನತ ಸಮಿತಿ ಸಭೆ ನಡೆದಿಲ್ಲ. ಈ ಬಾರಿ ಮೈಸೂರಿನಲ್ಲಿಯೇ ಸಭೆ ನಡೆಯುವ ಲಕ್ಷಣಗಳಿವೆ ಎಂದು ಉಸ್ತುವಾರಿ ಸಚಿವರು ಹೇಳಿದ್ದರು. ಈ ಹಿನ್ನೆಲೆ ಕೊರೊನಾ ಸಂಕಷ್ಟದಕಾಲದಲ್ಲೂ ಸರ್ಕಾರ ದಸರಾ ಮಹೋತ್ಸವನ್ನು ಹೇಗೆ ಆಚರಣೆ ಮಾಡಲು ನಿರ್ಧರಿಸುತ್ತದೆ ಎಂದು ಎಲ್ಲರೂ ಕಾಯ್ದಿದ್ದು, ಎಲ್ಲರ ಚಿತ್ತ ದಸರಾ ಉನ್ನತ ಸಮಿತಿ ಸಭೆಯತ್ತ ನಾಟಿದೆ.

Advertisement

25,000ಬಲ್ಬ್  ಜೋಡಣೆ : ಪ್ರವಾಸಿಗರನ್ನು ಸದಾ ಕಾಲ ಆಕರ್ಷಿಸುವ ಅರಮನೆ ದೀಪಾಲಂಕಾರ ಈ ಬಾರಿಯೂ ಇರಲಿದ್ದು, ಅದಕ್ಕಾಗಿ ದುರಸ್ತಿಯಲ್ಲಿರುವ ಹಳೆಯ ಬಲ್ಬ್, ಹೋಲ್ಡರ್‌ಗಳನ್ನು ಬದಲಿಸಲು ಅರಮನೆ ಆಡಳಿತ ಮಂಡಳಿ ಸಜ್ಜಾಗಿದೆ. ಈಗಾಗಲೆ 25 ಸಾವಿರ ಬಲ್ಬ್ ಗಳನ್ನು ಬದಲಿಸಲು ಯೋಜನೆ ಸಿದ್ಧಪಡಿಸಿ ಕೊಂಡಿದ್ದು, ಶೀಘ್ರವೇ ಟೆಂಡರ್‌ ಕರೆಯುವ ಪ್ರಕ್ರಿಯೆಯೂ ನಡೆಯಲಿದೆ.

 

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next