Advertisement

ಮತಗಳ ಎಣಿಕೆಗೆ ಸಕಲ ಸಿದ್ಧತೆ: ನಾಳೆ ಮಧ್ಯಾಹ್ನ ಫಲಿತಾಂಶ

09:18 AM May 22, 2019 | Suhan S |

ಹಾಸನ: ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೇ 23 ರಂದು ನಡೆಯಲಿರುವ ಹಾಸನ ಲೊಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆಗೆ ಸಕಲ ಸಿದ್ಧತೆ ಮಾಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 8 ಕೊಠಡಿಗಳಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ದಾಖಲಾದ ಮತಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.

Advertisement

ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ಅವರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು. ಮತ ಎಣಿಕೆ ಕೇಂದ್ರದಲ್ಲಿ 8 ಎಣಿಕೆ ಕೊಠಡಿಗಳು, ಜಿಲ್ಲಾ ಚುನಾವಣಾಧಿಕಾರಿ ಕೊಠಡಿಯಲ್ಲಿ ಅಂಚೆ ಮತಗಳು ಹಾಗೂ ಸೇವಾ ಮತಗಳ ಎಣಿಕೆಯ ವ್ಯವಸ್ಥೆ, ಮಾಧ್ಯಮ ಕೇಂದ್ರ, ಎಣಿಕೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮತ್ತಿತರ ಸಿದ್ಧತೆಗಳನ್ನು ಪರಿವೀಕ್ಷಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮೈಕ್ರೋ ಅಬ್ಸರ್ವರ್‌ಗಳ ನೇಮಕ: ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ಎಣಿಕೆ ಕೊಠಡಿಯ ವ್ಯವಸ್ಥೆ ಮಾಡಿದ್ದು, ಪ್ರತಿಯೊಂದು ಎಣಿಕೆ ಕೊಠಡಿಯಲ್ಲೂ 14 ಮತ ಎಣಿಕೆ ಟೇಬಲ್, ಒಂದು ಸಹಾಯಕ ಚುನಾವಣಾಧಿಕಾರಿ ಟೇಬಲ್, ಒಂದು ವೀಕ್ಷಕರ ಟೇಬಲ್ ಸೇರಿ ಒಟ್ಟು 16 ಟೇಬಲ್ಗಳಿರುತ್ತವೆ. ಪ್ರತಿ ಎಣಿಕೆ ಟೇಬಲ್ಗಳಲ್ಲಿ ಮೂವರು ಸಿಬ್ಬಂದಿಗಳಿದ್ದು, ವೀಕ್ಷಕರ ಟೇಬಲ್ ಹತ್ತಿರ ಇಬ್ಬರು ಹೆಚ್ಚುವರಿ ಮೈಕ್ರೋ ಅಬ್ಸ್ರ್‌ವರ್‌ಗಳನ್ನು ನೇಮಿಸಲಾಗಿದೆ. ಸಹಾಯಕ ಚುನಾವಣಾಧಿ ಕಾರಿಗಳಾದ 8 ತಹಶೀಲ್ದಾರರು ಸೇರಿ ಎಣಿಕೆ ಕಾರ್ಯಕ್ಕೆ 408 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 8 ಜನ ಎಆರ್‌ಒ, ತಹಶೀಲ್ದಾರ್‌ ಎಲ್ಲರನ್ನು ಒಳಗೊಂಡಿರುತ್ತದೆ ಎಂದು ಜಿಲ್ಲಾಧಿಕಾರಿಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದರು.

10 ಟೇಬಲ್ಗಳಲ್ಲಿ ಮತ ಎಣಿಕೆ: ಚುನಾವಣಾ ಧಿಕಾರಿಯವರ ಕೊಠಡಿಯಲ್ಲಿ 10 ಟೇಬಲ್ಗಳಿದ್ದು, 6 ಟೇಬಲ್ಗಳಲ್ಲಿ ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್ ಬ್ಯಾಲೆಟ್ ಅಂದರೆ ಸವೀರ್ಸ್‌ ವೋಟರ್ ಚಲಾವಣೆ ಮಾಡಿರುವ ಮತಗಳ ಎಣಿಕೆ ನಡೆ ಯಲಿದ್ದು, ಉಳಿದ 4 ಟೇಬಲ್ಗಳಲ್ಲಿ ಎಲ್ಲಾ ನೌಕರ ರಿಂದ ಬಂದಂತಹ ಅಂಚೆ ಪತ್ರಗಳ ಎಣಿಕೆ ನಡೆಯ ಲಿದೆ. ಈ ಮತಗಳು ಚುನಾವಣಾಧಿಕಾರಿಯವರ ಕೊಠಡಿಯಲ್ಲಿಯೇ ಭದ್ರವಾಗಿವೆ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕೊಠಡಿ ಸಂಖ್ಯೆ – 232ರಲ್ಲಿ, ಅರಸೀಕೆರೆ ಕ್ಷೇತ್ರದ ಮತಗಳ ಎಣಿಕೆ ಕೊಠಡಿ ಸಂಖ್ಯೆ -242, ಬೇಲೂರು ಕ್ಷೇತ್ರದ ಮತಗಳ ಎಣಿಕೆ ಕೊಠಡಿ ಸಂಖ್ಯೆ -205, ಹಾಸನ ಕ್ಷೇತ್ರದ ಮತಳ ಎಣಿಕೆ ಕೊಠಡಿ ಸಂಖ್ಯೆ 221, ಹೊಳೆನರಸೀಪುರ ಕ್ಷೇತ್ರದ ಮತಗಳ ಎಣಿಕೆ ಕೊಠಡಿ ಸಂಖ್ಯೆ – 228, ಅರಕಲಗೂಡು ವಿಧಾನಸಭಾಕ್ಷೇತ್ರದ ಮತಳ ಎಣಿಕೆಗೆ ಕೊಠಡಿ ಸಂಖ್ಯೆ – 252, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕೊಠಡಿ ಸಂಖ್ಯೆ 230 ರಲ್ಲಿ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಮತಗಳ ಕೊಠಡಿ ಸಂಖ್ಯೆ – 217 ರಲ್ಲಿ ಮತ ಎಣಿಕೆ ನಡೆಯಲಿದೆ ಎಂ ದರು.

Advertisement

ಅರೆಸೇನಾಪಡೆ ನಿಯೋಜನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ಮಾತನಾಡಿ, ಮೇ 23ರಂದು ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಂ), ಮತಯಂತ್ರ (ಇವಿಎಂ)ಗಳನ್ನು ಭದ್ರತಾ ಕೊಠಡಿಯಿಂದ ಎಣಿಕೆ ಕೊಠಡಿಗಳಿಗೆ ಸಾಗಣೆ ಮಾಡಲು ಪ್ಯಾರಾ ಮಿಲಿಟರಿ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಿಷೇಧಾಜ್ಞೆ ಜಾರಿ: ಮೇ23 ರಂದು ಜಿಲ್ಲಾದ್ಯಂತ ಬಂದೋಬಸ್ತ್ಗೆ 1200 ಸಿಬ್ಬಂದಿಗಳ ನೇಮಕವಾಗಿದೆ. ಅಂದು ಜಿಲ್ಲಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿದ್ದು, ರಾಜಕೀಯ ಪ್ರೇರಿತವಾದ ಮೆರವಣಿಗೆಗಳು ನಡೆಯುವಂತಿಲ್ಲ. ಮದ್ಯ ಮಾರಾಟ, ಮದ್ಯಪಾನ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರು, ಇನ್ನಿತರ ಸದಸ್ಯರುಗಳನ್ನು ಡೇರಿ ಸರ್ಕಲ್ನಿಂದ ಮತಗಳ ಎಣಿಕೆ ಕೇಂದ್ರದ ಒಳಗಡೆ ಬರುವವರೆಗೆ 3 ಕಡೆಯಲ್ಲಿ ಅರೆ ಸೇನಾಪಡೆಗಳ ನೇತೃತ್ವದಲ್ಲಿ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲೆಯಲ್ಲಿ 123 ಪ್ರದೇಶಗಳನ್ನು ಸೂಕ್ಷ್ಮ ಸ್ಥಳಗಳೆಂದು ಗುರುತಿಸಿದ್ದು ಅಲ್ಲಿ ಬಿಗಿ ಪೊಲೀಸ್‌ ಪಹರೆ ಹಾಕಲಾಗುವುದು . ಈ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಬಿ.ಎನ್‌. ನಂದಿನಿ, ಎಲ್ಲಾ ತಾಲೂಕುಗಳ ತಹಶೀಲ್ದಾರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next