Advertisement

ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

02:12 PM Jul 28, 2019 | Suhan S |

ನಾಗಮಂಗಲ: 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕು ಆಡಳಿತ ಮತ್ತು ತಾಲೂಕು ಕಸಾಪ ತಹಶೀಲ್ದಾರ್‌ ಎಂ.ವಿ.ರೂಪರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತೆಗಳ ಬಗ್ಗೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರ ಸಲಹೆ ಸಹಾಕಾರಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

Advertisement

ಜುಲೈ.29 ರಂದು ಸಮ್ಮೇಳನ ಆಚರಿಸಲು ನಿಗದಿ ಮಾಡಲಾಗಿದ್ದು ಸಮ್ಮೇಳನವನ್ನು ಪಟ್ಟಣದ ಎಂ.ಆರ್‌.ಪಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಇಜ್ಜಲಘಟ್ಟ ಗ್ರಾಮದ ಸಾಹಿತಿ, ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್‌ ಅವರನ್ನು ಆಯ್ಕೆಮಾಡಲಾಗಿದೆ. ಜು.29 ರ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ಟಿ.ಬಿ. ವೃತ್ತದ ಮಾರ್ಗವಾಗಿ ವಿವಿಧ ಜಾನಪದ ಕಲಾತಂಡಗಳಾದ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಕೋಲಾಟ, ಪೂರ್ಣಕುಂಭ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನದಲ್ಲಿ ಕಸಾಪ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳು, ಸೇರಿದಂತೆ ಹೆಚ್ಚು ಸಾಹಿತ್ಯಾಸಕ್ತರನ್ನು ಕಾರ್ಯಕ್ರಮಕ್ಕೆ ಕರೆತರುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಹಶೀಲ್ದಾರ್‌ ಎಂ.ವಿ.ರೂಪ ಮಾತನಾಡಿ, ನಮ್ಮ ಕನ್ನಡ ಭಾಷೆ ಮತ್ತು ನೆಲ, ಜಲ ಉಳಿಯಬೇಕಾದರೆ ಕನ್ನಡ ಸಾಹಿತ್ಯ ಸಮ್ಮೇಳನಗಳು ವರ್ಷವಿಡೀ ಮತ್ತು ಅರ್ಥಪೂರ್ಣವಾಗಿ ನಡೆಯಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಬಸವೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್‌, ಬಿ.ಇ.ಒ ನಾಗೇಶ್‌, ಎಪಿಎಂಸಿ ಅಧ್ಯಕ್ಷ ಚನ್ನಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಸಿಪಿಐ ನಂಜಪ್ಪ ಇತರರಿದ್ದರು.

ಸ್ಥಳೀಯ ಸಾಹಿತಿಗಳ ನಿರ್ಲಕ್ಷ್ಯ: ನಾಗರಿಕರ ಆರೋಪ

Advertisement

ಬಹುತೇಕ ಸಾಹಿತಿಗಳು ತಾಲೂಕಿನಲ್ಲಿಯೇ ನೆಲೆಸಿದ್ದಾರೆ. ತಾಲೂಕಿನ ಇತಿಹಾಸ ಮತ್ತು ಸಾಹಿತ್ಯಕ್ಕೆ ಅಗಾಧವಾದ ಕೊಡುಗೆ ನೀಡುತ್ತಿದ್ದು ಮತ್ತು ತಾಲೂಕಿನ ಸಾಹಿತ್ಯ ಬೆಳವಣಿಗೆಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಾಲೂಕಿನ ಸಾಹಿತ್ಯಲೋಕದ ಮೆರುಗನ್ನು ರಾಜ್ಯವ್ಯಾಪಿ ಪಸರಿಸಿದ್ದಾರೆ. ಈ ರೀತಿಯಲ್ಲಿ ಸ್ಥಳೀಯವಾಗಿ ಸಾಹಿತ್ಯ ಲೋಕವನ್ನು ಪೋಷಿಸುತ್ತಿರುವ ಅನೇಕ ಹಿರಿಯ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡದೆ, ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವ ಜೊತೆಗೆ ಸಮ್ಮೇಳನ ಕುರಿತಾಗಿ ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಸ್ಥಳೀಯ ಸಾಹಿತಿಗಳು ಮತ್ತು ತಾಲೂಕು ಕಸಾಪ ಸದಸ್ಯರ ಅಭಿಪ್ರಾಯ ಸಂಗ್ರಹಿಸದೆ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿರುವ ವಿಧಾನಕ್ಕೆ ತಾಲೂಕು ಕಸಾಪ ಸದಸ್ಯರುಗಳು, ಹಿರಿಯ ಸಾಹಿತಿಗಳು ಮತ್ತು ತಾಲೂಕಿನ ಸಾಹಿತ್ಯಾಸಕ್ತರಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ದಿಢೀರ್‌ ನಿಗದಿ ಹಿಂದಿನ ಮರ್ಮವೇನು…? :ಈ ಬಾರಿಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ 2 ದಿನಗಳ ಕಾಲ ಆಚರಿಸಲಾಗುವುದು ಎಂದು ಕಳೆದ ತಿಂಗಳು ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸುರೇಶ್‌ಗೌಡ ತಿಳಿಸಿದ್ದರು. ಆದರೆ ಇತ್ತೀಚಿನ ರಾಜಕೀಯ ಬದಲಾವಣೆಗಳ ನಡುವೆಯಲ್ಲಿಯೇ ಸಾಹಿತ್ಯ ಸಮ್ಮೇಳನವನ್ನು ನಿಗದಿ ಮಾಡಲಾಗಿದೆ. ಶಾಸಕರ ಮಾತಿನಂತೆ ಈ ಬಾರಿಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಉತ್ಸಾಹದಲ್ಲಿದ್ದ ಅನೇಕ ಸಾಹಿತ್ಯಾಸಕ್ತರು ಮತ್ತು ಕನ್ನಡ ಅಭಿಮಾನಿಗಳಿಗೆ ಸಮ್ಮೇಳನದ ದಿನಾಂಕ ದಿಢೀರ್‌ ಎಂದು ನಿಗದಿಯಾಗಿರುವುದು ಅಚ್ಚರಿ ಮೂಡಿಸಿದೆ. ಕಾರಣ ಸದಸ್ಯರುಗಳ ಮತ್ತು ಸಾಹಿತಿಗಳನ್ನೊಳಗೊಂಡಂತೆ ತಾಲೂಕು ಕಸಾಪ ಯಾವುದೇ ಸಭೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ಮಾಡುವ ಮೂಲಕ ಎಲ್ಲಾ ಸಾಹಿತ್ಯಾಸಕ್ತರ ಉತ್ಸಾಹಕ್ಕೆ ತಣ್ಣೀರೆರಚಿದೆ.

ಚರ್ಚೆಗೆ ಗ್ರಾಸವಾದ ಸಮ್ಮೇಳನ: ಅಧ್ಯಕ್ಷರ ಆಯ್ಕೆ, ದಿಢೀರ್‌ ನಿಗದಿಯಾದ ದಿನಾಂಕ, ಸಮ್ಮೇಳನದ ರೂಪು ರೇಷೆಗಳು, ಕೇವಲ ಒಂದು ವಾರದಲ್ಲಿ ಸಮ್ಮೇಳನವನ್ನು ನಡೆಸಲು ತರಾತುರಿ ನಿರ್ಧಾರ ಮತ್ತು ಸಮ್ಮೇಳನ ಕುರಿತಾದ ಪ್ರಚಾರದ ಕೊರತೆ ಇನ್ನೂ ಮುಂತಾದ ತಾಲೂಕು ಕಸಾಪದ ನಡವಳಿಕೆಗಳು ತಾಲೂಕಿನಾದ್ಯಂತ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next