Advertisement

ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ತಯಾರಿ 

06:00 AM Oct 08, 2018 | Team Udayavani |

ಶಿವಮೊಗ್ಗ: ನಿರೀಕ್ಷೆಯಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಇನ್ನೂ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುತ್ತಿದ್ದರೆ, ಚುನಾವಣೆ ಘೋಷಣೆಯಾದ ಮರುದಿನವೇ ಅಭ್ಯರ್ಥಿ ಘೋಷಿಸುವ ಮೂಲಕ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ.

Advertisement

ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ಸಭೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದು ವಿಶೇಷ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಮುಖಂಡರ ಸಭೆ ನಡೆಸಲಾಯಿತು. ಅಭ್ಯರ್ಥಿ ವಿಚಾರವಾಗಿ ಚರ್ಚೆ ನಡೆದು ರಾಘವೇಂದ್ರ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶಾಸಕ ಕೆ.ಎಸ್‌. ಈಶ್ವರಪ್ಪ ಹೆಸರು ಘೋಷಿಸಿದರು.

ಈ ಹಿಂದೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ವಿಚಾರವಾಗಿ ದತ್ತಾತ್ರಿ, ಚನ್ನಬಸಪ್ಪ ಇತರರ ಹೆಸರನ್ನು ಮುಂದೆ ಬಿಟ್ಟಿದ್ದ ಈಶ್ವರಪ್ಪ ಅವರು, ಭಾನುವಾರ ಯಾವುದೇ ತಕಾರರು ಇಲ್ಲದೆ ರಾಘವೇಂದ್ರ ಅವರ ಹೆಸರನ್ನು ಅಂತಿಮಗೊಳಿಸಿದರು. ಶನಿವಾರ ಬಿ.ವೈ.ರಾಘವೇಂದ್ರ ಅವರ ಹೆಸರನ್ನು ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಘೋಷಣೆ ಮಾಡಿದಾಗ ಈಶ್ವರಪ್ಪ ಇದಕ್ಕೆ ವಿರೋಧ ವ್ಯಕ್ತಪಡಿಸಬಹುದು ಎನ್ನಲಾಗಿತ್ತು. ಆದರೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಣ್ಣ ಅಪಸ್ವರವೂ ಕೇಳಿ ಬಂದಿಲ್ಲ.
ಸಭೆಯಲ್ಲಿ ಡಿ.ಎಚ್‌.ಶಂಕರಮೂರ್ತಿ, ಕೆ.ಎಸ್‌.ಈಶ್ವರಪ್ಪ, ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬೆಳ್ಳಿ ಪ್ರಕಾಶ್‌, ಅಶೋಕ ನಾಯ್ಕ ಇತರರು ಇದ್ದರು.

ಇಂದು ಉಳಿದ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ:
ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಲೋಕಸಭಾ ಉಪ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಘೋಷಿಸಲಾಗಿದ್ದು, ಇನ್ನೆರಡು ಕ್ಷೇತ್ರಗಳಿಗೆ ನಾಳೆ(ಸೋಮವಾರ) ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುವುದು ಎಂದರು.

Advertisement

ಸಭೆಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಬಿ.ವೈ.ರಾಘವೇಂದ್ರ ಅವರ ಹೆಸರನ್ನು ಈಶ್ವರಪ್ಪ ಅವರು ಪ್ರಸ್ತಾವನೆ ಮಾಡಿ ಭಾನುಪ್ರಕಾಶ್‌ ಅನುಮೋದಿಸಿದ್ದಾರೆ. ಅ.15ರಂದು ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಮಂಡ್ಯ, ಬಳ್ಳಾರಿ ಹಾಗೂ ಉಳಿದ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.

ಬಳ್ಳಾರಿಯಲ್ಲಿ ಅಭ್ಯರ್ಥಿ ಇದ್ದಾರೆ. ಮಂಡ್ಯದಲ್ಲೂ ಸಹ ಒಳ್ಳೆಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿ, ಕಣಕ್ಕಿಳಿಸಲಾಗುವುದು. ದೊಡ್ಡ ಅಂತರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಸಾಕು. ಜನ ಬಿಜೆಪಿಗೆ ಮತ ಹಾಕುತ್ತಾರೆ. ಚುನಾವಣೆ ವೇಳೆಗೆ ರಾಜ್ಯ ಸರಕಾರ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈಗಿನದಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಸಮೀಕ್ಷೆಯಲ್ಲಿ 19 ಸ್ಥಾನ ಗೆಲ್ಲಬಹುದು ಎಂದು ಇದೆ. ಆದರೆ 23 ಸ್ಥಾನಗಳನ್ನು ಗೆಲ್ಲಬೇಕಿದೆ. ಚುನಾವಣೆ ನಮಗೆ ಸವಾಲಾಗಿದೆ. ಮಹಿಳಾ ಮೋರ್ಚಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು ಬಲಪಡಿಸಬೇಕಿದೆ ಎಂದರು.

ಚುನಾವಣೆ ಅಗತ್ಯವಿರಲಿಲ್ಲ:
ಬಳಿಕ, ಶಿಕಾರಿಪುರದಲ್ಲಿ ಮಾತನಾಡಿ, ಕೇವಲ 5 ತಿಂಗಳಿಗೋಸ್ಕರ ಉಪ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗೂ ಅನಗತ್ಯವಾಗಿದೆ. ಆದರೆ, ಚುನಾವಣಾ ಆಯೋಗ ಯಾಕೆ ಈ ನಿರ್ಧಾರ ಕೈಗೊಂಡಿದೆ ಎಂಬುದು ಗೊತ್ತಿಲ್ಲ. ಮೋದಿ ಸರಕಾರದ ಸಾಧನೆಗಳನ್ನು ಇಟ್ಟುಕೊಂಡು ಉಪ ಚುನಾವಣೆ ಎದುರಿಸುತ್ತಿದ್ದೇವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ ಮೇಲೆ ಯಾವ ಪರಿಣಾಮವೂ ಆಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next