Advertisement

ಮಕ್ಕಳ ಸಾಹಿತ್ಯಕ್ಕೂ ಇರಲಿ ಆದ್ಯತೆ: ಪತ್ತಾರ

12:02 PM Nov 16, 2019 | Team Udayavani |

ತೇರದಾಳ: ಮಕ್ಕಳ ಮೊದಲ ಸಾಹಿತ್ಯದ ಅನುಭವ ಆಗುವುದು ತಾಯಿ ಹಾಡುವ ಜೋಗುಳದಲ್ಲಿ. ಗೋವಿನ ಹಾಡನ್ನು ಕೇಳದ ಕನ್ನಡಿಗರಿಲ್ಲ. ನಾಗರ ಹಾವೇ ಹಾವೋಳು ಹೂವೇ ಎಂಬ ಶಿಶು ಪದ್ಯವನ್ನು ಕೇಳದೆ ಯಾರೂ ದೊಡ್ಡವರಾಗಿಲ್ಲ. ಆದ್ದರಿಂದ ಸಾಹಿತ್ಯ ನಮ್ಮ ಪ್ರತಿ ಹಂತದ ಬೆಳವಣಿಗೆಯಲ್ಲಿದೆ. ಸುಂದರ ವ್ಯಕ್ತಿತ್ವ ರೂಪುಗೊಳ್ಳಲು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಸಿದ್ಧೇಶ್ವರ ಶಾಲೆಯ ಶಿಕ್ಷಕ ಬಿ.ಟಿ. ಪತ್ತಾರ ಹೇಳಿದರು.

Advertisement

ನಗರದ ಶಾರದಾ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ತೇರದಾಳ ನೂತನ ತಾಲೂಕು ಘಟಕ ಉದ್ಘಾಟನೆ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾಹಿತ್ಯ ಬೇರೆಯಲ್ಲ, ಸಂಸ್ಕಾರ ಬೇರೆಯಲ್ಲ. ಸಾಹಿತ್ಯ ಪಾಲಕರಿಂದ ದೂರವಾಗದೇ, ಮಕ್ಕಳಿಗೂ ಅದು ತಲುಪಲಿ. ಮಕ್ಕಳ ಸಾಹಿತ್ಯ ಅತ್ಯಂತ ಸರಳವಾಗಿ, ಅರ್ಥವಾಗುವಂತಿದ್ದರೆ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ರಾಷ್ಟ್ರಾಭ್ಯುದಯ ಬಯಸುವ ಸತ್ಪ್ರಜೆಗಳಾಗುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಮಕ್ಕಳಿಗೂ ತಿಳಿಯುವಂತೆ ಹೇಳಿದ ಬಸವಣ್ಣ ಮೊದಲ ಮಕ್ಕಳ ಸಾಹಿತಿ ಎನ್ನಬಹುದಾಗಿದೆ. ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಚಟುವಟಿಕೆಗಳು ನಡೆಯಲಿ. ಘಟಕ ರಾಜ್ಯಮಟ್ಟದಲ್ಲಿ ಹೆಸರು ಮಾಡಲಿ ಎಂದರು.

ಹಿರೇಮಠದ ಗಂಗಾಧರ ದೇವರು ಆಶೀರ್ವಚನ ನೀಡಿದರು. ಮಸಾಪ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಲಟ್ಟಿ ಮಾತನಾಡಿದರು. ತಾಲೂಕು ಘಟಕದ ನೂತನ ಅಧ್ಯಕ್ಷ ಸಿದ್ದಣ್ಣ ಕಮದಿನ್ನಿ ಅಧ್ಯಕ್ಷತೆ ವಹಿಸಿದ್ದರು. ನೂತನ ತಾಲೂಕು ಘಟಕವನ್ನು ಶಾರದಾ ಶಾಲೆಯ ಪುಟಾಣಿಗಳಾದ ಸೋನಾಲಿ ಶೇಡಬಾಳ ಹಾಗೂ ಮಂಜುನಾಥ ಬಿಸನಾಳ ಉದ್ಘಾಟಿಸಿದರು. ಪ್ರಶಾಂತ ಕಟ್ಟಿಮನಿ ಸ್ವಾಗತಿಸಿದರು. ಶಿವಾನಂದ ಚಿಂಚಲಿ ನಿರೂಪಿಸಿದರು. ಪ್ರಕಾಶ ಪವಾರ ವಂದಿಸಿದರು.

ಕವಿಗೋಷ್ಠಿ: ಬಾಲ ಸಾಹಿತಿಗಳು ತಮ್ಮ ಕವನ ವಾಚನ ಮಾಡಲು ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸಸಾಲಟ್ಟಿ ಶಿವಲಿಂಗೇಶ್ವರ ಶಾಲೆಯ ಶ್ರೇಯಾ ಬೆಂಡಿಕಾಯಿ, ಚೈತ್ರಾ ಮದಲಮಟ್ಟಿ, ಸಂಜನಾ ಹಾಲ್ಲೋಳ್ಳಿ,ಶಾರದಾ ಶಾಲೆಯ ಅಕ್ಷಯ ಸವದಿ, ರೋಹಿತ ಗಾತಾಡೆ, ಪ್ರಜ್ವಲ ಕೊಕಟನೂರ, ಬಸವರಾಜ ಮುಕುಂದ, ಪ್ರಜ್ಞಾ ಕೊಕಟನೂರ ಹಾಗೂ ಪಲ್ಲವಿ ಯಾದವಾಡ, ವಿನಾಯಕ ಶಾಲೆಯ ಹಣಮಂತ ಕೌಜಲಗಿ, ಸಿದ್ದೇಶ್ವರ ಶಾಲೆಯ ಪ್ರೀತಿ ಸಂಕಾನಟ್ಟಿ ತಮ್ಮ ಸ್ವ-ರಚಿತ ಕವನಗಳನ್ನು ವಾಚನ ಮಾಡಿದರು. ಪರಿಷತ್‌ ವತಿಯಿಂದ ಪ್ರಮಾಣ ಪತ್ರಗಳ ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next