Advertisement

ಶಾಲೆಗಳಿಗೆ ಉಪಯುಕ್ತ ಸೌಲಭ್ಯ ಕಲ್ಪಿಸಲು ಆದ್ಯತೆ

09:03 PM Nov 13, 2019 | Team Udayavani |

ಹೊಸಕೋಟೆ: ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳಿಗೆ ಉಪಯುಕ್ತವಾದ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಬೆಂಗಳೂರಿನ ರೌಂಡ್‌ ಟೇಬಲ್‌ 66ರ ಅಧ್ಯಕ್ಷ ಗೋಪಾಲ್‌ ಗೇರಾ ಹೇಳಿದರು. ಅವರು ತಾಲೂಕಿನ ದೊಡ್ಡಗಟ್ಟಿಗನಬ್ಬೆಯಲ್ಲಿರುವ ಹೆಂಕ್‌ ಬ್ರೂನಾ ಸ್ವಾಮಿ ವಿವೇಕಾನಂದ ರೌಂಡ್‌ ಟೇಬಲ್‌ ಶಾಲೆಯಲ್ಲಿ ಕೊಡುಗೆಯಾಗಿ ನೀಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

Advertisement

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯು ನ.10-17ರವರೆವಿಗೂ ಆಚರಿಸುತ್ತಿರುವ ಉತ್ಸವ್‌ ಕಾರ್ಯಕ್ರಮದಡಿ 1.9 ಲಕ್ಷ ರೂ.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾ ಸಾಮಗ್ರಿ, ಆವರಣಕ್ಕೆ 1000 ವ್ಯಾಟ್ಸ್‌ನ 5 ಎಲ್‌ಇಡಿ ಬಲ್ಬ್ ನೀಡಿದೆ.

115 ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಮಕ್ಕಳ ಚಲನಚಿತ್ರ ವೀಕ್ಷಿಸಲು ಅವಕಾಶ, 100 ವಿದ್ಯಾರ್ಥಿಗಳನ್ನು ಬೆಂಗಳೂರಿನ ತಾರಾಲಯ ವೀಕ್ಷಣೆ, 10 ಮಕ್ಕಳಿಗೆ ವಿಮಾನದಲ್ಲಿ ಕೊಯಂಬತ್ತೂರಿಗೆ ಕರೆದೊಯ್ದು ಇಶಾ ಫೌಂಡೇಶನ್‌ಗೆ ಭೇಟಿ ಒಳಗೊಂಡಂತೆ ಒಟ್ಟು 3.50 ಲಕ್ಷ ರೂ.ಗಳ ವೆಚ್ಚದಲ್ಲಿ ಸವಲತ್ತುಗಳನ್ನು ಒದಗಿಸಲಾಗಿದೆ. ಆಧುನಿಕ ತಂತ್ರಜ್ಞಾನ ಒಳಗೊಂಡ, ನೀರು ವ್ಯರ್ಥಗೊಳ್ಳದಂತಹ ವ್ಯವಸ್ಥೆಯುಳ್ಳ 1000 ಲೀ.ಗಳಷ್ಟು ಸಾಮರ್ಥ್ಯದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಿಂದ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸರಕಾರಗಳು ಅಗತ್ಯ ಅನುದಾನ ನೀಡುತ್ತಿದ್ದಾಗ್ಯೂ ಸಂಘ ಸಂಸ್ಥೆಗಳ ಸಹಭಾಗಿತ್ವ ಸಹ ಅತ್ಯವಶ್ಯವಾಗಿದೆ ಎಂದರು. ಶಾಲೆಯ ಕಾರ್ಯದರ್ಶಿ ನಾಗರಾಜ ಗುಪ್ತ ಮಾತನಾಡಿ 2002ರಲ್ಲಿ ಪ್ರಾರಂಭಗೊಂಡ ಶಾಲೆಯನ್ನು ಬೆಂಗಳೂರಿನ ರೌಂಡ್‌ ಟೇಬಲ್‌ 66 ದತ್ತು ಪಡೆದಿದ್ದು 1 ರಿಂದ 10ನೇ ತರಗತಿಯವರೆವಿಗೂ 367 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅಗತ್ಯವಾದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96ರಷ್ಟು ಫ‌ಲಿತಾಂಶ ಪಡೆದಿದ್ದು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತಿದ್ದು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದರು. ಶಾಲೆಯ ಜಮೀನು ದಾನಿ ಸರಸ್ವತಮ್ಮ, ಸಂಸ್ಥೆಯ ವಲಯ6ರ ಅಧ್ಯಕ್ಷೆ ಆರತಿ ಶ್ರಾಫ್, ಲೇಡಿಸ್‌ ಸರ್ಕಲ್‌ 66ರ ಅಧ್ಯಕ್ಷೆ ಸಹನಾ ಸುಮಂತ್‌, ಮುಖ್ಯ ಶಿಕ್ಷಕಿ ಆರ್‌. ಕುಮುದಿನಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next