Advertisement

Precaution: ದೇವಾಲಯಗಳ ನಿರ್ವಹಣೆ ಏಕರೂಪದ ನೀತಿ ಅನಿವಾರ್ಯ

02:11 AM Oct 08, 2024 | Team Udayavani |

ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡು ತಯಾರಿಕೆಗೆ ಪ್ರಾಣಿಜನ್ಯ ಕೊಬ್ಬನ್ನು ಬಳಸಿರುವ ವಿಷಯ ಬಹಿರಂಗಗೊಂಡ ವಾರಗಳ ಅಂತರದಲ್ಲಿ ಈಗ ಅಂತಹುದೇ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಕೇರಳದ ಸುಪ್ರಸಿದ್ಧ ಶಬರಿಮಲೆ ದೇಗುಲದ ಪ್ರಸಾದವಾದ “ಅರವಣ’ದಲ್ಲಿ ಕೀಟನಾಶಕಗಳ ಅಂಶ ಅಪಾಯಕಾರಿ ಪ್ರಮಾಣದಲ್ಲಿದೆ ಎಂಬ ಪ್ರಯೋಗಾಲಯದ ವರದಿಯನ್ನು ದೇಗುಲದ ಆಡಳಿತವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ತಡವಾಗಿ ಬಹಿರಂಗಗೊಳಿಸಿದೆ. ಇದು ಶಬರಿಮಲೆ ಅಯ್ಯಪ್ಪನ ಭಕ್ತರನ್ನು ಆತಂಕದ ಮಡುವಿಗೆ ತಳ್ಳಿದೆ.

Advertisement

ಪ್ರತೀ ವರ್ಷ ಕೋಟ್ಯಂತರ ರೂ. ಆದಾಯ ತಂದುಕೊಡುವ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೇವರ ಹೆಸರಿನಲ್ಲಿ ಇಂಥದ್ದೊಂದು ಭಕ್ತದ್ರೋಹ ಮಾಡಿರುವ ಬಗೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಹಲವರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ಆದರೆ ತಿರುಪತಿ ಲಡ್ಡು ಕಲಬೆರಕೆ ಪ್ರಕರಣಕ್ಕೆ ರಾಜಕೀಯ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಕೂಲಂಕಷ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಉನ್ನತ ಮಟ್ಟದ ಸಮಿತಿ ರಚಿಸಿದೆ. ಆ ಮೂಲಕ ಪ್ರಕರಣದ ನಿಷ್ಪಕ್ಷ ತನಿಖೆಗೆ ಸುಪ್ರೀಂಕೋರ್ಟ್‌ ಮುಂದಡಿ ಇಟ್ಟಿದೆ.

ಇದರ ಬೆನ್ನಲ್ಲೇ ಈಗ ಶಬರಿಮಲೆ ದೇವಾಲಯದಲ್ಲಿನ ಪ್ರಸಾದದ ಕಲಬೆರಕೆ ಪ್ರಕರಣ ಬಯಲಾಗಿದ್ದು, ವರ್ಷದ ಹಿಂದೆಯೇ ಅರವಣ ಪ್ರಸಾದದಲ್ಲಿ ಕೀಟನಾಶಕಗಳ ಅಂಶ ಅಧಿಕವಾಗಿರುವುದಾಗಿ ಪ್ರಯೋಗಾಲಯದಿಂದ ವರದಿ ಬಂದಿತ್ತು. ಆದರೆ ಅದಾಗಲೇ 5.5 ಕೋ. ರೂ. ಮೌಲ್ಯದ ಅರವಣ ಪ್ರಸಾದದ 6.65 ಲಕ್ಷ ಟಿನ್‌ಗಳನ್ನು ದಾಸ್ತಾನಲ್ಲಿರಿಸಲಾಗಿತ್ತು. ವರದಿ ಕೈಸೇರುತ್ತಿದ್ದಂತೆಯೇ ಟಿಡಿಬಿ ದಾಸ್ತಾನಿನಲ್ಲಿರುವ ಅರವಣ ಪ್ರಸಾದದ ವಿತರಣೆಯನ್ನು ಸ್ಥಗಿತಗೊಳಿಸಿತ್ತು.

ಮುಂದಿನ ಕೆಲವೇ ದಿನಗಳಲ್ಲಿ ಪ್ರಸಕ್ತ ವರ್ಷದ ಶಬರಿಮಲೆ ಯಾತ್ರಾ ಋತು ಆರಂಭಗೊಳ್ಳಲಿರುವುದರಿಂದ ಹೊಸದಾಗಿ ತಯಾರಿಸಲಾದ ಪ್ರಸಾದದ ದಾಸ್ತಾನಿಗಾಗಿ ಗೋದಾಮನ್ನು ಖಾಲಿ ಮಾಡುವುದು ಟಿಡಿಬಿ ಗೆ ಅನಿವಾರ್ಯವಾಗಿದೆ. ಅರವಣ ತಯಾರಿಗೆ ಬಳಸಲಾಗುತ್ತಿರುವ ಏಲಕ್ಕಿಗೆ ಅಧಿಕ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಿಸಲಾಗಿರುವ ಪರಿಣಾಮ ಈ ಸಮಸ್ಯೆಯಾಗಿದ್ದು ಇನ್ನುಮುಂದೆ ತಯಾರಿಸಲಾಗುವ ಪ್ರಸಾದಕ್ಕೆ ಏಲಕ್ಕಿಯನ್ನು ಸೇರಿಸದಿರಲು ನಿರ್ಧರಿಸಲಾಗಿದೆ ಎಂಬ ಸ್ಪಷ್ಟನೆಯನ್ನೇನೋ ಟಿಡಿಬಿ ನೀಡಿದೆ.

ಸರಕಾರದ ಅಧೀನದ ದೇವಾಲಯಗಳಲ್ಲಿನ ಒಂದೊಂದೇ ಹುಳುಕುಗಳು ಬಯ­ಲಾಗುತ್ತಿರುವುದರಿಂದ ಭಕ್ತ ಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ದೇವಾಲಯಗಳ ನಿರ್ವಹಣೆ ಬಗ್ಗೆ ಸರಕಾರಗಳ ಈ ತೆರನಾದ ನಿರ್ಲಕ್ಷ್ಯ ಧೋರಣೆ ತೀರಾ ಅಕ್ಷಮ್ಯ. ಎಲ್ಲ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಬೇಕೆಂಬ ಹಿಂದೂಗಳ ಬಲುವರ್ಷಗಳ ಬೇಡಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದ ಬಹುತೇಕ ದೇಗುಲಗಳು ಸರಕಾರದ ಅಧೀನಕ್ಕೊಳಪಟ್ಟಿದ್ದು ಭಾರೀ ಪ್ರಮಾಣದಲ್ಲಿ ಆದಾಯವನ್ನು ಆಯಾಯ ರಾಜ್ಯ ಸರಕಾರಕ್ಕೆ ತಂದುಕೊಡುತ್ತಿದ್ದರೂ ಕನಿಷ್ಠ ಮೂಲಸೌಕರ್ಯವನ್ನು ಒದಗಿಸಲೂ ಸರಕಾರಗಳು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಗುಲಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಸ್ಥಳೀಯ ಆಡಳಿತ ಸಮಿತಿಗಳ ಸುಪರ್ದಿಗೆ ಒಪ್ಪಿಸಬೇಕೆಂಬ ಕೂಗೆದ್ದಿದೆ.

Advertisement

ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹಾಲಿ ವ್ಯವಸ್ಥೆ ಸಂಪೂರ್ಣ ತಾರತಮ್ಯದಿಂದ ಕೂಡಿದ್ದು, ದೋಷಪೂರ್ಣವಾಗಿದೆ. ಹೀಗಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಹಿಂದೂ ದೇವಾಲಯಗಳ ನಿರ್ವಹಣೆಗಾಗಿ ಏಕರೂಪದ ನೀತಿಯನ್ನು ರೂಪಿಸಿ, ಜಾರಿಗೊಳಿಸಬೇಕು. ಇದೇ ವೇಳೆ ದೇಗುಲದ ಹಣ ಸಮುದಾಯ, ಸಮಾಜದ ಅಭಿವೃದ್ಧಿಗೆ ವಿನಿಯೋಗವಾಗುವುದನ್ನು ಖಾತರಿಪಡಿಸು­ವುದರ ಜತೆಯಲ್ಲಿ ಯಾವುದೇ ಕಾರಣಕ್ಕೂ ಇದು ಅನ್ಯರ ಮತ್ತು ಭ್ರಷ್ಟರ ಪಾಲಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್‌ ಆದ್ಯತೆಯ ಮೇಲೆ ಗಮನಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next