Advertisement

Pramoda Devi: ಪಾರಂಪರಿಕ ಕಟ್ಟಡ ಜೀರ್ಣೋದ್ಧಾರವಾಗಲಿ; ಪ್ರಮೋದಾದೇವಿ ಒಡೆಯರ್‌

02:19 PM Oct 15, 2023 | Team Udayavani |

ಸಾಂಸ್ಕೃತಿಕ ನಗರಿ ಮೈಸೂರು ನಾಡಹಬ್ಬಕ್ಕೆ ಸಜ್ಜುಗೊಂಡಿದ್ದು ಇಂದಿನಿಂದ ಐತಿಹಾಸಿಕ ದಸರಾ ಉತ್ಸವ ಆರಂಭವಾಗಿದೆ. ಈ ಬೆನ್ನಲ್ಲೆ ನವರಾತ್ರಿ ವಿಶೇಷ ಪೂಜೆ ಅರಮನೆಯಲ್ಲಿಯೂ ನಡೆಯಲಿವೆ. ಒಡೆಯರ ಕಾಲದ ದಸರಾ ಉತ್ಸವದ ಹಿನ್ನೆಲೆ ಏನು, ಮೈಸೂರು ಪಾರಂಪರಿಕ ಕಟ್ಟಡಗಳು, ಚಾಮುಂಡಿ ಬೆಟ್ಟ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್‌ “ಉದಯವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಮೈಸೂರು ದಸರಾ ಉತ್ಸವ ಮತ್ತಷ್ಟು ಮೆರಗುಗೊಳಿಸಲು ನಿಮ್ಮ ಸಲಹೆ ಏನಾದರೂ ಇದೆಯಾ? ನಮ್ಮ ಖಾಸಗಿ ದಸರಾ, ನವರಾತ್ರಿ ಹಬ್ಬದ ಆಚರಣೆ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ನಡೆಸಿಕೊಂಡು ಬಂದಿದ್ದೇವೆ. ಅದರಂತೆ ಆಗಬೇಕಾದ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಸರ್ಕಾರ ಹಮ್ಮಿಕೊಳ್ಳುವ ಉತ್ಸವದಲ್ಲಿ ನಮ್ಮ ಸಹಕಾರ ಕೇಳಿದ್ದು ಬಿಟ್ಟು ಬೇರೆ ವಿಚಾರದಲ್ಲಿ ನಮ್ಮ ಸಲಹೆ ಕೊಡುವುದು ಸರಿಯಲ್ಲ. ಹಾಗೆಂದು ಭಾವಿಸಿ ನಾವು ಈ ವಿಚಾರದಲ್ಲಿ ಭಾಗಿ ಆಗುವುದಿಲ್ಲ.

ಮೈಸೂರು ಪಾರಂಪರಿಕ ನಗರ. ಇಲ್ಲಿನ ಅನೇಕ ಪಾರಂಪರಿಕ ಕಟ್ಟಡಗಳು ಅವನತಿ ಹಾದಿಯಲ್ಲಿವೆ. ಕಟ್ಟಡಗಳ ಸಂರಕ್ಷಣೆ ಹೇಗೆ ಮಾಡಬೇಕು?

ಮನಸಿದ್ದಲ್ಲಿ ಮಾರ್ಗ ಅನ್ನೋ ಗಾದೆ ಇದೆ. ಪಾರಂಪರಿಕ ಕಟ್ಟಡಗಳ ಜೀರ್ಣೋದ್ಧಾರ ನನಗೆ ತಿಳಿದ ಮಟ್ಟಿಗೆ ಏನೂ ಕಷ್ಟ ಆಗಲ್ಲ. ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ, ವಾಣಿ ವಿಲಾಸ, ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಬಿಲ್ಡಿಂಗ್‌ ಜೀರ್ಣೋದ್ಧಾರ ಆಗಲಿ ಅಂತ ನಾವು ಆಶಿಸುತ್ತೇವೆ. ಕೆ.ಆರ್‌.ಆಸ್ಪತ್ರೆ ಕಟ್ಟಡ ಜೀಣೋìದ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ ಅಂತ ಕೇಳಿ ತುಂಬಾ ಸಂತೋಷ ಆಯಿತು.

ಮೈಸೂರಿನ ಚಾಮುಂಡಿ ಬೆಟ್ಟದ ಸಂರಕ್ಷಣೆಯನ್ನು ಹೇಗೆ ಮಾಡಬಹುದು?

Advertisement

ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕು. ಪ್ರವಾಸಿಗರಿಗೆ ಬೇಕಾಗುವ ಅನುಕೂಲಗಳನ್ನು ಹೊರತುಪಡಿಸಿ ಬೇರೆ, ಬೇರೆ ವಾಣಿಜ್ಯ ಮಳಿಗೆಗಳಿಗೆ ಹಾಗೂ ಅನವಶ್ಯಕ ವಸತಿ ನಿರ್ಬಂಧನೆ ಜಾರಿಗೊಳಿಸ ಬೇಕು. ಚಾಮುಂಡಿಬೆಟ್ಟದಲ್ಲಿ ಈಗಾಗಲೇ ಎರಡು ಬಾರಿ ಭೂ ಕುಸಿತವಾಗಿ ಹಾನಿ ಆಗಿದೆ. ಇನ್ನು ಮುಂದಾದರೂ ಇಂತಹ ಅನಾಹುತ ಆಗದಂತೆ ಜಾಗರೂಕತೆ ವಹಿಸಬೇಕು ಎಂಬುದು ನಮ್ಮ ಭಾವನೆ.

ಮೈಸೂರು ದಸರಾ ನಡೆಸಲು ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆಂಬ ಬೇಡಿಕೆ ಇದೆ. ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಛಿಸುವುದಿಲ್ಲ.

ಮೈಸೂರು ನಿಧಾನವಾಗಿ ಇನ್ನೊಂದು ಬೆಂಗಳೂರು ರೀತಿ ಬೆಳೆಯುತ್ತಿದೆ. ಹೀಗೆ ಆಗದಂತೆ ಏನು ಮಾಡಬೇಕು?

ಇದಕ್ಕೂ ಕೂಡ ಸರ್ಕಾರ ಕ್ರಮ ವಹಿಸಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಪರಿಸರ ಕಾಪಾಡುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಒಂದು ಸವಾಲಿನ ಕಾರ್ಯ.

ಬ್ರ್ಯಾಂಡ್‌ ಮೈಸೂರು ಮತ್ತಷ್ಟು ಗಟ್ಟಿಗೊಳಿಸಲು ನಿಮ್ಮ ಸಲಹೆಗಳೇನಾದರೂ ಇದೆಯಾ?

ಮೈಸೂರು ಪಾರಂಪರಿಕ ನಗರಿ ಅನ್ನೋ ಹೆಸರಿನ ಜತೆ ಸಾಂಸ್ಕೃತಿಕ ನಗರಿ ಅಂತ ಕೂಡ ಹೆಸರುವಾಸಿ ಆಗಿದೆ. ಕರ್ನಾಟಕ ಪ್ರವಾಸಿಗರಿಗೆ ಆಸಕ್ತಿ ಇರುವ ಅನೇಕ ಸ್ಥಳಗಳಿರುವ ರಾಜ್ಯ. ವೃತ್ತಿಪರವಾಗಿ ನಿಭಾಯಿಸುವಂತಹ ಸಕ್ರಿಯವಾದ ಪ್ರವಾಸೋದ್ಯಮದ ಅಭಿವೃದ್ಧಿ ಈಗ ಆಗಬೇಕಿದೆ ಎಂಬುದು ನನ್ನ ಅಭಿಪ್ರಾಯ.

ನೀವು ನೋಡಿದ ಮೊದಲ ದಸರಾ ಹೇಗಿತ್ತು? ನಾನು ನೋಡಿದ ಮೊದಲ ದಸರಾ ಹಾಗೂ ಈಗಿನ ದಸರಾಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾನು ಚಿಕ್ಕ ವಯಸ್ಸಿನಲ್ಲಿ ನೋಡಿದ್ದ ನವರಾತ್ರಿ ಹಬ್ಬ, ಆಗಿನ ಅನುಭವ ಮತ್ತು ಅನಿಸಿಕೆ ಬೇರೆಯೇ ಇದೆ. ಇದರ ಮಹತ್ವ ಮತ್ತು ಈಗಿನ ಅನುಭವ ಬೇರೆಯಾಗಿದೆ.

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next