ಹುಬ್ಬಳ್ಳಿ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರ ಬಂಡಾಯ ಸ್ವಲ್ಪ ದಿನಗಳಲ್ಲಿ ಶಮನವಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪರು ನಾಳೆ ಮೋದಿ ಅವರ ಕಾರ್ಯಕ್ರಮಕ್ಕೆ ಬರಬಹುದು. ಅವರ ಮನವೊಲಿಕೆ ಮಾಡುವುದಕ್ಕೆ ಬಹಳ ಸಮಯವಿದೆ. ಚುನಾವಣೆಗೆ ಇನ್ನು 40 ದಿನವಿದೆ. ನಾಮನಿರ್ದೇಶನಕ್ಕೆ 20 ದಿನ ಬಾಕಿ ಇದೆ. ಅಷ್ಟರೊಳಗೆ ನಾವೆಲ್ಲ ಸರಿ ಮಾಡುತ್ತೇವೆ. ಅದರೊಳಗೆ ಅವರು ಬದಲಾವಣೆ ಆಗಬಹುದು ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ ಶೆಟ್ಟರ ಅವರ ಹೆಸರು ಮುಂಚೂಣಿಯಲ್ಲಿದ್ದು, ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಕೇಂದ್ರ ಗೃಹ ಸಚಿವರು, ಪಕ್ಷದ ಜೆ.ಪಿ. ನಡ್ಡಾ ಭೇಟಿ ಮಾಡಿದ್ದಾರೆ ಎಂದರು.
ಕುಮಾರಸ್ವಾಮಿ ಮೂರು ಕ್ಷೇತ್ರ ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಅವರು ಕೇಳುವುದು ಸಹಜ. ಅಲ್ಲಿ ಏನು ಚರ್ಚೆಯಾಗಿದೆ ಎಂದು ಗೊತ್ತಾಗಿಲ್ಲ. ನಾನು ಕುಮಾರಸ್ವಾಮಿ ಅವರ ಜೊತೆ ಮಾತನಾಡಿಲ್ಲ ಎಂದರು.
ನಾನು ಅಧಿಕೃತವಾಗಿ ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇವತ್ತು ಬೊಮ್ಮಾಯಿ ನಾವು ಸಭೆ ಮಾಡುತ್ತಿದ್ದೇವೆ. ಮುಂಬಯಿ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರ ಗೆಲ್ಲಬೇಕು. ಇಂದು ಒಟ್ಟು ನಾಲ್ಕು ಕ್ಷೇತ್ರಕ್ಕೆ ಸಂಬಂಧಿಸಿ ಸಭೆ ಮಾಡುತ್ತೇವೆ ಎಂದರು.