Advertisement

ಸಿದ್ದರಾಮಯ್ಯ ಬಜೆಟ್‌ಗೆ ಶ್ಲಾಘನೆ-BJP ಜತೆ ಕೈಜೋಡಿಸಿ ತಪ್ಪು ಮಾಡಿದೆ- H.ವಿಶ್ವನಾಥ್‌

10:29 PM Jul 20, 2023 | Team Udayavani |

ಬೆಂಗಳೂರು: ವಿಪಕ್ಷಗಳ ಗೈರು ಹಾಜರಿಯ ಮಧ್ಯೆ ವಿಧಾನ ಪರಿಷತ್ತಿನಲ್ಲಿ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಎಚ್‌. ವಿಶ್ವನಾಥ್‌, ತಾನು ಬಿಜೆಪಿ ಜತೆ ಕೈಜೋಡಿಸಿ ತಪ್ಪು ಮಾಡಿದೆ ಎಂದು ನೋವು ತೋಡಿಕೊಂಡರೆ, ಜೆಡಿಎಸ್‌ನ ಮರಿತಿಬ್ಬೇಗೌಡ, ಸಿದ್ದರಾಮಯ್ಯ ಅವರ ಬಜೆಟ್‌ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾಂಗ್ರೆಸ್‌ನ ಎಸ್‌. ರವಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿಯ ಹಲಾಲ್‌, ಹಿಜಾಬ್‌ ಗಲಾಟೆಗಳಿಂದಾಗಿ ರಾಜ್ಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಹಿಂದುಳಿಯುವಂತೆ ಆಗಿದೆ ಎಂದರು.

Advertisement

ಆಗ ಮಾತನಾಡಿದ ಎಚ್‌. ವಿಶ್ವನಾಥ್‌, ರಾಜ್ಯದಲ್ಲಿ ಇಂಥದ್ದೊಂದು ಸ್ಥಿತಿಗೆ ನಾನೂ ಕಾರಣನಾದೆನಲ್ಲ ಎಂಬ ನೋವು ನನ್ನ ಆತ್ಮಸಾಕ್ಷಿಯನ್ನು ಚುಚ್ಚುತ್ತಿದೆ. ನನ್ನ ತಪ್ಪಿಗೆ ಮೈಸೂರಿನಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದೇನೆ. ಇಂದು ಇಲ್ಲಿ ಸುಮ್ಮನೆ ಕುಳಿತಿದ್ದೇನೆ. ರಾಜ್ಯದ ಜನತೆ ಹಳಿತಪ್ಪಿದ್ದ ರಾಜ್ಯದ ರಾಜಕಾರಣವನ್ನು ಮತ್ತೆ ಹಳಿ ಮೇಲೆ ಕೂರಿಸುವ ಪ್ರಬುದ್ಧತೆ ಮೆರೆದಿದ್ದಾರೆ ಎಂದು ಹೇಳಿದರು.

ಮರಿತಿಬ್ಬೇಗೌಡ ಮಾತನಾಡಿ, ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಇಡೀ ಜಗತ್ತಿಗೆ ಮಾದರಿ. ತಾನು ಶಾಸಕನಾಗಿ 23 ವರ್ಷವಾಗಿದ್ದು, ಈವರೆಗೆ ಇಷ್ಟೊಂದು ಉತ್ತಮ ಬಜೆಟ್‌ ಮಂಡನೆ ಆಗಿರಲಿಲ್ಲ ಎಂದು ಶ್ಲಾಘಿಸಿದರು.

ಮುಸಲ್ಮಾನರು ಈ ದೇಶವನ್ನು 800 ವರ್ಷ ಆಳಿದರೂ ದೇಶದಲ್ಲಿ ಅವರ ಜನಸಂಖ್ಯೆ ಶೇ.14ರಷ್ಟಿದೆ. ಅದೇ ರೀತಿ ಬ್ರಿಟಿಷ್‌ ಆಡಳಿತವಿದ್ದರೂ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 2.03ರಷ್ಟಿದ್ದ ಕ್ರಿಶ್ಚಿಯನ್‌ ಜನಸಂಖ್ಯೆ ಈಗ ಶೇ. 1.70ಗೆ ಕುಸಿದಿದೆ. ಹಾಗಿದ್ದರೆ ಮತಾಂತರ ನಡೆದದ್ದು ಎಲ್ಲಿ? ಬಿಜೆಪಿಯವರು ಸುಖಾಸುಮ್ಮನೆ ಮತಾಂತರದ ಭೀತಿ ಸೃಷ್ಟಿಸುತ್ತಿದ್ದಾರೆ.
-ಹರೀಶ್‌ ಕುಮಾರ್‌, ಕಾಂಗ್ರೆಸ್‌ ಸದಸ್ಯ

ಬಿಜೆಪಿಯ ದುರಾಡಳಿತದಿಂದ ರಾಜ್ಯದ ಆರ್ಥಿಕತೆಗೆ ಹಿನ್ನಡೆ
ಬಜೆಟ್‌ ಮೇಲಿನ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ನಮ್ಮ ಹಿಂದಿನ ಸರಕಾರ ಕೈಗೊಂಡ ನಿಲುವುಗಳಿಂದ ಎಲೆಕ್ಟ್ರಾನಿಕ್‌ ಉದ್ದಿಮೆಗಳಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ರಾಜ್ಯ ಮೂರನೇ ಸ್ಥಾನಕ್ಕೆ ಕುಸಿದಿದೆ.

Advertisement

ಇದಕ್ಕೆ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಆಡಳಿತ ನಡೆಸಿದ್ದ ಬಿಜೆಪಿಯ ಕೋಮುವಾದಿ ನಿಲುವು ಕಾರಣ. ರಾಜ್ಯದ ಆರ್ಥಿಕತೆಯನ್ನು ಸರಿಪಡಿಸಲು ಇನ್ನು ಕನಿಷ್ಠ ಎರಡು ವರ್ಷ ಬೇಕು ಎಂದು ಹೇಳಿದರು. ಕೋಮುವಾದ, ಮತೀಯ ಗಲಭೆ ಹೆಚ್ಚಾಗುವಂತೆ ಮಾಡಿ, ಇಲ್ಲಿಗೆ ಕೈಗಾರಿಕೆಗಳು ಬರದೇ ರಾಜ್ಯ ಹಿನ್ನಡೆ ಅನುಭವಿಸುತ್ತಿವೆ. ಪಲ್‌ ಕಂಪೆನಿಯ ಬಿಡಿಭಾಗ ತಯಾರಿಕಾ ಕಾರ್ಖಾನೆ ತಂದಿದ್ದು ದೇಶದಲ್ಲೇ ನಾವು ಮೊದಲು. ಆದರೆ ಈ ಸರಕಾರದ ಭ್ರಷ್ಟಾಚಾರ, ಕೋಮುವಾದದಿಂದಾಗಿ ವ್ಯಾಪಾರ ಬಿದ್ದು ಹೋಗಿದೆ. ಇಂದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ಈಗ ಸರಿಪಡಿಸುವುದೇ ನಮಗೆ ಸವಾಲು ಎಂದರು.

ಮೋದಿಯದ್ದು ಔರಂಗಜೇಬ್‌ ಮಾದರಿ
ಎಸ್‌. ರವಿ ಮಾತನಾಡಿ ಮೋದಿಯವರು ಔರಂಗಜೇಬ್‌ ಮಾದರಿಯಲ್ಲಿ ಕರ್ನಾಟಕದ ಮೇಲೆ ದಂಡೆತ್ತಿ ಬಂದಿದ್ದರು. ಆದರೆ ಅವರಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಹಿಂದೆ ಔರಂಗಜೇಬ್‌ ಉತ್ತರದಿಂದ ದಕ್ಷಿಣಕ್ಕೆ ದಂಡೆತ್ತಿ ಬಂದಿದ್ದ ರೀತಿಯಲ್ಲೇ ಮೋದಿ ಅವರು ರಾಜ್ಯದ ಎಲ್ಲೆಡೆ ಸುತ್ತಿದ್ದರು ಎಂದರು.
ಹಾಗೆಯೇ ನಾನು ಔರಂಗಜೇಬ್‌ನನ್ನು ಒಪ್ಪುವುದಿಲ್ಲ. ಅವನೊಬ್ಬ ಕ್ರೂರಿ ಮತ್ತು ಅತಿ ಧಾರ್ಮಿಕನಾಗಿದ್ದ ಎಂದು ಹೇಳಿದರು.

ಮತಾಂತರ ಎಲ್ಲಿ ಆಗಿದೆ? ಹರೀಶ್‌ ಕುಮಾರ್‌
ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಮಾತನಾಡಿ, ಮುಸಲ್ಮಾನರು ಈ ದೇಶವನ್ನು 800 ವರ್ಷ ಆಳಿದರೂ ಸಹ ದೇಶದಲ್ಲಿ ಅವರ ಜನಸಂಖ್ಯೆ ಶೇ. 14ರಷ್ಟಿದೆ. ಅದೇ ರೀತಿ ಬ್ರಿಟೀಷ್‌ ಆಡಳಿತವಿದ್ದರೂ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 2.03ರಷ್ಟಿದ್ದ ಕ್ರಿಶ್ಚಿಯನ್‌ ಜನಸಂಖ್ಯೆ ಈಗ ಶೇ. 1.70ಗೆ ಕುಸಿದಿದೆ. ಹಾಗಿದ್ದರೆ ಮತಾಂತರ ನಡೆದದ್ದು ಎಲ್ಲಿ? ಬಿಜೆಪಿ ಅವರು ಸುಖಾಸುಮ್ಮನೆ ಮತಾಂತರದ ಭೀತಿ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಶೇ.40 ಭ್ರಷ್ಟಾಚಾರದ ಹಣದಿಂದ, ಶಾಸಕರನ್ನು ಆಮಿಷವೊಡ್ಡಿ ಹೆದರಿಸಿ ರಚಿಸಿದ್ದ ಅನೈತಿಕ ಸರ್ಕಾರವಾಗಿತ್ತು. ಇಂತಹ ಸರ್ಕಾರವನ್ನು ರಾಜ್ಯದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next