Advertisement

ರೈತರ ಪ್ರತಿಭಟನೆ ಕುರಿತು ಪರದೇಶದ ಸಲಹೆ ಅಗತ್ಯವಿಲ್ಲ : ಸಚಿವ ಪ್ರಹ್ಲಾದ್ ಜೋಶಿ

12:21 AM Dec 28, 2020 | sudhir |

ಹುಬ್ಬಳ್ಳಿ: ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಬ್ರಿಟನ್‌ ಮತ್ತು ಇತರ ದೇಶದ ಕೆಲವು ಸಂಸತ್‌ ಸದಸ್ಯರು ಆಕ್ಷೇಪಿಸುತ್ತಿರುವುದು ಸರಿಯಲ್ಲ. ಇದು ದೇಶದ ಆಂತರಿಕ ವಿಷಯ. ಇದಕ್ಕೆ ಹೊರಗಿನವರ ಸಲಹೆಗಳು ಅಗತ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟದ ಬಗ್ಗೆ ವಿದೇಶದಲ್ಲಿ ಒಂದು ಸಮುದಾಯ ಅಥವಾ ಸರಕಾರವೇ ಧ್ವನಿ ಎತ್ತಿದೆ ಎಂಬುದು ಮಾಧ್ಯಮಗಳಲ್ಲಿ ಮುಖ್ಯಸುದ್ದಿಯಾಗುತ್ತಿರುವುದು ಸರಿಯಲ್ಲ. 10-20 ಸಾವಿರ ಜನರು ಸೇರಿ ರಸ್ತೆಯ ಮೇಲೆ ಕುಳಿತು ಕಾನೂನು ರಚಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಯಾವ ನ್ಯಾಯ? ಇದನ್ನು ಸಹಿಸಲಾಗದು. ಭಾರತದ ಗೌರವ-ಘನತೆ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಎಂದರು.

ಪ್ರತಿಭಟನಕಾರರಿಗೆ ಮತ್ತೂಂದು ಮಾತುಕತೆ ಅವಕಾಶ
ಐರೋಪ್ಯ ದೇಶಗಳಲ್ಲಿ ಭಾರತೀಯ ಸಂಜಾತರು ದೊಡ್ಡ ಪ್ರಮಾಣದಲ್ಲಿದ್ದಾರೆ. ಸೆನೆಟ್‌, ಸಿಂಡಿಕೇಟ್‌ ಹಾಗೂ ಸಂಸತ್‌ ಸದಸ್ಯರು ಇದ್ದಾರೆ. ಅವರಲ್ಲಿನ ಬೆರಳೆಣಿಕೆ ಸದಸ್ಯರು ದಿಲ್ಲಿಯ ರೈತರ ಹೋರಾಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಡಿ. 29ರವರೆಗೆ ಅವರು ಗಡುವು ನೀಡಿದ್ದು, ಕೇಂದ್ರವು ಅವರೊಂದಿಗೆ ಮತ್ತೂಮ್ಮೆ ಮಾತುಕತೆಗೆ ಸಿದ್ಧವಿದೆ. ಆದರೆ ಹೋರಾಟಗಾರರು ಮುಕ್ತ ಮನಸ್ಸು ಹೊಂದಿರಬೇಕೆಂಬುದು ನಮ್ಮ ಸಲಹೆ. ಸಂಸತ್‌ ರಚಿಸಿದ ಕಾನೂನು ರದ್ದುಪಡಿಸಬೇಕೆಂದು ಬೇಡಿಕೆ ಇಟ್ಟಿರುವುದು ಸರಿಯಲ್ಲ ಎಂದು ಹೇಳಿದರು.

ಗಣಿ ಉದ್ಯಮದಲ್ಲಿ ಬದಲಾವಣೆ
ಗಣಿ ಉದ್ಯಮದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಚರ್ಚೆ ಗಳು ನಡೆದಿವೆ. ಈ ಕುರಿತು ಪ್ರಧಾನ ಮಂತ್ರಿಗಳ ಅನುಭವದ ಹಿನ್ನೆಲೆಯಲ್ಲಿ ಅವರಿಂದ ಮಾರ್ಗದರ್ಶನ ಪಡೆಯಲಾಗುವುದು. ದೇಶದಲ್ಲಿ ಮತ್ತೆ ಯಾವುದೇ ರೀತಿಯ ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ಯಾರ ಸಹಾಯವೂ ಬೇಕಾಗಿಲ್ಲ
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ನೆಲೆಯೂರಿದ್ದು, ಯಾರ ಸಹಾಯವೂ ಅಗತ್ಯವಿಲ್ಲ. 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಸಹಿತ ಜಿ.ಪಂ., ತಾ.ಪಂ. ಚುನಾವಣೆಯಲ್ಲೂ ಜಯ ಸಾಧಿಸಿ ರಾಜ್ಯದ ನಂಬರ್‌ ಒನ್‌ ಪಕ್ಷವಾಗಿ ಮುಂದುವರಿಯಲಿದೆ ಎಂದು ಸಚಿವ ಪ್ರಹ್ಲಾದ ಜೋಷಿ ಹೇಳಿದರು.

Advertisement

ದೇಶದಲ್ಲಿ ಪಕ್ಷವನ್ನು ಸ್ವಂತ ಬಲದ ಆಧಾರ ಮೇಲೆ ಬಲಪಡಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ತೆಲಂಗಾಣ, ಹಿಮಾಚಲ ಪ್ರದೇಶದ ಉಪ ಚುನಾವಣೆ ಹಾಗೂ ಈಶಾನ್ಯ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿಲ್ಲ. ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಸಂಖ್ಯಾಬಲವಿಲ್ಲ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್‌ನೊಂದಿಗೆ ವಿಷಯಾಧಾರಿತ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿ ಬಿಟ್ಟು ಹೊರಗಡೆ ಅನ್ಯ ಪಕ್ಷಗಳೊಂದಿಗೆ ಹೊಂದಾಣಿಕೆಯ ಮಾತೇ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next