Advertisement
ಮೊನ್ನೆ ತಾನೆ ಮುಕ್ತಾಯಗೊಂಡ ನಮ್ಮ ರಾಜ್ಯದ ಚುನಾವಣೆಯಲ್ಲಿ ಹೈ ಪ್ರೊಫೈಲ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹೆಸರಿನ ಹಲವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದ ವಿಚಾರ ನಮಗೆಲ್ಲಾ ತಿಳಿದೇ ಇದೆ. ಇದರಲ್ಲಿ ಎದುರಾಳಿ ಪಕ್ಷದ ಅಭ್ಯರ್ಥಿಯ ಕೈವಾಡವೂ ಇರುತ್ತದೆ ಎನ್ನುವುದು ನಗ್ನಸತ್ಯ.
ಇದಕ್ಕೆ ವ್ಯತಿರಿಕ್ತವಾಗಿರುವ ಕಥೆಯೊಂದು ಇಲ್ಲಿದೆ ನೋಡಿ. ಮಧ್ಯಪ್ರದೇಶದ ಬೋಪಾಲ್ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರು ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇಲ್ಲಿ ಈ ಎರಡು ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇದೆ. ಹಾಗಾಗಿ ಪ್ರತೀ ಮತವೂ ಇಲ್ಲಿ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುತ್ತದೆ. ಹೀಗಿರುವಾಗ ಪ್ರಗ್ಯಾ ಠಾಕೂರ್ ಎಂಬ ಹೆಸರಿನ ಇಬ್ಬರು ಸ್ಪರ್ಧಿಸಿದರೆ ಸಹಜವಾಗಿಯೇ ಗೆಲ್ಲುವ ವಿಶ್ವಾಸದಲ್ಲಿರುವ ಅಭ್ಯರ್ಥಿಗೆ ಚಿಂತೆಯಾಗದೆ ಇರದು.
Related Articles
ಆದರೆ ಇದೀಗ ಕೇಸರಿ ಪಕ್ಷದಿಂದಲೂ ಪ್ರಗ್ಯಾ ಠಾಕೂರ್ ಎಂಬ ಅಭ್ಯರ್ಥಿಯೇ ಕಣದಲ್ಲಿರುವುದರಿಂದ ಮತದಾರರಲ್ಲಿ ಹೆಸರಿನ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರು ತನ್ನದೇ ಹೆಸರಿನ ಸ್ವತಂತ್ರ ಅಭ್ಯರ್ಥಿಯನ್ನು ಮನೆಗೆ ಕರೆಯಿಸಿಕೊಂಡು ಮಾತುಕತೆ ನಡೆಸಿ ಅವರ ನಾಮಪತ್ರವನ್ನು ಹಿಂಪಡೆಯುವಂತೆ ಮನ ಒಲಿಸುವಲ್ಲಿ ಸಾಧ್ವಿ ಯಶಸ್ವಿಯಾಗಿದ್ದಾರೆ.
Advertisement
ಮಾತುಕತೆಯ ಬಳಿಕ ಸ್ವತಂತ್ರ ಅಭ್ಯರ್ಥಿ ಪ್ರಗ್ಯಾ ಠಾಕೂರ್ ಅವರ ಜೊತೆಯಲ್ಲೇ ಮಾಧ್ಯಮದವರ ಮುಂದೆ ಕಾಣಿಸಿಕೊಂಡ ಸಾಧ್ವಿ ಪ್ರಗ್ಯಾ ಠಾಕೂರ್ ಭೋಪಾಲ್ ಕ್ಷೇತ್ರದಲ್ಲಿ ಇಬ್ಬಿಬ್ಬರು ಪ್ರಗ್ಯಾ ಠಾಕೂರ್ ಗಳು ಸ್ಪರ್ಧಿಸುತ್ತಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದರು. ಮಾತ್ರವಲ್ಲದೇ ಸ್ವತಂತ್ರ ಅಭ್ಯರ್ಥಿಯಾಗಿದ್ದ ಪ್ರಗ್ಯಾ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿ ಪ್ರಗ್ಯಾಠಾಕೂರ್ ಅವರಿಗೆ ಈ ಚುನಾವಣೆಯಲ್ಲಿ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದೂ ಸಹ ಸಾಧ್ವಿ ತಿಳಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಛತ್ತೀಸ್ ಗಢದ ಮಹಾಸಮುಂದ್ ಲೋಕಸಭಾ ಕ್ಷೇತ್ರದಲ್ಲಿ ಚಂದೂ ಲಾಲ್ ಸಾಹೂ ಹೆಸರಿನ 10 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಂದೂ ಲಾಲ್ ಸಾಹೂ ಮತ್ತು ರಾಜ್ಯದ ಮಜೀ ಮುಖ್ಯಮಂತ್ರಿ ಅಜಿತ್ ಜೋಗಿ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಹಾಗಾಗಿ ಅಜಿತ್ ಜೋಗಿ ಚಿತಾವಣೆಯಿಂದಲೇ ಬಿಜೆಪಿ ಅಭ್ಯರ್ಥಿಯ ಹೆಸರನ್ನೇ ಹೋಲುವ 10 ಜನ ಚಂದೂ ಲಾಲ್ ಸಾಹುಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರಬಹುದು ಎಂಬ ಮಾತುಗಳು ಆಗ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು!