Advertisement

ಶಕ್ತಿ ಶಾರದೆ!

07:41 PM Mar 30, 2019 | Sriram |

ಎಲ್‌. ವಿ. ಶಾರದಾ ಎಂದರೆ ಥಟ್ಟನೆ ನೆನಪಾಗುವುದು ಫ‌ಣಿಯಮ್ಮ ಸಿನೆಮಾ. ಎಂ. ಕೆ. ಇಂದಿರಾ ಅವರ ಕತೆಯಾಧಾರಿತ ಪ್ರೇಮಾ ಕಾರಂತ ಅವರ ನಿರ್ದೇಶನದ ಈ ಚಿತ್ರದಲ್ಲಿ ಶಾರದಾ ತಲೆ ಬೋಳಿಸಿಕೊಂಡು, ಬಿಳಿ ಸೀರೆ ಉಟ್ಟು ವಿಧವೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 70ರ ದಶಕದಲ್ಲಿ ಸವಾಲೆನಿಸುವ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡವರು ಶಾರದಾ. ಮುಂದೆ ಹಲವು ಚಿತ್ರಗಳಲ್ಲಿ ಅವರು ವಹಿಸಿದ ಪಾತ್ರಗಳೆಲ್ಲ ವಿಭಿನ್ನವೇ, ಎಲ್ಲವೂ ಪ್ರಶಸ್ತಿ ತಂದುಕೊಟ್ಟಂಥವು. ಇಂಥ ಅಭಿಜಾತ ಕಲಾವಿದೆ ಎಲ್‌. ವಿ. ಶಾರದಾ ಇತ್ತೀಚೆಗೆ ನಮ್ಮನ್ನಗಲಿದ್ದಾರೆ.

Advertisement

ಮೊದಲ ಸಿನಿಮಾದಲ್ಲಿಯೇ ವಿಧವೆ ಪಾತ್ರ. ಎರಡನೆ ಯದರಲ್ಲಿಯೂ ಅದೇ ಪಾತ್ರ. ಅದು 70ರ ದಶಕ. ಆ ಕಾಲದಲ್ಲಿ ವಿಧವೆಯರಿಗೆ ಸಮಾಜ ಯಾವ ರೀತಿ ಅಸಡ್ಡೆ ತೋರುತ್ತಿತ್ತೋ ಹಾಗೆಯೇ ಚಿತ್ರರಂಗದಲ್ಲಿ ಕೂಡ ವಿಧವೆಯ ಪಾತ್ರ ಮಾಡುವುದಕ್ಕೆ ಮಹಿಳೆಯರು ಮುಂದೆ ಬರುತ್ತಿರಲಿಲ್ಲ. ಅಂಥ ಸಮಯದಲ್ಲಿ ಎಲ್‌. ವಿ. ಶಾರದಾ ವಂಶವೃಕ್ಷ, ಫ‌ಣಿಯಮ್ಮದಂಥ ಸಿನಿಮಾ ಗಳಲ್ಲಿ ವಿಧವೆ ಪಾತ್ರವನ್ನು ಸವಾಲಾಗಿ ಸ್ವೀಕರಿಸಿದರು.

ನಟಿಸಿದ್ದು ಕೆಲವೇ ಚಿತ್ರಗಳಲ್ಲಿಯಾದರೂ ಎಲ್ಲ ಪಾತ್ರಗಳೂ ವಿಭಿನ್ನವಾದವು. ಹೀಗೆ ವಿಭಿನ್ನ ಪಾತ್ರ ಗಳಲ್ಲಿಯೇ ಗುರುತಿಸಿಕೊಂಡ ಎಲ್‌. ವಿ. ಶಾರದಾ ಅವರ ಮೊದಲ ಚಿತ್ರ ವಂಶವೃಕ್ಷ. 1972ರಲ್ಲಿ ತೆರೆಕಂಡ ಈ ಸಿನಿಮಾದ ಪಾತ್ರದ ಅಭಿನಯಕ್ಕೆ ಎಲ್‌. ವಿ. ಶಾರದಾ ರಾಜ್ಯಪ್ರಶಸ್ತಿ ಗೆದ್ದರು.

ಆ ಕಾಲಕ್ಕೆ ಮಹಿಳೆಯೊಬ್ಬಳು ವಿಧವೆಯಾಗಿದ್ದಾಳೆಂದರೆ ಮಡಿ ಮಾಡಿ, “ಶಿವಾ ರಾಮ’ ಅಂತ ಜಪಸರ ಇಟ್ಟುಕೊಂಡು ಕೂರಬೇಕಿತ್ತು. ಶ್ರೋತ್ರಿಯಂತಹ ಕಟ್ಟಾ ಸಂಪ್ರದಾಯಸ್ಥರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿದ್ದೇ ದೊಡ್ಡ ಪವಾಡ. ಅಂಥಾದ್ದರಲ್ಲಿ ಮದುವೆಗೂ ಮನಸ್ಸು ಮಾಡುತ್ತಾಳೆ  ಇದು ಎಸ್‌. ಎಲ್‌. ಭೈರಪ್ಪನವರ ಖ್ಯಾತ ಕಾದಂಬರಿ ವಂಶವೃಕ್ಷ ಸಿನಿಮಾದ ಕಾತ್ಯಾಯಿನಿ ಪಾತ್ರದ ತಿರುಳು. ವಿಧವೆ ಕಾತ್ಯಾಯಿನಿ ಒಂದು ಮಗುವಿನ ತಾಯಿ, ಅವಳೊಳಗಿನ ಹೆಣ್ತನ ಮಾಸುವುದಿಲ್ಲ. ಹಾಗಾಗಿ, ಹೊಸ ಬದುಕಿನತ್ತ ಹೆಜ್ಜೆ ಇಡುತ್ತಾಳೆ.

ಅದೇ ಫ‌ಣಿಯಮ್ಮನ ವಿಚಾರಕ್ಕೆ ಬಂದರೆ ಹಾಗನ್ನಿಸುವುದಿಲ್ಲ. ತೀರಾ ಇತ್ತೀಚೆಗಿನವರೆಗೂ ಭಾರತೀಯ ಸಮಾಜದಲ್ಲಿ ಕಾಣಸಿಗುವ ಅಜ್ಜಿ. ಬಿಳಿಸೀರೆ ಉಟ್ಟು, ತಲೆ ಬೋಳಿಸಿಕೊಂಡು ಕೂರುವ ಅಜ್ಜಿಯಂದಿರು  ಆಗೆಲ್ಲ ಮನೆಮನೆಯಲ್ಲಿ ಇರುತ್ತಿದ್ದರು. ಇಂಥ ಪಾತ್ರದ ಫ‌ಣಿಯಮ್ಮ ಬೇರೆಯವರ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದವಳಲ್ಲ. ದೇಹ ಸಂಪ್ರದಾಯಬದ್ಧವಾಗಿದ್ದರೂ, ಮನಸ್ಸು ಆಧುನಿಕ ಚಿಂತನೆಗೊಳಗೊಂಡಿತ್ತು.

Advertisement

ಪಾತ್ರಕ್ಕೆ ನೈಜತೆ ಬರಲಿ ಎಂಬ ಕಾರಣಕ್ಕೆ ಆ ಕಾಲಕ್ಕೇ ಸ್ವತಃ ಕೂದಲನ್ನೇ ತೆಗೆಸಿಕೊಂಡಿದ್ದರು. ಅದು ಅನೇಕರ ಕೆಂಗಣ್ಣಿಗೆ ಗುರಿಯಾಯಿತು. ಸ್ವತಃ ಅವರ ತಾಯಿ “ತಿರುಪತಿಗಾದ್ರೂ ಮುಡಿ ಕೊಡಬಾರದಿತ್ತೆ!’ ಎಂದು ಆಡಿದ್ದನ್ನು ನೆನಪಿಸಿಕೊಂಡು ನಗುತ್ತಿದ್ದರು ಶಾರದಾ. ಈ ಪಾತ್ರವನ್ನು ಮಾಡುವಾಗ ಶಾರದಾ ಅವರ ವಯಸ್ಸು ಇಪ್ಪತ್ತಾರೋ ಇಪ್ಪತ್ತೇಳ್ಳೋ ಇದ್ದಿರಬಹುದು. ಮುದುಕಿ ಥರ ಕಾಣಿಸುವ ಸಲುವಾಗಿ ಹಣೆಯ ಮೇಲೆ ಸಾಕಷ್ಟು ಗೆರೆಗಳನ್ನು ಬರೆಯಬೇಕಾಯಿತಂತೆ.

ಹೊಸಅಲೆಯ ಚಿತ್ರಗಳಿಗೆಂದೇ ಮೀಸಲಾಗಿಸಿ ಕೊಂಡ ಶಾರದಾ ನಟಿಸಿದ ಎಲ್ಲ ಸಿನಿಮಾಗಳೂ ಒಂದೊಂದು ಮೈಲಿಗಲ್ಲು. ಎಲ್ಲ ಪಾತ್ರಗಳೂ ವಿಭಿನ್ನವಾದವು. ಅದು ಫ‌‌ಣಿಯಮ್ಮ., ವಂಶವೃಕ್ಷ, ಭೂತಯ್ಯನ ಮಗ ಅಯ್ಯು, ವಾತ್ಸಲ್ಯ ಪಥ, ಹೇಮಾವತಿ  ಹೀಗೆ ಯಾವುದೇ ಸಿನಿಮಾವಾಗಿರಲಿ. ಮಾಡಿದ ಸಿನಿಮಾಗಳು ಕೆಲವೇ ಆದರೂ ಗಟ್ಟಿ ತಿರುಳು ಹೊಂದಿರುವ ಸಿನಿಮಾಗಳು. ಎಲ್ಲ ಸಿನಿಮಾಗಳೂ ಪ್ರಶಸ್ತಿ ತಂದುಕೊಟ್ಟಂಥವುಗಳು. ಸಾಮಾಜಿಕವಾಗಿ ಬೇರೂರಿದ್ದ ಕಂದಾಚಾರಗಳನ್ನು, ಕಟ್ಟುಪಾಡುಗಳನ್ನು ಸಡಿಲಿಸುತ್ತ ಹೋಗುವ ಪಾತ್ರಗಳಲ್ಲೇ ಕಾಣಿಸಿಕೊಂಡ ಶಾರದಾ, ಪ್ರತಿ ಚಿತ್ರಗಳಲ್ಲೂ ಮಹಿಳಾ ಅಸ್ಮಿತೆಯ ಪ್ರತಿನಿಧಿಯಾಗಿ ಕಾಣುತ್ತಾರೆ.

ನಿಜಕಥೆ
ಎಲ್‌. ಎಸ್‌. ವೆಂಕೋಜಿ ರಾವ್‌ ಮತ್ತು ಸರಸ್ವತಿ ಬಾಯಿ ದಂಪತಿಯ ನಾಲ್ವರು ಮಕ್ಕಳಲ್ಲಿ ಶಾರದಾ ಮೂರನೆಯವರು. ತಂದೆ ಎಲ್‌. ಎಸ್‌. ವೆಂಕೋಜಿ ರಾವ್‌ ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಕರ್ನಾಟಕಕ್ಕೆ ಶೇರು ಮಾರುಕಟ್ಟೆಯನ್ನು ಪರಿಚಯಿಸಿದ ಇವರು ಬೆಂಗಳೂರಿನ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿ ದ್ದರು. ಮನೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ವಾತಾವರಣವಿದ್ದ ಕಾರಣ ಶಾರದಾ ಅವರಿಗೆ ರಂಗಭೂಮಿಯಲ್ಲಿ ಆಸಕ್ತಿ ಬೆಳೆದು, ಬಿ. ವಿ. ಕಾರಂತರಲ್ಲಿ ತನಗೊಂದು ಪಾತ್ರ ಕೊಡುವಂತೆ ಕೇಳಿಕೊಂಡಿದ್ದರು ಕೂಡ. ಆಗಲೇ ಕಾರಂತರಿಗೆ, ಶಾರದಾ ವಂಶವೃಕ್ಷದ ಕಾತ್ಯಾಯಿನಿ ಪಾತ್ರಕ್ಕೆ ಸೂಕ್ತ ಎನ್ನಿಸಿತು. ಶಾರದಾ ಅವರ ತಂದೆ, ಕಾತ್ಯಾಯಿನಿಯಂತಹ ಸಂಕೀರ್ಣ ಪಾತ್ರವನ್ನು ತಮ್ಮ ಮಗಳು ನಿರ್ವಹಿಸುವುದಕ್ಕೆ ಒಪ್ಪಿಗೆ ನೀಡಲಿಲ್ಲ. ಆದರೆ, ಗಿರೀಶ್‌ ಕಾರ್ನಾಡರು ವೆಂಕೋಜಿ ರಾಯರನ್ನು ಒಪ್ಪಿಸಿದರು.

ಹೀಗೆ ವಂಶವೃಕ್ಷದಿಂದ ಪ್ರಾರಂಭವಾದ ಶಾರದಾ ಅವರ ವೃತ್ತಿ ಬದುಕು, ಕಲಾತ್ಮಕ ಸಿನಿಮಾಗಳಲ್ಲಿಯೇ ಮುಂದುವರಿಯುವಂತೆ ಮಾಡಿತು. ಕಮರ್ಷಿಯಲ್‌ ಸಿನಿಮಾಗಳಿಂದ ಸಾಕಷ್ಟು ಆಫ‌ರ್‌ಗಳು ಬಂದಿದ್ದರೂ ಅವನ್ನು ಒಪ್ಪಿಕೊಳ್ಳಲಿಲ್ಲ. ಎರಡು ಕನಸು ಚಿತ್ರಕ್ಕೆ ಮಂಜುಳಾ ಮಾಡಿದ ಪಾತ್ರಕ್ಕೆ ಮೊದಲು ಕೇಳಿದ್ದು ಶಾರದಾ ಅವರನ್ನು. ಆದರೆ ಕಮರ್ಷಿಯಲ್‌ ಸಿನಿಮಾದಿಂದ ದೂರ ಉಳಿದಿದ್ದ ಶಾರದಾ ಅದನ್ನು ಒಪ್ಪಿಕೊಳ್ಳಲಿಲ್ಲ.

ಹೀಗೆ ಕಲಾತ್ಮಕ ಸಿನಿಮಾಗಳಲ್ಲಿಯೇ ಮುಂದುವರಿಗೆ ಶಾರದಾ ಅವರಿಗೆ, ವಂಶವೃಕ್ಷ ಪಾತ್ರಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ನಂತರ ಭೂತಯ್ಯನ ಮಗ ಅಯ್ಯುಗೆ ವಿಮರ್ಶಕರ ಮೆಚ್ಚುಗೆ ಲಭಿಸಿತು. ಇಷ್ಟಲ್ಲದೆ ಜಿ. ವಿ. ಅಯ್ಯರ್‌ ಅವರು ನಿರ್ದೇಶಿಸಿದ ಆದಿ ಶಂಕರಾಚಾರ್ಯ, ಮಧ್ವಾಚಾರ್ಯ ಸಿನಿಮಾಗಳಲ್ಲಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ನಿರ್ವಹಿಸಿದರು. ಈ ಎರಡೂ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಬಂದಿದೆ.

ಆಕರ್ಷಕ ನಿಲುವು
ಎತ್ತರದ ನಿಲುವು, ಉದ್ದ ಮುಖ, ಅಗಲವಾದ ಕಣ್ಣುಗಳು. ಕಣ್ಣುಗಳಲ್ಲೇ ಭಾವಾಭಿವ್ಯಕ್ತಿ ತೋರಿಸುವ ಅಪೂರ್ವವಾದ ಕಲಾವಿದೆ ಶಾರದಾ. ಅದು ಸ್ಪಷ್ಟವಾಗಿ ಗೋಚರವಾಗುವುದು ಫ‌ಣಿಯಮ್ಮ ಸಿನಿಮಾದಲ್ಲಿ. ಇಡೀ ಸಿನಿಮಾದಲ್ಲಿ ನಾಲ್ಕೈದು ಮಾತುಗಳಿರಬಹುದೇನೋ. ಎಲ್ಲವನ್ನೂ ತಮ್ಮ ಮುಖಭಾವದಲ್ಲೇ ಹೇಳಿಬಿಡುತ್ತ, ಇಡೀ ಜಗತ್ತನ್ನೇ ಕಣ್ಣುಗಳಲ್ಲೇ ಹಿಡಿದಿಟ್ಟಿದ್ದಾರೆ ನಿಸಿಬಿಡುದೆ.

ಅದಕ್ಕೆ ಫ‌ಣಿಯಮ್ಮ ಕತೆಯಲ್ಲಿ ಬರುವ ದಾಕ್ಷಾಯಿಣಿ ಧವೆಯಾಗಿ ಅವಳ ಮೈದುನನಿಗೇ ಬಸುರಿಯಾದಾಗ, ಇಡೀ ಸಮಾಜ ಅವಳನ್ನು ವಿರೋಧಿ ಸಿದರೂ, ಫ‌‌ಣಿಯಮ್ಮ ಮಾತ್ರ ಅವಳ ಪರವಾಗಿ ನಿಲ್ಲುತ್ತಾಳೆ. ದಾಕ್ಷಾಯಿಣಿಯ ಸಿಟ್ಟು, ಪ್ರತಿರೋಧಗಳೆಲ್ಲ ಫ‌ಣಿಯಮ್ಮನ ಕಣ್ಣುಗಳಲ್ಲಿ, ಅವಳ ಕಿರುನಗುವಿನಲ್ಲಿ ಕಾಣಿಸುತ್ತದೆ.

ಶಾರದಾ ಅವರು ಸತ್ಯಜಿತ್‌ ರೇ ಅವರ ಮೆಚ್ಚುಗೆ ಗಳಿಸಿ, ಮೃಣಾಲ್‌ ಸೇನ್‌ ಅವರಿಂದ ಬೆನ್ನು ತಟ್ಟಿಸಿಕೊಂಡಿರುವಂಥವದರು. ಶ್ಯಾಮ್‌ ಬೆನಗಲ್‌, ಗೋವಿಂದ್‌ ನಿಹಲಾನಿ ಮುಂತಾದವರು ಅವರಿಗೆ ಆದರ್ಶವಾಗಿದ್ದರು.

ಸಿನಿಮಾಗಳ ಹೊರತಾಗಿಯೂ ಅವರ ಆಸಕ್ತಿ ಕ್ಷೇತ್ರಗಳು ವಿಸ್ತಾರವಾದದ್ದು. ಅಲ್ಲಿ ಪರಿಸರ, ಸಂಗೀತ, ನೃತ್ಯ, ಸಾಕ್ಷ್ಯ ಚಿತ್ರ, ನಾಟಕ ಹೀಗೆ ಅವರ ಪ್ರತಿಭೆಗೆ ವಿವಿಧ ಮುಖಗಳು.

ಶಾರದಾ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಗಾಗಿ ಕರ್ನಾಟಕ 1 ಮತ್ತು ಕರ್ನಾಟಕ 2 ಎಂಬ ಸಾಕ್ಷ್ಯಚಿತ್ರಗಳನ್ನು ಅನಂತರ ಹಂಪಿ ಕುರಿತು ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದ‌ರು. ಅವರು ಕೆರೆಗಳ ವಿನಾಶದ ಕುರಿತೂ ಒಂದು ಸಾಕ್ಷ್ಯಚಿತ್ರ ಮಾಡಿದ್ದಿದೆ. ಇದಲ್ಲದೆ ಬಿ. ಸರೋಜಾದೇವಿ, ನಿಟ್ಟೂರು ಶ್ರೀನಿವಾಸರಾವ್‌, ಮಾಸ್ಟರ್‌ ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಅವರ ಕುರಿತು ಕೂಡ ಸಾಕ್ಷ್ಯಚಿತ್ರವನ್ನು ಕರ್ನಾಟಕ ಸರ್ಕಾರಕ್ಕೆ ನಿರ್ಮಿಸಿಕೊಟ್ಟಿದ್ದಾರೆ.

ಹೀಗೆ ಕಲೆ, ಪರಿಸರ ಇತ್ಯಾದಿಗಳತ್ತ ಒಲವು ತೋರುತ್ತಿದ್ದ ಶಾರದಾ ಅದ್ಯಾಕೋ ಮದುವೆಯಾಗಿರಲಿಲ್ಲ. ಒಬ್ಬಂಟಿಯಾಗೇ ಜೀವನ ಸಾಗಿಸಿದ ಶಾರದಾ ಅವರನ್ನು ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‌ ಕಾಡುತ್ತಿತ್ತು. ಅಂಥ ಸಮಯದಲ್ಲೂ ಹೊಸಅಲೆ ಚಿತ್ರಗಳ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ ಎನ್ನುತ್ತಿದ್ದ ಶಾರದಾ, ಇತ್ತೀಚೆಗೆ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು.

ಚಿತ್ರಗಳು : ಡಿ. ಸಿ. ನಾಗೇಶ್‌, ಇಂಟರ್ನೆಟ್‌

– ಭಾರತಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next