Advertisement

ಕಾಂಗ್ರೆಸ್‌ಗೆ ಅಧಿಕಾರ ನಿಶ್ಚಿತ: ಪ್ರಿಯಂಕಾ ಗಾಂಧಿ

10:47 PM Apr 26, 2023 | Team Udayavani |

ಚಿಕ್ಕಮಗಳೂರು: ರಾಜ್ಯದ ಬಿಜೆಪಿ ಸರಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಹೇಳಿದರು.

Advertisement

ಬುಧವಾರ ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ಜನರು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ವಾತಾವರಣ ಚೆನ್ನಾಗಿದೆ. ರಾಜ್ಯವನ್ನು ಲೂಟಿ ಮಾಡಿರುವ  ಬಿಜೆಪಿ ಸರಕಾರದ ಬಗ್ಗೆ  ಜನರಿಗೆ ಗೊತ್ತಿದೆ.  ಕಾಂಗ್ರೆಸ್‌ ಸರಕಾರ ಇದ್ದಾಗ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನೆಲ್ಲ ಪರಿಗಣಿಸಿ ಜನ ಮತ ನೀಡುತ್ತಾರೆ ಎಂದರು.

ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬ ಸುದ್ದಿಗಾರರ ಪ್ರಶ್ನೆಗೆ ನಗುಮೊಗದಿಂದ ಉತ್ತರಿಸಲು ನಿರಾಕರಿಸಿದ ಅವರು, “ಮುಂದೆ ನೋಡೋಣ’ ಎಂದರು. ಶೃಂಗೇರಿಗೆ ಭೇಟಿ ನೀಡಿದ್ದು ನನ್ನ ಜೀವನದ ಭಾವನಾತ್ಮಕ ಕ್ಷಣ. ಹಿಂದೆ ತಂದೆ ರಾಜೀವ್‌ ಗಾಂಧಿಜತೆಗೆ ಭೇಟಿ ನೀಡಿದ್ದೆ. ಈ ದೇವಸ್ಥಾನ ತುಂಬಾ ಸುಂದರವಾಗಿದೆ ಎಂದರು.

ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ದೊರೆಯದಿರುವುದು ದೌರ್ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

Advertisement

ಹಿರಿಯೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಕಾಡುಗೊಲ್ಲರ ಜತೆಗಿನ ಸಂವಾದದಲ್ಲಿ ಮಾತನಾ ಡಿದ ಅವರು, ಸಿದ್ದರಾಮಯ್ಯ ನೇತೃತ್ವದ  ಸರಕಾರ ಕಾಡುಗೊಲ್ಲರಿಗೆ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕಾಡುಗೊಲ್ಲ ಸಮುದಾಯ ಹಟ್ಟಿಗಳಲ್ಲಿ ವಾಸಿಸುತ್ತಿರುವುದು ಗಮನಕ್ಕೆ ಬಂದಿದೆ. ಮುಂದೆ ನಮ್ಮ ಸರಕಾರ ಬಂದಾಗ ಎಲ್ಲವನ್ನೂ ಕಂದಾಯ ಗ್ರಾಮವಾಗಿ ಮಾಡುತ್ತೇವೆ ಎಂದರು.

ಇಂದಿನ ರಾಜಕೀಯ ಬದಲಾಗಿದೆ. ಚುನಾವಣ ಸಂದರ್ಭಗಳಲ್ಲಿ ಭರವಸೆ ನೀಡಿ ಬಳಿಕ ಮರೆತು ಹೋಗುತ್ತಿದ್ದಾರೆ. ನಿಮ್ಮ ಹೋರಾಟದ ಜತೆಗೆ ನಾವಿದ್ದೇವೆ.  ಕಾಡುಗೊಲ್ಲರನ್ನು ಎಂಎಲ್ಸಿ, ಎಂಎಲ್‌ಎ ಮಾಡಿರುವುದು ಕಾಂಗ್ರೆಸ್‌ ಪಕ್ಷ. ನಿಮ್ಮ ಹಕ್ಕು ನಿಮಗೆ ಸಿಗಬೇಕು. ನಿಮ್ಮ ಪ್ರತಿನಿಧಿತ್ವ ವ್ಯವಸ್ಥೆಯಲ್ಲಿರಬೇಕು ಎಂದರು.

ದೋಸೆ ಹೊಯ್ದ ಪ್ರಿಯಾಂಕಾ

ಮೈಸೂರು:  ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಮೈಲಾರಿ ಹೊಟೇಲ್‌ಗೆ ತೆರಳಿ ದೋಸೆ ಸವಿದರು.

ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪ್ರಚಾರದಲ್ಲಿ ತೊಡಗಿರುವ  ಅವರು ಬುಧವಾರ ಬೆಳಗ್ಗೆ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆ ನಗರದ ಅಗ್ರಹಾರ ವೃತ್ತದ ಬಳಿ ಇರುವ ಮೈಲಾರಿ ಹೋಟೆಲ್‌ಗೆ ತೆರಳಿ, ತಾವೇ  ದೋಸೆ ತಯಾರಿಸಿ ಸವಿದರು.

ಈ ವೇಳೆ ಬೆಳಗ್ಗಿನ ಉಪಾಹಾರಕ್ಕೆ ಆಗಮಿಸಿದ್ದ ಸಾರ್ವಜನಿಕರು ಪ್ರಿಯಾಂಕಾ ಅವರನ್ನು ಕಂಡು ಸಂತಸ ವ್ಯಕ್ತಪಡಿಸಿ, ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಆದರೆ ಭದ್ರತಾ ಸಿಬಂದಿ ಫೋಟೊ ತೆಗೆಯಲು ಅವಕಾಶ ನೀಡಲಿಲ್ಲ. ಅಲ್ಲಿದ್ದ ಮಕ್ಕಳ ಜತೆಗೆ ಪ್ರಿಯಾಂಕಾ  ಕುಶಲೋಪರಿ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ನಾನಿಲ್ಲಿ ಇಡ್ಲಿ, ದೋಸೆ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲೂ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಎಐಸಿಸಿ ಮಾಧ್ಯಮ ವಕ್ತಾರೆ ಐಶ್ವರ್ಯ ಮಹದೇವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next