Advertisement

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಮುಂದೂಡಿಕೆ

11:21 PM Aug 27, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೆ ಮುಂದೂಡಿದೆ. ಆ.27ರಿಂದ ನಡೆಯಬೇಕಿದ್ದ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣಗಳಿಗಾಗಿ ಆ.29ರಿಂದ ನಡೆಸಲು ಸೂಚಿಸಿರುವ ಇಲಾಖೆ, ಇತರೆ ವರ್ಗಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಸ್ತೃತವಾದ ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದೂ ತಿಳಿಸಿದೆ. ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕಳೆದ ಮೂರೂವರೆ ವರ್ಷದಿಂದ ಒಂದಲ್ಲ ಒಂದು ಕಾರಣಕ್ಕೆ ಮುಂದೂ ಡುತ್ತಲೇ ಬಂದಿದೆ. ಚುನಾವಣಾ ನೀತಿ ಸಂಹಿತೆ, ನಿಯಮ ತಿದ್ದುಪಡಿ, ತಾಂತ್ರಿಕ ಕಾರಣ ಹೀಗೆ ಹತ್ತಾರು ಕಾರಣಗಳಿಗಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದರು. ಇದಾದ ನಾಲ್ಕೇ ದಿನಕ್ಕೆ ತಾಂತ್ರಿಕ ಕಾರಣದ ನೆಪವೊಡ್ಡಿ ಮತ್ತೆ ವರ್ಗಾವಣೆ ಪ್ರಕ್ರಿಯೆ ಯನ್ನು ಇಲಾಖೆ ಮುಂದೂಡಿದೆ.

ವರ್ಗಾವಣೆ ಪ್ರಕ್ರಿಯೆಯ ಅನುಕೂಲ ಕ್ಕಾಗಿ ನಗರ ಪ್ರದೇಶವನ್ನು ಎ ವಲಯ, ಪಟ್ಟಣ ಪ್ರದೇಶವನ್ನು ಬಿ ವಲಯ ಹಾಗೂ ಗ್ರಾಮೀಣ ಪ್ರದೇಶವನ್ನು ಸಿ ವಲಯ ಎಂದು ಗುರುತಿಸಲಾಗಿದೆ. ಎ ವಲಯದಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಬಿ ಅಥವಾ ಸಿ ವಲಯಕ್ಕೆ ಕಡ್ಡಾಯ ವರ್ಗಾವಣೆ ಮಾಡುವ ಬಗ್ಗೆ ವರ್ಗಾವಣೆ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿತ್ತು. ಇದು ನಗರ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ.

ಕಡ್ಡಾಯ ವರ್ಗಾವಣೆ ಬೇಡ ಎಂದು ಹಲವು ಶಿಕ್ಷಕರು, ಸಂಘದ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದರು. ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಡ್ಡಾಯ ವರ್ಗಾವಣೆ ಅಗತ್ಯ ಎಂದು ಇಲಾಖೆ ಹೇಳಿಕೊಂಡು ಬರುತ್ತಿದೆ. ಹೊಸ ಸರ್ಕಾರದ ರಚನೆಯಾಗಿರುವುದರಿಂದ ವರ್ಗಾವಣೆ ನಿಯಮದಲ್ಲಿ ಕೆಲವೊಂದು ಬದಲಾವಣೆ ಬರುವ ಸಾಧ್ಯತೆಯೂ ಇದೆ. ಹೀಗಾಗಿ ಶಿಕ್ಷಕರ ಲಾಬಿಗೆ ಮಣಿದ ಇಲಾಖೆ, ತಾಂತ್ರಿಕ ಕಾರಣ ನೀಡಿ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಿದೆ ಎಂದು ಗ್ರಾಮೀಣ ಭಾಗದ ಹಲವು ಶಿಕ್ಷಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next