Advertisement

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳೆಲ್ಲ ಮುಂದೂಡಿಕೆ

10:29 PM Mar 13, 2020 | mahesh |

ಕೊರೊನಾ ವೈರಸ್‌ ಹರಡುವ ಭೀತಿಯ ಕಾರಣದಿಂದ ರಾಜ್ಯ ಸರಕಾರ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ನೇಮ, ಉತ್ಸವ, ಶಿಬಿರ, ಪಂದ್ಯಾಟ ಇನ್ನಿತರ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಎಲ್ಲ ಕಡೆಗಳಂತೆ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲೂ ಸಾಮೂಹಿಕ ಕಾರ್ಯಕ್ರಮಗಳನ್ನು ಮುಂದೂಡುವ ನಿರ್ಧಾರವನ್ನು ಆಯೋಜಕರು ತೆಗೆದುಕೊಂಡಿದ್ದಾರೆ. ಕೆಲವು ಸಂಸ್ಥೆಯವರು ಶುಕ್ರವಾರವೇ ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಿಕೆ ಘೋಷಣೆ ಮಾಡಿದ್ದಾರೆ. ಇನ್ನು ಕೆಲವು ಕಾರ್ಯಕ್ರಮಗಳು ರದ್ದಾಗುವ ಕುರಿತು ಶನಿವಾರ ತಿಳಿದುಬರಲಿವೆ.

Advertisement

ಪುತ್ತೂರು ಅಂಚೆ ವಿಭಾಗದ ಆಧಾರ್‌ ಶಿಬಿರ ರದ್ದು
ಪುತ್ತೂರು: ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು, ಮುಂಜಾಗ್ರತ ಕ್ರಮವಾಗಿ ಪುತ್ತೂರು ಅಂಚೆ ವಿಭಾಗದಿಂದ ಮಾ. 16ರಿಂದ ಜಿಲ್ಲೆಯ ವಿವಿಧೆಡೆ ಆಯೋಜಿಸಲ್ಪಟ್ಟಿದ್ದ ಆಧಾರ್‌ ಶಿಬಿರಗಳನ್ನು ರದ್ದು ಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಪುತ್ತೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ತಿಳಿಸಿದೆ.

ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾಟ
ಪುತ್ತೂರು: ವಾಲಿಬಾಲ್‌ ಅಸೋಸಿ ಯೇಶನ್‌ ಹಾಗೂ ಸೆವೆನ್‌ ಡೈಮಂಡ್ಸ್‌ ಯೂತ್‌ ಕ್ಲಬ್‌ ಪುತ್ತೂರು ಜಂಟಿ ಆಶ್ರಯದಲ್ಲಿ ಮಾ. 20ರಿಂದ 22 ರ ತನಕ ಪುತ್ತೂರಿನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್‌ ಪಂದ್ಯಾಟ ವನ್ನು ಹೆಚ್ಚುತ್ತಿರುವ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಾಗಿ 1 ತಿಂಗಳು ಮುಂದೂ ಡಿಕೆ ಮಾಡಲಾಗಿದೆ. ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಂದ್ಯಾಟ ಸಮಿತಿಯ ಅಧ್ಯಕ್ಷ ಬೇಬಿ ಜಾನ್‌ ಪುರುಷರಕಟ್ಟೆ, ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಪಂದ್ಯಾಟ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸಂಘಟಿಸುತ್ತಿರುವ ಹುಮ್ಮಸ್ಸಿನಲ್ಲಿ ಕ್ರೀಡಾಂಗಣ ಸಹಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಅನಿವಾರ್ಯ ಕಾರಣದಿಂದ ಮುಂದೂಡಬೇಕಾಗಿ ಬಂದಿದೆ ಎಂದು ಹೇಳಿದರು.

ಆಟಗಾರರಿಗೆ ಕಷ್ಟ
ವಾಲಿಬಾಲ್‌ ಪಂದ್ಯಾಟದಲ್ಲಿ ವಿವಿಧ ರಾಜ್ಯಗಳ ತಂಡಗಳು ಹಾಗೂ ರಾಷ್ಟ್ರೀಯ ವಾಲಿಬಾಲ್‌ ಆಟಗಾರರು ಭಾಗವಹಿಸಬೇಕಾಗಿತ್ತು. ಆದರೆ ಕೊರೊನಾ ವೈರಸ್‌ ಹರಡುವ ಮುಂಜಾಗ್ರತಾ ಕ್ರಮವಾಗಿ ಅನ್ಯ ರಾಜ್ಯಗಳು ಆಟಗಾರರನ್ನು ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿಲ್ಲ. ಈ ಕಾರಣದಿಂದ ಪ್ರಮುಖರು ಚರ್ಚಿಸಿ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎ. 24-26: ನಿಗದಿಗೆ ನಿರ್ಧಾರ
ಪಂದ್ಯಾಟವನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಮಾ. 20ರಿಂದ ನಡೆಯಬೇಕಿದ್ದ ಪಂದ್ಯಾಟವನ್ನು ಎ. 24ರಿಂದ 26 ರ ತನಕ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ತೆಂಕಿಲ ವಿವೇಕಾನಂದದಲ್ಲಿನ ಪೂರ್ವ ನಿರ್ಧರಿತ ಅಂಕಣದಲ್ಲಿ ಹಾಗೂ ಪೂರ್ವ ನಿರ್ಧರಿತ ತಂಡಗಳ ಭಾಗ ವಹಿಸುವಿಕೆಯೊಂದಿಗೆ ಪಂದ್ಯಾಟ ನಡೆಯಲಿದೆ. ಈ ನಿಟ್ಟಿನಲ್ಲಿ ವಾಲಿಬಾಲ್‌ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಬೇಬಿ ಜಾನ್‌ ವಿನಂತಿಸಿದರು.

Advertisement

ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಜಯರಾಮ ಗೌಡ, ಪಂದ್ಯಾಟ ಸಮಿತಿಯ ಕಾರ್ಯದರ್ಶಿ ಮೋನಪ್ಪ ಎಂ., ಕೋಶಾಧಿಕಾರಿ ಪ್ರದೀಪ್‌ ಪಿ.ಆರ್‌., ವಾಲಿಬಾಲ್‌ ಅಸೋಸಿ ಯೇಶನ್‌ ಗೌರವಾಧ್ಯಕ್ಷ ಶಿವರಾಮ ಭಟ್‌ ಬೀರ್ನಕಜೆ ಉಪಸ್ಥಿತರಿದ್ದರು.

ಆರ್ಲಪದವು: ದಂತ ಶಿಬಿರ ಇಲ್ಲ
ಪಾಣಾಜೆ: ಆರ್ಲಪದವು ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ರೋಟರಿ ಸ್ವರ್ಣ ಪುತ್ತೂರು ಇದರ ಆಶ್ರಯದಲ್ಲಿ ಸುಳ್ಯ ಕೆವಿಜಿ ಡೆಂಟಲ್‌ ಕಾಲೇಜಿನ ವತಿಯಿಂದ ಮಾ. 14ರಂದು ಪಾಣಾಜೆ ಆರ್ಲಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದ ಉಚಿತ ದಂತ ಚಿಕಿತ್ಸಾ ಶಿಬಿರ ಸದ್ಯಕ್ಕೆ ರದ್ದಾಗಿ ಮುಂದೂಡಲ್ಪಟ್ಟಿದೆ.

ಕಡಬ: ಆರೋಗ್ಯ ಮೇಳ ಸದ್ಯಕ್ಕಿಲ್ಲ
ಕಡಬ: ಆರೋಗ್ಯ ಇಲಾಖೆಯ ವತಿಯಿಂದ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಮಾರ್ಚ್‌ ತಿಂಗಳಾಂತ್ಯದ ಒಳಗೆ ನಡೆಯಬೇಕಿದ್ದ ಆರೋಗ್ಯ ಮೇಳವನ್ನು ಸದ್ಯಕ್ಕೆ ಮುಂದೂಡಲಾಗಿದೆ. ದಿನಾಂಕವನ್ನು ನಿಗದಿಪಡಿಸಿದ ಬಳಿಕ ತಿಳಿಸಲಾಗುವುದು ಎಂದು ಇಲಾಖೆ ಹೇಳಿದೆ.

ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮವಾಗಿ ಆರೋಗ್ಯ ಮೇಳಗಳನ್ನು ನಡೆಸಬೇಕೆಂದು ರಾಜ್ಯ ಸರಕಾರ ಆದೇಶ ಮಾಡಿತ್ತು. ಅದರಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬದಲ್ಲಿ ಆರೋಗ್ಯಮೇಳ ನಡೆಸಲು ಇಲಾಖೆಯವರು ಈ ಮೊದಲೇ ತೀರ್ಮಾನಿಸಿದ್ದರು. ಆದರೆ ಕೊರೊನಾ ಬಾಧೆಯ ಕಾರಣದಿಂದಾಗಿ ಸಭೆ, ಸಮ್ಮೇಳನ ಸೇರಿದಂತೆ ಜನ ಸೇರಿಸಿ ಮಾಡುವ ಕಾರ್ಯಕ್ರಮಗಳನ್ನು ನಡೆಸದಿರಲು ಸರಕಾರದ ಮಟ್ಟದಲ್ಲಿ ಕಟ್ಟುನಿಟ್ಟಾಗಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಮೇಳವನ್ನೂ ಮುಂದೂಡಲಾಗಿದೆ ಎಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಪೂರ್ವಸಿದ್ಧತ ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ| ಬಿ.ವಿ. ರಾಜೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next