Advertisement

ಮಂಗಳೂರಿನ ಪಾರ್ಕಿಂಗ್‌ ಸ್ಥಳಾವಕಾಶದ ಕೊರತೆಗೆ ಪರಿಹಾರ ಸಾಧ್ಯತೆಗಳು

11:23 PM Jan 16, 2021 | Team Udayavani |

ಮಹಾನಗರ: ಮಂಗಳೂರು ನಗರದ ವಿಸ್ತೀರ್ಣವು ಭೌಗೋಳಿಕವಾಗಿ ಬಹಳ ಕಡಿಮೆಯಾಗಿರುವ ಕಾರಣ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಹೀಗಾಗಿ ಲಭ್ಯವಿರುವ ಖಾಲಿ ಜಾಗ, ರಸ್ತೆ ಬದಿ, ಬಹು ಮಹಡಿ ಪಾರ್ಕಿಂಗ್‌ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕವೇ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

Advertisement

ದೇಶದ ಇತರ ಮಹಾನಗರಗಳಲ್ಲಿ ಈಗಾಗಲೇ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನೇ ಇಲ್ಲಿಯೂ ಅಳವಡಿಸಿಕೊಳ್ಳಬಹುದು. ಕೆಲವು ಕಡೆ ಖಾಲಿ ಬಿದ್ದಿರುವ ಸರಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಅಥವಾ ಖಾಸಗಿ ಜಾಗವನ್ನು ಪಡೆದುಕೊಂಡು ಸರಕಾರಿ-ಖಾಸಗಿ ಸಹಭಾಗಿತ್ವದೊಂದಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಬಹುದು.

ಮಂಗಳೂರು ನಗರದ ಹೃದಯ ಭಾಗದಲ್ಲಿಯೇ ಸದ್ಯದ ಪರಿಸ್ಥಿತಿಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವ ಕಾಶ ಒದಗಿಸುವ ತುರ್ತು ಅಗತ್ಯವಿದೆ. ನಗರದ ಶೇ. 90ರಷ್ಟು ವಾಣಿಜ್ಯ ಚಟುವಟಿಕೆಗಳು ಹಾಗೂ ಸರಕಾರಿ ಕಚೇರಿಗಳು ಜ್ಯೋತಿ, ಹಂಪನಕಟ್ಟೆ , ಸ್ಟೇಟ್‌ಬ್ಯಾಂಕ್‌ ಪರಿಸರದಲ್ಲೇ ಕೇಂದ್ರೀಕೃತವಾಗಿದೆ. ಜತೆಗೆ, ಕೆಎಸ್‌ಆರ್‌ಟಿಸಿ, ಖಾಸಗಿ ನಿಲ್ದಾಣಗಳು, ಸೆಂಟ್ರಲ್‌ ರೈಲು ನಿಲ್ದಾಣ, ಆಸ್ಪತ್ರೆ-ಶಿಕ್ಷಣ ಸಂಸ್ಥೆಗಳು, ಕೇಂದ್ರ ಮಾರುಕಟ್ಟೆ, ಮಾಲ್‌ಗ‌ಳು, ಚಿತ್ರಮಂದಿರ, ಕ್ರೀಡಾಂಗಣ ಕೂಡ ನಗರದ ಕೇಂದ್ರ ಭಾಗದಲ್ಲೇ ಇದ್ದು, ಇಲ್ಲಿನ ಜನರ ಓಡಾಟ, ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಆಸುಪಾಸಿನಲ್ಲಿ ಸೂಕ್ತ ಪಾರ್ಕಿಂಗ್‌ ಕಲ್ಪಿಸುವ ಬಗ್ಗೆಯೂ ನಗರಾಡಳಿತವು ಗಮನಹರಿಸಬೇಕಿದೆ.

ಈ ಪ್ರದೇಶಗಳಲ್ಲಿ ಹಳೆ ಬಸ್‌ ನಿಲ್ದಾಣದ ಉದ್ದೇಶಿತ ಬಹುಅಂತಸ್ತು ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್‌ ತಾಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪುಗೊಳ್ಳಬೇಕಾಗಿದೆ.

ನಗರದ ಪ್ರಮುಖ ಸ್ಥಳಗಳಲ್ಲಿ  ಪಾಲಿಕೆ ಅಧೀನ ದಲ್ಲಿರುವ ಸರಕಾರಿ ಜಾಗಗಳಲ್ಲಿ ಒಂದಷ್ಟು ಪ್ರದೇಶವನ್ನು ಪಾರ್ಕಿಂಗ್‌ ವ್ಯವಸ್ಥೆಗೆ ಮೀಸಲಿರಿಸುವುದು ಅವಶ್ಯ. ಖಾಸಗಿ ಸಹಭಾಗಿತ್ವವನ್ನು ಪಡೆದುಕೊಂಡು ಇಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವಾಗಬಹುದು.

Advertisement

ಸಾಧ್ಯತೆಯ ಪ್ರದೇಶಗಳು :

ನಗರದಲ್ಲಿ ಕೆಲವು ವಾಣಿಜ್ಯ, ಜನದಟ್ಟ ನೆಯ ಪ್ರದೇಶಗಳನ್ನು ಪರಿಗಣಿಸಿ ಅಲ್ಲಿಗೆ ಹೊಂದಿಕೊಂಡಂತೆ ಲಭ್ಯ ಸರಕಾರಿ ಜಾಗಗಳನ್ನು ಗುರುತಿಸಿ ಬಹುಅಂತಸ್ತು, ವಾವತಿ ಪಾರ್ಕಿಂಗ್‌ ವ್ಯವಸ್ಥೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

  • ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟು ಹಳೆ ಬಸ್‌ ನಿಲ್ದಾಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ಸಂಕೀರ್ಣ ನಿರ್ಮಾಣ ಯೋಜನೆಗೆ ಚಾಲನೆ.
  • ಸ್ಟೇಟ್‌ಬ್ಯಾಂಕ್‌, ಕೇಂದ್ರ ಮಾರುಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ನೆಹರೂ ಮೈದಾನ ಬಳಿಯ ಉದ್ಯಾನದ ಪಕ್ಕದಲ್ಲಿರುವ, ಪ್ರಸ್ತುತ ಬೀದಿಬದಿ ವ್ಯಾಪಾರಕ್ಕೆಂದು ಮೀಸಲು ಇಟ್ಟಿರುವ ಜಾಗ.
  • ಲಾಲ್‌ಬಾಗ್‌, ಕೆಎಸ್‌ಆರ್‌ಟಿಸಿ ಪ್ರದೇಶಕ್ಕೆ ಸಂಬಂಧಟ್ಟಂತೆ ಕೆಎಸ್‌ಆರ್‌ಟಿಸಿ ಬಳಿ ಖಾಲಿಯಿರುವ ಸರಕಾರಿ ಜಾಗ ಇದೆ.
  • ನಗರದ ಪಿವಿಎಸ್‌, ಕರಂಗಲ್ಪಾಡಿ, ಕೊಡಿಯಾಲಬೈಲ್‌ ಪ್ರದೇಶಕ್ಕೆ ಸಂಬಂಧಪಟ್ಟ ಜೈಲ್‌ ರೋಡ್‌ನ‌ಲ್ಲಿರುವ ಸರಕಾರಿ ಜಾಗದ ಪೈಕಿ ಒಂದಷ್ಟು ಜಾಗ ಪಾರ್ಕಿಂಗ್‌ಗೆ ಬಳಸಬಹುದು (ಕೇಂದ್ರ ಕಾರಾಗೃಹ ಮುಡಿಪು ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯಿದೆ).
  • ಕದ್ರಿ ಪಾರ್ಕ್‌, ಕೆಪಿಟಿ, ಪಾದುವಾ ಪ್ರದೇಶಗಳಿಗೆ ಸಂಬಂಧಪಟ್ಟು ಕದ್ರಿ ಪಾರ್ಕ್‌ ಬಳಿ ಸ್ಕೇಟಿಂಗ್‌ ಜಾಗದ ಬಳಿಯ ಪ್ರದೇಶ.
  • ಬಂಗ್ರ ಕೂಳೂರು, ಕೊಟ್ಟಾರ ಚೌಕಿ ಪ್ರದೇಶಕ್ಕೆ ಸಂಬಂಧಪಟ್ಟು ಬಂಗ್ರ ಕುಳೂರು ಬಳಿ ಅರಣ್ಯ ನಿಗಮಕ್ಕೆ ನೀಡಲು ಉದ್ದೇಶಿಸಿರುವ ಜಾಗ.
  • ಮಲ್ಲಿಕಟ್ಟೆ , ಕದ್ರಿ, ಸಿಟಿ ಆಸ್ಪತ್ರೆ ಪ್ರದೇಶಕ್ಕೆ ಸಂಬಂಧಪಟ್ಟು ಆ ಪ್ರದೇಶದಲ್ಲಿರುವ ಇರುವ ಸರಕಾರಿ ಜಾಗದ ಪ್ರದೇಶಗಳನ್ನು ಪರಿಶೀಲಿಸಿ ಹೊಂದಿಸಿಕೊಳ್ಳುವುದು.
  • ಕಂಕನಾಡಿ, ಬೆಂದೂರುವೆಲ್‌ ಪ್ರದೇಶಕ್ಕೆ ಸಂಬಂಧಪಟ್ಟು ಪ್ರಸ್ತುತ ನಿರ್ಮಾಣವಾಗುತ್ತಿರುವ ಕಂಕನಾಡಿ ಮಾರುಕಟ್ಟೆ ಬಳಿ ಜಾಗ ಹೊಂದಿಸಿಕೊಳ್ಳುವುದು.
  • ವೆಲೆನ್ಸಿಯಾ ಪ್ರದೇಶಗಳಿಗೆ ಹೊಂದಿಕೊಂಡು, ವೆಲೆನ್ಸಿಯಾ, ನಂದಿಗುಡ್ಡೆ ಪ್ರದೇಶದಲ್ಲಿರುವ ಜಾಗವನ್ನು ಹೊಂದಿಸಿಕೊಳ್ಳುವುದು.
  • ಬಿಕರ್ನಕಟ್ಟೆ-ಕೈಕಂಬ ಪ್ರದೇಶದಲ್ಲಿ ಪ್ರಸ್ತುತ ಶನಿವಾರ ಸಂತೆ ನಡೆಯವ ಜಾಗದಲ್ಲಿ ಕೆಳಗಿನ ಪ್ರದೇಶವನ್ನು ಈಗಿನಂತೆ ಸಂತೆಗೆ ಮೀಸಲಿಟ್ಟು ಬಹುಅಂತಸ್ತು ಪಾರ್ಕಿಂಗ್‌ ವ್ಯವಸ್ಥೆಗೆ ಹೊಂದಿಸಿಕೊಳ್ಳುವುದು.
  • ಮಂಗಳಾದೇವಿ ಪ್ರದೇಶಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಮಹಾನಗರಪಾಲಿಕೆ ನಿರ್ಮಿಸಲು ಉದ್ದೇಶಿಸಿರುವ ನೂತನ ಸಂಕೀಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ಜೋಡಿಸಿಕೊಳ್ಳುವುದು
  • ಕಾರ್‌ಸ್ಟ್ರೀಟ್‌ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಸೆಂಟ್ರಲ್‌ ಮಾರುಕಟ್ಟೆ ಸಂಕೀìಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ಜೋಡಿಸಿಕೊಳ್ಳುವುದು
  • ಜ್ಯೋತಿ, ಬಂಟ್ಸ್‌ ಹಾಸ್ಟೆಲ್‌ ಪ್ರದೇಶಗಳಿಗೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
  • ಫಳ್ನೀರು ಪ್ರದೇಶಕ್ಕೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
  • ಬಂದರು ಪ್ರದೇಶದಲ್ಲಿ ಇರುವ ಸರಕಾರಿ ಜಾಗಗಳಲ್ಲಿ ಯಾವುದಾದರೂ ಒಂದು ಜಾಗವನ್ನು ಬಹುಅಂತಸ್ತು ಪಾರ್ಕಿಂಗ್‌ ನಿರ್ಮಾಣಕ್ಕೆ ಹೊಂದಿಸಿಕೊಳ್ಳುವುದು.

ಸಮಸ್ಯೆ, ಸಲಹೆಗಳು ತಿಳಿಸಿ :

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ, ಟೋಯಿಂಗ್‌ ಅವಾಂತರಗಳ ಕುರಿತಂತೆ ಉದಯವಾಣಿ ಸುದಿನ ಈಗಾಗಲೇ “ಪಾರ್ಕಿಂಗ್‌ ಪರದಾಟ’ ಅಭಿಯಾನದ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅಭಿಯಾನದ ಭಾಗವಾಗಿ ಸಾರ್ವಜನಿಕರು ಪಾರ್ಕಿಂಗ್‌ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆ, ಪ್ರಸ್ತುತ ಜಾರಿಯಲ್ಲಿರುವ ಟೋಯಿಂಗ್‌ ವ್ಯವಸ್ಥೆ, ಅದು ಸೃಷ್ಟಿಸಿರುವ ಸಮಸ್ಯೆಗಳು, ಪರಿಹಾರದ ನಿಟ್ಟಿನಲ್ಲಿ ಅಭಿಪ್ರಾಯ, ಸಲಹೆಗಳಿದ್ದಲ್ಲಿ ಉದಯವಾಣಿ ಸುದಿನ ವಾಟ್ಸ್‌ ಆ್ಯಪ್‌ಗೆ ಕಳುಹಿಸಿಕೊಡಬಹುದು. ಇದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಒಂದು ವೇದಿಕೆಯಾಗುವ ಕಾರ್ಯವನ್ನು  ಉದಯವಾಣಿ ಸುದಿನ ಮಾಡಲಿದೆ. ವಾಟ್ಸ್‌ ಆ್ಯಪ್‌  ನಂ. 9900567000

Advertisement

Udayavani is now on Telegram. Click here to join our channel and stay updated with the latest news.

Next