Advertisement

ಸಕಾರಾತ್ಮಕ ಚಿಂತನೆ, ಸತ್ಕಾರ್ಯಗಳಿಂದ ನೆಮ್ಮದಿ

11:00 AM May 20, 2019 | Team Udayavani |

ಹಾಸನ: ವ್ಯಕ್ತಿಯ ಜೀವನ ಆಶಾದಾಯಕವಾಗಿರಲು ಸಕಾರಾತ್ಮಕ ಚಿಂತನೆ ಮೂಲಕ ಸತ್ಕಾರ್ಯಗಳಲ್ಲಿ ತೊಡಗಬೇಕು ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್‌ ಹೇಳಿದರು.

Advertisement

ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 70ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ತುಟಿ ತೆರೆದು ನಗುವುದು ಹೇಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಅಧ್ಯಾತ್ಮದ ಒಲವು ಬೆಳೆಸಿಕೊಂಡರೆ ವ್ಯಕ್ತಿ ಮಾನಸಿಕ ಸ್ಥಿಮಿತ ಸಾಧಿಸುತ್ತಾನೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಕಷ್ಟಗಳನ್ನು ದೊಡ್ಡದಾಗಿ ಪರಿಗಣಿಸದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಅಧಿಕ ಹೊತ್ತು ಬಾಧಿಸದೇ ದೂರವಾಗಬೇಕೆಂದರೆ ನಗುವ ವ್ಯವಧಾನ ರೂಢಿಸಿಕೊಳ್ಳಬೇಕು ಎಂದರು.

ಬದುಕು ಸ್ವಾರಸ್ಯವಾಗಿರಬೇಕು: ಬದುಕು ಸ್ವಾರಸ್ಯ ದಿಂದ ಕೂಡಿರಬೇಕು ಎಂದರೆ ನಗುವ ಮನಸ್ಸಿರ ಬೇಕು. ಇಲ್ಲದಿದ್ದರ ಬಗೆಗೆ ಸದಾ ಕೊರಗುವುದನ್ನು ಬಿಟ್ಟು ಇರುವುದನ್ನು ಅನುಭವಿಸಿ ಖುಷಿಪಡುವ ಸ್ವಭಾವ ಬೆಳೆಸಿಕೊಳ್ಳಬೇಕು. ನಮ್ಮ ಹಿರಿಯರು ಅದನ್ನೇ ಪಾಲಿಸಿಕೊಂಡು ಬಂದಿದ್ದರಿಂದ ಧೀರ್ಘಾಯುಷಿ ಗಳಾಗಿ, ಆರೋಗ್ಯಯುತವಾಗಿ ಬದುಕು ಸವೆಸಿದ್ದಾರೆ ಎಂಬುದನ್ನು ಎಲ್ಲರೂ ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಹಿರಿಯರನ್ನು ಕಡೆಗಣಿಸದಿರಿ: ತನ್ನ ಮಕ್ಕಳ ಬಗೆಗೆ ಇತರರು ಒಳ್ಳೆಯ ಮಾತುಗಳನ್ನು ಆಡಿದರೆ ಖುಷಿ ಪಡುವ ತಂದೆ-ತಾಯಿ ಯಾವುದೇ ಸ್ವಾರ್ಥವಿಲ್ಲದೇ ಮಕ್ಕಳನ್ನು ಪೋಷಿಸುತ್ತಾರೆ. ಆದರೆ ಕೆಲ ಮಕ್ಕಳು ವಯಸ್ಸಾದ ಕೂಡಲೇ ಅವರನ್ನು ವೃದ್ಧಾಶ್ರಮಗಳಿಗೆ ಅಟ್ಟುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಸ್ಯ ಪ್ರಸಂಗಗಳ ಉದಾಹರಣೆ ಮೂಲಕ ಬದುಕಿನ ಅರ್ಥ ಸಾರಿ ಸಭಿಕರ‌ ಮನಸೆಳೆದರು.

ಮಕ್ಕಳಿಗೆ ಸಂಸ್ಕಾರ ನೀಡಿ: ಆಶೀವರ್ಚನ ನೀಡಿದ ಆದಿಚುಂಚನಗಿರಿ ಹಾಸನ ಮಠದ ಶಂಭುನಾಥ ಸ್ವಾಮೀಜಿ, ತಂದೆ – ತಾಯಿ ಹಾಗೂ ಮಕ್ಕಳು ಸಂಸ್ಕಾರ ವಂತರಾಗಿದ್ದರೆ ಆ ಮನೆ ನಂದಗೋಕುಲವಾಗಿರುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕುಟುಂಬವು ಸನ್ನಡತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಂಡಿರಬೇಕು ಎಂದರು.

Advertisement

ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ಈ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಮನಷ್ಯನ ಸ್ವಾರ್ಥ,ಲಾಲಸೆಗಳು ಆತನನ್ನು ಕೌಟುಂಬಿಕ ಸಂಕೋಲೆಯಿಂದ ಹೊರತಂದು ಮಾನ ವೀಯ ಮೌಲ್ಯಗಳು ಮರೆ ಯಾಗುವಂತೆ ಮಾಡಿವೆ.

ದ್ವೇಷ, ಅಸೂಯೆ, ಮತ್ಸರ ಮನುಕುಲವನ್ನು ವಿನಾಶದಂಚಿಗೆ ಕರೆದೊಯ್ಯುತ್ತಿದ್ದು, ಇದೆಲ್ಲದರಿಂದ ಮನುಷ್ಯ ದೂರ ಉಳಿದು ಉತ್ತಮ ಬದುಕು ನಡೆಸಬೇಕಿದೆ ಎಂದರು.

ಕಬ್ಬಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ವಿಶ್ವದ್ಯಾನಿಲಯದ ರಿಜಿಸ್ಟಾರ್‌ ಸುಬ್ಬರಾಯ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್ ಮುದ್ದೇಗೌಡ, ಅರಸೀಕೆರೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತಕುಮಾರ್‌, ಶ್ರೀ ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಾಲಭೈರವೇಶ್ವರ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು. ಆದಿಚುಂಚನಗಿರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಾರ್ಥನೆ ಮಾಡಿದರು. ಅರಕಲಗೂಡಿನ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್‌ ಸ್ವಾಗತಿಸಿದರು. ಹಾಸನ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌ ವಂದಿಸಿದರು. ಸಂಸ್ಕೃತ ಉಪನ್ಯಾಸಕ ಎಚ್.ಕೆ ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next