Advertisement

ದೇಹ ದೌರ್ಬಲ್ಯವನ್ನು ಮನೋಬಲದಿಂದ ಮೆಟ್ಟಿನಿಂತ ಸ್ವಾವಲಂಬಿ ಜಯ ಪೂಜಾರಿ

08:39 PM Nov 18, 2018 | Karthik A |

ಇವರ ಹೆಸರು ಜಯ ಪೂಜಾರಿ, ಉಡುಪಿಯ ಕಲ್ಮಾಡಿಯವರು. ತೆಂಗಿನ ಮರವೇರಿ ಕಾಯಿ ಕೀಳುವ ಉದ್ಯೋಗ ಇವರದಾಗಿತ್ತು. ಅದೊಂದು ದಿನ ತಮ್ಮೂರಿನ ದೊಡ್ಡ ತೋಟವೊಂದರಲ್ಲಿ ಎತ್ತರದ ಮರದಿಂದ ಕಾಯಿಗಳೊಂದಿಗೆ ಜಯಣ್ಣನೂ ಉರುಳಿದರು. ಬೆನ್ನು ಮೂಳೆ ಮುರಿಯಿತು. ಕಾಲುಗಳೆರಡೂ ಸ್ವಾಧೀನ ಕಳೆದುಕೊಂಡವು. ಅಲ್ಲಿಗೆ ಜಯಣ್ಣನ ಬದುಕು ಹಾಸಿಗೆ ವಾಸಕ್ಕೆ ಸೀಮಿತವಾಯ್ತು. ಎಂಟು ಜನರಿರುವ ಮನೆಯ ಹಿರಿಯ ಮಗ ಎಂಟು ವರ್ಷ ಹಾಸಿಗೆಯಲ್ಲಿ ಮಲಗಿದಲ್ಲೇ ಇದ್ದರು. ಚಿಕಿತ್ಸೆಗೆಂದು ಅಲ್ಲಿ ಇಲ್ಲಿ ಅಲೆದಾಡಿ ಒಂದಷ್ಟು ಹಣ ಖರ್ಚು ಮಾಡಿದ್ದೇ ಬಂತು. ಜಯಣ್ಣನವರ ದೇಹದ ಅಶಕ್ತತೆ ಕಡಿಮೆಯಾಗಲೇ ಇಲ್ಲ. ಕಾಲುಗಳಿಗೆ ಸ್ವಾಧೀನ ಬರದೆ ಶ್ರಮದ ಕೆಲಸ ಮಾಡುವಂತೆಯೂ ಇರಲಿಲ್ಲ, ಅದೂ ಸಾಲದೆಂಬಂತೆ ಬಿದ್ದ ಸಂದರ್ಭದಲ್ಲಿ ಬೆನ್ನಿನ ಭಾಗಕ್ಕೆ ಬಿದ್ದ ಏಟಿನಿಂದ ಶುರುವಾದ ಬೆನ್ನು ನೋವು ಇವತ್ತಿನವರೆಗೂ ಇವರನ್ನು ಕಾಡುತ್ತಿದೆ.

Advertisement

ಆದರೆ ಸ್ವಾಭಿಮಾನಿಯಾಗಿದ್ದ ಜಯಣ್ಣನವರನ್ನು ಸ್ವಾವಲಂಬನೆ ಎಚ್ಚರಿಸಿದೆ. ಅಸಹಾಯಕತೆಯ ನಡುವೆಯೂ ಜೀವನ ಪ್ರೀತಿ ಅವರನ್ನು ತನ್ನ ಸ್ವಂತ ದುಡಿಮೆಯಿಂದ ಬದುಕಲು ಪ್ರೇರೇಪಿಸಿದೆ. ತನ್ನಲ್ಲಿದ್ದ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸಿ ದೈಹಿಕ ದೌರ್ಬಲ್ಯವನ್ನು ಮೆಟ್ಟಿನಿಂತು ಸೋಲಾರ್ ವಿದ್ಯುತ್ ಚಾಲಿತ ಸಣ್ಣ ಬಂಡಿಯನ್ನು ಬಳಸಿ ಮಲ್ಪೆಗೆ ಹೋಗುವ ಕಲ್ಮಾಡಿ ಸೇತುವೆಯ ಬಳಿ, ಬೊಬ್ಬರ್ಯ ಗುಡ್ಡಕ್ಕೆ ಹೋಗುವ ದ್ವಾರದ ಮುಂದೆ ಸಿಯಾಳ ವ್ಯಾಪಾರಕ್ಕೆ ಇಳಿದೇಬಿಟ್ಟರು. ಕಳೆದ ಎಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾದ ಈ ಸ್ವಾವಲಂಬಿ ಬದುಕಿಗೆ ಇದೀಗ ಏಳು ತಿಂಗಳ ಸಂಭ್ರಮ. ಸೆಲ್ಕೋ ಸಂಸ್ಥೆಯವರು ತಮಗೆ ಕೊಡಿಸಿರುವ ಸೋಲಾರ್ ಅಳವಡಿತ ವಾಹನದಲ್ಲಿ ಸಿಯಾಳಗಳನ್ನು ತುಂಬಿಕೊಂಡು ಪ್ರತೀದಿನ ಸಂಜೆ ನಾಲ್ಕು ಗಂಟೆಗೆ ಇವರು ಈ ಸೇತುವೆಯ ಬಳಿ ವ್ಯಾಪಾರಕ್ಕೆ ತೊಡಗುತ್ತಾರೆ, ರಾತ್ರಿ ಎಂಟುಗಂಟೆಯವರೆಗೆ ಇವರ ವ್ಯಾಪಾರ ಸಾಗುತ್ತದೆ.

ವ್ಯಾಪಾರ ಒಂದೇ ರೀತಿ ಅಂತ ಇರೋದಿಲ್ಲ. ಇನ್ನೂರರಿಂದ ಐನೂರರವರೆಗೆ ಸಂಪಾದನೆ ಆದ ದಿನಗಳೂ ಇವೆ. ಎಷ್ಟೇ ಆಗಲಿ, ಹಾಸಿಗೆಯಲ್ಲೇ ಇದ್ದ ಎಂಟು ವರ್ಷದ ಸೋಲನ್ನು ಗೆದ್ದುಕೊಳ್ಳಬೇಕೆಂಬ ಹಠ ನನ್ನದು ಎನ್ನುತ್ತಾ ತಾನಿವತ್ತು ಸ್ವಾವಲಂಬನೆಯ ಬದುಕನ್ನು ಕಂಡುಕೊಳ್ಳಲು ನೆರವಾದ ಸಂಸ್ಥೆ, ವ್ಯಕ್ತಿಗಳನ್ನು ನೆನೆಯುತ್ತಾರೆ ಜಯಣ್ಣ. ಸಂಜೆ ಮನೆಯಲ್ಲಿ ಚಹಾ ಕುಡಿದು ತನಗೆ ನೀಡಲಾಗಿರುವ ಸೋಲಾರ್ ವಾಹನದಲ್ಲಿ ಬೊಂಡ ಮಾರಾಟಕ್ಕೆ ಹೊರಡುವ ಜಯಣ್ಣ ನಿರಂತರ ನಾಲ್ಕೈದು ಗಂಟೆಗಳವರೆಗೆ ಈ ವಾಹನದಲ್ಲಿ ಕುಳಿತೇ ವ್ಯಾಪಾರ ನಡೆಸುತ್ತಾರೆ. ಮನೆಯಿಂದ ಹೊರಡುವಾಗ 15-20 ಸಿಯಾಳಗಳನ್ನು ಗಾಡಿಯಲ್ಲಿ ತುಂಬಿಕೊಂಡು ಬರುತ್ತಾರೆ. ಬಳಿಕ ಅಷ್ಟು ಸಿಯಾಳ ಮಾರಾಟವಾದ ಬಳಿಕ ಅವರ ಮನೆಯ ಸದಸ್ಯರಲಲ್ಲಿ ಯಾರಾದರೊಬ್ಬರು ಮತ್ತೆ ಒಂದಷ್ಟು ಸಿಯಾಳಗಳನ್ನು ತಂದು ಗಾಡಿಯಲ್ಲಿ ತುಂಬುತ್ತಾರೆ. ನಿರಂತರವಾಗಿ ಗಂಟೆಗಟ್ಟಲೇ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆಯಾದರೂ, ದುಡಿದು ತಿನ್ನಬೇಕೆಂಬ ಛಲದ ಮುಂದೆ ಆ ನೋವೆಲ್ಲವೂ ಮಾಯವಾಗುತ್ತದೆ ಎನ್ನತ್ತಾರೆ ಜಯಣ್ಣ.


ಹಾಸಿಗೆ ಹಿಡಿದಿದ್ದ ಜಯಣ್ಣನಿಗೆ ಸ್ನೇಹಿತರೊಬ್ಬರು ಕನ್ಯಾಡಿಯಲ್ಲಿರುವ ಸೇವಾಭಾರತಿಯ ಮಾಹಿತಿ ನೀಡಿದರಂತೆ. ಆ ಸಂಸ್ಥೆ ನಡೆಸುತ್ತಿದ್ದ ಶಿಬಿರಕ್ಕೆ ಇವರು ಸೇರಿದರು. ಒಟ್ಟು 40 ಮಂದಿಯಲ್ಲಿ ಐದು ಜನರನ್ನು ಆಯ್ಕೆ ಮಾಡಿ ಬೆಂಗಳೂರಿನ APD ಸಂಸ್ಥೆಯ ಶಿಬಿರಕ್ಕೆ ಕಳಿಸಿಕೊಡಲಾಯಿತಂತೆ. ಅಲ್ಲಿ ಚಿಕಿತ್ಸೆ ಹಾಗೂ ಆತ್ಮವಿಶ್ವಾಸ ತುಂಬಿ ಇವರು ಮಾಡಬಹುದಾದ ಉದ್ಯೋಗವನ್ನು ಮನಗಾಣಿಸಿ, ಅದಕ್ಕೆ ಬೇಕಾದ ವಾಹನವನ್ನೂ ಉಚಿತವಾಗಿ ತಯಾರಿಸಿಕೊಟ್ಟರಂತೆ. ಇವರಿಗೆ ಅನುಕೂಲವಾಗುವ ವಾಹನವೇನೋ ಸಿದ್ಧವಾಗಿತ್ತು. ಆದರೆ ಅದನ್ನು ಊರಿಗೆ ತರಿಸುವ ಅನುಕೂಲ ಅವರಿಗಿದ್ದಿಲ್ಲ. ಆಗ ನೆರವಿಗೆ ಬಂದಿದ್ದು ಸೆಲ್ಕೋ ಸಂಸ್ಥೆ. ರೂ. 10,000 ಖರ್ಚು ಮಾಡಿ ವಾಹನ ತರಿಸಿ, ರಾತ್ರಿ ವ್ಯಾಪಾರಕ್ಕೂ ಅನುಕೂಲವಾಗುವಂತೆ ಸೋಲಾರ್ ಬಲ್ಬುಗಳನ್ನು ಅಳವಡಿಸಿಕೊಟ್ಟರಂತೆ. ಸೆಲ್ಕೋ ಸಂಸ್ಥೆಯ ಗುರುಪ್ರಸಾದ್ ಶೆಟ್ಟಿ, ಸೇವಾ ಭಾರತಿಯ ವಿನಾಯಕ ರಾವ್ ಹಾಗೂ APD ಸಂಸ್ಥೆಯ ರೂಬಿನ್ ಡೆನ್ನಿಸ್ ಅವರ ಸಲಹೆ-ಸಹಕಾರವನ್ನು ಇವರು ವಿಶೇಷವಾಗಿ ಸ್ಮರಿಸಿಕೊಳ್ಳುತ್ತಾರೆ.

ತಮ್ಮ ಈ ಸಾಹಸಕ್ಕೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಗೆಳೆಯರಾದ ಅಶೋಕ್ ಮರತೋಟ, ಧನಂಜಯ ಕಿದಿಯೂರು, ಗಣೇಶ್ ಅಮೀನ್ ಬಾಪುತೋಟ ಮುಂತಾದವರ ಸಹಕಾರವನ್ನು ಎಂದೂ ಮರೆಯಲಾಗದು ಎನ್ನುತ್ತಾರೆ ಜಯ ಪೂಜಾರಿ ಅವರು. ತಾವು ಬೊಂಡ ಮಾರಿ ಗಳಿಸುವ ಆದಾಯ ತನ್ನ ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ಸಹಕಾರಿಯಾಗುತ್ತಿದೆ, ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ವಾರಕ್ಕೊಮ್ಮೆ ಭೇಟಿಕೊಟ್ಟು ಫಿಸಿಯೋಥೆರಪಿಗೊಳಗಾಗುತ್ತಿದ್ದಾರೆ. ಮುಂದಕ್ಕೆ ಬೆನ್ನು ಮತ್ತು ಕಾಲುಗಳಿಗೆ ಸ್ವಾಧೀನ ಬರಬಹುದೆಂಬ ಆಶಾವಾದವನ್ನು ವೈದ್ಯರು ವ್ಯಕ್ತಪಡಿಸಿದ್ದಾರಂತೆ. ಜಯಣ್ಣನವರೂ ಸಹ ಇದೇ ಭರವಸೆಯಲ್ಲಿದ್ದಾರೆ. ಅಲ್ಲಿಯವರೆಗೆ ಗ್ರಾಹಕರಿಗೆ ಸಿಯಾಳ ಕುಡಿಸಿ ಅವರ ದಾಹ ತಣಿಸುವ ಕಾಯಕ ನಡೆಯುತ್ತಿರುತ್ತದೆ.

Advertisement


ನಿಜಕ್ಕೂ ಜಯಣ್ಣನಂತಹ ವ್ಯಕ್ತಿಗಳು ಪ್ರತಿಯೊಬ್ಬರಿಗೂ ಪ್ರೇರಣೆ. ತಮ್ಮ ದೇಹಕ್ಕಾದ ಘಾಸಿಯನ್ನು ಮನೋಬಲದಿಂದ ಮೆಟ್ಟಿನಿಂತು ಸ್ವಾವಲಂಬನೆಯ ದಾರಿಯನ್ನು ಆರಿಸಿಕೊಂಡು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ಸಾಹಸ ಪ್ರಶಂಸನೀಯ. ನೀವೂ ಮಲ್ಪೆಗೆ ಹೋದಾಗ ಕಲ್ಮಾಡಿ ಸೇತುವೆ ಸಮೀಪದ ಇವರ ಗಾಡಿಯಂಗಡಿಯಿಂದ ಒಂದು ಸಿಯಾಳ ಕೊಂಡು ಕುಡಿದರೆ ಅದು ಜಯಣ್ಣನ ಸ್ವಾವಲಂಬನೆಯ ಬದುಕಿಗೆ ನಾವೆಲ್ಲ ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರ ಸ್ವಾವಲಂಬಿ ಬಂಡಿಯಿಂದ ನಾವು-ನೀವು ಸಿಯಾಳ ಖರೀದಿಸಿ ಕುಡಿದರೆ ಆ ನೀರಿನಲ್ಲಿ ನಮಗೆ ಸಿಗಬಹುದಾದ ರುಚಿ ಅದೆಷ್ಟು ಸ್ವಾದಭರಿತವಾಗಿರಬಲ್ಲುದು…?

ಚಿತ್ರ ಮತ್ತು ಮಾಹಿತಿ : ಮಂಜುನಾಥ್ ಕಾಮತ್

Advertisement

Udayavani is now on Telegram. Click here to join our channel and stay updated with the latest news.

Next