Advertisement

ಸೇನೆಗೆ ಕಳಪೆ ಶಸ್ತ್ರಾಸ್ತ್ರ ಪೂರೈಕೆ: ರಾಜಿ ಬೇಡ

11:37 PM May 15, 2019 | Team Udayavani |

ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಮಂಡಳಿಯ ಅಧೀನದಲ್ಲಿರುವ ತಯಾರಿಕಾ ಕಾರ್ಖಾನೆಗಳು ಭಾರತೀಯ ಸೇನೆಗೆ ಕಳಪೆ ಸ್ಫೋಟಕ ಸಾಮಗ್ರಿಗಳನ್ನು ಪೂರೈಸುತ್ತಿದೆ ಎಂದು ರಕ್ಷಣಾ ಉತ್ಪಾದನ ಇಲಾಖೆಯ ಕಾರ್ಯದರ್ಶಿ ಅಜಯ್‌ ಕುಮಾರ್‌ ಸಿಂಗ್‌ ಪತ್ರ ಮುಖೇನ ರಕ್ಷಣಾ ಇಲಾಖೆಯ ಗಮನಕ್ಕೆ ತಂದಿದ್ದಾರೆ.

Advertisement

ಶಸ್ತ್ರಾಸ್ತ್ರ ತಯಾರಿಕ ಮಂಡಳಿಯ ಅಧೀನದಲ್ಲಿರುವ 41 ಕಾರ್ಖಾನೆಗಳಲ್ಲಿ ಈ ಕಳಪೆ ಗುಣಮಟ್ಟದ ಸ್ಫೋಟಕಗಳನ್ನು ತಯಾರಿಸಲಾಗುತ್ತಿದ್ದು ಈ ಸ್ಫೋಟಕಗಳ ಬಳಕೆಯಿಂದಾಗಿ ಸೇನೆಯ ಯುದ್ಧ ಟ್ಯಾಂಕ್‌, ಫಿರಂಗಿ, ವಾಯು ದಾಳಿ ನಿಗ್ರಹ ಗನ್‌ಗಳ ಬಳಕೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಸೈನಿಕರು ಗಾಯಗೊಳ್ಳುತ್ತಿದ್ದಾರಲ್ಲದೆ ಸೇನೆಯ ಯುದ್ಧ ಸಲಕರಣೆಗಳಿಗೂ ಹಾನಿಯಾಗುತ್ತಿದೆ. ಕಳಪೆ ಸ್ಫೋಟಕಗಳಿಂದಾಗಿ ಸಂಭವಿಸಿರುವ ಅಪಘಾತಗಳು, ಯೋಧರಿಗಾಗಿರುವ ಗಾಯಗಳು, ಸೇನೆಯ ಯುದ್ಧ ಸಲಕರಣೆಗಳಿಗಾಗಿರುವ ಹಾನಿಯ ಕುರಿತಾಗಿನ ಸಮಗ್ರ ವಿವರಗಳನ್ನೂ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಆದರೆ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ಮಾತ್ರ ಈ ಆರೋಪವನ್ನು ಅಲ್ಲಗಳೆದಿದ್ದು ಗುಣಮಟ್ಟ ನಿಯಂತ್ರಣ ಇಲಾಖೆ ಮತ್ತು ಗುಣಮಟ್ಟ ಖಾತ್ರಿ ನಿರ್ದೇಶನಾಲಯದ ಪರಿಶೀಲನೆಯ ಬಳಿಕವೇ ಸ್ಫೋಟಕಗಳನ್ನು ಸೇನೆಗೆ ಪೂರೈಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಸರಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ತಯಾರಿಕಾ ಮಂಡಳಿಯೇ ಉತ್ಪಾದಿಸುತ್ತಿರುವ ಸ್ಫೋಟಕಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ವಿಚಾರವನ್ನು ರಕ್ಷಣಾ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಹೆಚ್ಚಿನ ಗಮನ ಹರಿಸಲು ಮುಂದಾಗಿದೆ. ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಉತ್ಪಾದನೆಯ ವೇಳೆ ಅವುಗಳ ಗುಣಮಟ್ಟದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲು ನಿರ್ಧರಿಸಿದೆ.

ಅಜಯ್‌ ಕುಮಾರ್‌ ಸಿಂಗ್‌ ಅವರ ಈ ಪತ್ರ ಭಾರತೀಯ ಸೇನೆ ಮಾತ್ರವಲ್ಲದೆ ಇಡೀ ದೇಶದ ರಕ್ಷಣಾ ವ್ಯವಸ್ಥೆಯ ಬಗೆಗೆ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಹಾಲಿ ಕೇಂದ್ರ ಸರಕಾರ ಮದ್ದುಗುಂಡು ಸಹಿತ ರಕ್ಷಣಾ ಸಾಮಾಗ್ರಿಗಳು ಮತ್ತು ಸಲಕರಣೆಗಳನ್ನು ದೇಶದಲ್ಲಿಯೇ ಉತ್ಪಾದಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಬೆನ್ನಲ್ಲೇ ಈ ಸ್ಫೋಟಕ ವಿಚಾರ ಬಯಲಾಗಿದೆ.

Advertisement

ಈ ವರ್ಷದ ಫೆಬ್ರವರಿಯಲ್ಲಷ್ಟೇ ಸೇನಾ ತರಬೇತಿ ವೇಳೆ ಸಂಭವಿಸಿದ ಅಪಘಾತದ ವೇಳೆ ಓರ್ವ ಸೇನಾಧಿಕಾರಿ ಮತ್ತು ನಾಲ್ವರು ಯೋಧರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಸೇನೆ 40ಎಂಎಂ ಸ್ಫೋಟಕಗಳನ್ನು ಸ್ಫೋಟಿಸುವ ತರಬೇತಿಯನ್ನೇ ಸ್ಥಗಿತಗೊಳಿಸಿತ್ತು. ಇಂಥ ಘಟನೆಗಳು ಸೇನಾ ಸಿದ್ಧತಾ ಕಾರ್ಯಾಚರಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸೇನಾ ಸಿದ್ಧತೆಯ ಮೇಲಷ್ಟೇ ಅಲ್ಲದೆ ಇಡೀ ಸೇನೆಯ ಕಾರ್ಯಾಚರಣೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸ್ಫೋಟಕಗಳ ಕಳಪೆ ಗುಣಮಟ್ಟದಿಂದಾಗಿ ನಮ್ಮ ಸೈನಿಕರ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆಗಳು ಅಧಿಕ ಮಾತ್ರವಲ್ಲದೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುವ ರಕ್ಷಣಾ ಸಾಧನ, ಸಲಕರಣೆಗಳು ಹಾನಿಗೀಡಾಗುವುದರಿಂದ ನಮ್ಮ ವಿರೋಧಿಗಳಿಂದ ನಗೆಪಾಟಲೀಗೀಡಾಗಬೇಕಾಗುತ್ತದೆ.

ಶತ್ರುಪಡೆಗಳ ದಾಳಿ ಅಥವಾ ತಾಂತ್ರಿಕ ಕಾರಣಗಳಿಂದ ಇಂಥ ದುರಂತಗಳು ಸಂಭವಿಸಿದರೆ ಇವುಗಳನ್ನು ಮಾನ್ಯ ಮಾಡಬಹುದಾದರೂ ನಮ್ಮ ಸ್ವಯಂಕೃತ ಅಪರಾಧಗಳಿಂದ ಇಂಥ ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಕ್ಷಮೆ ಇಲ್ಲ. ದೇಶದ ರಕ್ಷಣಾ ವ್ಯವಸ್ಥೆಯ ಆಧುನೀಕರಣ ಕೇವಲ ಬೃಹತ್‌ ಯುದ್ಧ ಸಲಕರಣೆ, ಶಸ್ತ್ರಾಸ್ತ್ರ, ಅತ್ಯಾಧುನಿಕ ಗುಣಮಟ್ಟದ ಯುದ್ಧ ಸಾಮಾಗ್ರಿಗಳ ಖರೀದಿಯಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಸರಕಾರ ಮೊದಲು ಅರ್ಥೈಸಿಕೊಳ್ಳಬೇಕು. ಈ ಅತ್ಯಾಧುನಿಕ ಸಲಕರಣೆಗಳಲ್ಲಿ ಬಳಸಲಾಗುವ ಸ್ಫೋಟಕ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಅತ್ಯಾಧುನಿಕ ಸಲಕರಣೆಗಳೂ ನಿಷ್ಪ್ರಯೋಜಕವಾಗುತ್ತವೆ. ರಕ್ಷಣೆ ವಿಚಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸ್ಫೋಟಕ ಸಾಮಾಗ್ರಿಗಳ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂಬುದು ತೀರಾ ಕಳವಳಕಾರಿ ವಿಷಯವಾಗಿದೆ. ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡದೇ ಇಂತಹ ವಾಸ್ತವಾಂಶಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕಿದೆ. ರಕ್ಷಣಾ ಸಾಮಗ್ರಿಗಳ ಆಮದಿಗೆ ಕಡಿವಾಣ ಹಾಕಲು ಸರಕಾರ ಪಣತೊಟ್ಟಿದೆಯಾದರೂ ಶಸ್ತ್ರಾಸ್ತ್ರ ಮತ್ತು ಯುದ್ಧ ಸಲಕರಣೆಗಳ ಉತ್ಪಾದನೆ ವೇಳೆ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಆಸ್ಥೆ ವಹಿಸಬೇಕಿದೆ. ಈ ದಿಸೆಯಲ್ಲಿ ರಕ್ಷಣಾ ಇಲಾಖೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದ್ದು ನಮ್ಮ ಸೇನೆಗೆ ಅಗತ್ಯವಿರುವ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಿಕೊಡುವುದು ಇಲಾಖೆಯ ಆದ್ಯ ಕರ್ತವ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ವಿಷಯವನ್ನು ತೀರಾ ಲಘುವಾಗಿ ಪರಿಗಣಿಸಬಾರದು. ಈ ವಿಚಾರದಲ್ಲಿ “ಮಾತಿಗಿಂತ ಕೃತಿ ಮೇಲು’ ಎಂಬುದನ್ನು ಸರಕಾರ ಮೊದಲು ಮನಗಾಣಬೇಕು.

Advertisement

Udayavani is now on Telegram. Click here to join our channel and stay updated with the latest news.

Next