Advertisement

ಒಡಿಶಾಗೆ ಫೋನಿ ಹೊಡೆತ

09:44 AM May 06, 2019 | mahesh |

ಹೊಸದಿಲ್ಲಿ: ನಿರೀಕ್ಷೆಯಂತೆಯೇ ಬಂಗಾಲ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದ “ಫೋನಿ’ ಚಂಡ ಮಾರುತ ಶುಕ್ರವಾರ ಬೆಳಗ್ಗೆ ಪುರಿ ಕರಾವಳಿ ಮೂಲಕ ಒಡಿಶಾ ಪ್ರವೇಶಿಸಿದ್ದು, ರಾಜ್ಯಾದ್ಯಂತ ಭಾರೀ ಹಾನಿ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ 11 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. ರಾಜ್ಯದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹೇಳಿದೆ. ಅಲ್ಲದೆ ವಿವಿಧ ಕಡೆಗಳಲ್ಲಿ 160 ಮಂದಿ ಗಾಯಗೊಂಡಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ ಪುರಿ ಕರಾವಳಿಗೆ ಫೋನಿ ಚಂಡಮಾರುತ ಅಪ್ಪಳಿಸಿತು. ಸಮುದ್ರದಲ್ಲಿ ಭಾರೀ ತೀವ್ರತೆಯಿಂದ ಕೂಡಿದ್ದ ಚಂಡಮಾರುತದ ವೇಗ ಅಲ್ಪ ಕಡಿಮೆಯಾದರೂ ಪುರಿ ಪ್ರವೇಶಿಸುವಾಗ ಗಂಟೆಗೆ ಸುಮಾರು 200 ಕಿ.ಮೀ. ವೇಗದಲ್ಲಿತ್ತು. ಒಟ್ಟು ಒಡಿಶಾದ 14 ಜಿಲ್ಲೆಗಳಲ್ಲಿ ಫೋನಿಯಿಂದ ಹಾನಿ ಯಾಗಿದೆ. ಸಾವಿರಾರು ಬೃಹತ್‌ ಗಾತ್ರದ ಮರಗಳು ನೆಲ ಕ್ಕುರುಳಿವೆ. ಅಲ್ಲಲ್ಲಿ ವಿದ್ಯುತ್‌ ಕಂಬಗಳು, ಮೊಬೈಲ್‌ ಟವರ್‌ಗಳು ನೆಲಕ್ಕೆ ಉರುಳಿದ್ದರೆ, ಹಲವಾರು ಮನೆಗಳು ಕುಸಿದಿವೆ.

ಗಾಳಿಯ ರಭಸಕ್ಕೆ ಭುವನೇಶ್ವರದ ಏಮ್ಸ್‌ನ ಮೇಲ್ಛಾವಣಿಯೇ ಹಾರಿಹೋಗಿದೆ. ಆದರೆ ಆಸ್ಪತ್ರೆಯೊಳಗಿನ ಯಾವುದೇ ರೋಗಿಗಳಿಗೆ ಹಾನಿಯಾಗಿಲ್ಲ ಎಂದು ಒಡಿಶಾ ಸರಕಾರ ಸ್ಪಷ್ಟಪಡಿಸಿದೆ. ಇಡೀ ರಾಜ್ಯಾದ್ಯಂತ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಎನ್‌ಡಿಆರ್‌ಎಫ್ ಹೇಳಿದೆ. 160 ಮಂದಿ ಗಾಯಗೊಂಡಿದ್ದಾರೆ ಎಂದೂ ತಿಳಿಸಿದೆ.

ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಕಟಕ್‌, ಖೋರ್ಡಾ, ಭುವನೇಶ್ವರ ಮತ್ತು ಪುರಿ ಜಿಲ್ಲೆಗಳಲ್ಲಿ ಫೋನಿಯ ತೀವ್ರತೆ ಹೆಚ್ಚಾಗಿದೆ. ಪರಿಹಾರ ಕಾರ್ಯಾಚರಣೆಗೆ ರೈಲ್ವೇ ಇಲಾಖೆ, ಭಾರತೀಯ ವಾಯು ಸೇನೆ, ನೌಕಾಪಡೆಗಳೂ ಕೈಜೋಡಿಸಿವೆ. ಶನಿವಾರ ಬೆಳಗ್ಗೆ ವೇಳೆಗೆ ಫೋನಿ ಚಂಡಮಾರುತ ಪಶ್ಚಿಮ ಬಂಗಾಲ ಪ್ರವೇಶಿಸಲಿದೆ. ಇದರಿಂದಾಗಿ ಪಶ್ಚಿಮ ಬಂಗಾಲದ ಸುತ್ತಲಿನ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ.

11.54 ಲಕ್ಷ ಮಂದಿ ಸ್ಥಳಾಂತರ: ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ 18 ಜಿಲ್ಲೆಗಳ 11.50 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇವರಿಗೆ 6,564 ನಿರಾಶ್ರಿತ ಶಿಬಿರಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಉಚಿತವಾಗಿ ಆಹಾರ ವ್ಯವಸ್ಥೆ ಮಾಡಲಾಗಿದೆ.

Advertisement

ಆಂಧ್ರದಲ್ಲೂ ಅಬ್ಬರ: ಆಂಧ್ರ ಪ್ರದೇಶದಲ್ಲೂ ಫೋನಿಯ ಹಾನಿ ಹೆಚ್ಚಾಗಿದೆ. 2,000 ವಿದ್ಯುತ್‌ ಕಂಬಗಳು, 117 ಸಬ್‌ ಸ್ಟೇಷನ್‌ಗಳಿಗೆ ಹಾನಿಯಾಗಿದೆ. ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಶ್ರೀಕಾಕುಲಂನಲ್ಲಿ ಸುಮಾರು 20 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿ 126 ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 733 ಗ್ರಾಮಗಳಿಗೆ ಹಾನಿಯಾಗಿದೆ. ಸದ್ಯ ಅಲ್ಲಿ ನೀತಿ ಸಂಹಿತೆ ಸಡಿಲ ಮಾಡಲಾಗಿದೆ. ಪೂರ್ವ ಗೋದಾವರಿ, ವಿಶಾಖಪಟ್ಟಣ, ವಿಜಯನಗರ ಮತ್ತು ಶ್ರೀಕಾಕುಲಂ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಸಡಿಲ ಮಾಡಲಾಗಿದೆ.

5 ಲಕ್ಷ ಜನರ ಸ್ಥಳಾಂತರ: ಇಂದು ಸಂಜೆ ವೇಳೆಗೆ ಫೋನಿ ಚಂಡಮಾರುತ ಬಾಂಗ್ಲಾದೇಶ ಪ್ರವೇಶಿಸಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 5 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಗಿದೆ.
45 ಸಾವಿರ ಜನರ ಸ್ಥಳಾಂತರ: ಅತ್ತ ಪಶ್ಚಿಮ ಬಂಗಾಲದಲ್ಲೂ ಸುಮಾರು 45 ಸಾವಿರ ಜನರನ್ನು ಸ್ಥಳಾಂತರರಿಸಲಾಗಿದೆ. ನಾಡಿಯಾ, ಮಿಡ್ನಾಪುರ, ಸೌತ್‌ 24 ಪರಗಣ, ಹೌರಾ, ನಾರ್ತ್‌ 24 ಪರಗಣಗಳಲ್ಲಿ ಸ್ಥಾಪಿಸಲಾಗಿರುವ ನಿರಾಶ್ರಿತ ಶಿಬಿರಗಳಲ್ಲಿ ಇವರಿಗೆ ಆಶ್ರಯ ಕಲ್ಪಿಸಲಾಗಿದೆ. ಶುಕ್ರವಾರವೇ ಬಂಗಾಲದಲ್ಲಿ ಭಾರೀ ಮಳೆಯಾಗಿದೆ.

ಭುವನೇಶ್ವರ, ಕೋಲ್ಕತಾ ಏರ್‌ಪೋರ್ಟ್‌ ಬಂದ್‌
ಚಂಡಮಾರುತ ಹಿನ್ನೆಲೆಯಲ್ಲಿ ಗುರುವಾರ ಮಧ್ಯ ರಾತ್ರಿ ಯಿಂದಲೇ ಭುವನೇಶ್ವರ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಭುವನೇಶ್ವರ ವಿಮಾನ ನಿಲ್ದಾಣಕ್ಕೆ ವ್ಯಾಪಕ ಹಾನಿ ಯಾ ಗಿದೆ. ಪರಿಸ್ಥಿತಿ ನೋಡಿ ಕೊಂಡು ವಿಮಾನಗಳ ಕಾರ್ಯಾಚರಣೆ ಆರಂಭಿ ಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

1,000 ಕೋಟಿ ರೂ. ಬಿಡುಗಡೆ
ಫೋನಿ ಅಬ್ಬರದಿಂದ ಹಾನಿಯಾಗಿರುವ ಜನತೆಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿ ದ್ದಾರೆ. ನಿಮ್ಮ ಜತೆಗೆ ನಾವಿದ್ದೇವೆ ಎಂದೂ ಭರವಸೆ ನೀಡಿದ್ದಾರೆ. ಚಂಡಮಾರುತ ಆಗಮಿಸುವ ಮೊದಲೇ ಪರಿಹಾರ ಕಾರ್ಯಾ ಚರಣೆ  ಗಾಗಿ 1,000 ಕೋಟಿ ರೂ. ಬಿಡುಗಡೆ ಮಾಡ ಲಾಗಿದೆ ಎಂದೂ ತಿಳಿಸಿದ್ದಾರೆ. ಜತೆಗೆ ಒಡಿಶಾ, ಆಂಧ್ರ, ಪಶ್ಚಿಮ ಬಂಗಾಲ, ತಮಿಳುನಾಡು, ಪುದುಚೇರಿ ಸರಕಾರಗಳ ಜತೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

200 ಕಿ.ಮೀ. ಫೋನಿ ಮಾರುತದ ಅಬ್ಬರ
160ಮಂದಿಗೆ ಗಾಯ
11.54 ಲಕ್ಷ ಒಡಿಶಾದಲ್ಲೇ ಸ್ಥಳಾಂತರಗೊಂಡವರು
20,000 ಆಂಧ್ರದಲ್ಲಿನ ನಿರಾಶ್ರಿತರ ಶಿಬಿರದಲ್ಲಿರುವವರು
08 ಒಡಿಶಾದಲ್ಲಿ ಮೃತರ ಸಂಖ್ಯೆ
14 ಒಡಿಶಾದಲ್ಲಿನ ಜಿಲ್ಲೆಗಳಿಗೆ ಹಾನಿ
6,564 ಸ್ಥಾಪಿಸಲಾಗಿರುವ ನಿರಾಶ್ರಿತ ಶಿಬಿರಗಳು
45,000 ಪಶ್ಚಿಮ ಬಂಗಾಲದಲ್ಲಿ ಸ್ಥಳಾಂತರ

Advertisement

Udayavani is now on Telegram. Click here to join our channel and stay updated with the latest news.

Next