Advertisement

ಪಾಲಿಗೆ ಬಂದದ್ದು ಪಾಲಿಹೌಸ್‌!

08:45 AM Jul 30, 2019 | keerthan |

ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು
ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‌ ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ. ಅಲ್ಲಿ ವಿ. ರಾಜಕುಮಾರ್‌ ಅವರ ಮನೆಯಿರುವ ಕಾಂಪೌಂಡಿಗೆ ಇತ್ತೀಚಿಗೆ ಕಾಲಿಟ್ಟಾಗ ಒಂದು ಪಾಲಿಹೌಸ್‌ ಕಾಣಿಸಿತು. ಒಂದು ಸೆಂಟ್ಸ್‌ ವಿಸ್ತೀರ್ಣವಿದ್ದ ಪಾಲಿಹೌಸ್‌ ಒಳ ಹೊಕ್ಕರೆ
ಕೃಷಿಲೋಕವೊಂದರ ದರ್ಶನವಾಗಿತ್ತು.

Advertisement

ಬಳ್ಳಿಗಳು, ಗಿಡ ತೊಟ್ಟಿಗಳು
ಕಳೆದ ಆರು ವರ್ಷಗಳಿಂದ ಐದಾರು ಮನೆಗಳಿಗೆ ಸಾಕಾಗುವಷ್ಟು ತರಕಾರಿ ಬೆಳೆಯುತ್ತಿದ್ದಾರೆ ರಾಜಕುಮಾರ್‌. ಸುಮಾರು ಇಪ್ಪತ್ತು ಅಡಿ ಅಗಲದ ಪಾಲಿಹೌಸಿನ ಎರಡೂ ಬದಿಗಳಲ್ಲಿ ಪಾಲಿಥಿನ್‌ ಶೀಟಿನ ಛಾವಣಿಯಿಂದ
ನೆಲದವರೆಗೆ ನೇತಾಡುತ್ತಿರುವ ಪ್ಲಾಸ್ಟಿಕ್‌ ಬಲೆಗೆ ಹಬ್ಬಿಕೊಂಡಿವೆ ಅಲಸಂದೆ ಬಳ್ಳಿಗಳು. ಪಾಲಿಹೌಸಿನ ಮಧ್ಯದಲ್ಲಿ ಐದಡಿ ಅಂತರದಲ್ಲಿ ತಲಾ ಐದು ಕುಂಡಗಳಎರಡು ಸಾಲುಗಳು. ಆ ಕುಂಡಗಳಲ್ಲಿ ಆಳೆತ್ತರ ಬೆಳೆದಿರುವ ಬೆಂಡೆಕಾಯಿ ಮತ್ತುಟೊಮೆಟೊ ಗಿಡಗಳು.ಕುಂಡಗಳ ನಡುವೆಪುಟ್ಟ ಹರಿವೆ ಸಸಿಗಳು. ಕುಂಡಗಳ ಪಕ್ಕದಲ್ಲಿ ಪ್ಲಾಸ್ಟಿಕ್‌ ಬಲೆಯ ಚಪ್ಪರಕ್ಕೆ ಹಬ್ಬಿರುವ ಕುಂಬಳಕಾಯಿ ಬಳ್ಳಿಗಳು.ಅಲ್ಲಿ ಗಮನ ಸೆಳೆದದ್ದು ಮೂರಡಿ ವ್ಯಾಸದ ತೆಂಗಿನ ನಾರಿನ ಮೂರು ಸಿಲಿಂಡರ್‌ಗಳು. ಡ್ರಿಪ್‌ ಪೈಪಿಗೆ ತೆಂಗಿನ ನಾರು ಸುತ್ತಿ, ಆ ಪೈಪನ್ನು ಸಿಲಿಂಡರಿನಂತೆ ಸುತ್ತಿ ಅವನ್ನು ರಚಿಸಿ¨ದ್ದಾರೆ ರಾಜಕುಮಾರ್‌. ಚೀನಿಕಾಯಿ ಬಳ್ಳಿ ನೂರಡಿ ಉದ್ದಕ್ಕೆ ಬೆಳೀತದೆ. ಅದನ್ನು ಹಾಗೇ ಬಿಟ್ಟರೆ, ಯಾವ್ಯಾವುದೋ ದಿಕ್ಕಿನಲ್ಲಿ ಬೆಳೀತದೆ. ಅದರ ಬದಲಾಗಿ ಈ ತೆಂಗಿನ ನಾರಿನ ಸಿಲಿಂಡರಿಗೆ ದಿನದಿನವೂ ಅದರ ತುದಿಯನ್ನು ಸುತ್ತಿದರೆ, ನೂರಡಿ ಉದ್ದದ ಬಳ್ಳಿ ಆರಡಿ ಎತ್ತರದ ಸಿಲಿಂಡರ್‌ ಆಕಾರದಲ್ಲಿ ಬೆಳೀತದೆ ಎಂದು
ವಿವರಿಸುತ್ತಾರೆ ರಾಜಕುಮಾರ್‌.

ಎರಡನೇ ಪಾಲಿಹೌಸ್‌
ಪಕ್ಕದ ಇರುವ ತಮ್ಮ ಇನ್ನೊಂದು ಮನೆಯ ಟೆರೇಸಿನಲ್ಲಿ ಇನ್ನೊಂದು ಪಾಲಿಹೌಸ್‌ ನಿರ್ಮಿಸಿದ್ದಾರೆ. ಕಬ್ಬಿಣದ ಏಣಿ ಹತ್ತಿ, ಎರಡನೇ ಪಾಲಿಹೌಸ್‌ ಪ್ರವೇಶಿಸಿದಾಗ ಅಲ್ಲಿ ಟೆರೇಸಿನ ನಾಲ್ಕೂ ಬದಿಗಳಲ್ಲಿ ವೀಡ್‌ ಮ್ಯಾಟಿನಿಂದ
ರಚಿಸಿದ ಎರಡು ಹಂತಗಳ ಗಿಡತೊಟ್ಟಿಗಳು. ಅದಲ್ಲದೆ, ಟೆರೇಸಿನ ನಡುವಣ ಜಾಗದಲ್ಲಿ ತಲಾ 25 ಅಡಿ ಉದ್ದದ ಆರು ಗಿಡತೊಟ್ಟಿ ಸಾಲುಗಳು.
ಗಿಡತೊಟ್ಟಿಗಳ ಅಗಲ ಎರಡು ಅಡಿ, ಎತ್ತರ ಒಂದೂವರೆ ಅಡಿ. ಆ ತೊಟ್ಟಿಗಳಲ್ಲಿ ತುಂಬಿದ್ದಾರೆ ಕೋಕೊ ಪಿಟ್‌, ಮಣ್ಣು ಮತ್ತು ಸೆಗಣಿಯ ಮಿಶ್ರಣ (1:1:1 ಅನುಪಾತದಲ್ಲಿ). ಅಲ್ಲಿ ಅವರು ಟೊಮೆಟೊ, ಹಸಿರುಮೆಣಸು, ಹರಿವೆ ಗಿಡಗಳನ್ನು ಮತ್ತು ಸೌತೆ, ಮುಳ್ಳುಸೌತೆ, ಅಲಸಂದೆ, ಹಾಗಲಕಾಯಿ, ಚೌಳಿಕಾಯಿ ಮತ್ತು ಚೀನಿಕಾಯಿ ಬೆಳೆದಿದ್ದಾರೆ. ಎಲ್ಲ ಗಿಡ ಬಳ್ಳಿಗಳಲ್ಲಿಯೂ ಫ‌ಸಲು ತೊನೆದಾಡುತ್ತಿತ್ತು. ಪಿ.ವಿ.ಸಿ ಪೈಪಿನಲ್ಲಿ ಹನಿ ನೀರಾವರಿ
ಪಾಲಿಹೌಸಿನಲ್ಲಿ ತರಕಾರಿ ಬೆಳೆಯುವ ತಮ್ಮ ಅನುಭವವನ್ನೆಲ್ಲ ಭಟ್ಟಿ ಇಳಿಸಿ ಗಿಡತೊಟ್ಟಿಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಿ¨ದ್ದಾರೆ ರಾಜಕುಮಾರ್‌. ಅದು ಹೇಗೆಂದರೆ, ತೊಟ್ಟಿಗಳು ನೆಲ ಮಟ್ಟದಿಂದ ಅರ್ಧ ಅಡಿ ಎತ್ತರದಲ್ಲಿ ಎರಡು ಸಮನಾಂತರ ಕಬ್ಬಿಣದ ಪೈಪುಗಳ ಸ್ಟ್ಯಾಂಡಿನ ಮೇಲೆ ನಿಂತಿವೆ. ಆ ಸಮನಾಂತರ ಪೈಪುಗಳ ನಡುವೆ ಹಾದು ಹೋಗಿದೆ ಮೂರೂವರೆ ಇಂಚು ವ್ಯಾಸದ ಪಿ.ವಿ.ಸಿ ಪೈಪ್‌. ಆ ಪೈಪಿನಲ್ಲಿ ಎರಡು ಅಡಿಗೊಂದರಂತೆ ತೂತುಗಳನ್ನು ಮಾಡಿದ್ದಾರೆ. ಆ ತೂತುಗಳಿಗೆ ಒಂದಡಿ ಉದ್ದದ, ಅರ್ಧ ಇಂಚು ವ್ಯಾಸದ ಸ್ಪಂಜಿನ ಬತ್ತಿಗಳನ್ನು ತೂರಿಸಲಾಗಿದೆ. ಆ ಬತ್ತಿಗಳಿಂದ ನೀರು ನಿಧಾನವಾಗಿ ಮೇಲೇರಿ, ಗಿಡತೊಟ್ಟಿಗಳ ಮಿಶ್ರಣವನ್ನು ಯಾವಾಗಲೂ ತೇವಯುಕ್ತವಾಗಿ ಇರಿಸುತ್ತದೆ. ಮನೆಯ ಟೆರೇಸಿನಲ್ಲಿ ಐದಾರು ಕುಟುಂಬಗಳಿಗೆ ಇಡೀ ವರುಷಕ್ಕೆ ಬೇಕಾದಷ್ಟು ತರಕಾರಿ ಬೆಳೆಯಬಹುದು ಎಂಬುದಕ್ಕೆ ಇದಕ್ಕಿಂತ ಬೇರಾವುದೇ ಪುರಾವೆ ಅಗತ್ಯವಿಲ್ಲ. ಅಂದಹಾಗೆ, ರಾಜಕುಮಾರ್‌ ತಾವು ಬೆಳೆಸಿದ ತರಕಾರಿಗಳನ್ನೂ ಯಾವತ್ತೂ ಮಾರಾಟ ಮಾಡಿಲ್ಲ. ಅಕ್ಕಪಕ್ಕದವರಿಗೆ, ಆತ್ಮೀಯರಿಗೆ ಹಂಚಿರೆ. ತರಕಾರಿ ಕೃಷಿ ನನ್ನ ಹವ್ಯಾಸ ಎಂಬ ಅವರ ವಿನಯದ ಮಾತನ್ನು ಮೀರಿದ ಸತ್ಯ ಏನೆಂದರೆ, ಅದು ಅವರ ತಪಸ್ಸು!

ಮನೆಯಲ್ಲೇ ಕೀಟನಾಶಕ ತಯಾರಿ
ಪಾಲಿಹೌಸಿನಲ್ಲಿ ಕೀಟಗಳ ನಿಯಂತ್ರಣಕ್ಕೆ ಇನ್ನೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ತೆಂಗಿನಕಾಯಿಯ ನೀರನ್ನು ಒಂದು ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಹಾಕಿಡುವುದು. ಐದಾರು ದಿನಗಳಲ್ಲಿ ಅದು ಬುರುಗು ಬಂದು, ಘಾಟು ವಾಸನೆ ಬರುತ್ತದೆ. ಅದನ್ನು ಒಂದು ಟೀ-ಚಮಚದಷ್ಟು ಮತ್ತು ಗೋಮೂತ್ರ ಒಂದು ಟೀ-ಚಮಚದಷ್ಟು ಒಂದು ಲೀಟರ್‌ ನೀರಿಗೆ ಹಾಕಿ. ಈ ಮಿಶ್ರಣವನ್ನು ಗಿಡಬಳ್ಳಿಗಳಿಗೆ ಸಿಂಪಡಿಸಿದರೆ ನೈಸರ್ಗಿಕ ಕೀಟನಾಶಕ ರೆಡಿ.

ಪರಾಗ ವ್ಯವಸ್ಥೆ
“ನಿಮ್ಮ ಪಾಲಿಹೌಸ್‌ ಎಲ್ಲ ದಿಕ್ಕಿನಲ್ಲಿಯೂ ಮುಚ್ಚಿಕೊಂಡಿದೆ. ತರಕಾರಿ ಹೂಗಳ ಪರಾಗಸ್ಪರ್ಶ ಹೇಗೆ ಆಗುತ್ತಿದೆ?’ ಎಂದು ಕೇಳಿದಾಗ ರಾಜಕುಮಾರ್‌ ತೋರಿಸಿದ್ದು ಮುಜಂಟಿ (ಕೊಂಡಿ ಇಲ್ಲದ) ಜೇನ್ನೊಣಗಳ ಕುಟುಂಬಗಳನ್ನು. ಬಿದಿರಿನ ಮತ್ತು ಮರದ ಜೇನುಪೆಟ್ಟಿಗೆಗಳಲ್ಲಿ ಸಾಕಿರುವ ಪುಟ್ಟ ಜೇನ್ನೊಣಗಳು ಅಲ್ಲಿ ಹಾರಾಡುತ್ತಿದ್ದವು

Advertisement

ಅಡ್ಡೂರು ಕೃಷ್ಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next