Advertisement

Kannada:ಬೆಳಗಾವಿಯಲ್ಲಿ ಪ್ರತೀಕಾರದ ರಾಜಕಾರಣ-ಸದ್ದಿಲ್ಲದೇ ಕನ್ನಡ ನೆಲದ ಮೇಲೆ ಮಹಾ ಕಾಕದೃಷ್ಟಿ

07:36 PM Oct 14, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈಗ ಅಭಿವೃದ್ಧಿಗೆ ಸಹಕಾರ ನೀಡುವ ಬದಲು ಪ್ರತೀಕಾರದ ರಾಜಕಾರಣ ಆರಂಭವಾಗಿದೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರ ನಿರಂತರವಾಗಿ ಗಡಿ ವಿಷಯದ ಮೂಲಕ ಪ್ರತೀಕಾರದ ರಾಜಕೀಯ ದಾಳಿ ಮಾಡುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕ ಸರ್ಕಾರ ಸಹ ಮಹಾನಗರ ಪಾಲಿಕೆ ಮೇಲೆ ವಕ್ರದೃಷ್ಟಿ ಬೀರಿ ದ್ವೇಷದ ರಾಜಕಾರಣಕ್ಕೆ ಕೈಜೋಡಿಸಿದೆ.

Advertisement

ಮಹಾರಾಷ್ಟ್ರ ಸರ್ಕಾರ ಮತ್ತು ಕನ್ನಡ ವಿರೋಧಿ ಧೋರಣೆ ಹೊಂದಿರುವ ನಾಯಕರು ಮತ್ತು ಸಂಘಟನೆಗಳ ವಿರುದ್ಧ ಕರ್ನಾಟಕದ ಸರ್ಕಾರಗಳು ಯಾವತ್ತೂ ಕಠಿಣ ನಿಲುವು ವ್ಯಕ್ತಪಡಿಸಿಲ್ಲ. ರಾಜ್ಯ ಸರ್ಕಾರ ಮತ್ತು ನಾಯಕರ ನಡೆ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಮಹಾರಾಷ್ಟ್ರ ಹೇಳಿಕೆಗಳ ಜತೆಗೆ ಮೌನವಾಗಿ ಕಾರ್ಯ ರೂಪಕ್ಕೂ ಇಳಿಯುತ್ತಿದೆ. ಇದೇ ಎರಡೂ ರಾಜ್ಯಗಳ ನಡುವೆ ಇರುವ ವ್ಯತ್ಯಾಸ.

ಮೇಲಾಗಿ ಜಿಲ್ಲೆಯ ನಾಯಕರು ಯಾವತ್ತೂ ಮಹಾರಾಷ್ಟ್ರದ ನಿಲುವಿನ ವಿರುದ್ಧ ಕಠೊರವಾಗಿ ಮಾತನಾಡುವುದಿಲ್ಲ. ಕನ್ನಡಿಗರ ಬಹಳ ವರ್ಷಗಳ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಸಾಹಸವನ್ನೂ ಮಾಡುವದಿಲ್ಲ. ಕಾರಣ ಅವರಿಗೆ ಮರಾಠಿ ಭಾಷಿಕ ಮತಗಳು ಕೈತಪ್ಪುತ್ತವೆ ಎಂಬ ಭೀತಿ. ಇದು ಪಕ್ಷಾತೀತವಾಗಿ ನಡೆದುಕೊಂಡು ಬಂದಿದೆ. ಇದರ ಪರಿಣಾಮ ಗಡಿಯಲ್ಲಿ ರಾಜ್ಯದ ವಿರುದ್ಧ ಮಹಾರಾಷ್ಟ್ರದ ನಿರಂತರ ರಾಜಕೀಯ ದಾಳಿ ನಡೆದೇ ಇದೆ. ಕರ್ನಾಟಕ ವಿರೋಧಿ ಸಂಘಟನೆಗಳು ಹೊಸ ಚೈತನ್ಯ ಪಡೆಯುತ್ತಲೇ ಇವೆ.

ಈಗ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ ಗಡಿ ಭಾಗದ ಬೆಳಗಾವಿಯಲ್ಲಿ ಮತ್ತೂಮ್ಮೆ ತನ್ನ ಭಾವನಾತ್ಮಕ ರಾಜಕಾರಣದ ಆಟವನ್ನು ಆರಂಭಿಸಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಸರ್ಕಾರದ ಸರಣಿ ಸಭೆ ಹಾಗೂ ಮಹತ್ವದ ನಿರ್ಣಯಗಳು ಬಹಳ ಸದ್ದು ಮಾಡುತ್ತಿದೆ.

ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಸಂಭ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನಡೆದಿರುವ ಈ ಬೆಳವಣಿಗೆ ಸಹಜವಾಗಿಯೇ ಗಡಿ ಭಾಗದ ಕನ್ನಡಿಗರಲ್ಲಿ ಕಳವಳ ಉಂಟು ಮಾಡಿದೆ. ಮರಾಠಿ ಭಾಷಿಕ ಮತ್ತು ಮರಾಠಿಯೇತರ ಜನರನ್ನು ಸೆಳೆಯುವ ಉದ್ದೇಶದಿಂದ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾರಾಷ್ಟ್ರ ಸರ್ಕಾರದ ಈ ಯೋಜನೆ ಜಾರಿಗೆ ಸಂಪೂರ್ಣವಾಗಿ ಕೈಜೋಡಿಸಲು ನಿಂತಿರುವುದು ಮತ್ತಷ್ಟು ಆತಂಕ ತಂದಿಟ್ಟಿದೆ. ಹೀಗಿರುವಾಗ ಕರ್ನಾಟಕ ಸರ್ಕಾರದ ಉದಾಸೀನ ಮನೋಭಾವ ಹಾಗೂ ಹುಸಿ ಭರವಸೆಗಳು ಕನ್ನಡ ಹೋರಾಟಗಾರರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿವೆ.

Advertisement

ಬೆಳಗಾವಿ ಮಹಾನಗರ ಪಾಲಿಕೆ ಮತ್ತು ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎರಡೂ ಪಕ್ಷಗಳು ಗಾಯಗೊಂಡ ಹುಲಿಯಂತಾಗಿವೆ. ಈ ಸೋಲಿನ ಆಘಾತದಿಂದ ಹೊರಬರಬೇಕು ಎಂಬ ಉದ್ದೇಶದಿಂದ ಈಗ ಹೊಸ ಯೋಜನೆಗಳ ಮೂಲಕ ಗಡಿ ಭಾಗದ ಮರಾಠಿ ಭಾಷಿಕರನ್ನು ಓಲೈಸಲು ಮುಂದಾಗಿದೆ. ಪ್ರಚೋದನಕಾರಿ ಹೇಳಿಕೆಗಳಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಶಿವಸೇನೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಇಲ್ಲಿಯ ಮರಾಠಿ ಭಾಷಿಕರನ್ನು ಓಲೈಸುವ ಕಾರ್ಯಕ್ಕೆ ಇಳಿದಿದೆ.

ಕಳವಳಕ್ಕೆ ಕಾರಣವಾದ ಸಭೆ:
ಕಳೆದ ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಗಡಿ ತಜ್ಞರ ಸಮಿತಿಯ ಸಭೆಯು ಕೈಕೊಂಡ ನಿರ್ಧಾರಗಳು ಕನ್ನಡಿಗರಲ್ಲಿ ಸಾಕಷ್ಟು ಕಳವಳ ಮೂಡಿಸಿವೆ. ಕರ್ನಾಟಕದ 5 ಜಿಲ್ಲೆಗಳ 865 ಹಳ್ಳಿ-ಪಟ್ಟಣಗಳಲ್ಲಿ ವಾಸಿಸುವ ಮರಾಠಿ ಭಾಷಿಕರಿಗೆ ಅನ್ವಯವಾಗುವಂತೆ ಮಹಾತ್ಮ ಫುಲೆ ಜನಾರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಈಗಾಗಲೇ ಮಹಾರಾಷ್ಟ್ರ ಸರ್ಕಾರ ನಿರ್ಧಾರ ಕೈಕೊಂಡಿದ್ದು ಈ ಮೂಲಕ ಮಹಾರಾಷ್ಟ್ರವು ಕರ್ನಾಟಕದ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದೆ.

ಆದರೆ ಮಹಾರಾಷ್ಟ್ರದ ಈ ನಿರ್ಧಾರಕ್ಕೆ ಕಠಿಣ ಪ್ರತಿಕ್ರಿಯೆ ನೀಡಬೇಕು ಎಂಬ ಕನ್ನಡಿಗರ ಒತ್ತಾಯಕ್ಕೆ ಕರ್ನಾಟಕ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕೇ ಇಲ್ಲ. ಕನ್ನಡ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಬದಲಾಗಿ ಸಾಂತ್ವನದ ರೀತಿಯ ಹೇಳಿಕೆಗಳು ಮಾತ್ರ ಬಂದವು. ಕಾಂಗ್ರೆಸ್‌ ಸರ್ಕಾರ ಸಹ ಇದೇ ಹಾದಿ ತುಳಿಯಬಾರದು ಎಂಬುದು ಕನ್ನಡಿಗರ ಕಳಕಳಿ.

ಮಹಾತ್ಮಾ ಫುಲೆ ಆರೋಗ್ಯ ಕಾರ್ಡ್‌ ವಿತರಣೆ ಯೋಜನೆಯ ಜತೆಗೆ ಬೆಳಗಾವಿಗೆ ಸಮೀಪದ ತಾಲೂಕು ಕೇಂದ್ರ ಚಂದಗಡದಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿರುವದು ಅತ್ಯಂತ ಗಂಭೀರವಾದ ವಿಷಯ. ಇದನ್ನು ಹಗುರವಾಗಿ ತೆಗೆದುಕೊಂಡಷ್ಟು ಅಪಾಯ ತಪ್ಪಿದ್ದಲ್ಲ. ಈ ಕಾರ್ಯಾಲಯಕ್ಕೆ ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಿ ಗಡಿ ವಿವಾದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ನಿರ್ಣಯಿಸಲಾಗಿದೆ. ಆದರೆ ಬೆಳಗಾವಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸುವರ್ಣ ವಿಧಾನಸೌಧ ಕಟ್ಟಡವಿದ್ದರೂ ಸರ್ಕಾರ ಅಲ್ಲಿ ಗಡಿ ವಿಷಯಕ್ಕೆ ಸಂಬಂಧಪಟ್ಟ ಕಚೇರಿಗಳನ್ನು ಸ್ಥಳಾಂತರಿಸದೇ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂಬುದು ಕನ್ನಡ ಹೋರಾಟಗಾರರ ಆರೋಪ.

ಪಾಲಿಕೆಯ ಮೇಲೆ ಕಣ್ಣು:
ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕಾದ ಕರ್ನಾಟಕ ಸರ್ಕಾರ ಅದರ ಬದಲು ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕಣ್ಣು ಹಾಕಿದೆ. ಪಾಲಿಕೆಯ ಮೇಲೆ ಇದ್ದ ಆಸಕ್ತಿ ಗಡಿ ವಿಷಯ ಮತ್ತು ಕನ್ನಡ ಹೋರಾಟಗಾರರ ಕಳಕಳಿಯ ಮೇಲಿಲ್ಲ. ಹತ್ತಾರು ಕಾರಣಗಳನ್ನು ಮುಂದೆ ಮಾಡಿ ಪಾಲಿಕೆಯನ್ನು ಸೂಪರ್‌ ಸೀಡ್‌ ಮಾಡಲು ಚಿಂತನೆ ನಡೆಸಿದೆ.

ಮಹಾರಾಷ್ಟ್ರ ಸರ್ಕಾರದ ಆಕ್ರಮಣಕಾರಿ ನಿಲುವು ಮತ್ತು ಅದು ಜಾರಿ ಮಾಡಲು ಹೊರಟಿರುವ ಯೋಜನೆಗಳು ಗಡಿ ಭಾಗದ ಕನ್ನಡಿಗರು ಹಾಗೂ ಹಳ್ಳಿಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿವೆ. ಈ ವಿಷಯದಲ್ಲಿ ಕನ್ನಡ ಸಂಘಟನೆಗಳು ನಿರಂತರವಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳುತ್ತ ಬಂದಿದ್ದರೂ ಇದುವರೆಗೆ ಯಾವುದೇ ದೃಢ ನಿರ್ಧಾರಗಳು ಕರ್ನಾಟಕ ಸರ್ಕಾರದಿಂದ ಬಂದಿಲ್ಲ ಎಂಬುದು ಬಹಳ ದುರ್ದೈವದ ಸಂಗತಿ.
– ಅಶೋಕ ಚಂದರಗಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next