Advertisement

ಹಾಲಿ ಶಾಸಕರ ಮೇಲೆ ಪ್ರೀತಿ, ಹೊಸಬರು ಬೇಕೆಂಬ ಬಯಕೆ

03:07 PM Dec 19, 2022 | Team Udayavani |

ಹೊನ್ನಾವರ: ಬರಲಿರುವ ವಿಧಾನಸಭಾ ಚುನಾವಣೆ ಕುರಿತು ಜಿಲ್ಲೆಯ ಮತದಾರರಲ್ಲಿ ಈಗಿನಿಂದಲೇ ಆಲೋಚನೆ ಶುರುವಾಗಿದೆ. ಜನಕ್ಕೆ ಹಾಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂಬ ಪ್ರೀತಿಯಿದೆ. ಜೊತೆಯಲ್ಲಿ ಹೊಸಬರು ಬೇಕೆಂಬ ಆಸೆಯೂ ಇದೆ. ಜಿಲ್ಲೆಯ ಮತದಾರರಲ್ಲಿ ಈ ವಿಷಯದಲ್ಲಿ ಗೊಂದಲವಿದೆ. ಅಲ್ಲದೇ ಸ್ಪಷ್ಟತೆಗಾಗಿ ಹಂಬಲವೂ ಇದೆ.

Advertisement

ಮತದಾರರಲ್ಲಷ್ಟೇ ಅಲ್ಲ, ಪಕ್ಷಗಳಲ್ಲೂ, ಅಭ್ಯರ್ಥಿಗಳಲ್ಲೂ, ಟಿಕೆಟ್‌ ಆಕಾಂಕ್ಷಿಗಳಲ್ಲೂ ಹಲವು ಗೊಂದಲ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಅನಿರೀಕ್ಷಿತ ಘಟನೆ ಸೋಲಿಗೆ ಕಾರಣ ಎಂದು ಕಾಂಗ್ರೆಸ್‌ ಪಕ್ಷ ನಂಬಿದೆ. ಪರೇಶ್‌ ಮೇಸ್ತ ಪ್ರಕರಣದಿಂದ ತಮ್ಮ ನಿರೀಕ್ಷೆ ಬುಡಮೇಲಾಯಿತು ಎಂದು ಮಾಜಿ ಕಾಂಗ್ರೆಸ್‌ ಶಾಸಕರು, ಸೋತವರು ಈ ಬಾರಿ ಭಾರೀ ಆತ್ಮವಿಶ್ವಾಸದಿಂದ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದಾರೆ.

ಸೋತವರಿಗೆ ಈ ಬಾರಿ ಟಿಕೆಟ್‌ ಕೊಡಲು ಕಾಂಗ್ರೆಸ್‌ ಮನಸ್ಸು ಮಾಡಿದರೂ ಹತ್ತಾರು ಜನ ಟಿಕೆಟ್‌ ಆಕಾಂಕ್ಷಿಗಳಿದ್ದು, ಕೆಲವರು ಸಿದ್ದರಾಮಯ್ಯನವರನ್ನು ನಂಬಿ ಕೊಂಡಿದ್ದರೆ, ಕೆಲವರು ಡಿಕೆಶಿಯನ್ನು ನಂಬಿಕೊಂಡಿದ್ದಾರೆ. ಆದ್ದರಿಂದ ಯಾರಿಗೆ ಟಿಕೆಟ್‌ ಸಿಕ್ಕರು ಅವರ ಪಕ್ಷದವರೇ ಮೊದಲು ಅಡ್ಡಗಾಲಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. “ಉತ್ತರ ಕನ್ನಡ ಕಾಂಗ್ರೆಸ್‌ ಜಿಲ್ಲೆ’ ಎಂದು ಗುರುತಿಸಲ್ಪಟ್ಟಿರುವುದರಿಂದ ಬಿಜೆಪಿಗೂ 3 ಸ್ಥಾನಗಳ ನಿರೀಕ್ಷೆ ಇರಲಿಲ್ಲ. ಈಗ ನಾಲ್ವರೂ ಬಿಜೆಪಿ ಶಾಸಕರಿದ್ದಾರೆ. ಟಿಕೆಟ್‌ ಸಿಕ್ಕರೆ ಮೋದಿ ಹೆಸರಿನಲ್ಲಿ ಗೆಲುವು ಗ್ಯಾರಂಟಿ ಎಂದು ನಂಬಿದ ಬಿಜೆಪಿ ಶಾಸಕರಿಗೆ ಅವರ ಪಕ್ಷದಲ್ಲೇ ಹಲವಾರು ಸ್ಪ ರ್ಧಿಗಳು ಹುಟ್ಟಿಕೊಂಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಯಾಗಲು ಸ್ಪರ್ಧೆ ಏರ್ಪಟ್ಟಿದೆ.

ಭಟ್ಕಳದಲ್ಲಿ ಸುನೀಲ ನಾಯ್ಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಅದ್ಯಾಕೋ ಇವರನ್ನು ಗೆಲ್ಲಿಸಿದವರಲ್ಲೇ ಅಸಮಾಧಾನ ಹೊಗೆಯಾಡುತ್ತಿದೆ. ಕೆಲವರು ನಮಗೆ ಟಿಕೆಟ್‌ ಬೇಕು ಎಂದು ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಹಠವಾದಿ ಮಂಕಾಳ ವೈದ್ಯ ಸ್ಪರ್ಧೆಗೆ ಸಿದ್ಧತೆ ನಡೆಸಿ ವರ್ಷ ಕಳೆಯಿತು. ಮಾಜಿ ಶಾಸಕ ಜೆ.ಡಿ. ನಾಯ್ಕ ಭಟ್ಕಳ ಕ್ಷೇತ್ರದಲ್ಲಿ ನಾಮಧಾರಿ ಸಮಾಜದವರು ಬಹಳ ಸಂಖ್ಯೆಯಲ್ಲಿ ಇರುವುದರಿಂದ ನಾನು ಗೆಲ್ಲುವ ಅಭ್ಯರ್ಥಿ ಎಂದು ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದಾರೆ.

ಕುಮಟಾ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಶಾಸಕ ದಿನಕರ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಜೊತೆಯಲ್ಲಿ ಕೆಲವೊಮ್ಮೆ ಅನಗತ್ಯ ಇನ್ನೊಬ್ಬರ ಟೀಕೆ ಮಾಡುತ್ತಾರೆ ಎಂಬ ಆಪಾದನೆ ಇದೆ. ಬಿಜೆಪಿಯನ್ನು ಬಹುಕಾಲದಿಂದ ಸಂಘಟಿಸುತ್ತಾ ಬಂದವರು ಈ ಬಾರಿ ಕುಮಟಾ ಟಿಕೆಟ್‌ ಕೇಳ ತೊಡಗಿದ್ದಾರೆ. ಈಗಿನವರು ಪಕ್ಷ ಕಟ್ಟಿದವರಲ್ಲ. ಮೋದಿ ಹೆಸರಲ್ಲಿ ಗೆದ್ದವರು. ಮೋದಿಯವರ ಹೆಸರಿನಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಯ ಆದ್ದರಿಂದ ಮೂಲ ಬಿಜೆಪಿಗರಿಗೆ ಟಿಕೆಟ್‌ ಬೇಕು ಎಂಬ ಸ್ವರ ಕುಮಟಾ ಕ್ಷೇತ್ರದಲ್ಲಿದೆ. ಹೊನ್ನಾವರದವರಿಗೆ ಟಿಕೆಟ್‌ ಕೊಡಬೇಕು ಎಂಬ ಕೂಗೂ ಕೇಳುತ್ತಿದೆ.

Advertisement

ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿಯವರದ್ದು ಕೆಲಸ ದಷ್ಟೇ ಪ್ರಚಾರವೂ ಜಾಸ್ತಿ, ವಿವಾದಗಳು ಜಾಸ್ತಿ ಎಂಬ ಆಪಾದನೆ ಕಡಿಮೆ ಏನಿಲ್ಲ. ಇದು ಆ ಕ್ಷೇತ್ರದ ಮತದಾರರಿಗೆ ಬೇಸರ ತಂದಿದೆ. ಕಾಂಗ್ರೆಸ್‌ನ ಟಿಕೆಟ್‌ ನಿರೀಕ್ಷೆಯಲ್ಲಿರುವ ಸತೀಶ ಸೈಲ್‌ ಸಹ ಮಂಕಾಳ ವೈದ್ಯರಂತೆ ಹಠವಾದಿ. ಭಾರಿ ಪ್ರಚಾರ ಆರಂಭಿಸಿದ್ದಾರೆ. ಮೂಲ ಬಿಜೆಪಿಗರಿಗೆ ಟಿಕೆಟ್‌ ಬೇಕು ಎಂಬುದು ಕಾರವಾರದವರ ಧ್ವನಿ. ಇನ್ನು ಯಲ್ಲಾಪುರ ಮತ ಕ್ಷೇತ್ರದ ಶಿವರಾಮ ಹೆಬ್ಟಾರ್‌ ಕಾಂಗ್ರೆಸ್‌ನಿಂದ ಹೋದವರು. ಪಕ್ಷ ಬದಲಾದರೂ ಕಾಂಗ್ರೆಸ್‌ನ ಶೈಲಿಯಲ್ಲೇ ಬಿಜೆಪಿಯ ಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಇದರಿಂದ ಮೂಲ ಬಿಜೆಪಿಗರಿಗೆ ತಮ್ಮ ಶ್ರಮ ಬಂಡವಾಳಶಾಹಿ ಪಾಲಾಯಿತು ಎಂಬ ಚಿಂತೆ. ಹೆಬ್ಟಾರ್‌ ಏನೇ ಬರೆಸಿಕೊಳ್ಳಲಿ ಅವರ ಸಾರ್ವಜನಿಕ ಜೀವನ ತೆರೆದ ಪುಸ್ತಕದಂತೆ ಎಂಬುದು ಎಲ್ಲರಿಗೂ ಗೊತ್ತು.

ಹಿರಿಯ ಕಾಂಗ್ರೆಸ್‌ ನಾಯಕ ಆರ್‌.ವಿ. ದೇಶಪಾಂಡೆ ಅವರಿಗೆ ಹಳಿಯಾಳದಲ್ಲಿ ಗೆಲ್ಲುವ ಸೂತ್ರ ಗೊತ್ತು. ವಿರೋಧಿಗಳು ಏನೇ ಹೇಳಲಿ ಅವರ ಲೆಕ್ಕಾಚಾರ ಬುಡಮೇಲು ಮಾಡುವ ದೇಶಪಾಂಡೆಯವರನ್ನು ಸೋಲಿಸಲು ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳು ಸಿಗುತ್ತಿಲ್ಲ. ತಮ್ಮಿಂದ ರಾಜಕೀಯ ಲಾಭ ಪಡೆದವರೇ ತಿರುಗಿ ಬಿದ್ದರೂ ಹೆದರದ ದೇಶಪಾಂಡೆ ಇನ್ನೆಷ್ಟು ವರ್ಷ ಅಧಿಕಾರ ಬಯಸಿದ್ದಾರೆ ಎಂಬ ಚಿಂತೆ ಮತದಾರರಿಗೆ ಇದೆ. ಆದರೆ ಮತ ಅವರಿಗೆ ಕೊಡುತ್ತಾರೆ. ಶಿರಸಿ ಮತ ಕ್ಷೇತ್ರದಲ್ಲಿ ದೇಶಪಾಂಡೆಯವರ ಇನ್ನೊಂದು ರೂಪ ಕಾಗೇರಿಯವರಿದ್ದಾರೆ. ಇವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸ ಸಾಲದು ಎಂಬುದು ಮತದಾರರ ಅಭಿಪ್ರಾಯ. ಆದರೆ ಇವರಿಗೆ ಮತ ಕೊಡುವುದು ಅನಿವಾರ್ಯ ಎಂಬ ಭಾವನೆಯೂ ಇದೆ. ಸ್ವಪಕ್ಷದ ವಿರೋಧಿ ಧ್ವನಿಯನ್ನು ಮೆತ್ತಗಾಗಿಸುವ ಕಲೆ ಇಬ್ಬರಿಗೂ ಸಿದ್ಧಿಸಿದೆ. ಗವರ್ನರ್‌ ಆಗುವ ವಯಸ್ಸಿನ ಈ ಇಬ್ಬರಿಗೆ ಇನ್ನೆಷ್ಟು ದಿನ ಅಧಿಕಾರದ ಆಸೆ ಎಂದು ಮತದಾರರು ಪಿಸುಗುಟ್ಟುತ್ತಾರೆ. ಪ್ರತಿಪಕ್ಷಕ್ಕೂ ಇವರನ್ನು ಎದುರಿಸುವ ಸಮರ್ಥ ಅಭ್ಯರ್ಥಿ ಸಿಗದಿರುವುದು ಇವರ ಪುಣ್ಯ.

ಒಟ್ಟಾರೆ ಜಿಲ್ಲೆಯ ಜನರ ಮನಸ್ಸಿನಲ್ಲಿ, ಪಕ್ಷದಲ್ಲೂ ಗೊಂದಲವಿದೆ. ಜೆಡಿಎಸ್‌, ಆಮ್‌ ಆದ್ಮಿ ಸ್ವರ ಎತ್ತಿಲ್ಲ. ಹೊಸ ಮುಖ ಕಾಣುತ್ತಿಲ್ಲ. ಈ ಬಾರಿಯೂ ಯಾವುದೋ ಒಂದು ಘಟನೆ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಲ್ಲುದೇ ಎಂಬುದನ್ನು ಕಾದು ನೋಡಬೇಕಿದೆ.

„ಜೀಯು

Advertisement

Udayavani is now on Telegram. Click here to join our channel and stay updated with the latest news.

Next