Advertisement

ಹಿಂಸೆಯ ಬೆಂಕಿಯಲ್ಲಿ ರಾಜಕೀಯ

12:30 AM Jan 06, 2019 | Team Udayavani |

ತಿರುವನಂತಪುರಂ: ಒಂದೆಡೆ, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರವು ಕೇರಳದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರೆ, ಮತ್ತೂಂದೆಡೆ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. 
ರಾಜ್ಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ಮುಂದು ವರಿದಿರುವ ನಡುವೆಯೇ ಹಿಂಸಾಚಾರಕ್ಕೆ ಯಾರು ಕಾರಣ ಎಂಬ ವಿಚಾರದಲ್ಲಿ ಬಿಜೆಪಿ - ಆರೆಸ್ಸೆಸ್‌ ನಾಯಕತ್ವ ಹಾಗೂ ಆಡಳಿತಾರೂಢ ಸಿಪಿಎಂ ಪರಸ್ಪರ ವಾಗ್ವಾದ ನಡೆಸುತ್ತಿವೆ. 

Advertisement

ಆರೋಪ-ಪ್ರತ್ಯಾರೋಪ: ಆರೆಸ್ಸೆಸ್‌ ಮತ್ತು ಬಿಜೆಪಿಯು ತಮ್ಮ ಆಡಳಿತದಲ್ಲಿರುವ ದೇವಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಹಿಂಸೆಯ ಅಸ್ತ್ರಗಳನ್ನಾಗಿ ಬಳಸಿ ಕೊಳ್ಳುತ್ತಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಆರೋಪಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್‌, “ಕೂಡಲೇ ಸಂಘಪರಿ ವಾರವು ಹಿಂಸಾಚಾರವನ್ನು ಕೊನೆಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸಿಪಿಎಂ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ವಿ.ಮುರಳೀಧರನ್‌, “ಈಗ ನಡೆಯುತ್ತಿರುವ ಹಿಂಸಾಚಾರಗಳೆಲ್ಲ ವಿವಾದದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಸಿಪಿಎಂ ನಡೆಸಿರುವ ಕುತಂತ್ರ’ ಎಂದು ಹೇಳಿದ್ದಾರೆ.

ಸಾಂವಿಧಾನಿಕ ಪರಿಣಾಮ ಎದುರಿಸಲು ಸಿದ್ಧರಾಗಿ: ಶಬರಿಮಲೆಯಲ್ಲಿ ನಡೆಯುತ್ತಿರುವ ಎಲ್ಲ ಹಿಂಸಾಚಾರಕ್ಕೂ ಸಿಪಿಎಂ ಗೂಂಡಾಗಳು ಕಾರಣ ಎಂದು ಬಿಜೆಪಿ ಆರೋಪಿಸಿದೆ. ಆರೆಸ್ಸೆಸ್‌ ಹಾಗೂ ಬಿಜೆಪಿ ಮೇಲೆ ದಾಳಿ ನಡೆಸುತ್ತಾ ಬಂದಿರುವ ಸಿಪಿಎಂ ಈಗ ಅಯ್ಯಪ್ಪ ಭಕ್ತರನ್ನೂ ಬಿಡುತ್ತಿಲ್ಲ. ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಡಿವೈಎಫ್ಐ, ಎಸ್‌ಡಿಪಿಐ ಕಾರ್ಯಕರ್ತರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್‌. ನರ ಸಿಂಹ ರಾವ್‌ ಆರೋಪಿಸಿದ್ದಾರೆ. ಶಬರಿಮಲೆ ವಿವಾದ ಕುರಿತು ನಡೆದ ಪ್ರತಿಭಟನೆಗಳು ಶಾಂತಿಯುತವಾಗಿದ್ದವು. ಅವು ರಾಜಕೀಯ ಸ್ವರೂಪದ್ದಾಗಿರಲಿಲ್ಲ. ಇದು ಭಕ್ತರ ವಿಚಾರವೇ ಹೊರತು ಬಿಜೆಪಿಯ ವಿಚಾರವಲ್ಲ ಎಂದೂ ರಾವ್‌ ಹೇಳಿದ್ದಾರೆ. ಅಲ್ಲದೆ, “ಕೂಡಲೇ ಹಿಂಸಾಚಾರ ನಿಲ್ಲಿಸಿ ಎಂದು ನಾವು ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಸಲಹೆ ಹಾಗೂ ಎಚ್ಚರಿಕೆ ನೀಡುತ್ತಿದ್ದೇವೆ. ಇದರಲ್ಲಿ ವಿಫ‌ಲವಾಗಿದ್ದೇ ಆದಲ್ಲಿ, ಸಿಪಿಎಂ ಸರ್ಕಾರವು ಸಾಂವಿಧಾನಿಕ ಪರಿಣಾಮವನ್ನು ಎದುರಿಸಲಿದೆ’ ಎಂದೂ ರಾವ್‌ ಎಚ್ಚರಿಕೆ ನೀಡಿದ್ದಾರೆ.

ಅರ್ಚಕರನ್ನು “ಬ್ರಾಹ್ಮಣ ರಾಕ್ಷಸ’ ಎಂದ ಸಚಿವ!: ಅಯ್ಯಪ್ಪ ದೇಗುಲವನ್ನು ಇಬ್ಬರು ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇಗುಲದ ಶುದ್ಧೀಕರಣ ಪ್ರಕ್ರಿಯೆ ಕೈಗೊಂಡ ಪ್ರಧಾನ ಅರ್ಚಕ(ತಂತ್ರಿ)ರ ವಿರುದ್ಧ ಕೇರಳದ ಸಚಿವರೊಬ್ಬರು ಕಿಡಿಕಾರಿದ್ದು, ಅವಹೇಳನಕಾರಿ ಪದ ಬಳಕೆಯನ್ನೂ ಮಾಡಿದ್ದಾರೆ. “ಶಬರಿಮಲೆ ದೇಗುಲದ ತಂತ್ರಿಯು ಬ್ರಾಹ್ಮಣ ರಾಕ್ಷಸ’ ಎಂದು ಕೇರಳ ಲೋಕೋ ಪಯೋಗಿ ಸಚಿವ, ಸಿಪಿಎಂ ಹಿರಿಯ ನಾಯಕ ಜಿ. ಸುಧಾಕರನ್‌ ಕರೆದಿದ್ದಾರೆ. “ಒಬ್ಬ ಸಹೋದರಿ ಯನ್ನು ಅಪವಿತ್ರಳು ಎಂದು ಪರಿ ಗಣಿಸುವವರನ್ನು ಮನುಷ್ಯರೆಂದು ಕರೆಯಲು ಸಾಧ್ಯವೇ? ದೇಗುಲದ ತಂತ್ರಿ ಬ್ರಾಹ್ಮಣನಲ್ಲ. ಅವರು ಬ್ರಾಹ್ಮಣ ರಾಕ್ಷಸ. ಶುದ್ಧ ಬ್ರಾಹ್ಮಣನಾಗಿರದ ಕಾರಣ ಅವರಿಗೆ ಅಯ್ಯಪ್ಪ ಸ್ವಾಮಿಯ ಮೇಲೆ ಪ್ರೀತಿ, ಗೌರವ ವಿಲ್ಲ’ ಎಂದಿದ್ದಾರೆ ಸುಧಾಕರನ್‌.

ಹರತಾಳದ ಇತಿಹಾಸದಲ್ಲಿ ಕೇರಳವೇ ಟಾಪ್‌
ಸುಮಾರು 100 ವರ್ಷಗಳಿಂದಲೂ ಭಾರತವು ಹರತಾಳಗಳನ್ನು ಕಂಡಿದ್ದು, ಈ ಪೈಕಿ ಅತಿ ಹೆಚ್ಚು ನಡೆದಿರುವುದು ಕೇರಳದಲ್ಲಿ. ರೌಲತ್‌ ಕಾಯ್ದೆಯನ್ನು ಖಂಡಿಸಿ 1919ರ ಏ.6ರಂದು ಮೊದಲ ಬಾರಿಗೆ ಮಹಾತ್ಮ ಗಾಂಧಿ ಅವರು ಹರತಾಳಕ್ಕೆ ಕರೆ ನೀಡಿದ್ದರು. ಆದರೆ, ಅದಕ್ಕೆ ಕೆಲ ಷರತ್ತುಗಳನ್ನೂ ವಿಧಿಸಲಾಗಿತ್ತು. ಯಾರಿಗೂ ತೊಂದರೆ ಉಂಟುಮಾಡುವಂತಿಲ್ಲ, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಹರತಾಳದಲ್ಲಿ ಭಾಗಿಯಾಗುವವರು ಉಪವಾಸ ಮಾಡುತ್ತಿರಬೇಕು ಎಂಬ ನಿಯಮಗಳನ್ನು ಗಾಂಧೀಜಿ ಹಾಕಿದ್ದರು. ಆದರೆ, ಈಗ ಯಾವ ನಿಯಮಗಳೂ ಉಳಿದಿಲ್ಲ. ಕೇರಳದಲ್ಲಿ ಪ್ರತಿ ವರ್ಷ 100ರಷ್ಟು ಹರತಾಳಗಳು ನಡೆಯುತ್ತಿವೆ. 2018ರಲ್ಲಿ 120 ಹರತಾಳ ನಡೆದಿವೆ. ಇನ್ನು ತಮಿಳುನಾಡು 2017ರಲ್ಲಿ 5 ಹರತಾಳಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮಹದಾಯಿ ವಿವಾದ ಸಂಬಂಧ ಕೇವಲ ಒಂದು ಹರತಾಳ ನಡೆದಿದೆ ಎಂದು ಮಾತೃಭೂಮಿ ವರದಿ ಮಾಡಿದೆ.

Advertisement

ಆಲದ ಮರಕ್ಕೆ ಬೆಂಕಿ
ಶಬರಿಮಲೆ ದೇಗುಲದ ಹದಿನೆಂಟು ಪವಿತ್ರ ಮೆಟ್ಟಿಲಿನ ಮುಂಭಾಗದಲ್ಲಿರುವ ಆಲದ ಮರಕ್ಕೆ ಶನಿವಾರ ಬೆಳಗ್ಗೆ 11.30ರ ವೇಳೆಗೆ ಬೆಂಕಿ ಹತ್ತಿಕೊಂಡಿದೆ. ಪಕ್ಕದಲ್ಲೇ ಇದ್ದ ಅಗ್ನಿ ಕುಂಡದಲ್ಲಿದ್ದ ಬೆಂಕಿ ವ್ಯಾಪಿಸಿ, ಮರಕ್ಕೆ ಹತ್ತಿಕೊಂಡಿತು. ಕೂಡಲೇ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು.

ಬಿಜೆಪಿ ಮತ್ತು ಸಿಪಿಎಂ ರಾಜ್ಯಾದ್ಯಂತ ಹಿಂಸಾಚಾರದಲ್ಲಿ ತೊಡಗಿದ್ದು, ಜನಜೀವನವನ್ನು ದುಸ್ಥಿತಿಗೆ ದೂಡಿವೆ. ಕೂಡಲೇ ಸಿಎಂ ಪಿಣರಾಯಿ ವಿಜಯನ್‌ ಅವರು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ರಮೇಶ್‌ ಚೆನ್ನಿತ್ತಲ, ಪ್ರತಿಪಕ್ಷ ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next