Advertisement

Politics: ನಿಗಮ, ಮಂಡಳಿ- 3 ದಿನ ವಿಳಂಬ

12:58 AM Dec 21, 2023 | Team Udayavani |

ಬೆಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಬಹುತೇಕ ಅಂತಿಮ ಗೊಂಡಿದೆಯಾದರೂ, ಕೊನೆ ಕ್ಷಣದಲ್ಲಿ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ಹೀಗಾಗಿ ಪಟ್ಟಿ ಬಿಡುಗಡೆಗೆ ಇನ್ನೂ ಎರಡರಿಂದ ಮೂರು ದಿನ ವಿಳಂಬವಾಗುವ ಸಾಧ್ಯತೆ ಇದೆ.

Advertisement

ಈ ಮೊದಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಗಳ ಸಮ್ಮುಖದಲ್ಲಿ ಸಿದ್ಧಪಡಿಸಿದ್ದ ಆಕಾಂಕ್ಷಿಗಳ ಪಟ್ಟಿಗೆ ಹೈಕಮಾಂಡ್‌ನಿಂದ ಅಂಕಿತ ಮುದ್ರೆ ಹಾಕಿಸಿಕೊಂಡು ಬರಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ದಿಲ್ಲಿಯಲ್ಲಿ ಎರಡು ದಿನಗಳಿಂದ ಠಿಕಾಣಿ ಹೂಡಿದ್ದರು. ಈ ಕಾರ್ಯದಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ತಡೆಯೊಡ್ಡಿದೆ.

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವು ದರಿಂದ ಸಾಕಷ್ಟು ಅಳೆದು-ತೂಗಿ ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಮೊದಲ ಹಂತದಲ್ಲಿ ಸುಮಾರು 32ರಿಂದ 35 ಪ್ರತಿನಿಧಿಗಳಿಗೆ “ಅಧಿ ಕಾರ ಭಾಗ್ಯ’ ಸಿಗಲಿದೆ. ಇದರಲ್ಲಿ ಶಾಸಕರಿಗೆ ಸಿಂಹ ಪಾಲು ಇರಲಿದೆ. ಉಳಿದಂತೆ ಪಕ್ಷದ ಹಿರಿಯ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಪಟ್ಟಿ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್‌ನ ದಿಲ್ಲಿ ಮೂಲಗಳು ತಿಳಿಸಿವೆ.

ಈ ಪ್ರಕ್ರಿಯೆಗಾಗಿಯೇ ಖುದ್ದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಎರಡು ಬಾರಿ ಭೇಟಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಪಟ್ಟಿಯನ್ನೂ ಅಂತಿಮಗೊಳಿಸಿದ್ದರು. ಬೆಳಗಾವಿ ಅಧಿವೇಶನಕ್ಕೂ ಮೊದಲೇ ಪಟ್ಟಿ ಬಿಡುಗಡೆ ಆಗಲಿದೆ ಎಂದೂ ಹೇಳಲಾಗಿತ್ತು. ಆದರೆ ಪಂಚರಾಜ್ಯಗಳ ಚುನಾವಣೆ, ಫ‌ಲಿತಾಂಶ ಮತ್ತಿತರ ಕಾರಣಗಳಿಂದ ಮತ್ತೆ ಹಿನ್ನೆಲೆಗೆ ಬಿದ್ದಿತ್ತು. ಈ ಮಧ್ಯೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ “ಪಟ್ಟಿಗೆ ಬಿಡುಗಡೆ ಭಾಗ್ಯ ಯಾವಾಗ’ ಎಂಬ ಕೂಗು ಕೇಳಿಬಂದಿತ್ತು. ಈ ಒತ್ತಡದ ಹಿನ್ನೆಲೆಯಲ್ಲಿಯೇ ಇಬ್ಬರೂ ರಾಜ್ಯ ನಾಯಕರು ದಿಲ್ಲಿಗೆ ದೌಡಾಯಿಸಿದ್ದರು.

ಎಂಎಲ್‌ಸಿಗಳಿಗೆ ಅನುಮಾನ?
ಎರಡು-ಮೂರು ಹಂತಗಳಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಮೊದಲು ನಾಲ್ಕಾರು ವಿಧಾನ ಪರಿಷತ್ತಿನ ಸದಸ್ಯರಿಗೂ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅದು ಅನುಮಾನ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‌ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ರಾತ್ರಿ ರಾಹುಲ್‌ ಭೇಟಿ
ಬೆಂಗಳೂರಿಗೆ ತೆರಳುವ ಮುನ್ನ ಎಐಸಿಸಿ ಕಚೇರಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಶಾಸಕರ ಜತೆಗೆ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೆ ಚರ್ಚಿಸುವಂತೆ ರಾಹುಲ್‌ ಸಲಹೆ ನೀಡಿದ್ದರಿಂದಾಗಿ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಈಗ ಸಿಎಂ-ಡಿಸಿಎಂ ಮತ್ತೂಮ್ಮೆ ಮುಖಾಮುಖೀಯಾಗಿ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ ದಿಲ್ಲಿಗೆ ಕಳುಹಿಸಿದ ಬಳಿಕ ವರಿಷ್ಠರು ಅಂಕಿತ ಹಾಕಲಿದ್ದಾರೆ.

ವಿಳಂಬಕ್ಕೆ ಕಾರಣವೇನು?
ಮೊದಲ ಹಂತದಲ್ಲಿ ಶಾಸಕರನ್ನಷ್ಟೇ ನಿಗಮ- ಮಂಡಳಿಗಳಿಗೆ ನೇಮಕ ಮಾಡಲು ನಿರ್ಧರಿಸ ಲಾಗಿತ್ತು. ಅದರಂತೆ ಪಟ್ಟಿಯನ್ನೂ ಸಿದ್ಧಪಡಿಸಿ, ಅಂಕಿತ ಮುದ್ರೆ ಹಾಕಲು ಉದ್ದೇಶಿಸಲಾಗಿತ್ತು. ಆದರೆ ಚುನಾವಣೆ ಹೊಸ್ತಿಲಲ್ಲೇ ಇದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೂ ಅವಕಾಶ ಸಿಕ್ಕರೆ, ಹೆಚ್ಚು ಉತ್ಸಾಹ ಸಿಗಲಿದೆ. ಇದು ಚುನಾವಣೆ ಮೇಲೂ ಪೂರಕ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಹೈಕಮಾಂಡ್‌ನಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗಿದೆ.

ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಶಾಸಕರಿಂದ ಆಗ್ರಹ ಕೇಳಿಬರುತ್ತಲೇ ಇತ್ತು.

ನಿಗಮ, ಮಂಡಳಿಗಳಿಗೆ ನೇಮಕ ಆಗಲಿರುವವರ ಪಟ್ಟಿ ಸಿದ್ಧಪಡಿಸಿ ವರಿಷ್ಠ ರಿಗೆ ಸಲ್ಲಿಸಿದ್ದೇವೆ. ಜತೆಗೆ ಕಾರ್ಯ ಕರ್ತರನ್ನು ನೇಮಿಸಲು ನಮ್ಮ ವಿರೋಧ ವಿಲ್ಲ. ಅವರಿಗೂ ಅವಕಾಶ ಸಿಗಬಹುದು,
ಈ ಪ್ರಸ್ತಾವನೆ ಮೊದಲಿನಿಂದಲೂ ಇದೆ. ವರಿಷ್ಠರು ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.
-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next