Advertisement

Politics: ಹೊಸದಿಲ್ಲಿಯಲ್ಲಿ ಸಿಎಂ, ಡಿಸಿಎಂ, ಸುರ್ಜೇವಾಲಾ ಸಮಾಲೋಚನೆ

12:23 AM Dec 20, 2023 | Team Udayavani |

ಬೆಂಗಳೂರು: ನಿಗಮ, ಮಂಡಳಿಗಳ ನೇಮಕಾತಿ ಸಂಬಂಧ ದಿಲ್ಲಿಯಲ್ಲಿ ತ್ರಿಮೂರ್ತಿಗಳು ಮಹತ್ವದ ಸಭೆ ನಡೆಸಿದರು.

Advertisement

ಭಾನುವಾರ ರಾತ್ರಿಯೇ ದಿಲ್ಲಿ ತಲುಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೊಂದಿಗೆ ತಡರಾತ್ರಿವರೆಗೂ ಸಭೆ ನಡೆಸಿ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಸಂಬಂಧ ಸಮಾಲೋಚನೆ ನಡೆಸಿದರು. ಆದರೆ ಸಭೆಯ ವಿವರಗಳು ಲಭ್ಯವಾಗಿಲ್ಲ.

ಮೂರು ಸುತ್ತಿನ ಸಭೆ ನಡೆಸಿ ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಲ್ಲಿಸಿರುವ ಪಟ್ಟಿ ಬಗ್ಗೆ ಮತ್ತೂಮ್ಮೆ ಪರಾಮರ್ಶೆ ನಡೆಸಿ ಸಣ್ಣಪುಟ್ಟ ಬದಲಾವಣೆ ಬಗ್ಗೆಯೂ ಚರ್ಚಿಸಿದರೆಂದು ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅಂತಿಮ ಸುತ್ತಿನ ಸಭೆ ನಡೆಸಿ ಪಟ್ಟಿಗೆ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಖರ್ಗೆ ಅವರು ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಅವರೊಂದಿಗೆ ಸಭೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೂವರ ಸಭೆ ನಡೆದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ಕೆಪಿಸಿಸಿ ಪುನಾರಚನೆ ಕುರಿತಂತೆಯೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಸಿಎಂ, ಡಿಸಿಎಂ ದಿಲ್ಲಿ ಪ್ರವಾಸಕ್ಕೆ ಬಿಜೆಪಿ ವ್ಯಂಗ್ಯ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ದಿಲ್ಲಿ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವ್ಯಂಗ್ಯಚಿತ್ರದ ಮೂಲಕ ಟೀಕೆ ನಡೆಸಿದೆ. ಕಲೆಕ್ಷನ್‌ ಹಣವನ್ನು ದಿಲ್ಲಿಗೆ ಒಪ್ಪಿಸಲು ವಾಮಮಾರ್ಗವನ್ನು ಹುಡುಕಿಕೊಂಡ ನಾಡದ್ರೋಹ ಕಾಂಗ್ರೆಸ್‌ ಸರಕಾರ ಎಂದು ಆರೋಪಿಸಿದೆ. ಯಾವಾಗಲೂ ಸುಜೇìವಾಲಾ ಬೆಂಗಳೂರಿಗೆ ಬಂದರೆ ಸಂಶಯ ಬರುತ್ತದೆ. ಹೀಗಾಗಿ ಈ ಬಾರಿ ನಾವೇ ಹೋಗಿ ಹೈಕಮಾಂಡ್‌ಗೆ ಕಪ್ಪ ಒಪ್ಪಿಸೋಣ ಎಂಬ ಸಿಎಂ ಸಿದ್ದರಾಮಯ್ಯ ಸಲಹೆಗೆ ಡಿ.ಕೆ. ಶಿವಕುಮಾರ್‌, ಗುಡ್‌ ಐಡಿಯಾ ಎಂದು ಹೇಳುವ ವ್ಯಂಗ್ಯಚಿತ್ರವನ್ನು “ಎಕ್ಸ್‌” ಜಾಲತಾಣದಲ್ಲಿ ಬಿಜೆಪಿ ಹಂಚಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next