Advertisement

Satish Jarakiholi ಸುತ್ತ ರಾಜಕೀಯ ಗಿರಕಿ: ಮಹದೇವಪ್ಪ ,ಪರಂ, ಖರ್ಗೆ ಬಳಿಕ ವಿಜಯೇಂದ್ರ ಭೇಟಿ!

12:11 AM Oct 08, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಯನ್ನು ಸುತ್ತಿಕೊಂಡಾಗಿನಿಂದಲೂ ರಾಜಕೀಯ ಬೆಳವಣಿಗೆಗಳು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸುತ್ತ ಗಿರಕಿ ಹೊಡೆಯುತ್ತಿವೆ.

Advertisement

ದಲಿತ ಸಿಎಂ ಕೂಗು, ಡಿಸಿಎಂ ಹುದ್ದೆ ಸೃಷ್ಟಿ, ಸಚಿವರ ದಿಲ್ಲಿ ಭೇಟಿ, ವಿರೋಧಿ ಬಣದ ನಾಯಕರ ಭೇಟಿ, ದಲಿತ ಸಚಿವರ ಸಭೆ, ವಿಪಕ್ಷ ನಾಯಕರ ಭೇಟಿಯಲ್ಲೂ “ಸಾಹುಕಾರ್‌’ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಿಎಂ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್‌ ಜಾರಕಿಹೊಳಿ ಕೇಂದ್ರವಾಗಿಯೇ ನಡೆಯುತ್ತಿರುವ ಈ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಮುಡಾ ಪ್ರಕರಣದಲ್ಲಿ ಕೋರ್ಟ್‌ ತೀರ್ಪಿನ ಅನಂತರ ಕಾಕತಾಳೀಯ ಎಂಬಂತೆ ಸತೀಶ್‌ ಜತೆಗೆ ಇತರ ರಾಜಕೀಯ ನಾಯಕರ ಭೇಟಿ ಮತ್ತು ಚರ್ಚೆಗಳು ಗರಿಗೆದರಿವೆ. ಈ ಎಲ್ಲ ರಹಸ್ಯ ಭೇಟಿಗಳಿಗೆ ನೀಡುವ ಕಾರಣ ಮಾತ್ರ “ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿ’ ಎಂಬುದಾಗಿರುತ್ತದೆ. ಆದರೆ ತೆರೆಮರೆಯಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದೇ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ವಾರದಿಂದ ಈಚೆಗೆ ಭೇಟಿಗಳು ಚುರುಕುಗೊಂಡಿವೆ. ಮೊದಲು ಗೃಹ ಸಚಿವ ಡಾ| ಪರಮೇಶ್ವರ್‌ ಅವರು ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದರು. ಮರುದಿನವೇ ಸಚಿವರಾದ ಎಚ್‌.ಸಿ. ಮಹದೇವಪ್ಪ, ಡಾ| ಪರಮೇಶ್ವರ ಮತ್ತು ಜಾರಕಿಹೊಳಿ ಪುನಃ ಸೇರಿದ್ದರು. ಅನಂತರ ಜಾರಕಿಹೊಳಿ ದಿಲ್ಲಿಗೆ ದೌಡಾಯಿಸಿ ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು. ಅಲ್ಲಿಂದ ಬರುತ್ತಿದ್ದಂತೆ ತುಮಕೂರಿಗೆ ತೆರಳಿದ ಜಾರಕಿಹೊಳಿ ಅಲ್ಲಿ ಮತ್ತೆ ಡಾ| ಪರಮೇಶ್ವರ ಜತೆಗೆ ಮಾತುಕತೆ ನಡೆಸಿದರು. ಈ ನಡುವೆ ಸೋಮವಾರ ಡಿ.ಕೆ. ಸುರೇಶ್‌ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ಸಿಎಂ ಕುರ್ಚಿ: ಇನ್ನೂ ಬಸ್‌ ಬಂದಿಲ್ಲ: ಸೋಮವಾರದ ಭೇಟಿಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ, “ಸಿಎಂ ಕುರ್ಚಿಯ ಮಾತುಗಳು ಒಂದು ವರ್ಷದಿಂದ ಕೇಳಿಬರುತ್ತಲೇ ಇವೆ. ಆದರೆ ಇನ್ನೂ ಬಸ್‌ ಬಂದಿಲ್ಲ. 224 ಜನರಿಗೂ ಸಿಎಂ ಆಗುವ ಆಸೆ ಇರುತ್ತದೆ. ಸಚಿವನಾದರೆ ಮೊದಲ ಮೆಟ್ಟಿಲು ಏರಿದಂತಾಗುತ್ತದೆ. ಸೀನಿಯರ್‌ ಆದಮೇಲೆ ಡಿಸಿಎಂ ಆಗಬಹುದು. ಅನಂತರ ಸಿಎಂ, ಆಮೇಲೆ ಕೇಂದ್ರ ಸಚಿವ ಸ್ಥಾನ ಇರುತ್ತದೆ. ಈಗ ಆ ಸನ್ನಿವೇಶ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದರು.

ಹಲವು ನಾಯಕರ ಭೇಟಿಗೆ ರಾಜಕೀಯ ಬೆರೆಸಬೇಕಿಲ್ಲ. ಅಭಿವೃದ್ಧಿ ಕಾರ್ಯಗಳಿಗಾಗಿ ಭೇಟಿ ಆಗಿರುತ್ತಾರೆ. ವಿಜಯೇಂದ್ರ ಭೇಟಿ ಮಾಡಿ ಶಿಕಾರಿಪುರ ರಸ್ತೆ ಕುರಿತು ಮಾತುಕತೆ ನಡೆಸಿದರು. ಬೇರೆ ಅರ್ಥ ಕಲ್ಪಿಸುವ ಆವಶ್ಯಕತೆ ಇಲ್ಲ. ಪರಮೇಶ್ವರ್‌ ಅವರನ್ನು ರವಿವಾರ ತುಮಕೂರಿನಲ್ಲೂ ಭೇಟಿಯಾಗಿದ್ದೆ. ಅದಕ್ಕೂ ಮುನ್ನ ಎಚ್‌.ಸಿ. ಮಹದೇವಪ್ಪ ಮನೆಯಲ್ಲೂ ಕೂಡಿದ್ದೆವು ಎಂದು ಸ್ಪಷ್ಟಪಡಿಸಿದರು.

Advertisement

ಪದೇ ಪದೆ ದಲಿತ ಸಚಿವರ ಭೇಟಿಯ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ಹೋಗುತ್ತದೆಯೇ ಎಂದು ಕೇಳಿದಾಗ, ನಾವೇನೂ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಒಂದು ವೇಳೆ ಹಾಗಾಗಿದ್ದರೆ ಭಯಪಡಬೇಕು. ನಾವ್ಯಾಕೆ ಭಯ ಪಡಬೇಕು ಎಂದು ಕೇಳಿದರು.

ಸಚಿವ ಸತೀಶ್‌ ಜಾರಕಿಹೊಳಿ ಜತೆಗೆ ಕ್ಷೇತ್ರದ ವಿಷಯ ಮಾತನಾಡಿದ್ದೇನೆಯೇ ವಿನಾ ರಾಜಕೀಯವಾಗಿ ಯಾವ ಚರ್ಚೆಯನ್ನೂ ಮಾಡಿಲ್ಲ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next