Advertisement

ರಾಜಕೀಯ ಸಂಚಲನ; ಜನಸಂಕಲ್ಪ ಯಾತ್ರೆ ಬೆನ್ನಲ್ಲೇ ಬಿಜೆಪಿಗೆ ರಾಜೀನಾಮೆ ನೀಡಿದ ಯು.ಬಿ.ಬಣಕಾರ

06:23 PM Nov 09, 2022 | Team Udayavani |

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಹಿರೇಕೆರೂರ ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಮಂಗಳವಾರ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆದ ಬೆನ್ನಲ್ಲೇ ಯು.ಬಿ.ಬಣಕಾರ ಅವರ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ನಿಕಟ ಸಂಬಂಧ ಹೊಂದಿರುವ ಯು.ಬಿ.ಬಣಕಾರ 1994 ರಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪ ಬಿಜೆಪಿ ತೊರದು ಕೆಜೆಪಿ ಪಕ್ಷ ಕಟ್ಟಿದಾಗ ಅವರೊಂದಿಗೆ ಕೆಜೆಪಿ ಸೇರಿ 2013 ರಲ್ಲಿ ಕೆಜೆಪಿಯಿಂದ ಆಯ್ಕೆಯಾಗಿದ್ದರು. ಮರಳಿ ಬಿಜೆಪಿ ಸೇರ್ಪಡೆಯಾಗಿ 2018 ರ ಚುನಾವಣೆಯಲ್ಲಿ 555 ಮತಗಳ ಅಂತರದಲ್ಲಿ ಪರಭಾವಗೊಂಡಿದ್ದರು.

ಬಳಿಕ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾಗ ಜೋಡೆತ್ತಿನಂತೆ ಇಬ್ಬರೂ ಕ್ಷೇತ್ರದಲ್ಲಿ ಸಂಚರಿಸಿದ್ದರು. ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ಅವರಿಬ್ಬರ ಸಂಬಂಧ ಹದಗೆಟ್ಟಿತ್ತು ಎನ್ನಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಣಕಾರ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ ನೀಡಲಾಗಿತ್ತು. ಈಗ ಅವುಗಳಿಗೆ ರಾಜೀನಾಮೆ ನೀಡಿರುವ ಬಣಕಾರ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ರಾಜೀನಾಮೆ ಪತ್ರದಲ್ಲಿ ಏನಿದೆ?
ನನ್ನ ತಂದೆಯವರ ಕಾಲದಿಂದಲೂ ಹಾಗೂ ನನ್ನ 38 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾವು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಆದರಪೂರ್ವಕ ಗೌರವಿಸಿದ್ದೀರಿ. ಕೆಲವೊಂದು ನಿರ್ಣಯಗಳು ಪ್ರಾರಂಭದಲ್ಲಿ ಕೆಲವರಿಗೆ ಸರಿ ಎನ್ನಿಸದಿದ್ದರೂ ಕೊನೆಗೆ ಸಂತೋಷದಿಂದ ಸ್ವಾಗತಿಸಿದ್ದೀರಿ. ತಮ್ಮೆಲ್ಲರ ಈ ಅಭಿಮಾನವೇ ನಮ್ಮ ಸಂಪತ್ತು, ನಮ್ಮ ಶ್ರೀರಕ್ಷೆ, ಅಧಿಕಾರ ದೊಡ್ಡದಲ್ಲ ಹಾಗೂ ಶಾಶ್ವತವಲ್ಲ ಎಂದು ನಂಬಿದವರು ನಾವೆಲ್ಲ. ರಾಜಕಾರಣಕ್ಕಿಂತ ಹೆಚ್ಚಾಗಿ ನಾವೆಲ್ಲ ಒಂದು ಕುಟಂಬದವರು ಎಂದು ನಂಬಿ ಬಂದವರು, ತಾವು ಎಂದೂ ನನ್ನ ಜೊತೆ, ಅಧಿಕಾರಕ್ಕೆ ಆಗಲಿ, ವೈಯಕ್ತಿಕ ಹಿತಾಸಕ್ತಿಗಳಿಗಾಗಲಿ ಬಂದವರಲ್ಲ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಎಲ್ಲರೂ ಒಂದೇ ಎಂಬ ಭಾವನೆಯ ಜೊತೆಗೆ ನಾವಿದ್ದೇವೆ. ನಾವು ಒಳ್ಳೆಯ ಉದ್ದೇಶದಿಂದ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಾಗ ನಂತರದ ದಿನಗಳಲ್ಲಿ ಅದು ಸರಿ-ತಪ್ಪು ಅಂತ ವಿಮರ್ಶೆ ಮಾಡುವ ಅಗತ್ಯವಿಲ್ಲ. ನಾವು ತೆಗೆದುಕೊಂಡ ನಿರ್ಣಯ ನೂರಕ್ಕೆ ನೂರರಷ್ಟು ಸರಿ, ಪರಿಶುದ್ಧ ಇದ್ದ ಸಂದರ್ಭದಲ್ಲಿ ನಾವು ಯಾವುದಕ್ಕೂ ಚಿಂತನೆ ಮಾಡುವ ಅವಶ್ಯಕತೆ ಇಲ್ಲ. ಸಹಸ್ರಾರು ಚಿಂತಕರು ನಿರ್ಧಾರಗಳನ್ನು ಗೌರವಿಸುವ ಸಮಯದಲ್ಲಿ ಕೆಲವರ ಟೀಕೆಗಳು ನಮಗೆ ಪ್ರಸ್ತುತವಲ್ಲ.

Advertisement

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನ ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಸಲಹೆಗಳನ್ನು ನೇರವಾಗಿ, ಮುಕ್ತವಾಗಿ ಹಂಚಿಕೊಂಡಿದ್ದೀರಿ, ತಮ್ಮಂಥ ಅಪರೂಪದ ಹಿರಿಯರನ್ನು ಸ್ನೇಹಿತರನ್ನು ಗಳಿಸಿರುವುದು ನನ್ನ ಪುಣ್ಯ, ವಯಸ್ಸಿನಲ್ಲಿ ಕೆಲವರು ಅತ್ಯಂತ ಕಿರಿಯರಾದರೂ ಸಹ ಮುತ್ಸದ್ಧಿತನದ ಗುಣಗಳನ್ನು ಬೆಳೆಸಿಕೊಂಡು ನನಗೆ ಸಲಹೆ ಸೂಚನೆಗಳನ್ನು ನೀಡಿದ್ದೀರಿ.

ನಿಮ್ಮೆಲ್ಲರ ನೋವು, ಸಲಹೆ, ಮಾರ್ಗದರ್ಶನ ಹಾಗೂ ಇಂದಿನ ಪರಿಸ್ಥಿತಿಯ ಅಡಿಯಲ್ಲಿ ಮತ್ತೂಮ್ಮೆ ನಿರ್ಧಾರ ತೆಗೆದುಕೊಳ್ಳುವ ಕಾಲ ಕೂಡಿ ಬಂದಿದೆ. ನಾನು ಈ ದಿವಸ ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಯಾರಿಗಾದರು ಅಸಂತೋಷ ಬೇಸರ ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next