Advertisement

ರಾಜ್ಯದಲ್ಲಿ ಜಾತಿವಾರು ಗಣತಿ ವಿಚಾರ ಮತ್ತೆ ಮುನ್ನೆಲೆಗೆ: ಇದರ ಹಿಂದಿದೆ ರಾಜಕೀಯ ಲೆಕ್ಕಾಚಾರ

09:18 AM Aug 15, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಜಾತಿವಾರು ಜನ ಗಣತಿ ವಿಚಾರ ರಾಜಕೀಯ ಸ್ವರೂಪ ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ರಾಜಕೀಯವಾಗಿ ಯಾರಿಗೆ ಮುಳುವಾಗಲಿದೆ ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ.

Advertisement

ಜಾತಿವಾರು ಜನಗಣತಿಯ ಹೋರಾಟದ ಬಿಸಿ ಮುಂದಿನ ವಿಧಾನಸಭೆ ಚುನಾವಣೆವರೆಗೂ ಕಾಯ್ದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್‌ ಕಾರ್ಯ ತಂತ್ರ ರೂಪಿಸಿದೆ. ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇರುವಾಗ ಈ ಹೋರಾಟಕ್ಕೆ ಸಿದ್ದರಾಮಯ್ಯ “ರಂಗಪ್ರವೇಶ’ ಮಾಡಲಿದ್ದು ಈಗಾಗಲೇ ರೂಪು-ರೇಷೆ ಸಿದ್ಧಗೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಲಿಂಗಾಯಿತ ಪ್ರತ್ಯೇಕ ಧರ್ಮ ಹಾಗೂ ಒಳ ಮೀಸಲಾತಿ ಕುರಿತಂತೆ ದಲಿತ ಎಡಗೈ ಸಮುದಾಯದ ಆಕ್ರೋಶದ ಲಾಭ ಪಡೆದು ತಮ್ಮ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬರುವುದನ್ನು ತಡೆದ ಬಿಜೆಪಿಗೆ ಜಾತಿ ಜನಗಣತಿ ಹೋರಾಟದ ಮೂಲಕ ರಾಜಕೀಯವಾಗಿ ಕಟ್ಟಿ ಹಾಕಲು ಸಿದ್ದರಾಮಯ್ಯ ಮುಂದಾಗಿದ್ದಾರೆಂದು ಹೇಳಲಾಗಿದೆ. ಅತಿ ಹಿಂದುಳಿದ ಜಾತಿಗಳ ಜಾಗೃತ ವೇದಿಕೆ ರಾಜ್ಯಾದ್ಯಂತ ಪ್ರತಿ ವಿಧಾನಸಭೆ ಕ್ಷೇತ್ರ ಪ್ರವಾಸಮಾಡಿಸಂಘಟನೆಮಾಡಲಿದ್ದು, ಮುಂದಿನ ಹೋರಾಟದ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೂ ಸಮಾಲೋಚನೆ ನಡೆಸಿದೆ. ಅವರ ಒಪ್ಪಿಗೆಯೂ ಪಡೆದು ಹೋರಾಟ ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರ್ಪಡೆಗೆ ಇತರೆ ಸಮುದಾಯ ಬೇಡಿಕೆ ಇಡುತ್ತಿರುವ ಹಿನ್ನೆಲೆಯಲ್ಲಿ ಜಾತಿ ಜನಗಣತಿ ವರದಿ ವಿಚಾರ ಪ್ರಸ್ತಾಪಿಸಲಾಗುತ್ತಿದೆ. ತಮ್ಮ ಮೀಸಲಾತಿ ಬುಟ್ಟಿಗೆ ಬೇರೊಬ್ಬರು ಕೈ ಹಾಕುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.

ಇದನ್ನೂ ಓದಿ:Independence day : 25 ವರ್ಷದಲ್ಲಿ ಹೊಸ ಭಾರತವನ್ನು ಕಟ್ಟಲು ಪಣ : ಮೋದಿ

Advertisement

ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿರುವ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ವರದಿ ಸರ್ಕಾರ ಒಪ್ಪಿಕೊಂಡರೂ ಕಷ್ಟ, ತಿರಸ್ಕಾರ ಮಾಡಿದರೂ ಕಷ್ಟ. ವ‌ರದಿ ಬಿಡುಗಡೆಯಾದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಬೇಡಿಕೆ ಹೆಚ್ಚಾಗುತ್ತದೆ. ಜತೆಗೆ, ರಾಜಕೀಯವಾಗಿ ಇಂತಿಷ್ಟು ಸೀಟು ಕೊಡಿ ಎಂಬ ಆಗ್ರಹವೂ ಶುರುವಾಗಲಿದೆ. ಹೀಗಾಗಿ, ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಮತ ಬ್ಯಾಂಕ್‌ ಗುರಿಯಾಗಿಟ್ಟುಕೊಂಡು ಇಂತದ್ದೊಂದು ಹೋರಾಟ ಸಿದ್ದರಾಮಯ್ಯ ಅಣತಿ ಮೇರೆಗೆ ನಡೆಯುತ್ತಿದ್ದು,ಮುಂದಿನ ದಿನಗಳಲ್ಲಿ ಇದರ ಜತೆಗೆ ಅಲ್ಪ ಸಂಖ್ಯಾತರ ಹಾಗೂ ದಲಿತರ ಮೀಸಲಾತಿ ವಿಚಾರವೂ ಸೇರಿಕೊಳ್ಳಲಿದೆ. ಆಗ ಒಟ್ಟಾರೆ ಹೋರಾಟದ ಸ್ವರೂಪವೇ ಬದಲಾಗಲಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಕಾರ್ಯ ತಂತ್ರಕ್ಕೆ ತಿರುಗೇಟು ನೀಡಲು ಬಿಜೆಪಿಯೂ ತಮ್ಮದೇ ಆದ ತಂತ್ರಗಾರಿಕೆ ರೂಪಿಸಿದ್ದು, ಪ್ರಾರಂಭದಲ್ಲೇ ಸಚಿವರು ಹಾಗೂ ಪಕ್ಷದ ನಾಯಕರ ಮೂಲಕ ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಮುಗಿಬೀಳುತ್ತಿದೆ. ರಾಜಕೀಯ ಲಾಭ ಪಡೆಯದಂತೆ ನೋಡಿಕೊಳ್ಳಲು ಮುಂದಾಗಿದೆ. ಆದರೆ, ಜೆಡಿಎಸ್‌ ಮೌನವಹಿಸಿದ್ದು ಕಾದು ನೋಡುವ ತಂತ್ರ ಆನುಸರಿಸುತ್ತಿದೆ.

ಎಸ್.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next