Advertisement

ಸಂಚಾರಿ ವ್ಯವಸ್ಥೆಗೆ ಚುರುಕು ನೀಡಿದ ಪೊಲೀಸರು

10:27 AM Nov 28, 2017 | |

ಕಲಬುರಗಿ: ಕಳೆದ ಮೂರು ದಿನಗಳಿಂದ ಸುಗಮ ಸಂಚಾರಕ್ಕಾಗಿ ಜಾರಿಗೆ ತಂದಿರುವ ಹೆಲ್ಮೆಟ್‌ ಕಡ್ಡಾಯ, ಅಗತ್ಯ ದಾಖಲೆ ಪತ್ರಗಳು ಮತ್ತು ಕಾರಿನಲ್ಲಿ ಸೀಟ್‌ ಬೆಲ್ಟ್ ಹಾಕಿಕೊಳ್ಳುವುದು, ಆಟೋ ಚಾಲಕರು ಸಮವಸ್ತ್ರ ಧರಿಸುವುದನ್ನು ಜಾರಿಗೆ ತರಲು ಖುದ್ದು ಐಜಿಪಿ ಅಲೋಕಕುಮಾರ ರಸ್ತೆಗಳಲ್ಲಿ ನಿಲ್ಲುತ್ತಿದ್ದಾರೆ.

Advertisement

ಈ ಹಿಂದೆ ಮೂರ್‍ನಾಲ್ಕು ಬಾರಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದಾಗ ಜನರಲ್ಲಿ ಅಷ್ಟು ಎಚ್ಚರಿಕೆ ಮೂಡಿರಲಿಲ್ಲ. ಆದರೆ ಕಳೆದ ಮೂರು ದಿನಗಳಲ್ಲಿ 2 ಲಕ್ಷದಷ್ಟು ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ. ಕಾರು ಚಾಲಕರಿಗೆ ಸೀಟ್‌ ಬೆಲ್ಟ್ ಕಡ್ಡಾಯ ಮತ್ತು ಕಾರುಗಳಿಗಿರುವ ಕೋಲಿಂಗ್‌ ಪೇಪರ್‌(ಕಪ್ಪು) ತೆಗೆಸುವುದನ್ನು ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಅತಿ ಹೆಚ್ಚು ಸಂಚಾರ ಹೊಂದಿರುವ ರಸ್ತೆಗಳಲ್ಲಿ ಐಜಿಪಿ ಅಲೋಕುಮಾರ ಖುದ್ದು ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದಾಗಿ ಜನರಿಗೆ ಹೆಲ್ಮೆಟ್‌ ಹಾಕಿಕೊಳ್ಳಲೇಬೇಕಾದ ಅನಿವಾರ್ಯ ಎದುರಾಗಿದೆ.

ಐಜಿಪಿ ಸಾಮೋಪಾಯ: ಆರಂಭದ ದಿನದಂದು ಸ್ವತಃ ಐಜಿಪಿ ಅಲೋಕಕುಮಾರ ಅವರ ನೇತೃತ್ವದ ಪೊಲೀಸ್‌ ಪಡೆ ಸಾಮೋಪಾಯದಿಂದಲೇ ಸಂಚಾರಿ ನಿಯಮ ಪಾಲಿಸಲು ಕೋರಿದ್ದರು. ಮರುದಿನ ಆ ಕೋರಿಕೆಯನ್ನು ಮನ್ನಿಸಿದವರಿಗೆ ಪೊಲೀಸರು ಗುಲಾಬಿ ಹೂ ನೀಡಿ ಅಭಿನಂದಿಸಿದರು. ಕೋರಿಕೆ ತಿರಸ್ಕರಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಕಟ್ಟಿದರು. ಹೀಗಾಗಿ ಹೆಚ್ಚಿನ ಸಂಖ್ಯೆಯ ಸವಾರರು ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಆರಂಭಿಸಿದರು.

ಪೊಲೀಸರ ಕಾರ್ಯಾಚರಣೆ ಕೇವಲ ಆರಂಭ ಶೂರತನ ಎಂದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿತ್ತು. ಆದಾಗ್ಯೂ, ಸೋಮವಾರ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಅವರು ಇನ್ನೊಂದು ದಿಟ್ಟ ಹೆಜ್ಜೆ ಇಟ್ಟರು. ವಾಹನಗಳ ಸಂಚಾರದ ಪ್ರಮುಖ ಸ್ಥಳವಾದ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದ ನ್ಯಾಯಾಲಯದ ಮಾರ್ಗದ ಕಡೆಗೆ ಹೋಗುವ ಸ್ಥಳದಲ್ಲಿ ಅಪಘಾತದಿಂದ ಆಗುವ ಭೀಕರ ಸಾವು, ನೋವುಗಳ ಕುರಿತಾದ ಛಾಯಾಚಿತ್ರಗಳ ಬೃಹತ್‌
ಗಾತ್ರದ ಕಟೌಟ್‌ ಪ್ರದರ್ಶನ ಉದ್ಘಾಟಿಸಿದರು. ಆ ಬ್ಯಾನರ್‌ ನೋಡಿದವರಿಗೆ ಹೆಲ್ಮೆಟ್‌ ಹಾಕಿಕೊಳ್ಳದೇ ಹೋದಲ್ಲಿ, ಕಾರಿನಲ್ಲಿ ಸೀಟ್‌ ಬೆಲ್ಟ್ ಹಾಕಿಕೊಳ್ಳದೇ ಹೋದಲ್ಲಿ ಸಾವು ಖಚಿತ ಎಂಬ ತಿಳಿವಳಿಕೆ ಮೂಡಿಸುವ ರೀತಿಯಲ್ಲಿ ಅನೇಕ ಅಪಘಾತದ ಛಾಯಾಚಿತ್ರಗಳು ವಾಹನ ಸವಾರರಿಗೆ ಗಮನಸೆಳೆದು ಪರಿಣಾಮ ಬೀರಲಾರಂಭಿಸಿವೆ. ಇಲ್ಲಿಯವರೆಗೆ ಆ ಸ್ಥಳದಲ್ಲಿ ಅನಾವಶ್ಯಕ ಜಾಹೀರಾತು ಫಲಕ ಅಳವಡಿಸಲಾಗುತ್ತಿತ್ತು. ಈಗ ಅಪಘಾತ ನಿಯಂತ್ರಣದ ಛಾಯಾಚಿತ್ರಗಳ ಕಟೌಟ್‌ ಹಾಕಿರುವುದು ಪೊಲೀಸ್‌ ಇಲಾಖೆಯಿಂದ ಒಂದು ಒಳ್ಳೆಯ ಕೆಲಸವಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿ ಅಲೋಕಕುಮಾರ ಅವರು ಅದೇ ಸಂದರ್ಭದಲ್ಲಿ ವೃತ್ತದಲ್ಲಿ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲು ಸೂಚಿಸಿದರು. ಅದರಂತೆ ಪೊಲೀಸರು ನಿಯಮ ಬಾಹಿರವಾಗಿ ಸಂಚರಿಸುವವರಿಗೆ ದಂಡ ಕಟ್ಟಿದರು. ಇದರೊಂದಿಗೆ ಐಜಿಪಿ ಮಟ್ಟದ ಅಧಿಕಾರಿ ಖುದ್ದಾಗಿ ಸಂಚಾರಿ ವ್ಯವಸ್ಥೆ ನಿಭಾಯಿಸುತ್ತಿರುವುದು ಸಾರ್ವಜನಿಕರಿಗೆ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೆ, ಅವರ ನಡೆ ಪ್ರಶಂಸೆಗೆ ಒಳಗಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದ ವಾರದಲ್ಲಿ ಎಲ್ಲರೂ ಹೆಲ್ಮೆಟ್‌ ಧರಿಸಿ ಓಡಾಡುವುದರಲ್ಲಿ ಅನುಮಾನವೇ ಇಲ್ಲ. ಆದರೂ, ಬೇಸಿಗೆ ದಿನಗಳಲ್ಲಿ ಮಾತ್ರ ಹೆಲ್ಮೆಟ್‌ನಿಂದ ವಿನಾಯತಿ ನೀಡಬೇಕು ಎನ್ನುವ ಬೇಡಿಕೆಯಂತೂ ಇದ್ದೇ ಇದೆ

Advertisement

8 ಸಾವಿರ ಪ್ರಕರಣ ದಾಖಲು
ಕಲಬುರಗಿ ಐಜಿಪಿ ವಲಯ ವ್ಯಾಪ್ತಿಯಲ್ಲಿನ ಯಾದಗಿರಿ, ಬೀದರ ಮತ್ತು ಕಲಬುರಗಿ ಸೇರಿಂದಂತೆ ಒಟ್ಟು 8330 ಪ್ರಕರಣ ದಾಖಲಿಸಲಾಗಿದೆ. ಜನರು ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ. ಇದು ಜನರಿಗಾಗಿ ಮಾಡಿರುವ ಕಾನೂನು ಜಾರಿ. ತಮ್ಮ ಪ್ರಾಣರಕ್ಷಣೆಗಾಗಿ ಅವರು ಮಾಡೇ ಮಾಡುತ್ತಾರೆ. ಕಲಬುರಗಿಯಲ್ಲಿ 5800, ಯಾದಗಿರಿಯಲ್ಲಿ 1930 ಮತ್ತು ಬೀದರನಲ್ಲಿ 1600 ಪ್ರಕರಣಗಳು ದಾಖಲಾಗಿದೆ.
 ಅಲೋಕಕುಮಾರ, ಐಜಿಪಿ, ಕಲಬುರಗಿ ವಲಯ

„ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next