Advertisement

ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅಧಿಕಾರ ಸ್ವೀಕಾರ

01:39 PM Jun 13, 2017 | Harsha Rao |

ಮಂಗಳೂರು: ಮಂಗಳೂರಿನ ನೂತನ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

Advertisement

ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಆಯುಕ್ತ ಎಂ. ಚಂದ್ರಶೇಖರ್‌ ಅವರು ಅಧಿಕಾರವನ್ನು ಹಸ್ತಾಂತರಿಸಿದರು.

ನೂತನ ಆಯುಕ್ತರಾದ ತಿಮ್ಮಪ್ಪ ರಾಮಪ್ಪ ಸುರೇಶ್‌ ಅವರು ಈ ಹಿಂದೆ ಬೆಂಗಳೂರಿನ ಅಗ್ನಿ ಶಾಮಕ ಸೇವಾ ವಿಭಾಗದ ಡಿಐಜಿ ಆಗಿದ್ದರು.

1991ರಲ್ಲಿ ಡಿವೈಎಸ್‌ಪಿ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 1996ರಲ್ಲಿ ಎಸ್‌ಪಿ (ನಾನ್‌ ಎಕ್ಸಿಕ್ಯೂಟಿವ್‌) ಆಗಿ ಭಡ್ತಿ ಹೊಂದಿದ್ದರು. 2003ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ಆಯ್ಕೆ ಯಾಗಿ ನಿಯುಕ್ತಿಗೊಂಡಿದ್ದರು. ಪ್ರಥಮವಾಗಿ ವಿಜಯ ಪುರದಲ್ಲಿ ಸೇವೆ ಮಾಡಿದ್ದರು. ಬಳಿಕ ಬಾಗಲಕೋಟೆ, ಉತ್ತರ ಕನ್ನಡ (1997- 90) ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಅನಂತರದ ವರ್ಷಗಳಲ್ಲಿ ಹುಬ್ಬಳ್ಳಿ – ಧಾರವಾಡಗಳಲ್ಲಿ ಡಿಸಿಪಿ, ಮೈಸೂರಿನಲ್ಲಿ ರಾಜ್ಯ ಗುಪ್ತಚರ ವಿಭಾಗ ಹಾಗೂ ಬಳಿಕ ಅಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ), ತುಮಕೂರು ಲೋಕಾಯುಕ್ತ ಎಸ್‌ಪಿ, ಬೆಳಗಾವಿಯಲ್ಲಿ ಅಡಿಶನಲ್‌ ಎಸ್‌ಪಿ ಆಗಿದ್ದರು.

Advertisement

ಜಿಲ್ಲಾ ಎಸ್‌ಪಿ ಆಗಿ ಪ್ರಥಮವಾಗಿ ಕೊಡಗು, ಬಳಿಕ ಬಾಗಲ ಕೋಟೆ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಡಿಸಿಪಿಯಾಗಿ ಬೆಂಗಳೂರು ಈಶಾನ್ಯ ವಲಯ ಮತ್ತು ಉತ್ತರ ವಲಯಗಳಲ್ಲಿ ಸೇವೆ ಒದಗಿಸಿದ ಬಳಿಕ ಡಿಐಜಿ ಹುದ್ದೆಗೆ ಭಡ್ತಿ ಹೊಂದಿ ಕಳೆದ 6 ತಿಂಗಳಿಂದ ಬೆಂಗ ಳೂರಿನ ಅಗ್ನಿ ಶಾಮಕ ಸೇವಾ ವಿಭಾಗದಲ್ಲಿ 
ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಶಿವಮೊಗ್ಗದವರಾಗಿದ್ದು, ಬಿ.ಕಾಂ. ಮತ್ತು ಮೈಸೂರು ವಿಶ್ವ ವಿದ್ಯಾ ನಿಲಯದಿಂದ 
ಎಂಬಿಎ ಪದವಿ ಪಡೆದಿದ್ದಾರೆ.

ಉತ್ತಮ ಸೇವೆಯ ಭರವಸೆ
ಮಂಗಳೂರು ನಗರಕ್ಕೆ ಉತ್ತಮ ಪೊಲೀಸ್‌ ಸೇವೆಯನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮತ್ತು ಇತರ ಪೊಲೀಸ್‌ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಟಿ.ಆರ್‌. ಸುರೇಶ್‌ ತಿಳಿಸಿದರು. 

ನಿರ್ಗಮನ ಕಮಿಷನರ್‌ ಎಂ. ಚಂದ್ರಶೇಖರ್‌ ಅವರ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗು ತ್ತೇನೆ. ಅವಕಾಶ ಲಭಿಸಿದಲ್ಲೆಲ್ಲಾ ಹೊಸ ಸೇವೆಯನ್ನು ಕಮಿಷನರೆಟ್‌ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳ ಜತೆ ಸೇರಿ ಒದಗಿಸಲು ಯತ್ನಿಸುತ್ತೇನೆ. ಹಿರಿಯ ನಾಗರಿಕರ ಮತ್ತು ಮಾಧ್ಯಮದವರ ಸಲಹೆಗಳನ್ನು ಪಡೆದು ಮಂಗಳೂರಿಗೆ ಒಳ್ಳೆಯ, ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ವಿವರಿಸಿದರು.

ಜನತೆ, ಮಾಧ್ಯಮಗಳಿಂದ ಉತ್ತಮ ಸಹಕಾರ: ಎಂ. ಚಂದ್ರಶೇಖರ್‌ 
ಮಂಗಳೂರಿಲ್ಲಿ ಒಂದು ವರ್ಷ 6 ತಿಂಗಳು ಕೆಲಸ ಮಾಡಿರುವುದು ನನ್ನ ವೃತ್ತಿ ಜೀವನದ ಆವಿಸ್ಮರಣೀಯ ದಿನಗಳಾಗಿವೆ. 2016 ಜನವರಿಯಲ್ಲಿ ಇಲ್ಲಿಗೆ ಬಂದಾಗ ಇದು ಅಪರಿಚಿತ ನಗರವಾಗಿದ್ದರೂ ಸಹೃದಯಿ ಹಾಗೂ ಕಾನೂನನ್ನು ಗೌರವಿಸುವ ಜನರು ಇಲ್ಲಿರುವುದರಿಂದ ಅವರ ಮತ್ತು ಪೊಲೀಸ್‌ ಸಹೋದ್ಯೋಗಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ನಿರ್ಗಮನ ಆಯುಕ್ತ ಎಂ. ಚಂದ್ರಶೇಖರ್‌ ಅವರು ತಿಳಿಸಿದರು.

ಸಮಾಜದ ಕೆಲವೊಂದು ದುಷ್ಟ ಶಕ್ತಿಗಳು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಹದಗೆಡಿಸಲು ಪ್ರಯತ್ನಿಸಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂದರು.

ಮಂಗಳೂರು ನಗರ ಪೊಲೀಸನ್ನು ಜನಸ್ನೇಹಿ ಪೊಲೀಸ್‌ ಆಗಿ ಮಾಡಲು ಹಲವು ಕಾರ್ಯಕ್ರಮ ಹಮಿಕೊಂಡಿದ್ದು, ಇದರಲ್ಲಿ “ಫೋನ್‌ ಇನ್‌ ಕಾರ್ಯ ಕ್ರಮ’ ಪ್ರಮುಖವಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪೊಲೀಸ್‌ ಇಲಾಖೆಯ ಕೇಂದ್ರ ಕಚೇರಿಗೂ ತಿಳಿಸಲಾಗಿದೆ ಎಂದರು.

ಸಮಾಜ ಘಾತಕ ಶಕ್ತಿಗಳು ಹಲವು ಬಾರಿ ಒತ್ತಡ ತಂದು ಪ್ರಕರಣಗಳ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದರೂ ಮಾಧ್ಯಮಗಳು ವಸ್ತುಸ್ಥಿತಿಯನ್ನು ವರದಿ ಮಾಡಿದ್ದರಿಂದ ಅಂತಹ ಶಕ್ತಿಗಳನ್ನು ಮಟ್ಟ ಹಾಕಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಮಾಧ್ಯಮದವರ ಸಲಹೆಗಳು ಕೆಲವು ಪ್ರಕರಣಗಳ ಪತ್ತೆಗೂ ಸಹಕಾರಿಯಾಗಿವೆ ಎಂದರು.

ಫೇಸ್‌ಬುಕ್‌ ಸಂಸ್ಥೆಯ ಅಧಿಕಾರಿಯನ್ನೂ ಮಂಗಳೂರಿಗೆ ಕರೆಸಲು ಸಾಧ್ಯವಾಗಿರುವುದು ಮಹತ್ವದ ವಿಷಯವಾಗಿದ್ದು, ಮುಂದಿನ ದಿನಗಳಲ್ಲೂ ಫೇಸ್‌ಬುಕ್‌ ಸಂಸ್ಥೆಯು ತನಿಖೆಗೆ ಸಹಕಾರ ನೀಡುವುದು ಎಂಬ ಭರವಸೆಯನ್ನು ಎಂ. ಚಂದ್ರಶೇಖರ್‌ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next