Advertisement

ಪೊಗರು ಬ್ಯಾಕ್‌ಗ್ರೌಂಡ್‌ ಸ್ಟೋರಿ

06:00 AM Nov 09, 2018 | Team Udayavani |

ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಯಶಸ್ವಿ ನಟ ಎಂಬುದು ನಿಜ. ಹಾಕಿದ ಕಾಸಿಗೆ ಮೋಸವಿಲ್ಲ ಎಂಬ ಮಾತೂ ಅಷ್ಟೇ ಸತ್ಯ. “ಅದ್ಧೂರಿ’, “ಬಹದ್ದೂರ್‌’ ಮತ್ತು “ಭರ್ಜರಿ’ ಈ ಮೂರು ಚಿತ್ರಗಳ ಗೆಲುವು ಕಣ್ಣ ಮುಂದೆ ಇದೆಯೆಂಬುದೂ ಗೊತ್ತು. ಆದರೆ, ಇಷ್ಟೆಲ್ಲಾ ಯಶಸ್ವಿ ಚಿತ್ರಗಳನ್ನು ಕೊಟ್ಟ ಧ್ರುವ ಸರ್ಜಾ ಅವರ ಚಿತ್ರಗಳು ತಡವಾಗುತ್ತಿವೆ ಎಂಬುದೂ ಅಷ್ಟೇ ಸ್ಪಷ್ಟ. ಹಾಗೊಮ್ಮೆ ಅವರ ಅಭಿನಯದ ಮೂರು ಚಿತ್ರಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದವರಿಗೆ ಆ ಚಿತ್ರಗಳು ತಡವಾಗಿದ್ದು ಸುಳ್ಳಲ್ಲ ಎಂಬುದು ಗೋಚರವಾಗುತ್ತೆ. ಧ್ರುವಸರ್ಜಾ ಹಿಟ್‌ ಚಿತ್ರ ಕೊಟ್ಟಿದ್ದಾರೆ ನಿಜ. ಒಂದು ಚಿತ್ರಕ್ಕೆ ಎರಡು ವರ್ಷಗಳ ತನಕ ಕಾಯಬೇಕಾ? ಎಂಬ ಪ್ರಶ್ನೆಯೂ ತೂರಿ ಬರುತ್ತೆ. “ಪೊಗರು’ ವಿಷಯದಲ್ಲೂ ಪುನಃ ಹಾಗಾಗುತ್ತಾ? ಇಂಥದ್ದೊಂದು ಪ್ರಶ್ನೆ ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಗೊತ್ತಿಲ್ಲ. ಆದರೆ, “ಪೊಗರು’ ಚಿತ್ರ ಶುರುವಾಗಿ, ಬಹಳ ಸಮಯವಾಗಿದೆ. ಇನ್ನೂ ಚಿತ್ರೀಕರಣ ನಡೆಯುತ್ತಲೇ ಇದೆ. “ಪೊಗರು’ ಲೇಟ್‌ಗೆ ತರಹೇವಾರಿ ಮಾತುಗಳು ಕೇಳಿಬರುತ್ತಲೇ ಇವೆ. ಆದರೆ, ಅವೆಲ್ಲಾ ಮಾತುಗಳನ್ನು ಪಕ್ಕಕ್ಕೆ ಸರಿಸುವ ನಿರ್ದೇಶಕ ನಂದಕಿಶೋರ್‌, “ಪೊಗರು’ ತಡವಾಗುತ್ತಿರುವುದಕ್ಕೆ ಕಾರಣ ಕೊಟ್ಟಿದ್ದಾರೆ. ಯಾಕೆ ತಡವಾಯ್ತು, ಏನೆಲ್ಲಾ ಸಮಸ್ಯೆ ಎದುರಾಯ್ತು ಎಂಬುದಕ್ಕೆ ಅವರ ಮಾತಲ್ಲೇ ಓದಿಕೊಳ್ಳಿ. 

Advertisement

ಬದಲಾವಣೆಗೆ ಸಮಯ ಬೇಡವೇ?
“ಮೊದಲನೆಯದ್ದಾಗಿ “ಪೊಗರು’ ಪಕ್ಕಾ ಸ್ವಮೇಕ್‌ ಚಿತ್ರ. ಧ್ರುವ ಸರ್ಜಾ ಹೀರೋ ಅಂದಾಗ, ಅದಕ್ಕೆ ತಕ್ಕಂತಹ ಕಥೆ, ಚಿತ್ರಕಥೆ ಮಾಡಿಕೊಳ್ಳ ಬೇಕು. ಅದಕ್ಕೆ ಸಾಕಷ್ಟು ತಯಾರಿ ಬೇಕಿತ್ತು. ಸ್ಕ್ರಿಪ್ಟ್ ಪಕ್ಕಾ ಆದಮೇಲಷ್ಟೇ ಚಿತ್ರೀಕರಣಕ್ಕೆ ಹೊರಟೆ. ಇನ್ನು, ಚಿತ್ರದಲ್ಲಿ ಚಿಕ್ಕ ವಯಸ್ಸಿನ ಹುಡುಗನ ಪಾತ್ರ ಬೇಕಿತ್ತು. ಆ ಸನ್ನಿವೇಶಕ್ಕೆ ಬೇರೆ ಯಾರಾದರೂ ಇದ್ದಾರಾ ಅಂತ ಹುಡುಕಾಟ ನಡೆಸುತ್ತಿದ್ದಾಗ, ಧ್ರುವಸರ್ಜಾ, “ನಾನೇ ಆ ಪಾತ್ರ ಮಾಡ್ತೀನಿ’ ಅಂದರು. ಚಿಕ್ಕ ಹುಡುಗನ ಪಾತ್ರಕ್ಕೆ ಸುಮಾರು 35 ಕೆಜಿ ತೂಕ ಇಳಿಸಿಕೊಳ್ಳಬೇಕು.
ಅದು ಆಗೋದಿಲ್ಲ ಅಂದರೂ, ನಾನು ತೂಕ ಇಳಿಸಿಕೊಳ್ತೀನಿ ಎಂದು ಹೇಳಿದ ಧ್ರುವಸರ್ಜಾ ಸುಮಾರು 32 ಕೆಜಿ ತೂಕ ಇಳಿಸಿಕೊಂಡರು. ಅದಕ್ಕೆ ಸುಮಾರು ಮೂರುವರೆ ತಿಂಗಳು ಸಮಯ ಬೇಕಾಯಿತು. ಪುನಃ ದಪ್ಪ ಆಗಬೇಕಿತ್ತು. ಅದಕ್ಕೆ ಮೂರು ತಿಂಗಳು ಸಮಯ ಹಿಡಿಯಿತು. ಅಲ್ಲಿಗೆ, ಸಣ್ಣಗಾಗಿ ಮತ್ತು ದಪ್ಪಗಾಗಲು 6 ತಿಂಗಳು ಕಳೆದುಹೋಯ್ತು. ಇನ್ನು, ಅವರು ರೆಡಿಯಾದಾಗ, ಪುನಃ ನಾನು ಸ್ಕ್ರಿಪ್ಟ್ನಲ್ಲಿ  ಕುಳಿತೆ. ಕಾರಣ, ಅಷ್ಟು ತಿಂಗಳು ಕಳೆದ ಬಳಿಕ ಕಥೆಯಲ್ಲಿ ಅಪ್‌ಡೇಟ್‌ ಆಗಬೇಕು ಅಂತ, ಮತ್ತೆ ಸ್ಕ್ರಿಪ್ಟ್ ಕೆಲಸ ಮಾಡಿದೆ. ಯಾಕೆಂದರೆ, ಆರು ತಿಂಗಳು ಕಳೆದುಹೋಗಿದೆ. ಇನ್ನೂ ಚಿತ್ರೀಕರಣ ಬಾಕಿ ಇದೆ. ಬಿಡುಗಡೆ ಹೊತ್ತಿಗೆ ಆಗಿನ ಟ್ರೆಂಡ್‌ ಹೇಗಿರುತ್ತೆ ಎಂಬುದನ್ನು ಯೋಚಿಸಿ, ಸ್ಕ್ರಿಪ್ಟ್ ಅಪ್‌ಡೇಟ್‌ ಮಾಡಿದ್ದು ನಿಜ. ಅದಕ್ಕೊಂದಷ್ಟು ಸಮಯ ಹಿಡಿಯಿತು. ಇತ್ತೀಚೆಗೆ “ಸರ್ಜಾ’ ಅವರ ಫ್ಯಾಮಿಲಿ ವಿಷಯಗಳು ಬಂದವು. ಈ ಸಂದರ್ಭದಲ್ಲಿ ನಾವು ಅದಕ್ಕೆ ಸಮಯ ಕೊಡದಿದ್ದರೆ ಹೇಗೆ?

ನಂದೇ ಕಥೆ
“ಪೊಗರು’ ತಡವಾಯ್ತು ಅನ್ನುವವರಿಗೆ ನನ್ನ ಉತ್ತರ ಇದು. ಧ್ರುವಸರ್ಜಾ ಅವರು ಎರಡು ಶೇಡ್‌ ಪಾತ್ರ ಮಾಡುತ್ತಿರುವುದರಿಂದ ಅದಕ್ಕೆ ತಯಾರಿ ಬೇಕಿತ್ತು. ಹಾಗಾಗಿ, ಅಷ್ಟೊಂದು ಸಮಯ ಹಿಡಿದಿದ್ದು ನಿಜ. ಇದರೊಂದಿಗೆ ಇದು ದೊಡ್ಡ ತಾರಾಬಳಗ ಇರುವ ಚಿತ್ರ.  ಎಲ್ಲಾ ಕಲಾವಿದರ ಡೇಟ್‌ ನೋಡಿಕೊಂಡು ಕೆಲಸ ಮಾಡಬೇಕು, ಹಾಗಾಗಿ ಲೇಟ್‌ ಆಗುವುದರಲ್ಲಿ ವಿಶೇಷವೇನಿಲ್ಲ. ಇದುವರೆಗೆ ಶೇ.30 ರಷ್ಟು ಚಿತ್ರೀಕರಣವಾಗಿದೆ. ಡಿಸೆಂಬರ್‌ವರೆಗೂ ಚಿತ್ರೀಕರಣ ನಡೆಯಲಿದೆ. ಮುಂದಿನ ವರ್ಷ “ಪೊಗರು’ ಬಿಡುಗಡೆಯಾಗಲಿದೆ. ಇನ್ನು, ಕಥೆ ವಿಚಾರದಲ್ಲಿ ಒಂದಷ್ಟು ಗೊಂದಲ ಎದ್ದಿದ್ದು ನಿಜ “ಪೊಗರು’ ರಿಮೇಕ್‌, ಅರ್ಜುನ್‌ ಸರ್ಜಾ ಅವರು ಕಥೆ ಕೊಟ್ಟಿದ್ದಾರೆ ಅಂತೆಲ್ಲಾ ಮಾತುಗಳು ಕೇಳಿಬಂದಿದ್ದವು. ಆದರೆ ಒಂದು ಮಾತು ಹೇಳುತ್ತೇನೆ, ಇಲ್ಲಿ ಕಥೆ ನನ್ನದೇ. ನನ್ನ ಜೊತೆಗೆ ನನ್ನ ತಂಡ ಕಥೆ, ಚಿತ್ರಕಥೆಯಲ್ಲಿ ಇನ್ವಾಲ್‌ ಆಗಿದೆ. ಅರ್ಜುನ್‌ ಸರ್ಜಾ ಅವರೂ ಸಹ ಕಥೆ, ಚಿತ್ರಕಥೆಗೆ ಸಲಹೆ ಕೊಟ್ಟಿದ್ದಾರೆ. ಇಲ್ಲಿ ಗೊಂದಲವೇನಿಲ್ಲ. ಒಂದೊಳ್ಳೆಯ ಚಿತ್ರ ತಯಾರಾಗಬೇಕಾದರೆ, ಒಂದಷ್ಟು ಸಮಯ ಬೇಕಾಗುತ್ತೆ, ಒಂದಷ್ಟು ಜನರು ಸೇರಿ ಕೆಲಸ ಮಾಡಬೇಕಾಗುತ್ತೆ. ಇದು ಹೊರತಾಗಿ ಬೇರೆ ಯಾವ ಗೊಂದಲವಿಲ್ಲ.

ಮೆಚ್ಯುರ್‌ ಪಾತ್ರಕ್ಕಾಗಿ ರಶ್ಮಿಕಾ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಅತ್ತ ತೆಲುಗು ಚಿತ್ರರಂಗದಲ್ಲೇ ಬಿಝಿಯಾಗಿಬಿಟ್ಟರು ಅನ್ನುವ ಹೊತ್ತಿಗೆ, ನಂದಕಿಶೋರ್‌ ಅವರನ್ನು ಕರೆತಂದಿದ್ದಾರೆ. ನವೆಂಬರ್‌ 25 ರಿಂದ ರಶ್ಮಿಕಾ ಮಂದಣ್ಣ ಅವರ ಭಾಗದ ಚಿತ್ರೀಕರಣ ಶುರುವಾಗಲಿದೆ. ಇಲ್ಲಿ ಇಬ್ಬರು ನಾಯಕಿಯರು ಅಂತೆಲ್ಲಾ ಸುದ್ದಿ ಇದೆ. ಆದರೆ, ಒಬ್ಬರೇ ನಾಯಕಿ ಇರುತ್ತಾರೆ. ಹಿಂದೆ ಶ್ರೀಲೀಲಾ ಅವರನ್ನು ಆಯ್ಕೆ ಮಾಡಬೇಕೆಂದು ಕೊಂಡಿದ್ದೆವು. ಆದರೆ, ಧ್ರುವಸರ್ಜಾ ಅವರೊಂದಿಗೆ ಮೆಚೂರಿಟಿ ಇರುವಂತಹ ನಾಯಕಿ
ಬೇಕಿತ್ತು. ಶ್ರೀಲೀಲಾ ಚಿಕ್ಕವರಾಗಿ ಕಾಣುತ್ತಾರೆಂಬ ಕಾರಣಕ್ಕೆ, ರಶ್ಮಿಕಾ ಮಂದಣ್ಣ ಆಯ್ಕೆಯಾಗಿದೆ ಎನ್ನುತ್ತಾರೆ ನಿರ್ದೇಶಕರು. 

ಜಬರ್‌ದಸ್ತ್ ಪೊಗರು
“ಪೊಗರು’ ಒಂದು ಮನರಂಜನೆಯ ಚಿತ್ರ. ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಮಿಲಿ ಕೂಡ ಎಂಜಾಯ್‌ ಮಾಡಬಹುದಾದ ಅಂಶಗಳು ಇಲ್ಲಿವೆ. ಇನ್ನು, ಸಂಭಾಷಣೆಯಲ್ಲಿ ಬೇರೆಯದ್ದೇ ಫ್ಲೇವರ್‌ ಇರಲಿದೆ. ಧ್ರುವಸರ್ಜಾ ಅವರ ಹಿಂದಿನ ಮೂರು ಚಿತ್ರಗಳಿಗಿಂತಲೂ
ಹೊಸತರಹದ ಡೈಲಾಗ್‌ಗಳನ್ನಿಲ್ಲಿ ಕೇಳಬಹುದು. ನನ್ನ ತಂತ್ರಜ್ಞರ ತಂಡ ಎಂದಿನಂತೆ ಇಲ್ಲಿ ಕೆಲಸ ಮಾಡುತ್ತಿದೆ. ಆ್ಯಕ್ಷನ್‌ ವಿಷಯಕ್ಕೆ ಬಂದರೆ, ತುಂಬಾ ವಿಭಿನ್ನವಂತೂ ಅಲ್ಲ, ಎಕ್ಸೆ„ಟಿಂಗ್‌ ಆಗಿರುತ್ತೆ ಎಂಬುದು ನಿಜ ಎನ್ನುತ್ತಾರೆ ನಂದ. ನಂದಕಿಶೋರ್‌ ಸ್ಟಾರ್‌ ನಟರನ್ನು
ನಿರ್ದೇಶಿಸಿದವರು. ಧ್ರುವ ಕೂಡ ಸ್ಟಾರ್‌ ನಟ. ಇಲ್ಲಿ ಎಷ್ಟರಮಟ್ಟಿಗೆ ಕಂಫ‌ರ್ಟ್‌ ಎಂಬ ಮಾತಿಗೆ, “ನಾನು ಸೀನಿಯರ್ ಜೊತೆ ಮಾಡಿದಾಗ, ವರ್ಕಿಂಗ್‌ ಪ್ರೊಸೆಸ್‌ ಇತ್ತು. ಇಲ್ಲಿ ಪ್ರಿಪರೇಷನ್‌ ಪ್ರೊಸೆಸ್‌ ಇದೆ. ನಿರ್ದೇಶಕರಿಗೆ ಎಲ್ಲರೂ ಒಂದೇ. ಆದರೆ, ಒಬ್ಬೊಬ್ಬರ ಜೊತೆಗಿನ ಅನುಭವ ಅನನ್ಯ. ಪ್ರತಿ ಚಿತ್ರವೂ ಹೊಸತನ್ನು ಕಲಿಸುತ್ತಾ ಹೋಗುತ್ತೆ. ಒಟ್ಟಾರೆ “ಪೊಗರು’ ಒಳ್ಳೇ ತಂಡದ ಜೊತೆ ನಡೆಯುತ್ತಿದೆ. ನನ್ನ ಸಹೋದರ ತರುಣ್‌ ಸುಧೀರ್‌ ಕೂಡ ಎಂದಿನಂತೆ ನಮ್ಮೊಂದಿಗಿದ್ದಾರೆ. ಆದರೂ, ಅವರು ದರ್ಶನ್‌ ಚಿತ್ರ ಮಾಡುತ್ತಿರುವುದರಿಂದ ಆ ಚಿತ್ರದ ತಯಾರಿಗೂ ಸಮಯ ಕೊಡಬೇಕು. ಇಲ್ಲೂ ಅಲ್ಲೂ ಎರಡರ ಜೊತೆಗೂ ಇದ್ದಾರೆ. ಮತ್ತೂಮ್ಮೆ ಹೇಳ್ತೀನಿ “ಪೊಗರು’ ವಿನಾಕಾರಣ ತಡವಾಗುತ್ತಿಲ್ಲ. ಇದು ರಿಮೇಕ್‌ ಅಲ್ಲ, ಸ್ವಮೇಕ್‌ ಅಪ್ಪಟ ಕನ್ನಡ ನೆಲದ ಕಥೆ’ ಎಂದು ಮಾತು
ಮುಗಿಸುತ್ತಾರೆ ನಂದಕಿಶೋರ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next